Saturday, November 22, 2014

ಅಮ್ಮ ಹೇಳದೆ ಹೇಳಿ ಹೋದ ಗೀತಾರಹಸ್ಯ ...

ನೀ ಜಗವ ಬಿಟ್ಟ ಘಳಿಗೆ
ನಾನು ಹೊಸ ಜಗತ್ತು ಕಂಡೆ
ಮಣ್ಣು ಸೇರುವ ಮುನ್ನ 
ತಾಕಿದ ನಿನ್ನ ತಣ್ಣನೆಯ ಕೈಯಲ್ಲಿ
ಲೋಕದ ತಣ್ಣನೆಯ ಭಾವಗಳ ಅನುಭವಕ್ಕೆ ತಂದುಕೊಂಡೆ
ನಾನು ತುಸು ಜಾಸ್ತಿಯೇ ಬುದ್ಧನಾಗಿಬಿಟ್ಟೆ
ನಂಟು , ನೆಂಟಸ್ತನ
ಎಲ್ಲದರ ನಕಲಿತನವನ್ನ ಅಸಲಿ ದೃಷ್ಟಿಯಲ್ಲಿ ಕಂಡೆ

ಒಳ್ಳೆಯ ಲೆಕ್ಕ ಕಲಿಸಿ ಹೋದೆ
ಎಲ್ಲವನ್ನೂ ಪ್ರೀತಿಸುವ ಎಲ್ಲವನ್ನೂ ನಿರಾಕರಿಸುವ
ಸಂತೆಯಲ್ಲೂ ಏಕಾಂತದ ಸುಖವ ದಕ್ಕಿಸಿಕೊಳ್ಳುವ
ಏಕಾಂತದಲ್ಲಿ ಸಂಭ್ರಮಿಸುವ
ದಿವ್ಯ ಧ್ಯಾನವ ಕಲಿಸಿ
ಒಂದೊಳ್ಳೆ ಸ್ವಾರ್ಥಿಯಾಗಿ ನನಗಾಗಿ ಬದುಕುವ
ಶಕ್ತಿಯನ್ನ ಕೊಟ್ಟು ಹೋದೆ

ಎಲ್ಲೇ ಇದ್ದರೂ ಬದುಕಬಲ್ಲೆ
ಯಾರ ಹಂಗಿಲ್ಲದೆ
ಯಾವ ಭಯವಿಲ್ಲದೆ
ನಿರೀಕ್ಷೆಯಿರದೆ
ನಿರಾಸೆಯಿರದೆ
ನೋವಿರದೆ
ಯಾರನ್ನೂ ದೂರದೆ
ನನ್ನನ್ನ ನಾನು ಕಳೆದುಕೊಳ್ಳದೆ .

ಏನೆಂದು ಹೇಳಲಿ
ಎಲ್ಲವನ್ನೂ ಕೊಟ್ಟು ಹೋದೆ
ದೇವರು ವರದೊಡನೆ ಶಾಪವನ್ನೂ ಸೇರಿಸಿ ಕೊಟ್ಟಂತೆ
ನಿನ್ನನ್ನು ನನ್ನಿಂದ ಕಿತ್ತುಕೊಂಡು
ಆದದ್ದೆಲ್ಲ ಒಳ್ಳೆಯದಕ್ಕೆ ಬಿಡು
ಬದುಕಿಗಿಂತ ದೊಡ್ಡದು ಯಾವುದಿದೆ ಹೇಳು
ಕತ್ತಲಲ್ಲೂ ಬೆಳಕು ಕಾಣಬೇಕು
ನೀ ಹೋದೆ
ನಾ ಗೆದ್ದೆ ಅಮ್ಮ

Friday, November 7, 2014

ಚುಟುಕುಗಳು ಒಂದಿಷ್ಟು :) :) :)...





ಬದಲಾಗುವುದೆಂದರೆ
ಗಿಡ ಹೋಗಿ ಮರ
ಹೊಳೆ ಹೋಗಿ ಕಡಲು
ಗೋಸುಂಬೆ ರೀತಿ
ಹಸಿರು ಹೋಗಿ ಹಳದಿಯಲ್ಲ ..
**********
ಕಳೆದಿರುಳು ಮಳೆ ಸುರಿದು ಹೋಯಿತು
ಮನದ ಸೂರು ಬಿಕ್ಕಳಿಸಿ
ತೊಟ್ಟಿಕ್ಕುತಿದೆ ಇನ್ನೂ ನಿನ್ನ ನೆನಪಾಗಿ .
ಮತ್ತೆ ಮೋಡಗಟ್ಟುತಿದೆ ಮೇಲೆ
ಬದುಕೋ ಆಸೆಯೇ ಆವಿಯಾಗಿ ...

*******
ಆತ ಗೆದ್ದ ರಾಜ್ಯದಿ
ನಾನೀಗ ಸೋತ ರಾಜ......
*********
ನೀ ಅಕಾಲ ಮಳೆಯಂತೆ .
ಬೇಕೆಂದಾಗ ಬಾರದವಳು .
ನೀನಾಗಿ ನೀನೇ ಬಂದ ಸಮಯದಿ
ಭರಿಸಲಾಗದವಳು.
**********
ಎಲ್ಲವೂ ತಣ್ಣಗಿರಲೆಂದುಕೊಂಡರೆ ಹೇಗೆ ಸಾಧ್ಯ?
ಆದಷ್ಟು ತಣ್ಣಗಿರುವುದು ಬದುಕ ಗುರಿ.
ಬಿಸಿಯೇ ಬದುಕ ಚಿಹ್ನೆ.
ಎಲ್ಲ ತಣ್ಣಗಾಗಿಹೋಯಿತೆಂದರೆ
ಅದು ಕೊನೆಯಲ್ಲಿ ಮಾತ್ರ...

Friday, May 9, 2014

ಸಭ್ಯ ಪೋಲಿ ಕವನ : ಭಗವಂತ ಮಿಲನದಲ್ಲೂ ದಕ್ಕಬಹುದು

ನಿಲ್ಲು
ಹೇಳಬೇಕಾದ ಮಾತೊಂದಿದೆ
ನಿನ್ನೆಡೆಗೆ ನನ್ನಲೊಂದು ದಿವ್ಯ ಆರಾಧನೆಯಿದೆ
ನಿನ್ನ ಚೆಲುವು ನನ್ನ ಶುದ್ಧ ಕುತೂಹಲ
ಅದುಮಿಕೊಳ್ಳಲಾಗದ ಆಕರ್ಷಣೆ ಸೇರಿ
ನಿನ್ನಲ್ಲೊಮ್ಮೆ ಇಂಗಿಕೊಳ್ಳುವಾಸೆ ಬಲವಾಗಿದೆ

  

'ಏನೆಂದು ಕೊಂಡಿರುವೆ ಎನ್ನ
ಅಷ್ಟು ಅಗ್ಗದವಳಲ್ಲ ನಾನು'



ನಿಜ
ನೀನು ಅಗ್ಗದವಳಲ್ಲ
ನನ್ನೆಲ್ಲ ಆರಾಧನೆಗೆ
ಬಚ್ಚಿಡಲಾಗದ ಹುಚ್ಚು ಮೋಹಕ್ಕೆ ಅರ್ಹಳು
ದೇವತೆ ನೀನು
ಶುಧ್ಧ ಅಪರಂಜಿ
ವಿಷವಿಲ್ಲ ನನ್ನಲ್ಲಿ
ಎಲ್ಲ ಸಹಜ ಸಹಜ


ಲೋಕಕ್ಕೆ ಹೇಗೋ ತಿಳಿದಿಲ್ಲ
ನನಗೆ ಮಾತ್ರ ನಿನ್ನಲ್ಲಿ ಕಾಣುವುದು
ಯಾವ ಕೊಂಕೂ ಇರದ ಬರಿಯ ನೀನು
ಸೃಷ್ಟಿಯ ಕುಸುರಿ ಕೆಲಸಕ್ಕೆ
ಅದ್ಭುತಕ್ಕೆ ಕಣ್ಣೆದುರೇ ಇರುವ
ಸಾಕ್ಷಿ ನೀನು
ಭಗವಂತ ಮಿಲನದಲ್ಲೂ ದಕ್ಕಬಹುದು
ಒಬ್ಬಬ್ಬರಿಗೂ ಒಂದೊಂದು ದಾರಿ
ಮೋಕ್ಷಕ್ಕೆ
ಮಿಲನವೂ ದಾರಿಯಾಗಬಹುದು
ಎಂಬ ನಂಬಿಕೆಯ
ಮುಕ್ತ ಪಂಥದವನು
ಅಚ್ಚರಿಯ ಪುಟ್ಟ ನಾನು



ಹುಡುಗಿ ಕಲ್ಲಾದಳು
ಕಣ್ಣೀರಾದಳು .

Tuesday, April 15, 2014

ಕಳೆದುಕೊ ಎಲ್ಲವನೂ.......

ಕಳೆದುಕೊ ಎಲ್ಲವನೂ
ಲೆಕ್ಕವಿಟ್ಟು ನಗಬೇಕು
ನಾಜೂಕಿನಿಂದ ತೂಕ ಹಾಕಿ ಮಾತು ಕಟ್ಟಿ ಕೊಡಬೇಕು
ಏನೋ ಹೇಳಲು ಹೋಗಿ ಹೇಳಲಾಗದೆ
ಉಗುಳು ನುಂಗಿ ಇನ್ನೇನೋ ತೊದಲಬೇಕು
ತ್ಯಾಗದ ಹೆಸರಲ್ಲಿ ನೀನು ಕೂಡ ಒಂದು
ಜೀವವಿರುವ ಪ್ರಾಣಿ ಎನ್ನುವುದ ಮರೆಯಬೇಕು
ಹೊರಗೆ ಬೀಗಬೇಕು
ಬಿಕ್ಕಳಿಸಬೇಕು ಆಗಾಗ ಮಾಡಿದ ತ್ಯಾಗಕ್ಕೆ
ನಿನ್ನನ್ನು ನೀನೆ ಕೊಂದುಕೊಂಡ ಆತ್ಮಹತ್ಯೆಯೆಂಬ
ಮಹಾ ಪಾಪಕ್ಕೆ
ಎಷ್ಟೆಲ್ಲಾ ಮಾಡಬೇಕು ಎಲ್ಲರನೂ ನಿನ್ನೆದೆಯ
ಅಂಗಳಕೆ ಕರೆ ತರಲು
ಅವರಿಗೆ ಅವರದ್ದೇ ಆದ ಅಂಗಳವಿದೆ
ನಿನ್ನ ಅಂಗಳವೇ ಬೇಕಿಲ್ಲ ಬೆಳದಿಂಗಳ ಕಾಣಲಿಕ್ಕೆ


ಬಯಲಾಗು
ಬೆತ್ತಲಾಗು
ಮೋಹವಿರಲಿ ,ಮಮತೆಯಿರಲಿ
ಪ್ರೆಮವಿರಲಿ ಕಾಮವಿರಲಿ
ಏನೇ ಇರಲಿ
ಎಲ್ಲವನೂ ಹರವಿಟ್ಟು ಕೂತುಬಿಡು ಶುದ್ಧವಾಗಿ
ಅಂಗಳಕೆ ರಂಗೋಲಿ ಹಾಕಿ
ಬಾಗಿಲಿಗೆ ಹಸಿರು ಕಟ್ಟಿ ಏನು ಉಪಯೋಗ
ಮನವೆಂಬ ಒಳಮನೆ ರಾಡಿಯಾಗದಿರಲಿ
ಇರುವವರು ಇದ್ದೇ ಇರುತ್ತಾರೆ ನಿನ್ನಾತ್ಮದಂತೆ
ಹೊರಟು ನಿಂತವರ ಶಪಿಸುವ ಸಣ್ಣತನ ಬೇಡ
ಶುಭ ಕೋರು
ನನ್ನದಲ್ಲದ್ದು ಒಂದು ಹೋಯಿತೆಂದು ದೇವರಿಗೊಂದು
ಧನ್ಯವಾದ ಹೇಳಿ ಸುಮ್ಮನಾಗು


ಬದುಕು ನಾಟಕ ರಂಗ
ಬಣ್ಣ ಎಷ್ಟು ಬೇಕೋ ಅಷ್ಟೇ ಹಚ್ಚು
ಸರಳವಿರಲಿ ಸಹಜವಿರಲಿ ಅಭಿನಯ
ಬೋರು ಬಂದ ನೋಡುಗರು ಎದ್ದು ಹೋದರು ಸರಿಯೇ
ಎಲ್ಲ ಜಳ್ಳು ಪೊಳ್ಳು ಸೋಸಿ ಹೋಗಲಿ
ಕೊನೆಗೆ ನೀನಷ್ಟೇ ಉಳಿಯಲಿ
ನಿನಗೆ ನೀನೆ ಗಟ್ಟಿ ಕಾಳು
ದೀಪವೂ ನಿನ್ನದೇ ಗಾಳಿಯು ನಿನ್ನದೇ
ಕವಿಯ ಮಾತು
ನಿನ್ನಂತೆ ನೀನು ಬದುಕು
ಆರದಿರಲಿ ನಿನ್ನತನವೆಂಬ ಬೆಳಕು  ;) :) :)

Monday, January 20, 2014

ನಮ್ಮೂರು ಎಂಡ್ ನಮ್ಮೋರು : ನಮ್ಮೂರು ಮತ್ತು ನಿಮ್ಮೂರು ;) :)



 ಒಣ ಕೆಮ್ಮು , ಕಫ ಕಟ್ಟಿ ಬಿಗಿದು ಕೂತ  ಗಂಟಲು
ಏನೋ ಹೇಳಬೇಕು
ಕಫದೊಡನೆ ಸಿಕ್ಕಿ ಕೆಲವಷ್ಟು ಗಂಟಲಲ್ಲೇ ಉಳಿದು
ಉಳಿದು ಹೊರಬಂದದ್ದು ಅಸ್ಪಷ್ಟ
ಏನೂ  ಕೇಳದ ಕಿವುಡ ಕಿವಿಯಲ್ಲಿ ಎಲ್ಲವನೂ ಕೇಳುತ್ತ
ತಲೆಯಾಡಿಸುತ್ತಾ ಕೂತ ಇನ್ನೊಂದು ಜೀರ್ಣ ಜೀವ
ಅವರಿಬ್ಬರು  ,
ಅವರವರೇ ಒಬ್ಬರಿಗೊಬ್ಬರು

ಸಾಲು ಸಾಲು ಮನೆ, ಎಲ್ಲ ಮನೆಯ ದೋಸೆಯೊಂದೇ ಅಲ್ಲ
ಎಲ್ಲವೂ ತೂತೇ
ಜೀವ ಕಳೆದು ಕೊಂಡ  ಹಬ್ಬಗಳು
ಬೇರು ಕಳೆದುಕೊಂಡ ತೋಟಗಳು
ಮಾತೆ ಇಲ್ಲದೆ ಸಮಾಧಿ ಕಟ್ಟೆಗಳಾಗಿ ಕೂತ ಹರಟೆ ಕಟ್ಟೆಗಳು
ಮಕ್ಕಳಿಲ್ಲದೆ ಬಂಜೆಯಾಗಿದೆ  ಊರ ಆಚೆಗಿನ
ದೊಡ್ಡ ಆಟದ ಬಯಲು
ಇನ್ನು ಏನೇ ಆದರೂ ಕದಲದ ಗುಡಿಯ ದೇವರು
ಗುಡಿಯುಂಟು ದೇವರುಂಟು
ನಾಳೆಗೆ ಪೂಜೆ ಖಾತ್ರಿಯಿಲ್ಲ
ಪೂಜಾರಿ ದೇವರ ಪಾದ ಸೇರುವ ಇಂಥಾ ಸರಹೊತ್ತಿನಲಿ 
ಅವನ ಮಗ ಪೇಟೆ ದೇವರ ಪಾದವನ್ನ ಗುತ್ತಿಗೆಗೆ ಪಡೆದು
ಗಂಟೆ ಅಲ್ಲಾಡಿಸುತ್ತಿದ್ದಾನೆ
ದೋಸೆ ಅನಾದಿ ಕಾಲದಿಂದಲೂ ತೂತೇ
ಈದೀಗ ಕಾವಲಿಯೂ ತೂತಾಗುವ ಕಾಲ
ಕೆಳಗೆ ಕಾಲವೆಂಬ ಬೆಂಕಿ
ತಣ್ಣಗೆ ಉರಿಯುತಿದೆ ಎಲ್ಲವನೂ ಗುಡಿಸಿ ಒರೆಸಿ ಉರಿಸಿ

ಎಳೆಯ ಚಿಗುರಿಲ್ಲ
ಸೊಂಪು ಹಸಿರಿಲ್ಲ
ಅರಳೋ ಮೊಗ್ಗಿಗೆ ಹಾರೋ ತವಕ
ಧಾವಂತ , ಅನಿವಾರ್ಯ ಕರ್ಮ
ಅಯ್ಯೋ !
ಊರಿಗೆ ಊರೇ ನೆರೆತ  ಕೂದಲಿನ ಹುಲ್ಲುಗಾವಲು
ಹತ್ತಿರದಲ್ಲೇ ಮಹಾ ನಿರ್ವಾಣ ಖಂಡಿತ
 ಎಷ್ಟು ಹತ್ತಿರ ಎನುವುದಷ್ಟೇ ಸದ್ಯದ ಕುತೂಹಲ
ಸಣ್ಣ ಸಂಕಟ ಅಸಹಾಯಕತೆ



ಮರಳುವ ಬಯಕೆಗೆ ದಾರಿಯಿಲ್ಲ
ಕವಲು ದಾರಿಯಲಿ ಬದುಕು  ಅಲ್ಲೇ ಸಾವು 
ಯಾರನೂ ದೂರುವಂತಿಲ್ಲ
ಏನೂ ಮಾಡುವಂತಿಲ್ಲ
ಹೀಗೆ ನಾನು  ಮಾಡಿದಂತೆ
ಕವನ ಗೀಚಬಹುದು ,ಕಥೆ ಕಟ್ಟಬಹುದು
ಬರೆಯುವ ದುಶ್ಚಟವಿರದಿದ್ದರೆ
ತಣ್ಣಗೆ ಹೊದ್ದು ಮಲಗಬಹುದು  :) :) :) :)