Friday, December 31, 2010

ವೈರಾಗ್ಯವೆಂಬ ವಯಾಗ್ರ ....

ಇದು ಈ ದಿನಮಾನದ ಎಲ್ಲರ ಅಗತ್ಯ ....

ಹಿಂದಿದ್ದ ನನ್ನ ಹಳೆಯ ಬ್ಲಾಗಿನಲ್ಲಿ ಬ್ಲಾಗ್ ಶುರುಮಾಡಿದ ಆರಂಭದ ದಿನಗಳಲ್ಲಿ ಕೆಲವು ಕವನಗಳನ್ನ ಬ್ಲಾಗಿನಲ್ಲಿ ಪೋಸ್ಟ್ ಮಾಡಿದ್ದೆ.ಆ ಕವನಗಳ ಹಿನ್ನೆಲೆಯಲ್ಲಿ ಇದ್ದದ್ದು ಗಾಢ ವಿಷಾದದ ಛಾಯೆ.ಜೊತೆ ಜೊತೆಗೆ ವಯಸ್ಸಿಗೆ ಮೀರಿದ ವೈರಾಗ್ಯ .ಕೆಲವರು ಈ ಬಗ್ಗೆ ಆಕ್ಷೇಪ ಎತ್ತಿ , ನಿನ್ನ ವಯಸ್ಸಿಗೆ ಇದು ಸರಿಯಲ್ಲ ಎಂಬ ಕಿವಿಮಾತು ಹೇಳುತ್ತಿದ್ದರು. ಅವರ ಆ ಆಕ್ಷೇಪದಲ್ಲಿ ಹುರುಳಿತ್ತು.ನಾನು ಬದಲಾದೆ. ನನ್ನ ಬರಹಗಳು ನನ್ನ ವಯಸ್ಸಿನ ದಿಕ್ಕಿಗೆ ಹೊರಳಿಕೊಂಡವು.

ನನಗೀಗ ವಯಸ್ಸು ಇಪ್ಪತ್ಮೂರು . ‘ ಹೆಣ್ಣು ಹೊನ್ನು ಮಣ್ಣು ಎಲ್ಲ ಮಾಯೆ ,ಎಲ್ಲ ನಶ್ವರ’ ಎನುವ ರೀತಿಯ ಮಾತುಗಳು ನನ್ನ ಕಡೆಯಿಂದ ಬರಲೇಬಾರದು.ಅದು ನಿಜಕ್ಕೂ ಆರೋಗ್ಯಕರ ಲಕ್ಷಣವಲ್ಲ. ಆದರೆ ಒಂದು ಹದವಾದ ಸಣ್ಣ ವೈರಾಗ್ಯ ನಿಜಕ್ಕೂ ಆರೋಗ್ಯಕರ ಎಂಬುದು ಈಗೀಗ ನಾನು ಕಂಡುಕೊಂಡ ಸತ್ಯ. ಈಗ ನನ್ನ ಪಾಲಿಗೆ ವೈರಾಗ್ಯವೆಂದರೆ ಕೇವಲ ವೈರಾಗ್ಯವಲ್ಲ. ಅದು ವಿರಾಗ.ವಿಶೇಷ ರಾಗ. ಜಗತ್ತನ್ನು ಬೇರೆಯದೇ ರೀತಿಯಲ್ಲಿ ನೋಡುವ ಮೂರನೇ ಕಣ್ಣು ವೈರಾಗ್ಯ. ಅದು ಎಲ್ಲವನ್ನೂ ಕಂಡೂ ಏನನ್ನೂ ಕಾಣದ ಕಣ್ಣು.ಇದ್ದೂ ಇಲ್ಲದಂತಾಗಿ ,ಹಿಂದಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಜಗತ್ತಿನ ಎದುರು ಮುಖಾಮುಖಿಯಾಗಲಿಕ್ಕೆ ಈ ವೈರಾಗ್ಯ ಬೇಕು. ಅದು ಕೇವಲ ಸನ್ಯಾಸಿಗಳ, ತತ್ವ ಜ್ಞಾನಿಗಳ, ಹತಭಾಗ್ಯರ .ಮುದುಕರ ಸ್ವತ್ತಲ್ಲ.ಅದು ಈ ದಿನಮಾನದ ಎಲ್ಲರ ಅಗತ್ಯ.

ಈಗೊಂದು ಸ್ವಲ್ಪ ದಿನದ ಕೆಳಗೆ ಪೇಪರಿನಲ್ಲಿ ಅನಂತಮೂರ್ತಿಯವರ ಒಂದು ಮಾತು ಹೇಳಿದ್ದರು.ಅವರು ಈ ಜಾಗತೀಕರಣ ,ಕೈಗಾರೀಕರಣ, ಅಭಿವೃದ್ಧಿ ಮುಂತಾದ ಪ್ರಸ್ತುತ ವಿದ್ಯಮಾನದ ಬಗ್ಗೆ ಮಾತನಾಡುತ್ತ ‘ ಯಾವುದೇ ಅಭಿವೃದ್ಧಿ ಇರಲಿ, ಬೆಳವಣಿಗೆಗಳಿರಲಿ ,ಅಲ್ಲಿ ವೈರಾಗ್ಯಕ್ಕೂ ಕೊಂಚ ಜಾಗವಿರಬೇಕು ‘ ಎಂಬರ್ಥದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದರು. ಈಗಂತೂ ಜಗತ್ತು ಅಸಂಖ್ಯ ಆಯ್ಕೆಗಳ ಸಾಗರ. ಮನುಷ್ಯನ ಮೂಲಭೂತ ಅವಶ್ಯಕತೆಗಳು ಹಿಂದಿನಂತಯೇ ಇವೆ.ಆದರೆ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವ ದಾರಿಯಲ್ಲಿ ನೂರಾರು ಆಯ್ಕೆಗಳು. ನಾವು ಆಧುನಿಕರಾದಷ್ಟೂ ಅತೃಪ್ತರಾಗುತ್ತಿದ್ದೇವೆ.

ಒಂದು ಕೆಲಸ ಸಿಕ್ಕಿ ಕೊಂಚ ದುಡ್ಡು ಕೈಸೇರುತ್ತಿದಂತೆ ನಮಗೆ ಕ್ರೆಡಿಟ್ ಕಾರ್ಡ್ ಬೇಕು. ಇರುವ ಕೆಲಸವನ್ನ ನಂಬಿಕೊಂಡು ಇನ್ಸ್ಟಾಲ್ಮೆಂಟ್ ಲೆಕ್ಕದಲ್ಲಿ ಒಂದಾದ ಮೇಲೊಂದರಂತೆ ಕಾರು, ಫ್ಲಾಟು ಎಂದು ಖರೀದಿ ಮಾಡುತ್ತಾ ಹೋಗುತ್ತೇವೆ.ಕಳೆದ ರಿಸೆಶನ್ ಸಮಯದಲ್ಲಿ ಹೀಗೆ ಸಾಲ ಮಾಡಿ ತಿಂಗಳು ತಿಂಗಳು ಇನ್ಸ್ಟಾಲ್ಮೆಂಟ್ ಕಟ್ಟುತ್ತಿದ್ದ ಎಷ್ಟು ಜನ ಕಂಗಾಲಾಗಿ ಹೋದರು ನೋಡಿ. ಇದು ದುಬಾರಿಯ ಕಾಲ.ಇದು ತೀವ್ರವಾದ ಸ್ಪರ್ಧೆಯ ಕಾಲ ನಿಜ. ಆದರೆ ನಾವಂದುಕೊಂಡಷ್ಟು ಪರಿಸ್ಥಿತಿ ಕೈಮೀರಿಲ್ಲ. ಎಲ್ಲ ನಮ್ಮ ಕೈಯಲ್ಲೇ ಇದೆ.ಎಲ್ಲವೂ ದುಬಾರಿ ಆದರೆ ಆಗಲಿ ಬಿಡಿ.ನಮ್ಮ ಅನಾವಶ್ಯಕ ಅಗತ್ಯತೆಗಳನ್ನ ಕಡಿಮೆ ಮಾಡಿಕೊಳ್ಳಬಹುದಲ್ಲ. ನಮ್ಮ ಎಲ್ಲ ಸಂಕಷ್ಟಕ್ಕೆ ಕಾರಣ ನಮ್ಮನ್ನು ನಾವು ಉಳಿದವರ ಜೊತೆ ಹೋಲಿಕೆ ಮಾಡಿಕೊಳ್ಳುವ ಗುಣ. ನಮಗಾಗಿ ನಾವು ನಮ್ಮ ಪಾಡಿಗೆ ಬದುಕಿಬಿಟ್ಟರೆ ನಮ್ಮ ಸಂಕಷ್ಟ ಅರ್ಧ ಕಡಿಮೆಯಾದಂತೆ.ದುರಂತವೆಂದರೆ ನಾವು ಉಳಿದವರ ಸಲುವಾಗಿ ಬದುಕುತ್ತೇವೆ. ಪ್ರತಿಷ್ಠೆಗಾಗಿ ಬದುಕುತ್ತೇವೆ. ಉಳಿದವರ ಜೊತೆ ತೋರಿಕೆಯ ವಿಷಯದಲ್ಲಿ ಸರಿಸಮಾನವಾಗಿ ಬದುಕಬೇಕೆಂಬ ಹಪಾಹಪಿಗೆ ಬೀಳುತ್ತೇವೆ.ಮಾಡುವ ಕೆಲಸದಲ್ಲಿ ,ಚಿಂತನೆಯ ರೀತಿಯಲ್ಲಿ ಘನತೆಯಿದ್ದರೆ,ವೈಭವವಿದ್ದರೆ ಸಾಕಲ್ಲವೇ ?

ಈಗಂತೂ ಬೆಂಗಳೂರಿನಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ. ಎಷ್ಟೇ ಫ್ಲೈ ಓವರ್ಗಳು ತಲೆ ಎತ್ತಲಿ, ರಸ್ತೆಗಳು ಎಷ್ಟೇ ಅಗಲವಾಗಲಿ,ಟ್ರಾಫಿಕ್ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಪರಿಹಾರವೆಂಬಂತೆ ‘ಕಾರ್ ಪೂಲಿಂಗ್’, ‘ಬಸ್ ಡೇ ‘ ಮುಂತಾದ ಹೊಸಾ ಚಿಂತನೆಗಳು ಶುರುವಾಗಿವೆ.ಅತ್ತ ಮೆಟ್ರೋ ರೈಲು ಸಿದ್ಧವಾಗುತ್ತಿದೆ.ಈ ಟ್ರಾಫಿಕ್ ಸಮಸ್ಯೆ ಹಾಗು ಅದರಿಂದ ಪೋಲಾಗುವ ಸಮಯವನ್ನ ಗಮನದಲ್ಲಿಟ್ಟುಕೊಂಡು ಕೆಲವು ಕಂಪನಿಗಳು ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಅವಕಾಶವನ್ನ ನೌಕರರಿಗೆ ಒದಗಿಸುತ್ತಿವೆ.ಭವಿಷ್ಯದಲ್ಲಿ ಈ ಪದ್ಧತಿಯನ್ನ ಅಳವಡಿಸಿಕೊಳ್ಳಲು ಎಲ್ಲ ಕಂಪನಿಗಳು ಗಂಭೀರವಾಗಿ ಯೋಚಿಸುತ್ತಿವೆ. ಈ ಟ್ರಾಫಿಕ್ ಸಮಸ್ಯೆ ಇದೆ ಎಂಬುದು ಎಲ್ಲರಿಗೂ ಗೊತ್ತು. ಅತ್ತ ಮೋಟಾರು ವಾಹನಗಳ ಮಾರಾಟ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಓಡಾಡಲಿಕ್ಕೆ ಬಸ್ ಗಳಿವೆ.ಐಷಾರಾಮ ಬೇಕೆನುವ ಮಂದಿಗೆ ಅದು ಕೂಡ ಲಭ್ಯ ವಾಯು ವಜ್ರದಂಥ ಐಷಾರಾಮಿ ಬಸ್ಸುಗಳಲ್ಲಿ. ಅತ್ತ ಕಂಪನಿಗಳೇ ಕೆಲಸಕ್ಕೆ ಹೋಗಿ ಬರುವ ಸಮಯದಲ್ಲಿ ತನ್ನ ನೌಕರರಿಗಾಗಿ ಕಳುಹಿಸುವ ವಾಹನಗಳಿವೆ ,ಮೆಟ್ರೋ ಇನ್ನು ಸ್ವಲ್ಪವೇ ಸಮಯದಲ್ಲಿ ಸಿದ್ಧವಾಗಲಿದೆ. ಆದರೂ ನಮ್ಮ ಜನಗಳಿಗೆ ಮನೆಯ ಅಂಗಳದಲ್ಲಿ ಅಲಂಕಾರಕ್ಕೆ ಒಂದು ಕಾರು ಬೇಕೇ ಬೇಕು. ಕಾರು ಖರೀದಿ ಮಾಡದಿದ್ದರೆ ಅಷ್ಟು ದುಡ್ಡೂ ಉಳಿಯುತ್ತೆ.ದುಡ್ಡು ಒಟ್ಟು ಮಾಡುವ ಭರದಲ್ಲಿ ಹೊತ್ತುಗೊತ್ತಿಲ್ಲದೆ ವಿಪರೀತ ದುಡಿಮೆಗೆ ಈಡಾಗುವ ಕಷ್ಟ ತಪ್ಪುತ್ತೆ.ಕುಟುಂಬದೊಂದಿಗೆ ಸಮಯ ಕಳೆಯಲು ಪುರುಸೊತ್ತು ಸಿಗುತ್ತೆ. ಪೆಟ್ರೋಲು ಡೀಸೇಲುಗಳಿಗೆ ಮಾಡುವ ಖರ್ಚು ಇಲ್ಲವಾಗುತ್ತೆ.ಇಂಧನದ ಉಳಿತಾಯವಾಗುತ್ತೆ.ಮಾಲಿನ್ಯ ಕಡಿಮೆಯಾಗುತ್ತೆ .ಟ್ರಾಫಿಕ್ ಸಮಸ್ಯೆಯೂ ನೀಗುತ್ತೆ.ಇವೆಲ್ಲ ನಮಗೆ ಅರ್ಥವಾಗುವುದೇ ಇಲ್ಲ. ನಾವು ವಿದ್ಯಾವಂತರು.ಪ್ರಜ್ಞಾವಂತರು?

ಇಲ್ಲಿ ಕಾರಿನ ಪ್ರಸಂಗ ಒಂದು ಉದಾಹರಣೆಯಷ್ಟೇ.ಹೇಳ ಹೊರಟರೆ ತುಂಬಾ ಇವೇ ನಮ್ಮ ದಡ್ಡತನಗಳು. ‘ಪಾಪ ಹುಡುಗ,ವಯಸ್ಸಿನ ಆವೇಶದಲ್ಲಿ ಬರೆಯಲಿಕ್ಕೆ ಒಂದು ಜಾಗ ಸಿಕ್ಕಿದೆ ಎಂದು ತುಂಬಾ ಆವೇಶದಲ್ಲಿ ಮಾತಾಡುತ್ತಿದ್ದಾನೆ.ಹುಟ್ಟಿ ಎರಡು ಸೋಮವಾರ ಕೂಡ ಆಗಿಲ್ಲ.ಇವನಿಗಿನ್ನೂ ಅನುಭವ ಕಡಿಮೆ.’ ಎಂದು ಕೆಲವರು ಅಂದುಕೊಳ್ಳಬಹುದು.ನಾನು ಸಣ್ಣವನು .ನನಗೆ ಅನುಭವ ಕಡಿಮೆ ನಿಜ.ಅನುಭವ ಇಲ್ಲದವನಿಗೆ ತಿಳುವಳಿಕೆ ಕಡಿಮೆ ಎನ್ನುವುದು ಲೋಕಾರೂಢಿ .ಆದರೆ ಒಂದಂತೂ ಸತ್ಯ.ದೊಡ್ಡವರ ಸಣ್ಣತನಗಳು ಅರ್ಥವಾಗುವಷ್ಟು ತಿಳುವಳಿಕೆ ನನಗೆ ಬಂದಿದೆ.ಹೇಗೆ ಬದುಕಬೇಕೆಂಬುದಕ್ಕೆ ದೊಡ್ಡವರು ಉದಾಹರಣೆ.ಹೇಗೆ ಬದುಕಬಾರದು ಎಂಬುದಕ್ಕೂ ಮತ್ತೆ ಅವರೇ ಉದಾಹರಣೆ. ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ಮಾತು ನಿಜ. ಆದರೆ ನಮ್ಮನ್ನು ನಾವು ಬಿಟ್ಟು.ನಮ್ಮ ಸ್ವಂತ ಬುದ್ಧಿಯನ್ನು ಬಿಟ್ಟು ಎಲ್ಲರೊಳಗೊಂದಾಗ ಹೊರಟರೆ ಕೊನೆಗೆ ನಾವಾಗುವುದು ಗುಂಪಿನಲ್ಲಿ ಗೋವಿಂದರಷ್ಟೇ.

ನಾವು ನಾವಾಗಿದ್ದುಕೊಂಡು ಎಲ್ಲರೊಳಗೊಂದಾಗಬೇಕು. ತೀರಾ ಜಗತ್ತಿಗೆ ಅಂಟಿಕೊಳ್ಳಬಾರದು. ಒಂದು ಸಣ್ಣ ವೈರಾಗ್ಯ ಇಟ್ಟುಕೊಂಡೇ ಬದುಕಬೇಕು.ಹದವಾದ ವೈರಾಗ್ಯವಿದ್ದಲ್ಲಿ ತೃಪ್ತಿಯಿರುತ್ತೆ.ತೃಪ್ತಿಯಿದ್ದಲ್ಲಿ ನೆಮ್ಮದಿ.ಆಗ ನಿಜಕ್ಕೂ ಜಗತ್ತು ನಮ್ಮ ಪಾಲಿಗೆ ನವ ನವೀನ.ಇಲ್ಲದಿದ್ದರೆ ಅದು ಭಟ್ಟರ ಭಾಷೆಯಲ್ಲಿ ‘ಹಳೇ ಬೇಜಾರು’.

ಯಾರ್ಯಾರದೋ ಹಂಗಿಗೆ,ಇನ್ಯಾವುದೋ ಮುಲಾಜಿಗೆ ,ಹೇಗಾದರೂ ಸರಿ ಒಟ್ಟಿನಲ್ಲಿ ಬದುಕಬೇಕೆಂಬ ಅಸಹಾಯಕತೆಗೆ ಬಿದ್ದು ಇಷ್ಟವಿಲ್ಲದ ಕೆಲಸವನ್ನು ಕಷ್ಟಪಟ್ಟು ಮಾಡಿ ದಣಿದ ಮೈಮನಸ್ಸುಗಳಿಗೆ ನವಚೈತನ್ಯ ಎಂಬುದೊಂದಿದ್ದರೆ ಅದು ವೈರಾಗ್ಯದಿಂದ ಮಾತ್ರ ಸಾಧ್ಯ.

ಆ ಕಾರಣಕ್ಕೆ ನಾನು ವೈರಾಗ್ಯ ಬೇಕು ಎಂದಿದ್ದು. ವೈರಾಗ್ಯವೇ ವಯಾಗ್ರ ಎಂದದ್ದು .:) :) .

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು ..:) :).

Sunday, December 26, 2010

ರವಿಯಿರದ ಸಂಧಿಯಲಿ ಚಂದ್ರ ಅವಕಾಶವಾದಿ ..

ಇಂದಿನ ರವಿ ಎಂದಿನಂತಿಲ್ಲ

ಉಡುಗುತಿದೆ ಬೆಳಗುವ ತ್ರಾಣ

ಅಳಿಯುತಿದೆ ಬೆಳಕಿನ ಬಣ್ಣ

ಅಪರಾಹ್ನ ಅಡಿಯಿಡುವ ಹೊತ್ತಿಗೆ ಅಕಾಲ ಸಂಜೆ

ರಾತ್ರಿ ದೂರಿಲ್ಲ

ಹಗಲಿಲ್ಲದ ಮೇಲೆ ರವಿಯೂ ಇಲ್ಲ


ರವಿ ಅರಳಿಸಿದ ಆ ಹೂವು

ರವಿ ಕಾಣಿಸಿದ ಹೂವ ಬಣ್ಣದ ಬೆರಗು

ಅರಳಿದ್ದು ಮುದುಡಿಹೋಯಿತು

ಕಂಡಿದ್ದು ಎಲ್ಲಿ ಕಾಣೆಯಾಯಿತೋ?

ಕತ್ತಲಲ್ಲಿ ಕಣ್ಣಿದ್ದೂ ಕುರುಡು

ಅಗೋ ಅಲ್ಲಿ

ರವಿಯಿರದ ಸಂಧಿಯಲಿ ಹಾಳು ಅವಕಾಶವಾದಿ ಚಂದ್ರ

ಹೊಳಪಾಗಿ ಕಂಡರೂ ದಾರಿ ತೋರಲಾರ

ಕೆರಳಿಸುವ ಕಲೆ ಗೊತ್ತು.ಅರಳಿಸುವ ಸಿದ್ಧಿ ಒಲಿದಿಲ್ಲ.

ಹಚ್ಚಬೇಕಿದೆ ದೀಪ ಕನಸ ಕಡ್ಡಿಯ ಗೀರಿ

ನಾಳೆಯ ಹಗಲು ಈಗಲೇ ಬೆಳಕಾಗಲಿ

ಎಂದಿನಂತಿಲ್ಲದ ರವಿ ನಾಳೆ ಏನಾಗುವನೋ

ರವಿ ಬಂದರೂ ಬರಬಹುದು ನಾಳೆ

ಖಾತ್ರಿಯಿಲ್ಲ .

Sunday, December 19, 2010

ನನ್ನ ಆರ್ಕುಟ್ ಹಾಗು ಫೇಸ್ ಬುಕ್ ಖಾತೆಗಳು ಡಿಲೀಟ್ ಆದವು...

ಈಗೊಂದು ಎರಡು ದಿನದ ಕೆಳಗೆ ನನ್ನ ಆರ್ಕುಟ್ ಹಾಗು ಫೇಸ್ ಬುಕ್ ಖಾತೆಗಳನ್ನ ಡಿಲೀಟ್ ಮಾಡಿಬಿಟ್ಟೆ. ಸಾಕು ಎನ್ನಿಸಿ ಹೋಗಿತ್ತು. ತೀರ ಸಹಜವಾಗಿ ಡಿಲೀಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ದೊಡ್ಡ ಹೊರೆಯೊಂದನ್ನು ಇಳಿಸಿ ಕೊಂಡು ಸುಮ್ಮನಾಗಿಬಿಟ್ಟೆ. ನನಗೆ ನಾನೇನೂ ಅಲ್ಲಿ ಕಳೆದುಕೊಳ್ಳುವಂಥದ್ದು ಕಾಣಲಿಲ್ಲ. ನಾನೇನೋ ಡಿಲೀಟ್ ಮಾಡಿ ನಿರಮ್ಮಳವಾಗಿ ಉಳಿದುಬಿಟ್ಟೆ. ಆದರೆ ನನ್ನ ಕೆಲವು ಆಪ್ತರು ‘ಯಾಕೆ ಹಾಗೆ ಮಾಡೋಕೆ ಹೋದೆ.ಅದು ಇದ್ದರೆ ನಿನ್ನ ಗಂಟೇನು ಹೋಗುತ್ತಿತ್ತು ‘ ಎಂದೆಲ್ಲ ಹೇಳಿ ಏನೋ ಭಾರಿ ದೊಡ್ಡ ಅನಾಹುತ ಘಟಿಸಿ ಹೋಯಿತೆಂಬನ್ತೆ ತಲೆಗೊಂದು ಸಲಹೆ ನೀಡಿ ನನಗಿಂತ ಜಾಸ್ತಿ ನನ್ನ ವಿಷಯದಲ್ಲಿ ತಲೆಬಿಸಿ ಮಾಡಿಕೊಂಡು ಬಿಟ್ಟಿದ್ದರು. ಕೆಲವರಂತೂ ವೀಸಾ ಪಾಸ್ ಪೋರ್ಟ್ ನಷ್ಟೇ ಮಹತ್ವವನ್ನು ಫೇಸ್ ಬುಕ್ –ಆರ್ಕುಟ್ ಗೆ ಆರೋಪಿಸಿದರು. ಇನ್ನೂ ಕೆಲವರು ಫೇಸ್ ಬುಕ್ –ಆರ್ಕುಟ್ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದೆಂಬಂತೆ ಮಾತಾಡಿಬಿಟ್ಟರು. ಅವರ ಕಳವಳದಲ್ಲಿ ನನಗೆ ಅರ್ಥವೇ ಕಾಣಲಿಲ್ಲ. ನನ್ನ ಪಾಲಿಗೆ ಅದು ‘ಡಿಲೀಟ್’ ಆಯ್ಕೆಯ ಮೇಲೆ ಬೆರಳ ತುದಿಯ ‘ಕ್ಲಿಕ್ ‘ಅಷ್ಟೇ.

ಅಸಲಿಗೆ ನಾನು ನನ್ನ ಆರ್ಕುಟ್ ಹಾಗು ಫೇಸ್ ಬುಕ್ ಖಾತೆ ಶುರುಮಾಡಿದ್ದು ನನ್ನ ಸಿನಿಮಾ ಹವ್ಯಾಸಕ್ಕೆ ಪೂರಕವಾಗಿ. ಕೇವಲ ಕಾಂಟಾಕ್ಟ್ ಗಳ ಸಲುವಾಗಿ ಅವನ್ನೆಲ್ಲ ಶುರು ಮಾಡಿದ್ದು. ಖಾತೆ ತೆರೆದದ್ದು ವ್ಯರ್ಥವಾಗಲಿಲ್ಲ. ಹಲವಾರು ಜನಗಳ ಪರಿಚಯವಾಯಿತು. ಸಿನಿಮಾದ ವಿಷಯದಲ್ಲಿ ಆ ಪರಿಚಯಗಳು ನೆರವಿಗೆ ಬಂದವು. ಆ ಪರಿಚಯಸ್ತರೆಲ್ಲಾ ನನ್ನ ಮೊಬೈಲ್ ಲಿಸ್ಟ್ ನಲ್ಲಿ ಜಮೆಯಾಗಿದ್ದರೆ. ಈಗ ನನಗೆ ಈ ಆರ್ಕುಟ್ ಮತ್ತು ಫೇಸ್ ಬುಕ್ ಗಳ ಅವಶ್ಯಕತೆಯಿಲ್ಲ. ಯಾವ ಕಾರಣಗಳಿಗೆ ನಾನು ಅವುಗಳನ್ನ ಶುರು ಮಾಡಿದ್ದೇನೋ , ಆ ಕಾರಣಗಳೆಲ್ಲ ಈಗ ಕಾರಣಗಳಾಗಿ ಉಳಿದಿಲ್ಲ. ಅಂದುಕೊಂಡಿದ್ದು ಸಾಕಾರಗೊಂಡಿವೆ . ಈಗೀಗ ಈ ಫೇಸ್ ಬುಕ್ ಹಾಗು ಆರ್ಕುಟ್ ಕೇವಲ ಟೈಮ್ ವೇಸ್ಟಿನ ಸರಕುಗಳು. ಅಲ್ಲಿ ನನಗೆ ಯಾವ ದೊಡ್ಡ ಪ್ರೀತಿ ಹಾಗು ಖುಷಿಯ ಕಾರಣಗಳಿರಲಿಲ್ಲ. ಇದ್ದದ್ದು ಕೇವಲ ಲೆಕ್ಕಾಚಾರ. ಇನ್ಯಾಕೆ ಮುಲಾಜು? ಡಿಲೀಟ್ ಮಾಡಿಬಿಟ್ಟೆ.

ಸುಮ್ಮನೆ ಒಮ್ಮೆ ಮೇಲ್ ಚೆಕ್ ಮಾಡಲೆಂದು ಜಿ-ಮೈಲ್ ಓಪನ್ ಮಾಡಿದರೆ , ಅತ್ತ ಆರ್ಕುಟ್ ಹಾಗು ಫೇಸ್ ಬುಕ್ ಗಳು ಕೈಹಿಡಿದು ಎಳೆಯುತ್ತವೆ. ಅತ್ತ ಹೋಗಲೇ ಬೇಕು.ಹೋದ ಮೇಲೆ ಅಲ್ಲಿ ನೂರಾ ಎಂಟು ಅಪ್ಡೇಟ್ಸ್ ಗಳು . ಹಾಗೆ ಹೋಗಿ ಹೀಗೆ ಬರಲಿಕ್ಕೆ ಸಾಧ್ಯವೇ ಇಲ್ಲ. ಎಲ್ಲವನ್ನೂ ನೋಡಲೇಬೇಕು. ನೋಡಲೇಬೇಕೆಂಬ ನಿಯಮವೇನಿಲ್ಲ. ಕುತೂಹಲ ಮನುಷ್ಯ ಸಹಜ ಪ್ರಕೃತಿದತ್ತ ಗುಣ .ಬೇಕಾದ್ದು ಬೇಡದ್ದು ಎಲ್ಲವೂ ಅಲ್ಲಿ ಲಭ್ಯ. ಆದರೂ ನೋಡದೆ ಇರಲಾಗುವುದಿಲ್ಲ. ಅದು ಮನುಷ್ಯ ಸಹಜ ದೌರ್ಬಲ್ಯ. ನಡುವೆ ಹಾಳಾಗುವುದು ನಮ್ಮ ಅಮೂಲ್ಯ ಸಮಯ. ಸಮಯದ ಜೊತೆ ನಾವು. ನಮ್ಮ ಜೊತೆ ನಮ್ಮ ಕ್ರಿಯಾಶೀಲ ಸಾಧ್ಯತೆಗಳು.

ನಮ್ಮ ಮನೆಯ ಪಕ್ಕದ ಮನೆಯವರ ಜೊತೆ ಲೋಕಾಭಿರಾಮವಾಗಿ ಹರಟಿ ನಮ್ಮಲ್ಲಿ ಬಹುತೇಕರಿಗೆ ಗೊತ್ತಿಲ್ಲ. ನಾವಾಯಿತು ನಮ್ಮ ಪಾಡಾಯಿತು ಎಂಬುದು ಈಗಿನ ಆಧುನಿಕ ಪರಿ.ಮನೆಯ ಹತ್ತಿರದ ಬೇಕರಿಯವನನ್ನೋ , ಆಟೋ ಓಡಿಸುವವನನ್ನೋ , ಎಳ ನೀರು ಮಾರುವವನನ್ನೋ .ಪೇಪರ್ ಹಂಚುವ ಹುಡುಗನನ್ನೋ ನಾಲ್ಕು ಮಾತು ಪ್ರೀತಿಯಿಂದ .ಆಪ್ತತೆಯಿಂದ ಮಾತಾಡುವ, ಕಷ್ಟ ಸುಖ ಹೇಳಿ ಕೇಳಿ ಮಾಡುವ ಆರೋಗ್ಯವಂತ ರೂಢಿ ತುಂಬಾ ಕಡಿಮೆ. ನಮ್ಮೆದುರಿನ ಸುತ್ತ ಮುತ್ತಲನ್ನು ಬಿಟ್ಟು ಈ ಫೇಸ್ ಬುಕ್ ಹಾಗು ಆರ್ಕುಟ್ ಓಪನ್ ಮಾಡಿಕೊಂಡು ‘ ಹಾಯ್ ಊಟ ಆಯ್ತಾ. ತಿಂಡಿ ಆಯ್ತಾ .ಏನ್ ತಿಂದ್ರಿ.ಗುಡ್ ಮಾರ್ನಿಂಗ್.ಗುಡ್ ನೈಟ್ .’ ಕೇಳಿಕೊಂಡು ಹೇಳಿಕೊಂಡು ಯಾರೋ ಮುಖವೇ ಕಾಣದವರ ಜೊತೆ ಗಾಳಿ ಗೋಪುರ ಕಟ್ಟುವುದರಲ್ಲಿ ಯಾವ ಪುರುಷಾರ್ಥವಿದೆ ?

ಇನ್ನು ನನಗೆ ಸಮಸ್ಯೆಯಾಗಿ ಕಾಡಿದ್ದು ಈ ಹ್ಯಾಕರ್ಸ್ . ಎರಡು ವಾರದ ಕೆಳಗೆ ನನ್ನ ಫೇಸ್ ಬುಕ್ ಖಾತೆ ಹ್ಯಾಕ್ ಆಗಿ ಹೋಗಿತ್ತು. ನೋಡಿದರೆ ಯಾರೋ ಮುಂಬೈ ಆಸುಪಾಸಿನ ಪ್ರದೇಶದಿಂದ ನನ್ನ ಖಾತೆಗೆ ಕನ್ನ ಹಾಕಿದ್ದಾರೆಂಬ ಮಾಹಿತಿ ಸಿಕ್ಕಿತು. ಈ ಸೋಷಿಯಲ್ ನೆಟ್ವರ್ಕಿಂಗ್ ತಾಣಗಳಲ್ಲಿ ಎಲ್ಲರಿಗೂ ‘ ಫ್ರೆಂಡ್ಸ್ ‘ ಎಂಬ ಹಣೆಪಟ್ಟಿ. ಕಾಲೆಳೆಯುವವರು, ಹಿತ ಶತ್ರುಗಳು , ಈ ಹ್ಯಾಕರ್ಸ್ ಕುಲದ ಕಳ್ಳರು ಎಲ್ಲರೂ ‘ಫ್ರೆಂಡ್ಸ್’. ಇದರ ಉಪಯೋಗ ಎಷ್ಟಿದೆಯೋ , ಬೇಡದ ತಲೆಬಿಸಿಯ ಸಂಗತಿಗಳೂ ಕೂಡ ಅಷ್ಟೇ ಇವೆ. ನಾನು ನನ್ನ ಪಾಲಿನ ಉಪಯೋಗ ಪಡೆದುಕೊಂಡು ತಲೆಬಿಸಿಯ ಸಾಧ್ಯತೆಯನ್ನ ಫೇಸ್ ಬುಕ್ ಹಾಗು ಆರ್ಕುಟ್ ಜೊತೆ ಡಿಲೀಟ್ ಮಾಡಿಬಿಟ್ಟೆ. ಈ ಸೋಷಿಯಲ್ ನೆಟ್ವರ್ಕಿಂಗ್ ತಾಣಗಳ ಗೀಳಿಗೆ ಬಿದ್ದು ನನ್ನನ್ನು ನಾನು ಕಳೆದುಕೊಳ್ಳುವ ಅಪಾಯದಿಂದ ಸಕಾಲದಲ್ಲಿ ಪಾರಾದೆ. ಇವೆಲ್ಲ ಕೇವಲ ಟೈಮ್ ಪಾಸು ,ಮನರಂಜನೆ ; ಇದರಲ್ಲೇನಿದೆ ತಲೆಕೆಡಿಸಿಕೊಳ್ಳುವ ಸಂಗತಿಯೆಂದು ನಾವು ಸಮಜಾಯಿಷಿ ನೀಡಬಹುದು.ಆದರೆ ಒಂದು ಹಂತದ ನಂತರ ಇವೆಲ್ಲ ಚಟವಾಗಿ, ಗೀಳಾಗಿ ಬದಲಾಗುತ್ತವೆ ಎಂಬುದು ಕಟು ಸತ್ಯ.

ಆರ್ಕುಟ್ ನಲ್ಲಿ ನೂರೈವತ್ತು , ಅತ್ತ ಫೇಸ್ ಬುಕ್ಕನಲ್ಲಿ ಹತ್ತಿರ ಹತ್ತಿರ ನಾನೂರು ಮಂದಿ ಒಂದು ‘ಡಿಲೀಟ್’ ಜೊತೆ ಕ್ಷಣದಲ್ಲಿ ಖಾಲಿಯಾಗಿ ಹೋದರು ನನ್ನ ಜಗತ್ತಿನಿಂದ. ಅನಾಮಿಕನಾಗಿ , ಅದೃಶ್ಯನಾಗಿ ಯಾರ ಕೈಗೂ ಸಿಕ್ಕದೆ ನನ್ನ ಪಾಡಿಗೆ ನಾನು ಬದುಕುವಲ್ಲಿನ ಸುಖವನ್ನ ನಾನೀಗ ಮನಸಾರ ಅನುಭವಿಸುತ್ತಿದ್ದೇನೆ. ಸಂತೆಯೊಳಗೆ ದಿವ್ಯವಾದ ಏಕಾಂತದ ಸುಖ ನನ್ನ ಪಾಲಿಗೆ. ಯಾವುದಕ್ಕೆ ಎಷ್ಟು ಬೆಲೆ ಕೊಡಬೇಕೆಂಬ ವಿವೇಚನೆಯನ್ನ ಸಮರ್ಥವಾಗಿ ಬಳಸಿಕೊಂಡ ತೃಪ್ತಿ ನನಗಿದೆ.

ಫೇಸ್ ಬುಕ್ ಹಾಗು ಆರ್ಕುಟ್ ಖಾತೆಗಳು ಡಿಲೀಟ್ ಆಗಿ ಹೋದವು. ನನಗೀಗ ನನ್ನ ಇಷ್ಟದ ಹಾಡು ಕೇಳಲಿಕ್ಕೆ, ಪುಸ್ತಕ ಓದಲಿಕ್ಕೆ , ಬರೆಯಲಿಕ್ಕೆ , ಹೊಸಾ ಕನಸು ಕಾಣಲಿಕ್ಕೆ ನನ್ನ ದಿನದ ಸಮಯದ ಖಾತೆಗೆ ಹೆಚ್ಚುವರಿಯಾಗಿ ಒಂದಿಷ್ಟು ಸಮಯಗಳು ಜಮೆಯಾಗುತ್ತಿವೆ. ಬಯಲಾಗಿದ್ದು ಸಾಕಾಗಿದೆ. ನನ್ನ ಅವಕಾಶದ ಮಿತಿಯಲ್ಲಿ ಮುಗಿಲಾಗಬೇಕು.

ನನ್ನ ಉದಾಹರಣೆ ನಿಮ್ಮದೂ ಆಗಬೇಕಿಲ್ಲ. ನನ್ನದೇ ಆದ ಒಂದು ಲೆಕ್ಕಾಚಾರದಲ್ಲಿ ,ಒಂದು ನಿರ್ದಿಷ್ಟ ಕಾರ್ಯ ಸಿದ್ಧಿಯ ಸಲುವಾಗಿ ನಾನು ಫೇಸ್ ಬುಕ್ ಹಾಗು ಆರ್ಕುಟ್ ಅಂಗಳಕ್ಕೆ ಕಾಲಿಟ್ಟದ್ದು. ನನ್ನ ಕೆಲಸವಾಯಿತು. ಫೇಸ್ ಬುಕ್ ಹಾಗು ಆರ್ಕುಟ್ ಡಿಲೀಟ್ ಆದವು. ಇನ್ನೊಂದು ಹೊಸಾ ಲೆಕ್ಕಾಚಾರ ಶುರುವಾಗುವ ತನಕ ನನಗೂ ಈ ಫೇಸ್ ಬುಕ್ ಹಾಗು ಆರ್ಕುಟ್ ಗಳಿಗೂ ಸಂಬಂಧವೇ ಇಲ್ಲ. ಇವೆಲ್ಲ ನನ್ನ ಬದುಕಿನ ಭಾಗಗಳು. ಆದರೆ ಇವುಗಳೇ ಬದುಕಲ್ಲ. ಇವೆಲ್ಲ ಇಲ್ಲದೆಯೂ ನಾನು ಬದುಕಬಲ್ಲೆ.ಇದು ನನ್ನ ಅಭಿಪ್ರಾಯ, ನನ್ನ ಅನುಭವ. ಅಷ್ಟೇ :) :).

Monday, December 13, 2010

ಜಗತ್ತಿಗೊಂದು ಪತ್ರ ...

ಪತ್ರ ೧ ....

ನಿನ್ನನ್ನು ಹೇಗೆ ಸಂಭೋದಿಸಲಿ ಎಂದು ತಿಳಿಯುತ್ತಿಲ್ಲ. ಆ ಕಾರಣಕ್ಕೆ ಕ್ಷಮೆ ಇದ್ದರೆ ಇರಲಿ. ಇರದಿದ್ದರೂ ಸರಿಯೇ.

ಈ ಪತ್ರವನ್ನ ನಿನಗೆ ಯಾಕಾಗಿ ಬರೆಯಬೇಕು? ಈ ಪ್ರಶ್ನೆ ಸಾವಿರ ಬಾರಿ ಕಾಡಿದೆ.ಪ್ರಶ್ನೆಗೆ ಉತ್ತರ ಸಿಕ್ಕಲಿಲ್ಲ. ಬರೆಯಲೇ ಬೇಕೆಂದು ಅನ್ನಿಸಿದ್ದೇ ಉತ್ತರ ಎಂದುಕೊಂಡೆ. ನನ್ನ ಪತ್ರಕ್ಕೆ ಮಾರೋಲೆಯ ಹಂಗಿಲ್ಲ.ಬರೆಯುವುದಷ್ಟೇ ನನ್ನ ಕರ್ಮ. ಉಳಿದದ್ದು ನಿನ್ನ ಕರ್ಮ. ಗಮ್ಯ ಗೊತ್ತಿದ್ದರೂ ವಿಳಾಸವೇ ಇರದ ಪತ್ರವಿದು.ನೀನು ನೆಪ ಮಾತ್ರ.ಯಾರು ಬೇಕಾದರೂ ಓದಬಹುದು. ಅವರದಾಗಿಸಿಕೊಳ್ಳಬಹುದು. ಮೊದಲಿಗೆ ಅವಳು ನೆನಪಾದಳು. ಮನೆಯವರು ನೆನಪಾದರು. ನಾನು ನೆನಪಾದೆ. ಗೆಳೆಯರು .ಬಂಧುಬಳಗ, ನನ್ನವರು,ನನ್ನವರೆಂದು ಕೊಂಡವರು,ಅವರು ಇವರು ,ಏನೂ ಆಗದವರು .ಎಲ್ಲರೂ ನೆನಪಾದರು. ಕೊನೆಗೆ ‘ಜಗವೆಂಬೋ’ ನೀನು ನೆನಪಾದೆ. ಎಲ್ಲರನ್ನೂ ಒಳಗೊಳ್ಳುವ ಮಾಯೆ ನೀನು ನನ್ನನ್ನೂ ಸೇರಿಸಿ. ಆ ಕಾರಣಕ್ಕೆ ನಿನಗೇ ಈ ಪತ್ರವನ್ನ ಬರೆಯುತ್ತಿದ್ದೇನೆ. ಒಪ್ಪಿಸಿಕೋ. ಪತ್ರ ನಿನಗೆ ತಲುಪಿದರೆ ಖುಷಿಯಿಲ್ಲ. ತಲುಪುವುದೆಂಬ ನಿರೀಕ್ಷೆ ಮೊದಲೇ ಇಲ್ಲ. ಅಕಸ್ಮಾತ್ ಪತ್ರ ನಿನ್ನನ್ನು ತಲುಪಿ ನೀನು ಮಾರುತ್ತರ ಕೊಡುವ ದೊಡ್ಡ ಮನಸ್ಸು ಮಾಡಿದರೆ ನಿನ್ನ ಉತ್ತರ ಏನಿರಬಹುದೆಂಬ ‘ಕುತೂಹಲ ‘ಮಾತ್ರ ಇದ್ದೇ ಇದೆ. ಇಷ್ಟು ಪತ್ರಕ್ಕೆ ಪೀಠಿಕೆಯಾಯಿತು. ಈಗ ವಿಷಯಕ್ಕೆ ಬರುತ್ತೇನೆ.

ನಿನಗೆ ನಿನ್ನದೇ ಆದ ಸ್ವಂತ ಅಸ್ತಿತ್ವವೇ ಇಲ್ಲ.ನೀನು ಕೂಡ ನನ್ನಂತೆ,ನಮ್ಮೆಲ್ಲರಂತೆ.ನಮ್ಮೆಲ್ಲರ ಒಟ್ಟು ಮೊತ್ತ ನೀನು.ನಾವು ಬದಲಾದರೆ ನೀನೂ ಬದಲು.ನಾವು ನಿಂತ ನೀರಾದ ಘಳಿಗೆ ನೀನು ಕೆಸರು. ಆದರೆ ಎಷ್ಟು ಮಜಾ ನೋಡು.ನಾವು ಬದಲಾಗಲು ಸಿದ್ಧರೇ ಇಲ್ಲ. “ ಜಗತ್ತೇ ಹಿಂಗೆ,ಜಗತ್ತಿನಂತೆ ನಾವು.ವಾಸ್ತವ ,ವಾಸ್ತವ ಮುಖ್ಯ “ ಎಂದು ನಿನ್ನ ಕಡೆ ತೋರಿಸಿ ಜಾರಿ ಕೊಂಡು ಬಿಡುತ್ತೇವೆ.ನಾವ್ಯಾರೂ ನಾವಾಗಿ ಬದುಕುತ್ತಿಲ್ಲ. ಈಗ ಏನಾಗಿದೆ ನೋಡು. ನಾವೆಲ್ಲರೂ ಸ್ವಂತಿಕೆಯಿಲ್ಲದೆ ಬದುಕುತ್ತಿರುವ ಹೊತ್ತಿಗೆ ನೀನು ನಕಲಿಯಾಗಿ ಕಾಣುತ್ತಿದ್ದೀಯೆ. ಪಾಪ ನೀನು.ನಿನ್ನದಲ್ಲದ ತಪ್ಪಿಗೆ ನಕಲಿಯೆಂಬ ಹಣೆಪಟ್ಟಿ.ಅಸಲಿಗೆ ನೀನಾದರೂ ಏನು ಮಾಡಲು ಸಾಧ್ಯ ? ನಿನಗೆ ನಿನ್ನದೇ ಆದ ಸ್ವಂತ ಅಸ್ತಿತ್ವವೇ ಇಲ್ಲ ಎಂದಾದ ಮೇಲೆ ‘ ನಾನು ನಕಲಿಯಲ್ಲ ಅಸಲಿ ‘ ಎಂದು ಕೂಗಿ ಹೇಳಿ ನಿನ್ನ ಸ್ವಂತಿಕೆಯನ್ನ ಸಾಬೀತು ಪಡಿಸುವ ಅವಕಾಶವಾದರೂ ಎಲ್ಲಿ ? ಈ ವಿಷಯದಲ್ಲಿ ನೀನು ಅಸಹಾಯಕ. ಮೂಕ ಪ್ರೇಕ್ಷಕ. ಆ ಕಾರಣಕ್ಕೆ ನಿನ್ನ ಬಗೆಗೆ ನನ್ನಲ್ಲೊಂದು ಅನುಕಂಪವಿದೆ. ನೀನೇ ಪುಣ್ಯವಂತ. ಕೊನೆಪಕ್ಷ ನಾನಾದರೂ ಸಿಕ್ಕಿದ್ದೇನೆ ಅನುಕಂಪ ತೋರಿಸಲು. ನಮ್ಮ ಪಾಡು ನಾಯಿ ಪಾಡು. ನಮಗೆ ನಾವೇ ಸಾಂತ್ವನ .ನಮಗೆ ನಾವೇ ಎಲ್ಲ. ಸೋಲು ಇಲ್ಲಿ ಯಾರಿಗೂ ಬೇಕಿಲ್ಲ. ಮುಂದಿನ ಪೀಳಿಗೆಯ ಮಗು ಹುಟ್ಟುತ್ತಲೇ ಎದ್ದು ಓಡಲು ಶುರುವಿಟ್ಟುಕೊಂಡರೆ ಅಚ್ಚರಿಯಿಲ್ಲ. ಸಂಘರ್ಷ ಬದುಕಿನ ಭಾಗ ನಿಜ. ಆದರೆ ಈಗ ಸಂಘರ್ಷವೇ ಬದುಕು ಎಂಬಲ್ಲಿ ಬಂದು ನಿಂತಿದ್ದೇವೆ. ಕಾಯುವ ತಾಳ್ಮೆ ಇಲ್ಲ. ಇಲ್ಲಿ ಎಲ್ಲವೂ ಇನ್ಸ್ಟಂಟ್. ನಮ್ಮ ನೆರಳನ್ನೂ ನೆಚ್ಚಿಕೊಳ್ಳಲಾರದಷ್ಟು ಅಪನಂಬಿಕೆಯಲ್ಲಿ ನಾವು ಬದುಕುತ್ತಿದ್ದೇವೆ. ನಾವು ತುಂಬಾ ಪ್ರಾಕ್ಟಿಕಲ್ಲು. ನಮ್ಮ ಭಾವಕೋಶದಲ್ಲಿ ‘ನಂಬಿಕೆ ‘ಎನ್ನುವುದಕ್ಕೆ ‘ಆತ್ಮಹತ್ಯೆ ‘ಎಂಬ ಹೊಸ ಅರ್ಥವಿದೆ. ’ನಂಬಿ ಕೆಟ್ಟವರಿಲ್ಲ’ ಎಂಬ ದಾಸವಾಣಿಯಲ್ಲಿ ದಾಸರ ಆಣೆ ನಂಬಿಕೆ ಉಳಿದಿಲ್ಲ.

ಎಲ್ಲಾದರೂ ಭೋಧಿವೃಕ್ಷವಿದ್ದರೆ ತೋರಿಸು. ಬುದ್ಧನಾಗುವ ಹಂಬಲವಿಲ್ಲ. ಅಪ್ಪ ನೆಟ್ಟ ಆಲದ ಮರದಡಿ ನೇಣು ಹಾಕಿಕೊಳ್ಳುವುದಕ್ಕಿಂತ ಭೋಧಿವೃಕ್ಷದ ನೆರಳಿಗೆ ಹೋಗಿ ಕೊಂಚ ಹೊತ್ತು ವಿರಮಿಸಿ ಎದ್ದು ಬರುವುದು ವಾಸಿ. ಕೊನೆಗೆ ನೇಣು ಹಾಕಿಕೊಳ್ಳುವ ಪ್ರಸಂಗ ಎದುರಾದರೂ ಅಪ್ಪ ನೆಟ್ಟ ಆಲದ ಮರಕ್ಕಿಂತ ‘ಭೋಧಿ ವೃಕ್ಷವೇ ಮೇಲು. ಕಡೆಪಕ್ಷ ಆತ್ಮಹತ್ಯೆಯಲ್ಲಾದರೂ ಸ್ವಂತಿಕೆ ಮೆರೆದೆ ಎಂಬ ತೃಪ್ತಿ ಅಲ್ಲಿ ಸಿಗುತ್ತೆ .

ಈವತ್ತಿಗೆ ಇಷ್ಟು ಸಾಕು. ನನ್ನ ಮಾತುಗಳಿಗೆ ಕಿವಿಯಾಗಲು ನಮ್ಮಲ್ಲಿ ಯಾರಿಗೂ ಪುರುಸೊತ್ತಿಲ್ಲ. ಈ ಪತ್ರ ನಿನಗೆ ಸಿಕ್ಕು ,ನೀನು ಪುರುಸೊತ್ತು ಮಾಡಿಕೊಂಡು ಓದಿರುತ್ತೀಯ ಎನ್ನುವ ನಂಬಿಕೆ ನನ್ನದು. ಆ ನಂಬಿಕೆಯಲ್ಲಿ ಔಪಚಾರಿಕವಾಗಿ ಒಂದು ಧನ್ಯವಾದ. ಮತ್ತೆ ಸಿಗುತ್ತೇನೆ ಮುಂದಿನ ಪತ್ರದೊಂದಿಗೆ.

ಇಂತಿ ನಿನ್ನವನೇ ಆದ

ನೀನೇ ಆದ

ನಾನು

( ನಾನು ‘ಸಂಭೋದಿಸಲಿ’ ಎಂದು ಬರೆದಿದ್ದೇನೆ . ನಾನು ಬರೆದದ್ದು ಸರಿಯೋ ತಪ್ಪೋ ಎಂಬ ಗೊಂದಲ ನನಗಿದೆ. ದಯವಿಟ್ಟು ತಪ್ಪಿದ್ದರೆ ಹೇಳಿ ಮತ್ತು ಸರಿಯಾದ ಕಾಗುಣಿತ ನನಗೆ ತಿಳಿಸಿ.)

Tuesday, November 30, 2010

ಸಭ್ಯ ಪೋಲಿ ಕವನಗಳು ..

ಒಂದೂವರೆ ವರುಷದ ಹಿಂದೆ ಒಂದು ಕವನ ಬರೆದಿದ್ದೆ. ಅದು ಮಾಮೂಲಿ ಕವನವಾಗಿರಲಿಲ್ಲ. ಅಲ್ಲಿ ಕೊಂಚ ಪೋಲಿತನವಿತ್ತು..ಹಸಿಬಿಸಿಯ ಭಾವಗಳೇ ಅಲ್ಲಿ ಪದಗಳಾಗಿದ್ದವು. ಆಗ ಆ ಕವನವನ್ನ ನನ್ನ ಬ್ಲಾಗಿನಲ್ಲಿ ಹಾಕಿಕೊಳ್ಳಲು ಧೈರ್ಯ ಸಾಲಲಿಲ್ಲ. ಅತ್ತಿಗೆ ಒಮ್ಮೆ ಬರೆದ ಬ್ಲಾಗ್ ಇದು.ಇಲ್ಲಿ ಇದು ಬೇಡ ಎಂಬ ಭಾವನೆ ನನ್ನ ಹಿಂಜರಿಕೆಗೆ ಕಾರಣವಾಗಿತ್ತು. ಆದರೆ ಸುಮ್ಮನೆ ಕೂರುವಂತೆಯೂ ಇರಲಿಲ್ಲ. ಕವನಕ್ಕೆ ಒಂದು ಮುಕ್ತಿ ಕಾಣಿಸಲೇ ಬೇಕಿತ್ತು. ಆಗ ನನಗೆ ನೆನಪಾದದ್ದು ‘ ಮೋಟುಗೋಡೆ’ ಬ್ಲಾಗು. ಸುಶ್ರುತಣ್ಣನಿಗೆ ಆ ಕವನವನ್ನ ಕಳಿಸಿಕೊಟ್ಟೆ. ಕೊನೆಗೆ ಅದು ‘ಮೋಟುಗೋಡೆ’ ಬ್ಲಾಗಿನಲ್ಲಿ ಬೆಳಕು ಕಂಡಿತು. ಅಲ್ಲಿಂದ ಮುಂದೆ ನನ್ನ ಪೆನ್ನಿನ ಇಂಕಿನಲ್ಲಿ ಸ್ವಲ್ಪ ಭಾಗವನ್ನ ಸಭ್ಯ ಪೋಲಿ ಕವನಗಳಿಗೆ ಮೀಸಲಿಟ್ಟೆ. ನಂತರದ ಆ ತರಹದ ನನ್ನ ಕವನಗಳಿಗೆಲ್ಲ ಮೋಟುಗೋಡೆ ವೇದಿಕೆಯಾಯಿತು.

ಆಗಾಗ ನಾನು “ಅತ್ತಿಗೆ ಈ ನನ್ನ ಬ್ಲಾಗಿನ ಒಡತಿ.ನಾನು ಇಲ್ಲಿ ಸೂರು ಹುಡುಕಿಕೊಂಡ ಅಲೆಮಾರಿ ಮಾತ್ರ” ಎಂದು ಹೇಳುತ್ತಿದ್ದೆ. ನನ್ನ ಆ ಮಾತಿಗೆ ಅತ್ತಿಗೆಯ ಆಕ್ಷೇಪವಿತ್ತು. “ ಇದು ನಿನ್ನದೇ ಬ್ಲಾಗು.ನೀನೇ ಇದರ ಒಡೆಯ ’’ ಎಂದು ಅತ್ತಿಗೆ ಪ್ರತಿಬಾರಿ ಹೇಳುತ್ತಿದ್ದಳು. ಅತ್ತಿಗೆಯ ಈ ಮಾತನ್ನೇ ನನಗೆ ಸಿಕ್ಕ ಸ್ವಾತಂತ್ರ್ಯ ಹಾಗು ಅನುಮತಿ ಎಂದುಕೊಂಡು ‘ಮೋಟುಗೋಡೆ ಕವನ’ಗಳನ್ನ ಇನ್ನು ಮೇಲೆ ನನ್ನ ಬ್ಲಾಗಿನಲ್ಲಿಯೇ ಹಾಕಿಕೊಳ್ಳುತ್ತೇನೆ.

ಈ ಸಂದರ್ಭದಲ್ಲಿ ಸುಶ್ರುತಣ್ಣ ಹಾಗು ಅವನ ಮೋಟುಗೋಡೆ ಬಳಗದವರನ್ನ ನಾನು ನೆನೆಯಲೇ ಬೇಕು. ‘ಮೋಟುಗೋಡೆ ಬ್ಲಾಗ್ ’ ನನ್ನದಲ್ಲ.ನಾನು ಅದರ ಸದಸ್ಯ ಕೂಡ ಅಲ್ಲ.ಆಗೊಮ್ಮೆ ಈಗೊಮ್ಮೆ ಕವನ ಕಳಿಸುತ್ತಿದ್ದೆ ಅಷ್ಟೇ.ಆದರೂ ನನ್ನ ಮಾನಸದಲ್ಲಿ ‘ಮೋಟುಗೋಡೆ’ ನನ್ನದೇ ಎನ್ನುವಷ್ಟು ಆತ್ಮೀಯತೆ ಬೆಳೆದುಹೋಗಿತ್ತು. ಇಷ್ಟು ದಿನ ಅವರು ನನಗೆ ಅವಕಾಶ ಕೊಟ್ಟು ಬೆಂಬಲಿಸಿ ಪ್ರೋತ್ಸಾಹ ನೀಡಿದ್ದಾರೆ. ಈಗ ಈ ಸಭ್ಯ ಪೋಲಿ ಕವನಗಳ ಮಾಲಿಕೆ ಶುರುವಾಗುತ್ತಿದೆ ಎಂದರೆ ಅದಕ್ಕೆ ಕಾರಣ ‘ಮೋಟುಗೋಡೆ ’ ಬಳಗದ ಬೆಂಬಲ ಹಾಗು ಪ್ರೋತ್ಸಾಹ. ಅವರಿಗೆ ನಾನು ಸದಾ ಋಣಿ.

ಇಲ್ಲಿನ ಕವನಗಳೆಲ್ಲ ಪ್ರಕೃತಿದತ್ತ .ಪ್ರತಿ ಪದಕ್ಕೂ ಅಪಾರ ಅರ್ಥ.ಓದುಗನ ಅನುಭವದ ವ್ಯಾಪ್ತಿಯೇ ಕವನದ ಅರ್ಥದ ಮಿತಿ. ಅನುಭವ ಜಾಸ್ತಿ ಇದ್ದಷ್ಟೂ ಅರ್ಥ ಜಾಸ್ತಿ. ಅನುಭವದ ಅಭಾವದಲ್ಲಿ ಕಲ್ಪನೆ ನೆರವಾಗಬಲ್ಲದು. ಕಲ್ಪಿಸಿದಷ್ಟೂ ಅರ್ಥ ಆಳವಾಗುತ್ತೆ, ಬೆಳೆಯುತ್ತೆ


ಸಭ್ಯ ಪೋಲಿ ಕವನ ೧ .........


ನಿನ್ನೆಡೆಗಿನ ಎನ್ನ ಮೋಹ ಅನೂಚಾನ

ಒಮ್ಮೆ ಸಮ್ಮತದ ಮುದ್ರೆಯಾಗು

ಸ್ವಾಗತದ ಭಂಗಿಯಾಗು

ಮುಂದೆ ಸಕಲವೂ ನಿರ್ವಿಘ್ನ

.

ಮಡುಗಟ್ಟಿದೆ ಯೌವ್ವನದ ಅಂಬರದಿ

ಮೊದಲ ಮಳೆಯ ಮೋಡ

ಬೀಸುತಿದೆ ಚುಂಬಕ ಹೂ ಬಿಸಿಯ ಗಾಳಿ

ಕಾಣುತಿದೆ ನಿನ್ನ ಕಣ್ಣಲಿ ಕೋಲ್ಮಿಂಚು

ಕಾಲಬೆರಳಲಿ ಗೀಚಿದ ಕಾಮನಬಿಲ್ಲು

ಅಗೋ ಅಲ್ಲಿ ಹಣೆಯ ನೆರಿಗೆ ನೀರಾಗಿದೆ

ಕೊರಳ ಇಳಿಜಾರಿನಲಿ

ನವಜಾತ ಬೆವರ ಹನಿಯೊಂದು ಬೆವರುತಿದೆ

ಏರಿಳಿಯುತಿದೆ ಎದೆಯಗೂಡು

ಮುಚ್ಚಿಟ್ಟು ಕೂಡಿಟ್ಟು ಕಳೆಯುತಿದೆ ಕಾಲ ಕಳೆಗುಂದಿ

ಬಯಲಾಗು

ಹನಿಯಲಿ ಮೋಡದೊಳಗಣ ಸೊಬಗು

ದಣಿದಣಿದು ತಣಿಯಲಿ ನಾನೆಂಬ ಇಳೆ

ಕಣಕಣವಾಗಿ ಧನ್ಯವಾಗಿ

ಹೂವಾಗಲಿ ಮಣ್ಣ ಘಮ ಹನಿಯ ಕೂಡಿ

ಹದವಾದ ಘಳಿಗೆಯಲಿ

ಮೊಳೆಯಲಿ ಆತ್ಮದಾನಂದ

ದ್ವೈತ ಅದ್ವೈತವಾಗಿ .....

Sunday, November 21, 2010

ಹಾಸ್ಟೆಲ್ ಚಿತ್ರಗಳು - ೧

ಷಣ್ಮುಗಂ.....

ಕಾಲೇಜ್ ಕ್ಯಾಂಪಸ್ಸಿನ ಗೇಟ್ ಬಳಿ ಹೋಗುತ್ತಿದ್ದಂತೆ ಆತ “ ನಮಸ್ತೆ ಸರ್ ‘ ಎಂದು ಎದುರಾಗುತ್ತಾನೆ ಒಂದು ಪರಿಶುದ್ಧ ಮಂದಹಾಸದೊಡನೆ . ಆತ ಕ್ಯಾಂಪಸ್ ಸೆಕ್ಯೂರಿಟಿ ಗಾರ್ಡ್ ಷಣ್ಮುಗಂ . ಅದು ಹೇಳಿ ಕೇಳಿ ಎಂ.ಬಿ.ಎ ಕಾಲೇಜು. ಮ್ಯಾನೇಜ್ ಮೆಂಟ್ ವಾತಾವರಣದಲ್ಲಿ ನಿಮಗೆ ಎಲ್ಲಿ ಹೋದರೂ ನಗುಮುಖಗಳು ಎದುರಾಗುತ್ವೆ. ಎಲ್ಲವೂ ಬಲವಂತದ ಬಸಿರು ಹಡೆದ ನಗುವಿನ ಮುಖವಾಡಗಳು. ಎದುರು ಸಿಕ್ಕಾಗ ಅತೀ ಎಂಬಷ್ಟು ನಯವಾಗಿ ನಕ್ಕು ಹಾಯ್ ಹೇಳಿ ಮರುಕ್ಷಣವೇ ಮಲಬದ್ಧತೆ ಪೀಡಿತರ ರೀತಿ ಮುಖ ಮಾಡಿಕೊಂಡು ಹೋಗಿಬಿಡುತ್ತಾರೆ . ನಮ್ಮ ಷಣ್ಮುಗಂ ಹಾಗಲ್ಲ. ಬಿಸಿಲೆ ಬರಲಿ ಮಳೆಯೇ ಇರಲಿ ಆತ ಸದಾ ಮನಸಾರ ಹಸನ್ಮುಖ. ಗೇಟ್ ಬಳಿ ಯಾವಾಗ ಬಂದರೂ ಅಲ್ಲೊಂದು ಕಪ್ಪು ಹಿನ್ನೆಲೆಯಲ್ಲಿ ಅರಳಿದ ಬೆಳ್ಳಿ ನಗೆಯೊಂದು ಸ್ವಾಗತಿಸಲು ಕಾದಿರುತ್ತೆ. ನನ್ನ ಯೋಚನೆಗಳು .ಹಳವಂಡಗಳು ಏನೇ ಇರಲಿ ಷಣ್ಮುಗಂ ಎದುರಾದಾಗ ನಾನು ಎಲ್ಲವನ್ನೂ ಮರೆತು ಬಿಡುತ್ತೇನೆ. ಅವನು ಕಾಣುತ್ತಿದ್ದಂತೆ ನನಗೆ ಅರಿವಿಲ್ಲದೆ ನಾನು ಒಂದು ಮಂದಹಾಸವಾಗುತ್ತೇನೆ. ಷಣ್ಮುಗಂ ಸಮ್ಮುಖದಲ್ಲಿ ನನ್ನ ಸಣ್ಣತನಗಳೂ ನನ್ನಿಂದ ಸ್ವಲ್ಪ ಕಾಲ ದೂರವಾಗಿ ಬಿಡುತ್ತೆ. ನಾನು ತುಂಬಾ ಒಳ್ಳೆಯವನು . ಎಲ್ಲರೂ ಒಳ್ಳೆಯವರು.ಜಗತ್ತು ತುಂಬಾ ಒಳ್ಳೆಯದೆಂದು ಅನ್ನಿಸಿಬಿಡುತ್ತೆ.

ಷಣ್ಮುಗಂ ಕೋಲಾರದವನು. ಮೂಲದಲ್ಲಿ ತಮಿಳಿಗ. ಬೆಂಗಳೂರಿಗೆ ಬಂದು ಕೆಲವು ವರ್ಷವಾಯಿತಷ್ಟೇ .ಮೊದಲು ಕೋಲಾರದ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದವನು ಗಣಿ ಮುಚ್ಚಿ ಹೋದ ಮೇಲೆ ಬೇರೆ ದಾರಿ ಕಾಣದೆ ಬೆಂಗಳೂರಿನ ಹಾದಿ ಹಿಡಿದಿದ್ದ . ಕೊನೆಗೆ ಯಾವುದೋ ಒಂದು ‘ಸೆಕ್ಯೂರಿಟಿ ಏಜನ್ಸಿ ‘ ಸೇರಿ ಏಜನ್ಸಿ ಪರವಾಗಿ ನನ್ನ ಕಾಲೇಜ್ ನಲ್ಲಿ ಸೆಕ್ಯೂರಿಟಿ ಕೆಲಸಕ್ಕಿದ್ದ. ಅವನೇ ಹೇಳಿದಂತೆ ಕೋಲಾರದವರು ತುಂಬಾ ಮಂದಿ ಹೀಗೆ ಅವನಂತೆಯೇ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದಾರಂತೆ.ಎಲ್ಲರೂ ಅವನಂತೆಯೇ ಮುಚ್ಚಿದ ಗಣಿಯ ಅಡಿಯಲ್ಲಿ ದಿಕ್ಕೆಟ್ಟವರೇ. ಈಗ ಇಲ್ಲಿ ಬೆಂಗಳೂರಿಗೆ ಬಂದು ಹೊಟ್ಟೆಪಾಡಿಗೊಂದು ದಾರಿ ಮಾಡಿಕೊಂಡಿದ್ದರು. ಷಣ್ಮುಗಂ ಅಪ್ಪನ ಕಾಲದಿಂದಲೂ ಕೋಲಾರದ ಗಣಿ ಅವರ ಅನ್ನದ ಮೂಲ. ಗಣಿ ಮುಚ್ಚಿ ಹೋಗುವ ಮುಂಚೆ ಸಮಾರು ಮೂವತ್ತು ವರುಷ ಷಣ್ಮುಗಂ ಅಲ್ಲಿ ಕೆಲಸ ಮಾಡಿದ್ದ. ಕೆಲವೊಮ್ಮೆ ಆ ದಿನಗಳ ಬಗ್ಗೆ ಹೇಳುವಾಗ ಷಣ್ಮುಗಂ ನಡು ನಡುವೆ ಸುಮ್ಮನಾಗಿಬಿಡುತ್ತಿದ್ದ . “ ಏನ್ ಮಾಡದು ಸರ್. ದುಡಿಮೆಗೆ ಏನಾರ ಮಾಡ್ಲೆಬೇಕಲ್ಲ ‘ ಎಂದು ಮತ್ತೆ ಮೌನ ಮುರಿದು ಎಂದಿನ ಶುದ್ಧ ನಗೆಯಾಗುತ್ತಿದ್ದ ..

ಅದೊಂದು ದಿನ ಗೇಟ್ ಬಳಿ ಷಣ್ಮುಗಂ ಎದುರಾದ . ನೆತ್ತಿ ಮೇಲೆ ನಡು ಮಧ್ಯಾಹ್ನ ಸುಡುತ್ತಿತ್ತು. ಎಂದಿನಂತೆ ಷಣ್ಮುಗಂ ತನ್ನ ಲಾಂಛನವಾದ ಮಂದಹಾಸದೊಂದಿಗೆ “ ಊಟ ಆಯ್ತಾ ಸಾರ್ “ ಎಂದು ಆಪ್ತವಾಗಿ ಕೇಳಿದ. ‘ಆಯ್ತು ಸರ್ .ಈಗಷ್ಟೇ ಆಯ್ತು.ನಿಮ್ದಾಯ್ತಾ “ ಎಂದು ನಾನು ಕೇಳಿದೆ.. “ ಇಲ್ಲಾ ಸರ್ .ಈವತ್ತಿಂದ ನಮಗೆ ಊಟ ಕೊಡೋಲ್ವಂತೆ ಹಾಸ್ಟೆಲ್ ಮೆಸ್ಸ್ ನಿಂದ. ಕ್ಯಾಂಪಸ್ ಮ್ಯಾನೇಜರ್ ಹೇಳಿದಾರೆ. ಹೊರಗೆಲ್ಲಾದ್ರು ಊಟಕ್ಕೆ ಹೋಗ್ಬೇಕು ಸಾರ್ “ ಎಂದ. ಷಣ್ಮುಗಂ ಮುಖದಲ್ಲಿ ಮಂದಹಾಸ ಹಾಗೆ ಇತ್ತು .ಆದರೆ ಎಂದಿನ ಹೊಳಪು ನನಗೆ ಅಲ್ಲಿ ಕಾಣಲಿಲ್ಲ. ‘ಯಾಕಂತೆ. ನಿಮಗ್ಯಾಕೆ ಕೊಡೋಲ್ವಂತೆ “ ಎಂದೆ. ‘ ಏನೋ ಗೊತ್ತಿಲ ಸರ್. ಊಟ ತರೋಕೆ ಹೋಗಿದ್ದೆ.ಕ್ಯಾಂಪಸ್ ಮ್ಯಾನೇಜರ್ ಊಟ ಕೊಡಲ್ಲ ಇನ್ಮೇಲೆ ಅಂತ ಹೇಳಿ ಕಳ್ಸಿದ್ದಾರೆ .ರೂಲ್ಸ್ ಪ್ರಕಾರ ನಮಗೆ ಊಟ ಇಲ್ವಂತೆ “ ಎಂದು ಷಣ್ಮುಗಂ ವಿಷಾದದಲ್ಲಿ ನಕ್ಕ. “ ನಿಮ್ಮ ಸಂಬಳ ಎಷ್ಟು ಸಾರ್.ಈಗೆನ್ಮಾಡ್ತೀರಿ ಊಟ ಸಿಗಲ್ಲ ಅಂದ್ಮೇಲೆ “ ಎಂದೆ. ಷಣ್ಮುಗಂ “ ಮೂರೂವರೆ ಸಾವ್ರ ಸಾರ್. ಮತ್ತೇನು ಮಾಡದು? ಹೋಟ್ಲು ಗೆ ಹೋಗದು.ಹದಿನೈದು ರೂಪಾಯಿಗೆ ಫಸ್ಟ್ ಕ್ಲಾಸ್ ರೈಸ್ ಬಾತ್ ಸಿಗುತ್ತೆ.ತಿನ್ನದು ಬರ್ತಾ ಇರೋದು ಅಷ್ಟೆಯಾ “ ಎಂದು ಅವನ ಹೊಟ್ಟೆಯ ಮಡಿಕೆಗಳೆಲ್ಲ ಕುಲುಕುವಂತೆ ನಕ್ಕ. “ ಹೀಗೆ ನೀವು ಹೊರಗೆ ಊಟ ಮಾಡಿದ್ರೆ ನಿಮ್ಮ ಸಂಬಳದಲ್ಲಿ ಏನು ಉಳಿಯುತ್ತೆ .ತಿಂಗಳಿಗೆ ಎಷ್ಟು ಉಳಿಯುತ್ತೆ ಮನೆಗೆ ಕೊಡಲಿಕ್ಕೆ ಸಾರ್ “ ಎಂದೆ. ಅಷ್ಟು ಹೇಳುತ್ತಿದ್ದಂತೆ ಷಣ್ಮುಗಂ ಪೂರ್ತಿ ತಿಂಗಳಿನ ಆಯವ್ಯಯದ ವಿವರವನ್ನ ನನ್ನ ಮುಂದಿಟ್ಟ,

ಷಣ್ಮುಗಂ ಬೆಳಿಗ್ಗೆ ನಾಲ್ಕೂವರೆಗೆ ಎದ್ದು ಕೋಲಾರದಿಂದ ಹೊರಟು ಬಂಗಾರಪೇಟೆ ತನಕ ಹತ್ತು ರೂಪಾಯಿ ಕೊಟ್ಟು ಬಸ್ಸಿನಲ್ಲಿ ಬರುತ್ತಾನೆ. ಅಲ್ಲಿಂದ ಬೆಂಗಳೂರಿಗೆ ರೈಲಿನಲ್ಲಿ .ರೈಲಿಗೆ ನೂರಾ ಎಪ್ಪತ್ತಾರು ರೂಪಾಯಿ ಕೊಟ್ಟು ತಿಂಗಳ ಪಾಸ್ ಮಾಡಿಸಿ ಕೊಂಡಿದ್ದಾನೆ. ರೈಲ್ವೆ ಸ್ಟೇಶನ್ ನಿಂದ ಕಾಲೇಜ್ ಗೇ ಮತ್ತೆ ಹತ್ತು ರೂಪಾಯಿ ಕೊಟ್ಟು ಬಾಡಿಗೆ ಟೆಂಪೋದಲ್ಲಿ ಕಾಲೇಜ್ ತಲುಪಿಕೊಳ್ಳುತ್ತಾನೆ . ಮತ್ತೆ ತನ್ನ ಪಾಳಿಯ ಕೆಲಸ ಮುಗಿಸಿ ಸಂಜೆ ಕೋಲಾರಕ್ಕೆ ಅದೇ ಮಾರ್ಗದಲ್ಲಿ ಅಷ್ಟೇ ಖರ್ಚಿನಲ್ಲಿ ತಲುಪಿಕೊಳ್ಳುತ್ತಾನೆ .ಅಲ್ಲಿಗೆ ಒಂದು ತಿಂಗಳಿಗೆ ಷಣ್ಮುಗಂ ತನ್ನ ಪ್ರಯಾಣಕ್ಕೆ ಖರ್ಚು ಮಾಡುವುದು ಸುಮಾರು ಸಾವಿರದ ಐದು ನೂರು ರೂಪಾಯಿಗಳು . ಬಾಡಿಗೆ ಟೆಂಪೋದವರು ಕೆಲವೊಮ್ಮೆ ದುಡ್ಡು ತೆಗೆದುಕೊಳ್ಳುವುದಿಲ್ಲ ಪರಿಚಯದ ವಿಶ್ವಾಸದ ಮೇಲೆ. ಅಂಥ ಸಂದರ್ಭಗಳಲ್ಲಿ ಷಣ್ಮುಗಂ ಖರ್ಚು ಕೊಂಚ ಕಡಿಮೆಯಾಗುತ್ತೆ. ಈಗ ಮಧ್ಯಾಹ್ನ ಹೊರಗೆ ಊಟ ಮಾಡಬೇಕಾದ ಪರಿಸ್ಥಿತಿ. ಷಣ್ಮುಗಂ ಊಟಕ್ಕೆ ತೆಗೆದುಕೊಳ್ಳುವುದು ಹದಿನೈದು ರೂಪಾಯಿಯ ರೈಸ್ ಬಾತ್. ಅಲ್ಲಿಗೆ ಮತ್ತೊಂದು ಐದುನೂರು ರೂಪಾಯಿ ಸಿಗುವ ಮೂರೂವರೆ ಸಾವಿರದಲ್ಲಿ ಕಳೆದು ಹೋಯಿತು. ಅಲ್ಲಿಗೆ ಮನೆಯ ಸಲುವಾಗಿ ಉಳಿದದ್ದು ಕೇವಲ ಒಂದೂವರೆ ಸಾವಿರ.

ನಮ್ಮ ಕ್ಯಾಂಪಸ್ ಮ್ಯಾನೇಜರ್ ಗೆ ಹದಿನೈದು ಸಾವಿರ ಸಂಬಳ. ಆ ಸಂಬಳ ಆತನಿಗೆ ಲೆಕ್ಕಕ್ಕೇ ಇಲ್ಲ. ತುಂಬಾ ಶ್ರೀಮಂತ ಹಿನ್ನೆಲೆಯ ಮನುಷ್ಯ. ಟೈಮ್ ಪಾಸ್ ಸಲುವಾಗಿ ಕ್ಯಾಂಪಸ್ ಮ್ಯಾನೇಜರ್ ಕೆಲಸ. ಹತ್ತಾರು ಮನೆಗಳನ್ನ ಬಾಡಿಗೆಗೆ ಬಿಟ್ಟಿದ್ದಾನೆ.” ನಂಗೆ ಈ ಕೆಲಸದ ಅವಶ್ಯಕತೆನೇ ಇಲ್ಲ. ಸುಮ್ನೆ ಬರ್ತೀನಿ . ಎಂಭತ್ತು ಸಾವ್ರ ಕೇವಲ ಬಾಡಿಗೆನೇ ಪ್ರತಿ ತಿಂಗಳು ಬಂದು ಬೀಳುತ್ತೆ “ ಎಂದು ಸಿಕ್ಕ ಸಿಕ್ಕವರ ಬಳಿಯೆಲ್ಲಾ ಹೇಳಿ ಕೊಳ್ಳುತ್ತಾನೆ. ಅಂಥಾ ಮನುಷ್ಯ ಹಾಸ್ಟೆಲ್ ಮೆಸ್ಸ್ ನಲ್ಲಿ ಊಟಕ್ಕೆ ಕುಳಿತು ಊಟ ಕೇಳಲು ಬಂದ ಷಣ್ಮುಗಂ ಗೆ ಊಟ ಇಲ್ಲ ಎಂದು ಹೇಳಿ ಕಳಿಸುತ್ತಾನೆ. ಹಾಸ್ಟೆಲ್ ನಲ್ಲಿ ಪ್ರತಿನಿತ್ಯ ಬುಟ್ಟಿಗಟ್ಟಲೆ ಅಡುಗೆ ಹೆಚ್ಚಾಗಿ ಚೆಲ್ಲುತ್ತಾರೆ. ಹಾಗೆ ಚೆಲ್ಲುವುದರಲ್ಲಿ ನಮ್ಮ ಷಣ್ಮುಗಂ ಗೆ ಎರಡು ಮುಷ್ಟಿ ಊಟ ಕೊಟ್ಟಿದ್ದರೆ ಯಾರ ಗಂಟು ಕರಗುತ್ತಿತ್ತು? ಇಂಥ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವೇ ಸಿಗುವುದಿಲ್ಲ. “ ರೂಲ್ಸು ರೂಲ್ಸು” ಎಂದು ಹೊಟ್ಟೆ ತುಂಬಿದ ಮಂದಿ ಕೈತೊಳೆದು ಕೊಂಡುಬಿಡುತ್ತಾರೆ .

ಹಾಸ್ಟೆಲ್ ಬಿಡುವ ಸ್ವಲ್ಪ ದಿನಗಳ ಮೊದಲು ಒಂದು ಸಂಜೆ ಕ್ಯಾಂಟೀನ್ ಬಳಿ ಕುಳಿತಿದ್ದೆ. ಷಣ್ಮುಗಂ ಸರಸರನೆ ಹೆಜ್ಜೆ ಹಾಕುತ್ತಾ ನನ್ನ ಬಳಿ ಬಂದ . “ ಸರ್ ನನ್ನ ಸಂಬಳ ಒಂದು ಸಾವ್ರ ಜಾಸ್ತಿ ಆಯ್ತು .ಈಗ ನಮ್ಮನ್ನ ಕಾಲೇಜ್ ನವರೇ ಪರ್ಮನೆಂಟ್ ಕೆಲ್ಸಕ್ಕೆ ತಗೊಂಡ್ರು. ಇನ್ನು ಏಜೆನ್ಸಿ ಕಡೆಯಿಂದ ಕೆಲಸ ಮಾಡೋದಿಲ್ಲ. ಈಗ ನಾವೂ ಕಾಲೇಜ್ ಎಂಪ್ಲಾಯೀಸು. ಊಟ ಕೂಡ ಇಲ್ಲೇ ಸಿಗುತ್ತೆ “ ಎಂದ. ಷಣ್ಮುಗಂ ಖುಷಿ ಕಂಡು ನನಗೂ ಖುಷಿಯಾಯ್ತು . ಕೊನೆಗೆ ಹಾಸ್ಟೆಲ್ ಬಿಡುವಾಗ ಷಣ್ಮುಗಂ ಬೇಡ ಬೇಡವೆಂದರೂ ಹಾಸ್ಟೆಲ್ ಗೇಟ್ ನಿಂದ ಕ್ಯಾಂಪಸ್ ಗೇಟ್ ತನಕ ನನ್ನ ಲಗೇಜ್ ಗಳನ್ನ ಹೊತ್ತುಕೊಂಡು ಬಂದು ಆಟೋಕ್ಕೆ ತುಂಬಲು ನೆರವಾದ. ಆಟೋ ಕ್ಯಾಂಪಸ್ ಗೇಟ್ ದಾಟುವಾಗ ಆಟೋ ಒಳಕ್ಕೆ ಬಗ್ಗಿ “ ಬರ್ತಾ ಇರಿ ಸರ್.ನಾನು ಇನ್ನು ಇಲ್ಲೇ ಇರ್ತೀನಿ. “ ಎಂದು ಅವನ ಎಂದಿನ ಶುದ್ಧ ಮಂದಹಾಸದೊಡನೆ ಬೀಳ್ಕೊಟ್ಟ .ನನಗೆ ಮಾತೇ ಹೊರಡಲಿಲ್ಲ .

ಸದ್ಯ ಮಾರ್ಕ್ಸ್ ಕಾರ್ಡ್ ತರಲಿಕ್ಕೆ ಮತ್ತೆ ಕಾಲೇಜ್ ಗೆ ಹೋಗಬೇಕು. ಮತ್ತೆ ಷಣ್ಮುಗಂ ಸಿಗುತ್ತಾನೆ. ಅವನ ಜೊತೆ ಸ್ವಲ್ಪ ಹೊತ್ತು ಹರಟಿ ಬರಬೇಕು :) :) .

Wednesday, November 17, 2010

ಕನ್ನಡ ಮತ್ತು ನಾನು ...ನವೆಂಬರ್ ತಿಂಗಳ ನೆಪದಲ್ಲಿ ಒಂದಿಷ್ಟು

‘ಕನ್ನಡದ ಮತ್ತು ನಾನು’ ಎಂಬ ವಿಷಯದ ಬಗ್ಗೆ ಬರೆಯ ಹೊರಟರೆ ಅದು ನಮ್ಮ ಬಗ್ಗೆ ನಾವೇ ಬರೆದುಕೊಂಡಂತೆ. ಹೇಗೆ ಮಾಡಿದರೂ ಕನ್ನಡವನ್ನ ನಮ್ಮಿಂದ ಪ್ರತ್ಯೇಕಿಸಿ ಚಿತ್ರಿಸಲು ಸಾಧ್ಯವೇ ಇಲ್ಲ. ಕನ್ನಡ ಆತ್ಮಗತ. ಆತ್ಮವನ್ನ ಹೊತ್ತು ಮೆರೆಸುವ ತೇರುಗಳು ನಾವು . ಪ್ರತ್ಯೇಕಿಸಲು ಹೊರಟರೆ ಆತ್ಮ ಮತ್ತು ತೇರು ಎರಡೂ ಅನಾಥ.

ನನ್ನ ಹಿರಿಯರು ಹವ್ಯಕ ಕನ್ನಡ ಮಾತನಾಡುವ ಹವ್ಯಕರು. ಹಾಗಾಗಿ ನಾನು ‘ಹುಟ್ಟು ಕನ್ನಡಿಗ’. ’ಹುಟ್ಟು ಕನ್ನಡಿಗ’ನಾಗಿ ಕೊಂಚ ಅತಿರೇಕದಲ್ಲಿ ಹೇಳಹೊರಟರೆ ಬಹುಶಃ ನಾನು ಅಮ್ಮನ ಹೊಟ್ಟೆಯಲ್ಲಿದ್ದಾಗ ಕಾಲು ಝಾಡಿಸಿದ್ದು ಕನ್ನಡದಲ್ಲಿಯೇ. ಅತಿರೇಕದಿಂದ ಕೊಂಚ ಕೆಳಗೆ ಭಾವುಕತೆಯಲ್ಲಿ ಹೇಳುವುದಾದರೆ ನಾನು ಮೊದಲು ಅತ್ತಿದ್ದು, ನಕ್ಕಿದ್ದು , ನಿದ್ರೆಗೆ ಜಾರಿದ್ದು. ಮೊದ ಮೊದಲು ಕನಸು ಕಂಡಿದ್ದು , ಯಾವುದೋ ದುಃಸ್ವಪ್ನಕ್ಕೆ ಬೆಚ್ಚಿ ಬೆವರಾಗಿದ್ದು, ಹಸಿವಿಗೆ ಈಡಾಗಿದ್ದು , ಹೊಟ್ಟೆ ತುಂಬಿ ತೃಪ್ತಿಯಾಗಿ ತೇಗಿದ್ದು ಹೀಗೆ ಎಲ್ಲವೂ ಕನ್ನಡದಲ್ಲಿಯೇ . ಅತಿರೇಕ ಹಾಗು ಭಾವುಕತೆಯ ಆಚೆ ಕೆಲವಷ್ಟು ಸಂಗತಿಗಳನ್ನು ಸಹಜವಾಗಿ ಹೇಳುತ್ತೇನೆ .ನೀವೂ ಅಷ್ಟೇ ಸಹಜವಾಗಿ ಕೇಳಿಸಿಕೊಳ್ಳಿ. ನಮ್ಮ ಮನೆಯಲ್ಲಿ ಎಲ್ಲರೂ ಸ್ನಾನ ಮಾಡುವುದು ‘ಬಚ್ಚಲ ಮನೆ’ ಯಲ್ಲಿ. ಅಲ್ಲಿ ‘ಮಗ್’ ಬದಲು ಚೊಂಬು ಇರುತ್ತೆ. ನೀರು ಕಾಯಿಸಲಿಕ್ಕೆ ಹಂಡೆ. ಹಂಡೆ ಕೆಳಗೆ ಬೆಂಕಿಯಿರುತ್ತೆ .ಬೆಂಕಿ ಇದ್ದಲ್ಲಿ ಈ ‘ವಾಟರ್ ಹೀಟರ್ ‘ಎಲ್ಲ ಬೇಕಾಗಲ್ಲ. .ಹಾಗಾಗಿ ನೀರು ಹೀಟ್ ಆಗೋಲ್ಲ. ಬೆಂಕಿ ಇದೆಯಲ್ಲ.ನೀರು ಕಾಯುತ್ತೆ. ಬಚ್ಚಲ ಆಚೆ ಹಿತ್ತಿಲಿದೆ.ಅದರಾಚೆ ‘ಪಾಯಿ ಖಾನೆ ‘.

ಹೀಗೆ ‘ಹುಟ್ಟು ಕನ್ನಡಿಗ’ನಾಗಿ ಹುಟ್ಟಿ ಕನ್ನಡವನ್ನೇ ಉಂಡುಟ್ಟು ಬೆಳೆದರೂ ಹುಟ್ಟಿ ತುಂಬ ವರುಷದ ತನಕ ನನ್ನ ಸುತ್ತಲಿದ್ದ ಕನ್ನಡದ ಅಸ್ತಿತ್ವ ನನಗೆ ಕಾಣಲೇ ಇಲ್ಲ. ಅಸಲಿಗೆ ‘ಕನ್ನಡ ‘ಎಂದು ಪ್ರತ್ಯೇಕವಾಗಿ ಯೋಚಿಸುವ .ಚಿಂತಿಸುವ ಪ್ರಸಂಗವೇ ನನಗೆ ಎದುರಾಗಲಿಲ್ಲ. ಏಳನೆ ತರಗತಿ ಮುಗಿಯುವ ತನಕ ಊರಲ್ಲೇ ಇದ್ದೆ ಮನೆಯವರ ಜೊತೆ. ಕೊನೆಗೆ ಎಂಟಕ್ಕೆ ದೂರದ ಕಾಸರಗೋಡಿನ ಸಮೀಪದ ಅಳಿಕೆಗೆ ಮನೆಯವರು ನನ್ನನ್ನು ವಿದ್ಯಾಭ್ಯಾಸದ ಕಾರಣಕ್ಕೆ ಕಳುಹಿಸಿಕೊಟ್ಟರು. ಅಲ್ಲಿದ್ದುದು ಇಂಗ್ಲಿಷ್ ಶಾಲೆ. ಆಗ ನನಗೆ ಕನ್ನಡದ ಬಗ್ಗೆ ಯೋಚಿಸುವ .ಚಿಂತಿಸುವ ಪ್ರಸಂಗ ಎದುರಾಯಿತು. ಹಾಗೆ ಅನಿವಾರ್ಯವಾಗಿ ‘ಹುಟ್ಟು ಕನ್ನಡಿಗನ ‘ ಒಳಗೆ ಮೊದಲ ಬಾರಿಗೆ ಕನ್ನಡಕ್ಕಾಗಿ ಮಿಡಿಯುವ ‘ಕನ್ನಡದ ಕಟ್ಟಾಳು ‘ ಹುಟ್ಟಿಕೊಂಡ.

‘ ಇಂಗ್ಲಿಷ್ ಮೀಡಿಯಂ ‘ ಶಾಲೆ. ಅಪ್ಪಿ ತಪ್ಪಿ ಕೆಮ್ಮಿದರೂ ,ಸೀನಿದರೂ ಅದು ಇಂಗ್ಲಿಷ್ ನಲ್ಲಿಯೇ ಆಗಿ ಹೋಗಬೇಕು. ಕ್ಲಾಸಿನಲ್ಲಿ ಸೈಲೆಂಟ್ ಆಗಿ ಮೌನವಾಗಿರಬೇಕು. ಇಂಗ್ಲಿಷ್ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಿದರೆ ಫೈನು. ಒಂದೇ ಒಂದು ಬೇರೆ ಭಾಷೆಯ ಪದ ಮಾತಾದರೂ ಅದಕ್ಕೆ ಐವತ್ತು ರೂಪಾಯಿ ಫೈನ್ ಕಟ್ಟಬೇಕು. ಇಂಗ್ಲಿಷ್ ಬಿಟ್ಟು ಉಳಿದ ಎಲ್ಲ ಭಾಷೆಗಳ ಪ್ರತಿಯೊಂದು ಪದಕ್ಕೂ ಅಲ್ಲಿ ಬೆಲೆಯಿತ್ತು. ಸುಮ್ಮನೆ ಫೈನ್ ಕಟ್ಟಿಸಿಕೊಂಡು ಬಿಡುತ್ತಿರಲಿಲ್ಲ. ಜೊತೆ ಜೊತೆಗೆ ವಿಪರೀತ ಶಿಕ್ಷೆ. ನಾನು ಲೆಕ್ಕವಿಲ್ಲದಷ್ಟು ಬಾರಿ ಫೈನ್ ಕಟ್ಟಿದ್ದೆ. ಪ್ರತಿಬಾರಿ ನಾನಾಡಿದ ಕನ್ನಡ ಪದಗಳಿಗೆ ಫೈನ್ ಕಟ್ಟಿ ವಿಪರೀತ ಶಿಕ್ಷೆಗಳಿಗೆ ಈಡಾಗುವಾಗ ನನಗೆ ಊರು ನೆನಪಾಗುತ್ತಿತ್ತು. ಮನೆಯವರು ನೆನಪಾಗುತ್ತಿದ್ದರು.ನಾನು ಕಳೆದುಕೊಂಡಿದ್ದರ ಬೆಲೆ ಫೈನ್ ಕಟ್ಟುವಾಗ ತಿಳಿಯುತ್ತಿತ್ತು.

ಕೊನೆಕೊನೆಗೆ ಈ ಫೈನು ,ಈ ಶಿಕ್ಷೆ ಎಲ್ಲವೂ ರೂಢಿಯಾಗಿ ಹೋಯಿತು. ಅಲ್ಲಿ ನನ್ನೊಡನೆ ಕನ್ನಡ ಗೆಳೆಯರ ಪುಟ್ಟ ಬಳಗವಿತ್ತು. ನಾವು ಕದ್ದು ಮುಚ್ಚಿ ಕನ್ನಡ ಮಾತಾಡಿ ಖುಷಿ ಪಡುತ್ತಿದ್ದೆವು.ಖುಷಿ ಕನ್ನಡ ಬಳಸಿದ್ದಕ್ಕಲ್ಲ . ಕದ್ದು ಮುಚ್ಚಿ ಕನ್ನಡ ಬಳಸಿ ಶಾಲೆಯ ನಿಯಮವನ್ನ ಧಿಕ್ಕರಿಸಿದ್ದಕ್ಕೆ. ಉಳಿದವರ ಕಣ್ಣಲ್ಲಿ ನಾವು ಕ್ರಾಂತಿಕಾರಿಗಳು. ಭಗತ್ ಸಿಂಗ್ ಗು ನಮಗೂ ಆಗ ಅಂಥ ವ್ಯತ್ಯಾಸವೇ ಇರಲಿಲ್ಲ. ಕಾಸರಗೋಡಿನ ಸಮೀಪವಿದ್ದ ಶಾಲೆಯದು.ಹಾಗಾಗಿ ನಾವು ಸ್ವಯಂ ಘೋಷಿತ ಗಡಿನಾಡ ಕ್ರಾಂತಿಕಾರಿಗಳು.

ಹಾಗೆ ಒಂದು ತೀರ ಸಂಕಷ್ಟದಾಯಕ ಸನ್ನಿವೇಶದಲ್ಲಿ ಇಂಗ್ಲಿಷ್ ಮೇಲಿನ ದ್ವೇಷಕ್ಕೆ ಪ್ರತೀಕಾರವಾಗಿ ನನ್ನಲ್ಲಿ ಕನ್ನಡ ಪ್ರೀತಿ ಹುಟ್ಟಿಕೊಂಡಿತು. ಮುಂದೆ ಕನ್ನಡ ಸಾಹಿತ್ಯವನ್ನ ಓದುವ ಹವ್ಯಾಸ ಜೊತೆಯಾಯಿತು. ಹವ್ಯಾಸ ಹುಚ್ಚು ಎಂಬಲ್ಲಿ ಬಂದು ನಿಂತಿತು. ಕನ್ನಡದ ಮೇಲಿನ ಪ್ರೀತಿಯಲ್ಲದ ಪ್ರೀತಿ ನಿಜವಾದ ಪ್ರೀತಿಯಾಯಿತು.

ಈಗ ಸದ್ಯ ಎಂ.ಬಿ.ಎ ಮುಗಿಸಿ ಕೆಲಸ ಹಿಡಿದು ಬೆಂಗಳೂರಿನಲ್ಲಿ ಇದ್ದೇನೆ. ಮನೆಯವರೆಲ್ಲ ಊರಲ್ಲೇ ಇದ್ದಾರಲ್ಲ.ಹಾಗಾಗಿ ಅನಿವಾರ್ಯವಾಗಿ ‘ ರೂಮ್ ‘ ಮಾಡಿದ್ದೇನೆ. ರೂಮ್ ಸ್ವಂತದ್ದಲ್ಲ .ಹಾಗಾಗಿ ‘ರೆಂಟ್ ‘ ಕಟ್ಟುತ್ತೇನೆ. ಇಲ್ಲಿ ಬಚ್ಚಲು ಮನೆಯ ಬದಲು ‘ಬಾತ್ ರೂಮ್ ‘ಇದೆ.ನೀರು ಕಾಯಿಸಲಿಕ್ಕೆ ‘ ಕಾಯಿಲ್ ‘ಇದೆ. ಹಂಡೆ ಬದಲು ಬಕೆಟ್ಟು. ಟೆರೆಸ್ ಮೇಲಿರುವ ರೂಮು.ಹಾಗಾಗಿ ಹಿತ್ತಿಲು ಇಲ್ಲ. ಹಿತ್ತಿಲೇ ಇಲ್ಲ ಎಂದ ಮೇಲೆ ಊರಿನಲ್ಲಿರುವಂತೆ ಹಿತ್ತಿಲಾಚೆ ‘ಪಾಯಿ ಖಾನೆ ‘ಯ ಪ್ರಶ್ನೆಯೇ ಇಲ್ಲ. ಪಾಯಿ ಖಾನೆಯ ಬದಲು’ ಟಾಯ್ಲೆಟ್ ‘ ಇದೆ. ಟಾಯ್ಲೆಟ್ಟು ಹಾಗು ಬಾತ್ರೂಮು ಸಯಾಮಿ ಅವಳಿಗಳು. ಒಂದು ಬಾಗಿಲು ತೆರೆದರೆ ಎರಡಕ್ಕೂ ತಲುಪಿಕೊಳ್ಳಬಹುದು. ಈ ಇಂಗ್ಲಿಷಿನ ಬಕೆಟ್ಟು. ವಾಟರ್ ಹೀಟರ್ ಕಾಯ್ಲು, ಬಾತ್ರೂಮು ,ಟಾಯ್ಲೆಟ್ಟು , ಇವೆಲ್ಲದರ ಜೊತೆ ನಾನಿನ್ನೂ ಕನ್ನಡಿಗನಾಗೇ ಇದ್ದೇನೆ. ಸ್ನಾನದ ಅಲೌಕಿಕವಾದ ಖುಷಿಯ ಘಳಿಗೆಯಲ್ಲಿ ಕನ್ನಡ ಹಾಡನ್ನೇ ಹಾಡುತ್ತೇನೆ. ಇದು ನವೆಂಬರ್ ತಿಂಗಳಾದ್ದರಿಂದ ಬಾತ್ ರೂಮ್ ಹೊರಗೂ ದನಿ ಎತ್ತರಿಸಿ ಹಾಡುತ್ತೇನೆ. ಈ ತಿಂಗಳು ಪೂರ್ತಿ ಕಡ್ಡಾಯವಾಗಿ ನಾಡು ನುಡಿಯ ಕುರಿತಾದ ಹಾಡುಗಳಷ್ಟೇ. ಆಮೇಲೆ ಒಂದು ವರ್ಷ ಚಿಂತೆಯಿಲ್ಲ. ನಿರಾಳವಾಗಿ ಬಾಯಿಗೆ ಬಂದ ಹಾಡು ಹೇಳಿಕೊಂಡು ಇರಬಹುದು.

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು.ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಕರುನಾಡ ತಾಯಿ ಸದಾ ಚಿನ್ಮಯಿ. ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ. ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ.

ಕೊನೆಯದಾಗಿ ರತ್ನನ್ ಪದಗಳನ್ನ ಅನುಕರಿಸಿ ನಾಲ್ಕು ಸಾಲು ಹೇಳಿ ನನ್ನ ಮಾತು ಮುಗಿಸ್ತೇನೆ .

ಓ ದೇವ್ರೇ

ಮುಂದಿನ್ ಜಲ್ಮ ಅನ್ನೋದ್ ಇದ್ರೆ

ನನ್ ಹುಟ್ಸು ಅಂತಾ ಕೇಳಾಕಿಲ್ಲ.

ಹುಟ್ಸು ಬಿಡು ದೇವ್ರಾಣೆ ಬೇಜಾರಿಲ್ಲ

ಆದ್ರೆ ದೇವ್ರು

ಇಂಗ್ಲೀಸ್ ಮಾತ್ರ ಕನ್ನಡ್ವಾಗೆ ಹುಟ್ಲಿ

ಕನ್ನಡಾ ಕನ್ನಡ್ ವಾಗೆ ಇರ್ಲಿ

Thursday, November 11, 2010

ಕಸದಿಂದ ರಸ. ಹೊಸಾ ಹುಚ್ಚು.

ಅರ್ಥವಿರದ ಒಂದು ಪ್ಯಾರಾ .....

[ ಈಜೀವದ ತಂತಿಯಲಿ ನೀನು ನಾನು ಯಾಕಾಗಿ ಬದುಕು ಹೇಳು ಬೇಗ ಬಾ ಗೆಳತಿ ನಿನ್ನಯ ನಾನು ನಿನ್ನೊಳಗೆ ಯಾಕಾಗಿ ಏನಾಗಿ ಹೋದೆ ಹೇಳು ಬಾ ಬಾರೆ ಬೇಗ ಬಂದು ನನ್ನಯ ತೀರದ ದಾಹವ ತೀರಿಸು ನಿನ್ನೊಳು ಇಲ್ಲದ ನನ್ನೊಳು ಯಾಕೆ ಬಂದು ಹೀಗೆ ಕಾಡುವೆ ಸುಮ್ಮನೆ ಆ ಕಡೆ ತೀರದ ತೀರದ ದ್ಸಾಹ ಆಲೊಂದು ಖಾಲಿ ಮುಗಿಲು ಸುತ್ತ ಸುರಿಯುತಿದೆ ಬಿಸಿಲಿನ ಬೆವರು/ಯಾಕಾಗಿ ಬಂದೆ ನೀನಿ ಸುರಿವ ಮಳೆಯಾಗಿ.ಬೆವರೇ ಹಿತವಾಗಿತ್ತು.ಆಕಡೆ ಬೇರೊಂದು ಬಗೆಯ ಸೊಬಗು ಸೆಳೆಯುತಿದೆ ಎನ್ನ ಬಿಡದೆ ಕಾಡಿ ನೂರೊಂದು ನೆನಪುಗಳ ಹಾಗೆ ಬಿಟ್ಟು ಬಿಡುವೆನು ನಿನ್ನ ಹೀಗೆ ಬಂದು ಹೋದ ಬಯಕೆಯಂತೆ ಬೇಗ ಬಂದುಬಿಡು ಬಾ ಬೇಗಾ ಬಂದೆನ್ನ ತೀರಿಸು ಸಾಲ ನಿನ್ನ ಬೇಗ ಬಾರದೆ ಹೇಳು ಏತಕೆ ಈಗ ಹೀಗೆ ಬಂದಿಹೆ ತೋಚದೆ ಆದ ತಪ್ಪಿನಂತೆ ]

ಇಡಿಯಾಗಿ ಓದಿಕೊಂಡರೆ ಈ ಮೇಲಿನ ಸಾಲುಗಳಲ್ಲಿ ಅರ್ಥವೇ ಇಲ್ಲ. ವ್ಯಾಕರಣ ,ಕಾಗುಣಿತ ಇಲ್ಲಿ ಲೆಕ್ಕಕ್ಕೇ ಇಲ್ಲ. ಹುಡುಕಿ ಹೆಕ್ಕಿಕೊಂಡರೆ ನಾಲ್ಕಾರು ಹೊಳೆಯುವ ಪದಗಳ ಗುಚ್ಛ ಸಿಕ್ಕುತ್ತವೆ.ಅವುಗಳನ್ನು ಎತ್ತಿಕೊಂಡು ಪೋಣಿಸಿದರೆ ನಿಮ್ಮ ಗ್ರಹಿಕೆಗೂ ನಿಲುಕದ ಅಚ್ಚರಿಯ ಕವನವೋ ,ಇಲ್ಲವೇ ಬರಹದ ಒಂದು ಪ್ಯಾರಾವೋ ಸೃಷ್ಟಿಯಾಗುತ್ತೆ.

ಇದರ ಹಿಂದಿನ ಕಥೆಯಿಷ್ಟೇ.ಒಂದು ದಿನ ಖಾಲಿ ಕುಳಿತ ಸಮಯದಲ್ಲಿ ಸುಮ್ಮನೆ ಕೀ ಬೋರ್ಡ್ ಮೇಲೆ ಬೆರಳಾಡಿಸುತ್ತ ಏನೇನೋ ಟೈಪ್ ಮಾಡುತ್ತಾ ಹೋದೆ. ಹೀಗೆ ಟೈಪ್ ಮಾಡಿದ್ದನ್ನು ಒಮ್ಮೆ ಓದಿದಾಗ ಕೆಲವು ಖುಷಿ ಕೊಡುವ ಸಾಲುಗಳು ನನಗೆ ಸಿಕ್ಕವು. ನೀವೂ ಇದನ್ನು ಪ್ರಯತ್ನಿಸಿ.ನಿಮಗೆ ಯಾವುದೋ ಒಂದು ವಿಷಯ ಕಾಡುತ್ತಿರಬಹುದು ಅಥವಾ ಕಾಡದೆಯೂ ಇರಬಹುದು.ಇಲ್ಲಿ ವಿಷಯ ಇದ್ದರೂ ಆದೀತು. ಇಲ್ಲದಿದ್ದರೂ ಆದೀತು. ಆದರೆ ಟೈಪ್ ಮಾಡಲು ಶುರು ಮಾಡಿದ ಮೇಲೆ ಯೋಚಿಸಬೇಡಿ.ನಡುವೆ ಎಲ್ಲೂ ನಿಲ್ಲಿಸಬೇಡಿ.ಸುಮ್ಮನೆ ಸ್ವಲ್ಪ ಹೊತ್ತು ಬೆರಳು ಓಡಿದಂತೆ ಟೈಪ್ ಮಾಡುತ್ತಾ ಹೋಗಿ. ಕೊನೆಗೊಮ್ಮೆ ನೀವು ಟೈಪ್ ಮಾಡಿದ್ದನ್ನು ಓದುತ್ತಾ ಬನ್ನಿ. ನಿಮಗೆ ಕೆಲವು ಅಪರೂಪದ ಸಾಲುಗಳು ಸಿಕ್ಕುತ್ತವೆ.

ಉದಾಹರಣೆಗೆ ನಾನು ಈ ಅರ್ಥವಿರದೇ ಟೈಪ್ ಮಾಡಿದ ಪ್ಯಾರದಲ್ಲಿ ಹೆಕ್ಕಿಕೊಂಡ ಕೆಲವು ಸಾಲುಗಳನ್ನು ನಿಮ್ಮೆದುರು ಇಡುತ್ತೇನೆ .ನೋಡಿ.

ಆ ಕಡೆ ತೀರದ ತೀರದ ದಾಹ

ಅಲ್ಲೊಂದು ಖಾಲಿ ಮುಗಿಲು

ಸುತ್ತ ಸುರಿಯುತಿದೆ ಬಿಸಿಲಿನ ಬೆವರು

ಯಾಕಾಗಿ ಬಂದೆ ನೀನು ಸುರಿವ ಮಳೆಯಾಗಿ

ಬೆವರೇ ಹಿತವಾಗಿತ್ತು

ಆ ಕಡೆ ಬೇರೊಂದು ಬಗೆಯ ಸೊಬಗು

ಸೆಳೆಯುತಿದೆ ಎನ್ನ ಬಿಡದೆ ಕಾಡಿ ನೂರೊಂದು ನೆನಪುಗಳ ಹಾಗೆ

ಬಿಟ್ಟು ಬಿಡುವೆನು ನಿನ್ನ

ಹೀಗೆ ಬಂದು ಹೋದ ಬಯಕೆಯಂತೆ

ಇವಿಷ್ಟು ಬಿಡಿಬಿಡಿಯಾಗಿ ಹೆಕ್ಕಿಕೊಂಡ ಪದಗಳಾದರೂ ಓದುವಾಗ ಎಲ್ಲವೂ ಸೇರಿ ಒಂದು ಪುಟ್ಟ ಕವನದಂತೆ ಕಾಣುತ್ತೆ .ಹೀಗೆ ಸಿಕ್ಕ ಸಾಲುಗಳನ್ನು ಇದ್ದ ಹಾಗೆಯೇ ಇಟ್ಟುಕೊಳ್ಳಬಹುದು .ಅಥವಾ ಸ್ವಲ್ಪ ಪಾಲಿಶ್ ಮಾಡಿ ಇನ್ನೆಲ್ಲೋ ಬಳಸಿಕೊಳ್ಳಬಹುದು.ಸಿಕ್ಕ ಎಲ್ಲವನ್ನೂ ಒಟ್ಟಾಗಿ ಬಳಸಿಕೊಳ್ಳಬಹುದು .ಅಥವಾ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ವಿಭಿನ್ನ ಸಂದರ್ಭಗಳಲ್ಲಿ ಬಳಸಬಹುದು .


ಕಸವೋ ರಸವೋ ಎಂಬ ಗೊಂದಲದಲ್ಲಿ ಒಂದಿಷ್ಟು ...

ಇನ್ನೂ ಕೆಲವಷ್ಟು ಸಾಲುಗಳನ್ನು ಹೆಕ್ಕಿ ಕೊಂಡಿದ್ದೇನೆ. ಇವುಗಳಿಗೆ ಅರ್ಥವೇನೆಂದು ನನಗೂ ಗೊತ್ತಿಲ್ಲ.ಅರ್ಥ ಸಿಕ್ಕರೆ ನಿಮ್ಮ ಪುಣ್ಯ.ಅವು ಹೀಗಿವೆ.

‘ನಿನ್ನೊಳು ಇಲ್ಲದ ನನ್ನೊಳು ಯಾಕೆ ಬಂದು ಹೀಗೆ ಕಾಡುವೆ ಸುಮ್ಮನೆ ‘

‘ನಿನ್ನಯ ನಾನು ನಿನ್ನೊಳಗೆ ಯಾಕಾಗಿ ಏನಾಗಿ ಹೋದೆ ಹೇಳು’

‘ಈಗ ಹೀಗೆ ಬಂದಿಹೆ ತೋಚದೆ ಆದ ತಪ್ಪಿನಂತೆ’

ಈಗೀಗ ನನ್ನ ಏಕಾಂತಕ್ಕೆ ,ಖಾಲಿ ಕುಳಿತ ಕ್ಷಣಗಳಿಗೆ ಹೀಗೆ ಹುಚ್ಚುಚ್ಚಾಗಿ ಟೈಪ್ ಮಾಡುವುದು , ನಂತರ ಈ ಕಸದಲ್ಲಿ ರಸ ಹುಡುಕುವುದು ಹವ್ಯಾಸವಾಗಿಹೋಗಿದೆ. ನೀವೂ ಪ್ರಯತ್ನಿಸಿ ಒಮ್ಮೆ :) :) .

Sunday, November 7, 2010

ಹೊಸಾ ಬ್ಲಾಗು.ಅದಕ್ಕೊಂದು ಮುನ್ನುಡಿ.

ಹಳೇ ನಿಲ್ಧಾಣದಿಂದ ಹೊಸಾ ಪ್ರಯಾಣ ..

ಹೊಸಬನಾದ ನಾನು ಹಳೆಯದನ್ನೆಲ್ಲ ಗುಡಿಸಿ ಸಾರಿಸಿ ಬ್ಲಾಗ್ ಅಂಗಳವನ್ನೀಗ ಒಪ್ಪ ಮಾಡಿದ್ದೇನೆ. ಬ್ಲಾಗ್ ಮಾತ್ರವಲ್ಲ ನನ್ನನ್ನೂ ಕೂಡ. ಕನಸುಗಳನ್ನೇ ಚುಕ್ಕಿ ಮಾಡಿ ಒಂದೊಂದಾಗಿ ಇಡುತ್ತ ಬರುತ್ತೇನೆ. ಚುಕ್ಕಿಗಳನ್ನು ಸೇರಿಸಲು ಪ್ರೀತಿಯೆಂಬ ಸಾಲಿನ ನಂಟು. ಅಚ್ಚರಿ –ಬೆರಗುಗಳೇ ಬಣ್ಣ . ಮುಂದೆ ಅದು ರಂಗವಲ್ಲಿಯಾದರೆ ಖುಷಿ.ಇಲ್ಲದಿದ್ದರೆ ಹೇಗೂ ಮತ್ತೆ ಗುಡಿಸಿ ಒಪ್ಪ ಮಾಡಲು ಪೊರಕೆ ಇದ್ದೇ ಇದೆ.

ಅತ್ತಿಗೆಯ ನೆರಳಿನಲ್ಲಿ ಸೂರು ಕಟ್ಟಿಕೊಂಡವನು ನಾನು.ಒಂದೂವರೆ ವರುಷದ ಕೆಳಗೆ ಅನಾಮಿಕ ನಾನು.ಅಲೆಮಾರಿ ನಾನು.ಈಗ ಮತ್ತೆ ಅದೇ ಭಾವದಲ್ಲಿ ನಿಮ್ಮೆದುರು ಬರುತ್ತಿದ್ದೇನೆ. ಎಲ್ಲವನ್ನೂ ಹೊಸದಾಗಿ ಕಾಣಲು ಪ್ರಯತ್ನಿಸುತ್ತೇನೆ. ನನ್ನ ಕಣ್ಣ ಮುಂದಿರುವುದು ನಾನು ಮತ್ತು ನನ್ನ ನಾಳೆ ಗಳು ಮಾತ್ರ.

ಆಗ ನಮ್ಮ ‘ಗುಡ್ ನೈಟ್ ‘ಕವನದ ಹೀರೋ ಪ್ರಣಯರಾಜ ಪುಟ್ಟನಿದ್ದ.ಪುಟ್ಟನ ಜೊತೆಗೆ ಪುಟ್ಟಿ. ಅವರ ಪ್ರೀತಿ ನನ್ನ ಕವನವಾಗುತ್ತಿತ್ತು. ಉಳಿದ ಇತರೆ ಬರಹಗಳಿಗೆ ಮತ್ತದೇ ಪುಟ್ಟ ಪುಟ್ಟಿಯರ ಪ್ರೀತಿ ಸ್ಫೂರ್ತಿಯಾಗುತ್ತಿತ್ತು. ಆಗ ಎಲ್ಲವೂ ಸೊಗಸಿತ್ತು. ಈಗ ಮತ್ತೆ ಆ ದಿನಗಳೇ ಬರುವ ನಾಳೆಗಳಾಗಲಿ.

‘ಗುಡ್ ನೈಟ್ ಕವನ’. ‘ಆ ಒಂದು ದಿನದ ಡೈರಿ ‘, ‘ಜಗತ್ತಿಗೊಂದು ಪತ್ರ ‘ ,’ ಬಾಲವನ’ , ‘ಹಾಸ್ಟೆಲ್ ಚಿತ್ರಗಳು ‘ , ನಡುವೆ ಅಲ್ಲೊಂದು ಇಲ್ಲೊಂದು ಇತರೆ ಕವನಗಳು ; ಇವಿಷ್ಟು ನನ್ನ ಬ್ಲಾಗಿನ ಮೆನು ಪಟ್ಟಿ. ಪ್ರೀತಿ ಮತ್ತು ಖುಷಿ ಬ್ಲಾಗಿನ ಬೀಜಮಂತ್ರ.ಪ್ರೀತಿ ಮತ್ತು ಖುಷಿಯ ಆಚೆ ಉಳಿದ ಸಂಗತಿಗಳು ಏನೇ ಇದ್ದರೂ ಅವು ವರ್ಜ್ಯ . ಬರೆಯುವ ಕೈಗಳು ನನ್ನವು.ಆದರೆ ಬರಹ ನನ್ನೊಳಗಿನ ಅಲೆಮಾರಿಯದ್ದು. ಈ ಸೂತ್ರದಲ್ಲಿ ಹೊಸ ಬ್ಲಾಗು ಸಾಗುತ್ತೆ. ನನ್ನದೆಲ್ಲವನ್ನೂ ಬ್ಲಾಗ್ ಅಂಗಳದಲ್ಲಿ ಹರವಿಟ್ಟು ಕೂರುವುದಿಲ್ಲ. ನಾನಲ್ಲದ ನನ್ನನ್ನು ಮಾತ್ರ ಮೆರೆಸುತ್ತೇನೆ.

ಹೊಸತಾಗಿ ಶುರುವಾದ ಬ್ಲಾಗು ‘ಗುಡ್ ನೈಟ್ ‘ ಕವನದಿಂದಲೇ ಶುರುವಾಗಲಿ .

ಗುಡ್ ನೈಟ್ ಕವನ : ೧


ಜಗವೇ ಒಂದು ಮಗುವಾಗಿದೆ

ತಣ್ಣನೆ ಇರುಳ ಮಡಿಲ ತೊಟ್ಟಿಲಲಿ

ಬೀಸೋ ಗಾಳಿಯಲಿ ಅತ್ತಿತ್ತ ತೂಗಿ.

ರಾತ್ರಿಯ ಸೊಗಸೇ ಹಾಗೆ ಪುಟ್ಟಿ

ನಿನ್ನಂತೆ .ನಿನ್ನ ಒಲವಂತೆ.

ರಾತ್ರಿಯಲಿ ಬರುವ ಶಾಂತಿಯ ದಿವ್ಯ ಚುಂಬನಕೆ

ಅದೆಂಥ ಮಾಯೆಯ ಮುಸುಕು !

ಜಗವೆಲ್ಲ ಚಿತ್ರವಾಗಿ

ಜನರೆಲ್ಲ ಉಸಿರಿದ್ದೂ ಶವವಾಗಿ

ಯೋಗನಿದ್ರೆಯಲಿ

ತನುಮನ ಹಗುರಾಗೋ ಯೋಗ .

ಇರುಳಲ್ಲ ಇದು

ಮಹಾ ಮೌನರಾಗ ....