Tuesday, November 30, 2010

ಸಭ್ಯ ಪೋಲಿ ಕವನಗಳು ..

ಒಂದೂವರೆ ವರುಷದ ಹಿಂದೆ ಒಂದು ಕವನ ಬರೆದಿದ್ದೆ. ಅದು ಮಾಮೂಲಿ ಕವನವಾಗಿರಲಿಲ್ಲ. ಅಲ್ಲಿ ಕೊಂಚ ಪೋಲಿತನವಿತ್ತು..ಹಸಿಬಿಸಿಯ ಭಾವಗಳೇ ಅಲ್ಲಿ ಪದಗಳಾಗಿದ್ದವು. ಆಗ ಆ ಕವನವನ್ನ ನನ್ನ ಬ್ಲಾಗಿನಲ್ಲಿ ಹಾಕಿಕೊಳ್ಳಲು ಧೈರ್ಯ ಸಾಲಲಿಲ್ಲ. ಅತ್ತಿಗೆ ಒಮ್ಮೆ ಬರೆದ ಬ್ಲಾಗ್ ಇದು.ಇಲ್ಲಿ ಇದು ಬೇಡ ಎಂಬ ಭಾವನೆ ನನ್ನ ಹಿಂಜರಿಕೆಗೆ ಕಾರಣವಾಗಿತ್ತು. ಆದರೆ ಸುಮ್ಮನೆ ಕೂರುವಂತೆಯೂ ಇರಲಿಲ್ಲ. ಕವನಕ್ಕೆ ಒಂದು ಮುಕ್ತಿ ಕಾಣಿಸಲೇ ಬೇಕಿತ್ತು. ಆಗ ನನಗೆ ನೆನಪಾದದ್ದು ‘ ಮೋಟುಗೋಡೆ’ ಬ್ಲಾಗು. ಸುಶ್ರುತಣ್ಣನಿಗೆ ಆ ಕವನವನ್ನ ಕಳಿಸಿಕೊಟ್ಟೆ. ಕೊನೆಗೆ ಅದು ‘ಮೋಟುಗೋಡೆ’ ಬ್ಲಾಗಿನಲ್ಲಿ ಬೆಳಕು ಕಂಡಿತು. ಅಲ್ಲಿಂದ ಮುಂದೆ ನನ್ನ ಪೆನ್ನಿನ ಇಂಕಿನಲ್ಲಿ ಸ್ವಲ್ಪ ಭಾಗವನ್ನ ಸಭ್ಯ ಪೋಲಿ ಕವನಗಳಿಗೆ ಮೀಸಲಿಟ್ಟೆ. ನಂತರದ ಆ ತರಹದ ನನ್ನ ಕವನಗಳಿಗೆಲ್ಲ ಮೋಟುಗೋಡೆ ವೇದಿಕೆಯಾಯಿತು.

ಆಗಾಗ ನಾನು “ಅತ್ತಿಗೆ ಈ ನನ್ನ ಬ್ಲಾಗಿನ ಒಡತಿ.ನಾನು ಇಲ್ಲಿ ಸೂರು ಹುಡುಕಿಕೊಂಡ ಅಲೆಮಾರಿ ಮಾತ್ರ” ಎಂದು ಹೇಳುತ್ತಿದ್ದೆ. ನನ್ನ ಆ ಮಾತಿಗೆ ಅತ್ತಿಗೆಯ ಆಕ್ಷೇಪವಿತ್ತು. “ ಇದು ನಿನ್ನದೇ ಬ್ಲಾಗು.ನೀನೇ ಇದರ ಒಡೆಯ ’’ ಎಂದು ಅತ್ತಿಗೆ ಪ್ರತಿಬಾರಿ ಹೇಳುತ್ತಿದ್ದಳು. ಅತ್ತಿಗೆಯ ಈ ಮಾತನ್ನೇ ನನಗೆ ಸಿಕ್ಕ ಸ್ವಾತಂತ್ರ್ಯ ಹಾಗು ಅನುಮತಿ ಎಂದುಕೊಂಡು ‘ಮೋಟುಗೋಡೆ ಕವನ’ಗಳನ್ನ ಇನ್ನು ಮೇಲೆ ನನ್ನ ಬ್ಲಾಗಿನಲ್ಲಿಯೇ ಹಾಕಿಕೊಳ್ಳುತ್ತೇನೆ.

ಈ ಸಂದರ್ಭದಲ್ಲಿ ಸುಶ್ರುತಣ್ಣ ಹಾಗು ಅವನ ಮೋಟುಗೋಡೆ ಬಳಗದವರನ್ನ ನಾನು ನೆನೆಯಲೇ ಬೇಕು. ‘ಮೋಟುಗೋಡೆ ಬ್ಲಾಗ್ ’ ನನ್ನದಲ್ಲ.ನಾನು ಅದರ ಸದಸ್ಯ ಕೂಡ ಅಲ್ಲ.ಆಗೊಮ್ಮೆ ಈಗೊಮ್ಮೆ ಕವನ ಕಳಿಸುತ್ತಿದ್ದೆ ಅಷ್ಟೇ.ಆದರೂ ನನ್ನ ಮಾನಸದಲ್ಲಿ ‘ಮೋಟುಗೋಡೆ’ ನನ್ನದೇ ಎನ್ನುವಷ್ಟು ಆತ್ಮೀಯತೆ ಬೆಳೆದುಹೋಗಿತ್ತು. ಇಷ್ಟು ದಿನ ಅವರು ನನಗೆ ಅವಕಾಶ ಕೊಟ್ಟು ಬೆಂಬಲಿಸಿ ಪ್ರೋತ್ಸಾಹ ನೀಡಿದ್ದಾರೆ. ಈಗ ಈ ಸಭ್ಯ ಪೋಲಿ ಕವನಗಳ ಮಾಲಿಕೆ ಶುರುವಾಗುತ್ತಿದೆ ಎಂದರೆ ಅದಕ್ಕೆ ಕಾರಣ ‘ಮೋಟುಗೋಡೆ ’ ಬಳಗದ ಬೆಂಬಲ ಹಾಗು ಪ್ರೋತ್ಸಾಹ. ಅವರಿಗೆ ನಾನು ಸದಾ ಋಣಿ.

ಇಲ್ಲಿನ ಕವನಗಳೆಲ್ಲ ಪ್ರಕೃತಿದತ್ತ .ಪ್ರತಿ ಪದಕ್ಕೂ ಅಪಾರ ಅರ್ಥ.ಓದುಗನ ಅನುಭವದ ವ್ಯಾಪ್ತಿಯೇ ಕವನದ ಅರ್ಥದ ಮಿತಿ. ಅನುಭವ ಜಾಸ್ತಿ ಇದ್ದಷ್ಟೂ ಅರ್ಥ ಜಾಸ್ತಿ. ಅನುಭವದ ಅಭಾವದಲ್ಲಿ ಕಲ್ಪನೆ ನೆರವಾಗಬಲ್ಲದು. ಕಲ್ಪಿಸಿದಷ್ಟೂ ಅರ್ಥ ಆಳವಾಗುತ್ತೆ, ಬೆಳೆಯುತ್ತೆ


ಸಭ್ಯ ಪೋಲಿ ಕವನ ೧ .........


ನಿನ್ನೆಡೆಗಿನ ಎನ್ನ ಮೋಹ ಅನೂಚಾನ

ಒಮ್ಮೆ ಸಮ್ಮತದ ಮುದ್ರೆಯಾಗು

ಸ್ವಾಗತದ ಭಂಗಿಯಾಗು

ಮುಂದೆ ಸಕಲವೂ ನಿರ್ವಿಘ್ನ

.

ಮಡುಗಟ್ಟಿದೆ ಯೌವ್ವನದ ಅಂಬರದಿ

ಮೊದಲ ಮಳೆಯ ಮೋಡ

ಬೀಸುತಿದೆ ಚುಂಬಕ ಹೂ ಬಿಸಿಯ ಗಾಳಿ

ಕಾಣುತಿದೆ ನಿನ್ನ ಕಣ್ಣಲಿ ಕೋಲ್ಮಿಂಚು

ಕಾಲಬೆರಳಲಿ ಗೀಚಿದ ಕಾಮನಬಿಲ್ಲು

ಅಗೋ ಅಲ್ಲಿ ಹಣೆಯ ನೆರಿಗೆ ನೀರಾಗಿದೆ

ಕೊರಳ ಇಳಿಜಾರಿನಲಿ

ನವಜಾತ ಬೆವರ ಹನಿಯೊಂದು ಬೆವರುತಿದೆ

ಏರಿಳಿಯುತಿದೆ ಎದೆಯಗೂಡು

ಮುಚ್ಚಿಟ್ಟು ಕೂಡಿಟ್ಟು ಕಳೆಯುತಿದೆ ಕಾಲ ಕಳೆಗುಂದಿ

ಬಯಲಾಗು

ಹನಿಯಲಿ ಮೋಡದೊಳಗಣ ಸೊಬಗು

ದಣಿದಣಿದು ತಣಿಯಲಿ ನಾನೆಂಬ ಇಳೆ

ಕಣಕಣವಾಗಿ ಧನ್ಯವಾಗಿ

ಹೂವಾಗಲಿ ಮಣ್ಣ ಘಮ ಹನಿಯ ಕೂಡಿ

ಹದವಾದ ಘಳಿಗೆಯಲಿ

ಮೊಳೆಯಲಿ ಆತ್ಮದಾನಂದ

ದ್ವೈತ ಅದ್ವೈತವಾಗಿ .....

Sunday, November 21, 2010

ಹಾಸ್ಟೆಲ್ ಚಿತ್ರಗಳು - ೧

ಷಣ್ಮುಗಂ.....

ಕಾಲೇಜ್ ಕ್ಯಾಂಪಸ್ಸಿನ ಗೇಟ್ ಬಳಿ ಹೋಗುತ್ತಿದ್ದಂತೆ ಆತ “ ನಮಸ್ತೆ ಸರ್ ‘ ಎಂದು ಎದುರಾಗುತ್ತಾನೆ ಒಂದು ಪರಿಶುದ್ಧ ಮಂದಹಾಸದೊಡನೆ . ಆತ ಕ್ಯಾಂಪಸ್ ಸೆಕ್ಯೂರಿಟಿ ಗಾರ್ಡ್ ಷಣ್ಮುಗಂ . ಅದು ಹೇಳಿ ಕೇಳಿ ಎಂ.ಬಿ.ಎ ಕಾಲೇಜು. ಮ್ಯಾನೇಜ್ ಮೆಂಟ್ ವಾತಾವರಣದಲ್ಲಿ ನಿಮಗೆ ಎಲ್ಲಿ ಹೋದರೂ ನಗುಮುಖಗಳು ಎದುರಾಗುತ್ವೆ. ಎಲ್ಲವೂ ಬಲವಂತದ ಬಸಿರು ಹಡೆದ ನಗುವಿನ ಮುಖವಾಡಗಳು. ಎದುರು ಸಿಕ್ಕಾಗ ಅತೀ ಎಂಬಷ್ಟು ನಯವಾಗಿ ನಕ್ಕು ಹಾಯ್ ಹೇಳಿ ಮರುಕ್ಷಣವೇ ಮಲಬದ್ಧತೆ ಪೀಡಿತರ ರೀತಿ ಮುಖ ಮಾಡಿಕೊಂಡು ಹೋಗಿಬಿಡುತ್ತಾರೆ . ನಮ್ಮ ಷಣ್ಮುಗಂ ಹಾಗಲ್ಲ. ಬಿಸಿಲೆ ಬರಲಿ ಮಳೆಯೇ ಇರಲಿ ಆತ ಸದಾ ಮನಸಾರ ಹಸನ್ಮುಖ. ಗೇಟ್ ಬಳಿ ಯಾವಾಗ ಬಂದರೂ ಅಲ್ಲೊಂದು ಕಪ್ಪು ಹಿನ್ನೆಲೆಯಲ್ಲಿ ಅರಳಿದ ಬೆಳ್ಳಿ ನಗೆಯೊಂದು ಸ್ವಾಗತಿಸಲು ಕಾದಿರುತ್ತೆ. ನನ್ನ ಯೋಚನೆಗಳು .ಹಳವಂಡಗಳು ಏನೇ ಇರಲಿ ಷಣ್ಮುಗಂ ಎದುರಾದಾಗ ನಾನು ಎಲ್ಲವನ್ನೂ ಮರೆತು ಬಿಡುತ್ತೇನೆ. ಅವನು ಕಾಣುತ್ತಿದ್ದಂತೆ ನನಗೆ ಅರಿವಿಲ್ಲದೆ ನಾನು ಒಂದು ಮಂದಹಾಸವಾಗುತ್ತೇನೆ. ಷಣ್ಮುಗಂ ಸಮ್ಮುಖದಲ್ಲಿ ನನ್ನ ಸಣ್ಣತನಗಳೂ ನನ್ನಿಂದ ಸ್ವಲ್ಪ ಕಾಲ ದೂರವಾಗಿ ಬಿಡುತ್ತೆ. ನಾನು ತುಂಬಾ ಒಳ್ಳೆಯವನು . ಎಲ್ಲರೂ ಒಳ್ಳೆಯವರು.ಜಗತ್ತು ತುಂಬಾ ಒಳ್ಳೆಯದೆಂದು ಅನ್ನಿಸಿಬಿಡುತ್ತೆ.

ಷಣ್ಮುಗಂ ಕೋಲಾರದವನು. ಮೂಲದಲ್ಲಿ ತಮಿಳಿಗ. ಬೆಂಗಳೂರಿಗೆ ಬಂದು ಕೆಲವು ವರ್ಷವಾಯಿತಷ್ಟೇ .ಮೊದಲು ಕೋಲಾರದ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದವನು ಗಣಿ ಮುಚ್ಚಿ ಹೋದ ಮೇಲೆ ಬೇರೆ ದಾರಿ ಕಾಣದೆ ಬೆಂಗಳೂರಿನ ಹಾದಿ ಹಿಡಿದಿದ್ದ . ಕೊನೆಗೆ ಯಾವುದೋ ಒಂದು ‘ಸೆಕ್ಯೂರಿಟಿ ಏಜನ್ಸಿ ‘ ಸೇರಿ ಏಜನ್ಸಿ ಪರವಾಗಿ ನನ್ನ ಕಾಲೇಜ್ ನಲ್ಲಿ ಸೆಕ್ಯೂರಿಟಿ ಕೆಲಸಕ್ಕಿದ್ದ. ಅವನೇ ಹೇಳಿದಂತೆ ಕೋಲಾರದವರು ತುಂಬಾ ಮಂದಿ ಹೀಗೆ ಅವನಂತೆಯೇ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದಾರಂತೆ.ಎಲ್ಲರೂ ಅವನಂತೆಯೇ ಮುಚ್ಚಿದ ಗಣಿಯ ಅಡಿಯಲ್ಲಿ ದಿಕ್ಕೆಟ್ಟವರೇ. ಈಗ ಇಲ್ಲಿ ಬೆಂಗಳೂರಿಗೆ ಬಂದು ಹೊಟ್ಟೆಪಾಡಿಗೊಂದು ದಾರಿ ಮಾಡಿಕೊಂಡಿದ್ದರು. ಷಣ್ಮುಗಂ ಅಪ್ಪನ ಕಾಲದಿಂದಲೂ ಕೋಲಾರದ ಗಣಿ ಅವರ ಅನ್ನದ ಮೂಲ. ಗಣಿ ಮುಚ್ಚಿ ಹೋಗುವ ಮುಂಚೆ ಸಮಾರು ಮೂವತ್ತು ವರುಷ ಷಣ್ಮುಗಂ ಅಲ್ಲಿ ಕೆಲಸ ಮಾಡಿದ್ದ. ಕೆಲವೊಮ್ಮೆ ಆ ದಿನಗಳ ಬಗ್ಗೆ ಹೇಳುವಾಗ ಷಣ್ಮುಗಂ ನಡು ನಡುವೆ ಸುಮ್ಮನಾಗಿಬಿಡುತ್ತಿದ್ದ . “ ಏನ್ ಮಾಡದು ಸರ್. ದುಡಿಮೆಗೆ ಏನಾರ ಮಾಡ್ಲೆಬೇಕಲ್ಲ ‘ ಎಂದು ಮತ್ತೆ ಮೌನ ಮುರಿದು ಎಂದಿನ ಶುದ್ಧ ನಗೆಯಾಗುತ್ತಿದ್ದ ..

ಅದೊಂದು ದಿನ ಗೇಟ್ ಬಳಿ ಷಣ್ಮುಗಂ ಎದುರಾದ . ನೆತ್ತಿ ಮೇಲೆ ನಡು ಮಧ್ಯಾಹ್ನ ಸುಡುತ್ತಿತ್ತು. ಎಂದಿನಂತೆ ಷಣ್ಮುಗಂ ತನ್ನ ಲಾಂಛನವಾದ ಮಂದಹಾಸದೊಂದಿಗೆ “ ಊಟ ಆಯ್ತಾ ಸಾರ್ “ ಎಂದು ಆಪ್ತವಾಗಿ ಕೇಳಿದ. ‘ಆಯ್ತು ಸರ್ .ಈಗಷ್ಟೇ ಆಯ್ತು.ನಿಮ್ದಾಯ್ತಾ “ ಎಂದು ನಾನು ಕೇಳಿದೆ.. “ ಇಲ್ಲಾ ಸರ್ .ಈವತ್ತಿಂದ ನಮಗೆ ಊಟ ಕೊಡೋಲ್ವಂತೆ ಹಾಸ್ಟೆಲ್ ಮೆಸ್ಸ್ ನಿಂದ. ಕ್ಯಾಂಪಸ್ ಮ್ಯಾನೇಜರ್ ಹೇಳಿದಾರೆ. ಹೊರಗೆಲ್ಲಾದ್ರು ಊಟಕ್ಕೆ ಹೋಗ್ಬೇಕು ಸಾರ್ “ ಎಂದ. ಷಣ್ಮುಗಂ ಮುಖದಲ್ಲಿ ಮಂದಹಾಸ ಹಾಗೆ ಇತ್ತು .ಆದರೆ ಎಂದಿನ ಹೊಳಪು ನನಗೆ ಅಲ್ಲಿ ಕಾಣಲಿಲ್ಲ. ‘ಯಾಕಂತೆ. ನಿಮಗ್ಯಾಕೆ ಕೊಡೋಲ್ವಂತೆ “ ಎಂದೆ. ‘ ಏನೋ ಗೊತ್ತಿಲ ಸರ್. ಊಟ ತರೋಕೆ ಹೋಗಿದ್ದೆ.ಕ್ಯಾಂಪಸ್ ಮ್ಯಾನೇಜರ್ ಊಟ ಕೊಡಲ್ಲ ಇನ್ಮೇಲೆ ಅಂತ ಹೇಳಿ ಕಳ್ಸಿದ್ದಾರೆ .ರೂಲ್ಸ್ ಪ್ರಕಾರ ನಮಗೆ ಊಟ ಇಲ್ವಂತೆ “ ಎಂದು ಷಣ್ಮುಗಂ ವಿಷಾದದಲ್ಲಿ ನಕ್ಕ. “ ನಿಮ್ಮ ಸಂಬಳ ಎಷ್ಟು ಸಾರ್.ಈಗೆನ್ಮಾಡ್ತೀರಿ ಊಟ ಸಿಗಲ್ಲ ಅಂದ್ಮೇಲೆ “ ಎಂದೆ. ಷಣ್ಮುಗಂ “ ಮೂರೂವರೆ ಸಾವ್ರ ಸಾರ್. ಮತ್ತೇನು ಮಾಡದು? ಹೋಟ್ಲು ಗೆ ಹೋಗದು.ಹದಿನೈದು ರೂಪಾಯಿಗೆ ಫಸ್ಟ್ ಕ್ಲಾಸ್ ರೈಸ್ ಬಾತ್ ಸಿಗುತ್ತೆ.ತಿನ್ನದು ಬರ್ತಾ ಇರೋದು ಅಷ್ಟೆಯಾ “ ಎಂದು ಅವನ ಹೊಟ್ಟೆಯ ಮಡಿಕೆಗಳೆಲ್ಲ ಕುಲುಕುವಂತೆ ನಕ್ಕ. “ ಹೀಗೆ ನೀವು ಹೊರಗೆ ಊಟ ಮಾಡಿದ್ರೆ ನಿಮ್ಮ ಸಂಬಳದಲ್ಲಿ ಏನು ಉಳಿಯುತ್ತೆ .ತಿಂಗಳಿಗೆ ಎಷ್ಟು ಉಳಿಯುತ್ತೆ ಮನೆಗೆ ಕೊಡಲಿಕ್ಕೆ ಸಾರ್ “ ಎಂದೆ. ಅಷ್ಟು ಹೇಳುತ್ತಿದ್ದಂತೆ ಷಣ್ಮುಗಂ ಪೂರ್ತಿ ತಿಂಗಳಿನ ಆಯವ್ಯಯದ ವಿವರವನ್ನ ನನ್ನ ಮುಂದಿಟ್ಟ,

ಷಣ್ಮುಗಂ ಬೆಳಿಗ್ಗೆ ನಾಲ್ಕೂವರೆಗೆ ಎದ್ದು ಕೋಲಾರದಿಂದ ಹೊರಟು ಬಂಗಾರಪೇಟೆ ತನಕ ಹತ್ತು ರೂಪಾಯಿ ಕೊಟ್ಟು ಬಸ್ಸಿನಲ್ಲಿ ಬರುತ್ತಾನೆ. ಅಲ್ಲಿಂದ ಬೆಂಗಳೂರಿಗೆ ರೈಲಿನಲ್ಲಿ .ರೈಲಿಗೆ ನೂರಾ ಎಪ್ಪತ್ತಾರು ರೂಪಾಯಿ ಕೊಟ್ಟು ತಿಂಗಳ ಪಾಸ್ ಮಾಡಿಸಿ ಕೊಂಡಿದ್ದಾನೆ. ರೈಲ್ವೆ ಸ್ಟೇಶನ್ ನಿಂದ ಕಾಲೇಜ್ ಗೇ ಮತ್ತೆ ಹತ್ತು ರೂಪಾಯಿ ಕೊಟ್ಟು ಬಾಡಿಗೆ ಟೆಂಪೋದಲ್ಲಿ ಕಾಲೇಜ್ ತಲುಪಿಕೊಳ್ಳುತ್ತಾನೆ . ಮತ್ತೆ ತನ್ನ ಪಾಳಿಯ ಕೆಲಸ ಮುಗಿಸಿ ಸಂಜೆ ಕೋಲಾರಕ್ಕೆ ಅದೇ ಮಾರ್ಗದಲ್ಲಿ ಅಷ್ಟೇ ಖರ್ಚಿನಲ್ಲಿ ತಲುಪಿಕೊಳ್ಳುತ್ತಾನೆ .ಅಲ್ಲಿಗೆ ಒಂದು ತಿಂಗಳಿಗೆ ಷಣ್ಮುಗಂ ತನ್ನ ಪ್ರಯಾಣಕ್ಕೆ ಖರ್ಚು ಮಾಡುವುದು ಸುಮಾರು ಸಾವಿರದ ಐದು ನೂರು ರೂಪಾಯಿಗಳು . ಬಾಡಿಗೆ ಟೆಂಪೋದವರು ಕೆಲವೊಮ್ಮೆ ದುಡ್ಡು ತೆಗೆದುಕೊಳ್ಳುವುದಿಲ್ಲ ಪರಿಚಯದ ವಿಶ್ವಾಸದ ಮೇಲೆ. ಅಂಥ ಸಂದರ್ಭಗಳಲ್ಲಿ ಷಣ್ಮುಗಂ ಖರ್ಚು ಕೊಂಚ ಕಡಿಮೆಯಾಗುತ್ತೆ. ಈಗ ಮಧ್ಯಾಹ್ನ ಹೊರಗೆ ಊಟ ಮಾಡಬೇಕಾದ ಪರಿಸ್ಥಿತಿ. ಷಣ್ಮುಗಂ ಊಟಕ್ಕೆ ತೆಗೆದುಕೊಳ್ಳುವುದು ಹದಿನೈದು ರೂಪಾಯಿಯ ರೈಸ್ ಬಾತ್. ಅಲ್ಲಿಗೆ ಮತ್ತೊಂದು ಐದುನೂರು ರೂಪಾಯಿ ಸಿಗುವ ಮೂರೂವರೆ ಸಾವಿರದಲ್ಲಿ ಕಳೆದು ಹೋಯಿತು. ಅಲ್ಲಿಗೆ ಮನೆಯ ಸಲುವಾಗಿ ಉಳಿದದ್ದು ಕೇವಲ ಒಂದೂವರೆ ಸಾವಿರ.

ನಮ್ಮ ಕ್ಯಾಂಪಸ್ ಮ್ಯಾನೇಜರ್ ಗೆ ಹದಿನೈದು ಸಾವಿರ ಸಂಬಳ. ಆ ಸಂಬಳ ಆತನಿಗೆ ಲೆಕ್ಕಕ್ಕೇ ಇಲ್ಲ. ತುಂಬಾ ಶ್ರೀಮಂತ ಹಿನ್ನೆಲೆಯ ಮನುಷ್ಯ. ಟೈಮ್ ಪಾಸ್ ಸಲುವಾಗಿ ಕ್ಯಾಂಪಸ್ ಮ್ಯಾನೇಜರ್ ಕೆಲಸ. ಹತ್ತಾರು ಮನೆಗಳನ್ನ ಬಾಡಿಗೆಗೆ ಬಿಟ್ಟಿದ್ದಾನೆ.” ನಂಗೆ ಈ ಕೆಲಸದ ಅವಶ್ಯಕತೆನೇ ಇಲ್ಲ. ಸುಮ್ನೆ ಬರ್ತೀನಿ . ಎಂಭತ್ತು ಸಾವ್ರ ಕೇವಲ ಬಾಡಿಗೆನೇ ಪ್ರತಿ ತಿಂಗಳು ಬಂದು ಬೀಳುತ್ತೆ “ ಎಂದು ಸಿಕ್ಕ ಸಿಕ್ಕವರ ಬಳಿಯೆಲ್ಲಾ ಹೇಳಿ ಕೊಳ್ಳುತ್ತಾನೆ. ಅಂಥಾ ಮನುಷ್ಯ ಹಾಸ್ಟೆಲ್ ಮೆಸ್ಸ್ ನಲ್ಲಿ ಊಟಕ್ಕೆ ಕುಳಿತು ಊಟ ಕೇಳಲು ಬಂದ ಷಣ್ಮುಗಂ ಗೆ ಊಟ ಇಲ್ಲ ಎಂದು ಹೇಳಿ ಕಳಿಸುತ್ತಾನೆ. ಹಾಸ್ಟೆಲ್ ನಲ್ಲಿ ಪ್ರತಿನಿತ್ಯ ಬುಟ್ಟಿಗಟ್ಟಲೆ ಅಡುಗೆ ಹೆಚ್ಚಾಗಿ ಚೆಲ್ಲುತ್ತಾರೆ. ಹಾಗೆ ಚೆಲ್ಲುವುದರಲ್ಲಿ ನಮ್ಮ ಷಣ್ಮುಗಂ ಗೆ ಎರಡು ಮುಷ್ಟಿ ಊಟ ಕೊಟ್ಟಿದ್ದರೆ ಯಾರ ಗಂಟು ಕರಗುತ್ತಿತ್ತು? ಇಂಥ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವೇ ಸಿಗುವುದಿಲ್ಲ. “ ರೂಲ್ಸು ರೂಲ್ಸು” ಎಂದು ಹೊಟ್ಟೆ ತುಂಬಿದ ಮಂದಿ ಕೈತೊಳೆದು ಕೊಂಡುಬಿಡುತ್ತಾರೆ .

ಹಾಸ್ಟೆಲ್ ಬಿಡುವ ಸ್ವಲ್ಪ ದಿನಗಳ ಮೊದಲು ಒಂದು ಸಂಜೆ ಕ್ಯಾಂಟೀನ್ ಬಳಿ ಕುಳಿತಿದ್ದೆ. ಷಣ್ಮುಗಂ ಸರಸರನೆ ಹೆಜ್ಜೆ ಹಾಕುತ್ತಾ ನನ್ನ ಬಳಿ ಬಂದ . “ ಸರ್ ನನ್ನ ಸಂಬಳ ಒಂದು ಸಾವ್ರ ಜಾಸ್ತಿ ಆಯ್ತು .ಈಗ ನಮ್ಮನ್ನ ಕಾಲೇಜ್ ನವರೇ ಪರ್ಮನೆಂಟ್ ಕೆಲ್ಸಕ್ಕೆ ತಗೊಂಡ್ರು. ಇನ್ನು ಏಜೆನ್ಸಿ ಕಡೆಯಿಂದ ಕೆಲಸ ಮಾಡೋದಿಲ್ಲ. ಈಗ ನಾವೂ ಕಾಲೇಜ್ ಎಂಪ್ಲಾಯೀಸು. ಊಟ ಕೂಡ ಇಲ್ಲೇ ಸಿಗುತ್ತೆ “ ಎಂದ. ಷಣ್ಮುಗಂ ಖುಷಿ ಕಂಡು ನನಗೂ ಖುಷಿಯಾಯ್ತು . ಕೊನೆಗೆ ಹಾಸ್ಟೆಲ್ ಬಿಡುವಾಗ ಷಣ್ಮುಗಂ ಬೇಡ ಬೇಡವೆಂದರೂ ಹಾಸ್ಟೆಲ್ ಗೇಟ್ ನಿಂದ ಕ್ಯಾಂಪಸ್ ಗೇಟ್ ತನಕ ನನ್ನ ಲಗೇಜ್ ಗಳನ್ನ ಹೊತ್ತುಕೊಂಡು ಬಂದು ಆಟೋಕ್ಕೆ ತುಂಬಲು ನೆರವಾದ. ಆಟೋ ಕ್ಯಾಂಪಸ್ ಗೇಟ್ ದಾಟುವಾಗ ಆಟೋ ಒಳಕ್ಕೆ ಬಗ್ಗಿ “ ಬರ್ತಾ ಇರಿ ಸರ್.ನಾನು ಇನ್ನು ಇಲ್ಲೇ ಇರ್ತೀನಿ. “ ಎಂದು ಅವನ ಎಂದಿನ ಶುದ್ಧ ಮಂದಹಾಸದೊಡನೆ ಬೀಳ್ಕೊಟ್ಟ .ನನಗೆ ಮಾತೇ ಹೊರಡಲಿಲ್ಲ .

ಸದ್ಯ ಮಾರ್ಕ್ಸ್ ಕಾರ್ಡ್ ತರಲಿಕ್ಕೆ ಮತ್ತೆ ಕಾಲೇಜ್ ಗೆ ಹೋಗಬೇಕು. ಮತ್ತೆ ಷಣ್ಮುಗಂ ಸಿಗುತ್ತಾನೆ. ಅವನ ಜೊತೆ ಸ್ವಲ್ಪ ಹೊತ್ತು ಹರಟಿ ಬರಬೇಕು :) :) .

Wednesday, November 17, 2010

ಕನ್ನಡ ಮತ್ತು ನಾನು ...ನವೆಂಬರ್ ತಿಂಗಳ ನೆಪದಲ್ಲಿ ಒಂದಿಷ್ಟು

‘ಕನ್ನಡದ ಮತ್ತು ನಾನು’ ಎಂಬ ವಿಷಯದ ಬಗ್ಗೆ ಬರೆಯ ಹೊರಟರೆ ಅದು ನಮ್ಮ ಬಗ್ಗೆ ನಾವೇ ಬರೆದುಕೊಂಡಂತೆ. ಹೇಗೆ ಮಾಡಿದರೂ ಕನ್ನಡವನ್ನ ನಮ್ಮಿಂದ ಪ್ರತ್ಯೇಕಿಸಿ ಚಿತ್ರಿಸಲು ಸಾಧ್ಯವೇ ಇಲ್ಲ. ಕನ್ನಡ ಆತ್ಮಗತ. ಆತ್ಮವನ್ನ ಹೊತ್ತು ಮೆರೆಸುವ ತೇರುಗಳು ನಾವು . ಪ್ರತ್ಯೇಕಿಸಲು ಹೊರಟರೆ ಆತ್ಮ ಮತ್ತು ತೇರು ಎರಡೂ ಅನಾಥ.

ನನ್ನ ಹಿರಿಯರು ಹವ್ಯಕ ಕನ್ನಡ ಮಾತನಾಡುವ ಹವ್ಯಕರು. ಹಾಗಾಗಿ ನಾನು ‘ಹುಟ್ಟು ಕನ್ನಡಿಗ’. ’ಹುಟ್ಟು ಕನ್ನಡಿಗ’ನಾಗಿ ಕೊಂಚ ಅತಿರೇಕದಲ್ಲಿ ಹೇಳಹೊರಟರೆ ಬಹುಶಃ ನಾನು ಅಮ್ಮನ ಹೊಟ್ಟೆಯಲ್ಲಿದ್ದಾಗ ಕಾಲು ಝಾಡಿಸಿದ್ದು ಕನ್ನಡದಲ್ಲಿಯೇ. ಅತಿರೇಕದಿಂದ ಕೊಂಚ ಕೆಳಗೆ ಭಾವುಕತೆಯಲ್ಲಿ ಹೇಳುವುದಾದರೆ ನಾನು ಮೊದಲು ಅತ್ತಿದ್ದು, ನಕ್ಕಿದ್ದು , ನಿದ್ರೆಗೆ ಜಾರಿದ್ದು. ಮೊದ ಮೊದಲು ಕನಸು ಕಂಡಿದ್ದು , ಯಾವುದೋ ದುಃಸ್ವಪ್ನಕ್ಕೆ ಬೆಚ್ಚಿ ಬೆವರಾಗಿದ್ದು, ಹಸಿವಿಗೆ ಈಡಾಗಿದ್ದು , ಹೊಟ್ಟೆ ತುಂಬಿ ತೃಪ್ತಿಯಾಗಿ ತೇಗಿದ್ದು ಹೀಗೆ ಎಲ್ಲವೂ ಕನ್ನಡದಲ್ಲಿಯೇ . ಅತಿರೇಕ ಹಾಗು ಭಾವುಕತೆಯ ಆಚೆ ಕೆಲವಷ್ಟು ಸಂಗತಿಗಳನ್ನು ಸಹಜವಾಗಿ ಹೇಳುತ್ತೇನೆ .ನೀವೂ ಅಷ್ಟೇ ಸಹಜವಾಗಿ ಕೇಳಿಸಿಕೊಳ್ಳಿ. ನಮ್ಮ ಮನೆಯಲ್ಲಿ ಎಲ್ಲರೂ ಸ್ನಾನ ಮಾಡುವುದು ‘ಬಚ್ಚಲ ಮನೆ’ ಯಲ್ಲಿ. ಅಲ್ಲಿ ‘ಮಗ್’ ಬದಲು ಚೊಂಬು ಇರುತ್ತೆ. ನೀರು ಕಾಯಿಸಲಿಕ್ಕೆ ಹಂಡೆ. ಹಂಡೆ ಕೆಳಗೆ ಬೆಂಕಿಯಿರುತ್ತೆ .ಬೆಂಕಿ ಇದ್ದಲ್ಲಿ ಈ ‘ವಾಟರ್ ಹೀಟರ್ ‘ಎಲ್ಲ ಬೇಕಾಗಲ್ಲ. .ಹಾಗಾಗಿ ನೀರು ಹೀಟ್ ಆಗೋಲ್ಲ. ಬೆಂಕಿ ಇದೆಯಲ್ಲ.ನೀರು ಕಾಯುತ್ತೆ. ಬಚ್ಚಲ ಆಚೆ ಹಿತ್ತಿಲಿದೆ.ಅದರಾಚೆ ‘ಪಾಯಿ ಖಾನೆ ‘.

ಹೀಗೆ ‘ಹುಟ್ಟು ಕನ್ನಡಿಗ’ನಾಗಿ ಹುಟ್ಟಿ ಕನ್ನಡವನ್ನೇ ಉಂಡುಟ್ಟು ಬೆಳೆದರೂ ಹುಟ್ಟಿ ತುಂಬ ವರುಷದ ತನಕ ನನ್ನ ಸುತ್ತಲಿದ್ದ ಕನ್ನಡದ ಅಸ್ತಿತ್ವ ನನಗೆ ಕಾಣಲೇ ಇಲ್ಲ. ಅಸಲಿಗೆ ‘ಕನ್ನಡ ‘ಎಂದು ಪ್ರತ್ಯೇಕವಾಗಿ ಯೋಚಿಸುವ .ಚಿಂತಿಸುವ ಪ್ರಸಂಗವೇ ನನಗೆ ಎದುರಾಗಲಿಲ್ಲ. ಏಳನೆ ತರಗತಿ ಮುಗಿಯುವ ತನಕ ಊರಲ್ಲೇ ಇದ್ದೆ ಮನೆಯವರ ಜೊತೆ. ಕೊನೆಗೆ ಎಂಟಕ್ಕೆ ದೂರದ ಕಾಸರಗೋಡಿನ ಸಮೀಪದ ಅಳಿಕೆಗೆ ಮನೆಯವರು ನನ್ನನ್ನು ವಿದ್ಯಾಭ್ಯಾಸದ ಕಾರಣಕ್ಕೆ ಕಳುಹಿಸಿಕೊಟ್ಟರು. ಅಲ್ಲಿದ್ದುದು ಇಂಗ್ಲಿಷ್ ಶಾಲೆ. ಆಗ ನನಗೆ ಕನ್ನಡದ ಬಗ್ಗೆ ಯೋಚಿಸುವ .ಚಿಂತಿಸುವ ಪ್ರಸಂಗ ಎದುರಾಯಿತು. ಹಾಗೆ ಅನಿವಾರ್ಯವಾಗಿ ‘ಹುಟ್ಟು ಕನ್ನಡಿಗನ ‘ ಒಳಗೆ ಮೊದಲ ಬಾರಿಗೆ ಕನ್ನಡಕ್ಕಾಗಿ ಮಿಡಿಯುವ ‘ಕನ್ನಡದ ಕಟ್ಟಾಳು ‘ ಹುಟ್ಟಿಕೊಂಡ.

‘ ಇಂಗ್ಲಿಷ್ ಮೀಡಿಯಂ ‘ ಶಾಲೆ. ಅಪ್ಪಿ ತಪ್ಪಿ ಕೆಮ್ಮಿದರೂ ,ಸೀನಿದರೂ ಅದು ಇಂಗ್ಲಿಷ್ ನಲ್ಲಿಯೇ ಆಗಿ ಹೋಗಬೇಕು. ಕ್ಲಾಸಿನಲ್ಲಿ ಸೈಲೆಂಟ್ ಆಗಿ ಮೌನವಾಗಿರಬೇಕು. ಇಂಗ್ಲಿಷ್ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಿದರೆ ಫೈನು. ಒಂದೇ ಒಂದು ಬೇರೆ ಭಾಷೆಯ ಪದ ಮಾತಾದರೂ ಅದಕ್ಕೆ ಐವತ್ತು ರೂಪಾಯಿ ಫೈನ್ ಕಟ್ಟಬೇಕು. ಇಂಗ್ಲಿಷ್ ಬಿಟ್ಟು ಉಳಿದ ಎಲ್ಲ ಭಾಷೆಗಳ ಪ್ರತಿಯೊಂದು ಪದಕ್ಕೂ ಅಲ್ಲಿ ಬೆಲೆಯಿತ್ತು. ಸುಮ್ಮನೆ ಫೈನ್ ಕಟ್ಟಿಸಿಕೊಂಡು ಬಿಡುತ್ತಿರಲಿಲ್ಲ. ಜೊತೆ ಜೊತೆಗೆ ವಿಪರೀತ ಶಿಕ್ಷೆ. ನಾನು ಲೆಕ್ಕವಿಲ್ಲದಷ್ಟು ಬಾರಿ ಫೈನ್ ಕಟ್ಟಿದ್ದೆ. ಪ್ರತಿಬಾರಿ ನಾನಾಡಿದ ಕನ್ನಡ ಪದಗಳಿಗೆ ಫೈನ್ ಕಟ್ಟಿ ವಿಪರೀತ ಶಿಕ್ಷೆಗಳಿಗೆ ಈಡಾಗುವಾಗ ನನಗೆ ಊರು ನೆನಪಾಗುತ್ತಿತ್ತು. ಮನೆಯವರು ನೆನಪಾಗುತ್ತಿದ್ದರು.ನಾನು ಕಳೆದುಕೊಂಡಿದ್ದರ ಬೆಲೆ ಫೈನ್ ಕಟ್ಟುವಾಗ ತಿಳಿಯುತ್ತಿತ್ತು.

ಕೊನೆಕೊನೆಗೆ ಈ ಫೈನು ,ಈ ಶಿಕ್ಷೆ ಎಲ್ಲವೂ ರೂಢಿಯಾಗಿ ಹೋಯಿತು. ಅಲ್ಲಿ ನನ್ನೊಡನೆ ಕನ್ನಡ ಗೆಳೆಯರ ಪುಟ್ಟ ಬಳಗವಿತ್ತು. ನಾವು ಕದ್ದು ಮುಚ್ಚಿ ಕನ್ನಡ ಮಾತಾಡಿ ಖುಷಿ ಪಡುತ್ತಿದ್ದೆವು.ಖುಷಿ ಕನ್ನಡ ಬಳಸಿದ್ದಕ್ಕಲ್ಲ . ಕದ್ದು ಮುಚ್ಚಿ ಕನ್ನಡ ಬಳಸಿ ಶಾಲೆಯ ನಿಯಮವನ್ನ ಧಿಕ್ಕರಿಸಿದ್ದಕ್ಕೆ. ಉಳಿದವರ ಕಣ್ಣಲ್ಲಿ ನಾವು ಕ್ರಾಂತಿಕಾರಿಗಳು. ಭಗತ್ ಸಿಂಗ್ ಗು ನಮಗೂ ಆಗ ಅಂಥ ವ್ಯತ್ಯಾಸವೇ ಇರಲಿಲ್ಲ. ಕಾಸರಗೋಡಿನ ಸಮೀಪವಿದ್ದ ಶಾಲೆಯದು.ಹಾಗಾಗಿ ನಾವು ಸ್ವಯಂ ಘೋಷಿತ ಗಡಿನಾಡ ಕ್ರಾಂತಿಕಾರಿಗಳು.

ಹಾಗೆ ಒಂದು ತೀರ ಸಂಕಷ್ಟದಾಯಕ ಸನ್ನಿವೇಶದಲ್ಲಿ ಇಂಗ್ಲಿಷ್ ಮೇಲಿನ ದ್ವೇಷಕ್ಕೆ ಪ್ರತೀಕಾರವಾಗಿ ನನ್ನಲ್ಲಿ ಕನ್ನಡ ಪ್ರೀತಿ ಹುಟ್ಟಿಕೊಂಡಿತು. ಮುಂದೆ ಕನ್ನಡ ಸಾಹಿತ್ಯವನ್ನ ಓದುವ ಹವ್ಯಾಸ ಜೊತೆಯಾಯಿತು. ಹವ್ಯಾಸ ಹುಚ್ಚು ಎಂಬಲ್ಲಿ ಬಂದು ನಿಂತಿತು. ಕನ್ನಡದ ಮೇಲಿನ ಪ್ರೀತಿಯಲ್ಲದ ಪ್ರೀತಿ ನಿಜವಾದ ಪ್ರೀತಿಯಾಯಿತು.

ಈಗ ಸದ್ಯ ಎಂ.ಬಿ.ಎ ಮುಗಿಸಿ ಕೆಲಸ ಹಿಡಿದು ಬೆಂಗಳೂರಿನಲ್ಲಿ ಇದ್ದೇನೆ. ಮನೆಯವರೆಲ್ಲ ಊರಲ್ಲೇ ಇದ್ದಾರಲ್ಲ.ಹಾಗಾಗಿ ಅನಿವಾರ್ಯವಾಗಿ ‘ ರೂಮ್ ‘ ಮಾಡಿದ್ದೇನೆ. ರೂಮ್ ಸ್ವಂತದ್ದಲ್ಲ .ಹಾಗಾಗಿ ‘ರೆಂಟ್ ‘ ಕಟ್ಟುತ್ತೇನೆ. ಇಲ್ಲಿ ಬಚ್ಚಲು ಮನೆಯ ಬದಲು ‘ಬಾತ್ ರೂಮ್ ‘ಇದೆ.ನೀರು ಕಾಯಿಸಲಿಕ್ಕೆ ‘ ಕಾಯಿಲ್ ‘ಇದೆ. ಹಂಡೆ ಬದಲು ಬಕೆಟ್ಟು. ಟೆರೆಸ್ ಮೇಲಿರುವ ರೂಮು.ಹಾಗಾಗಿ ಹಿತ್ತಿಲು ಇಲ್ಲ. ಹಿತ್ತಿಲೇ ಇಲ್ಲ ಎಂದ ಮೇಲೆ ಊರಿನಲ್ಲಿರುವಂತೆ ಹಿತ್ತಿಲಾಚೆ ‘ಪಾಯಿ ಖಾನೆ ‘ಯ ಪ್ರಶ್ನೆಯೇ ಇಲ್ಲ. ಪಾಯಿ ಖಾನೆಯ ಬದಲು’ ಟಾಯ್ಲೆಟ್ ‘ ಇದೆ. ಟಾಯ್ಲೆಟ್ಟು ಹಾಗು ಬಾತ್ರೂಮು ಸಯಾಮಿ ಅವಳಿಗಳು. ಒಂದು ಬಾಗಿಲು ತೆರೆದರೆ ಎರಡಕ್ಕೂ ತಲುಪಿಕೊಳ್ಳಬಹುದು. ಈ ಇಂಗ್ಲಿಷಿನ ಬಕೆಟ್ಟು. ವಾಟರ್ ಹೀಟರ್ ಕಾಯ್ಲು, ಬಾತ್ರೂಮು ,ಟಾಯ್ಲೆಟ್ಟು , ಇವೆಲ್ಲದರ ಜೊತೆ ನಾನಿನ್ನೂ ಕನ್ನಡಿಗನಾಗೇ ಇದ್ದೇನೆ. ಸ್ನಾನದ ಅಲೌಕಿಕವಾದ ಖುಷಿಯ ಘಳಿಗೆಯಲ್ಲಿ ಕನ್ನಡ ಹಾಡನ್ನೇ ಹಾಡುತ್ತೇನೆ. ಇದು ನವೆಂಬರ್ ತಿಂಗಳಾದ್ದರಿಂದ ಬಾತ್ ರೂಮ್ ಹೊರಗೂ ದನಿ ಎತ್ತರಿಸಿ ಹಾಡುತ್ತೇನೆ. ಈ ತಿಂಗಳು ಪೂರ್ತಿ ಕಡ್ಡಾಯವಾಗಿ ನಾಡು ನುಡಿಯ ಕುರಿತಾದ ಹಾಡುಗಳಷ್ಟೇ. ಆಮೇಲೆ ಒಂದು ವರ್ಷ ಚಿಂತೆಯಿಲ್ಲ. ನಿರಾಳವಾಗಿ ಬಾಯಿಗೆ ಬಂದ ಹಾಡು ಹೇಳಿಕೊಂಡು ಇರಬಹುದು.

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು.ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಕರುನಾಡ ತಾಯಿ ಸದಾ ಚಿನ್ಮಯಿ. ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ. ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ.

ಕೊನೆಯದಾಗಿ ರತ್ನನ್ ಪದಗಳನ್ನ ಅನುಕರಿಸಿ ನಾಲ್ಕು ಸಾಲು ಹೇಳಿ ನನ್ನ ಮಾತು ಮುಗಿಸ್ತೇನೆ .

ಓ ದೇವ್ರೇ

ಮುಂದಿನ್ ಜಲ್ಮ ಅನ್ನೋದ್ ಇದ್ರೆ

ನನ್ ಹುಟ್ಸು ಅಂತಾ ಕೇಳಾಕಿಲ್ಲ.

ಹುಟ್ಸು ಬಿಡು ದೇವ್ರಾಣೆ ಬೇಜಾರಿಲ್ಲ

ಆದ್ರೆ ದೇವ್ರು

ಇಂಗ್ಲೀಸ್ ಮಾತ್ರ ಕನ್ನಡ್ವಾಗೆ ಹುಟ್ಲಿ

ಕನ್ನಡಾ ಕನ್ನಡ್ ವಾಗೆ ಇರ್ಲಿ

Thursday, November 11, 2010

ಕಸದಿಂದ ರಸ. ಹೊಸಾ ಹುಚ್ಚು.

ಅರ್ಥವಿರದ ಒಂದು ಪ್ಯಾರಾ .....

[ ಈಜೀವದ ತಂತಿಯಲಿ ನೀನು ನಾನು ಯಾಕಾಗಿ ಬದುಕು ಹೇಳು ಬೇಗ ಬಾ ಗೆಳತಿ ನಿನ್ನಯ ನಾನು ನಿನ್ನೊಳಗೆ ಯಾಕಾಗಿ ಏನಾಗಿ ಹೋದೆ ಹೇಳು ಬಾ ಬಾರೆ ಬೇಗ ಬಂದು ನನ್ನಯ ತೀರದ ದಾಹವ ತೀರಿಸು ನಿನ್ನೊಳು ಇಲ್ಲದ ನನ್ನೊಳು ಯಾಕೆ ಬಂದು ಹೀಗೆ ಕಾಡುವೆ ಸುಮ್ಮನೆ ಆ ಕಡೆ ತೀರದ ತೀರದ ದ್ಸಾಹ ಆಲೊಂದು ಖಾಲಿ ಮುಗಿಲು ಸುತ್ತ ಸುರಿಯುತಿದೆ ಬಿಸಿಲಿನ ಬೆವರು/ಯಾಕಾಗಿ ಬಂದೆ ನೀನಿ ಸುರಿವ ಮಳೆಯಾಗಿ.ಬೆವರೇ ಹಿತವಾಗಿತ್ತು.ಆಕಡೆ ಬೇರೊಂದು ಬಗೆಯ ಸೊಬಗು ಸೆಳೆಯುತಿದೆ ಎನ್ನ ಬಿಡದೆ ಕಾಡಿ ನೂರೊಂದು ನೆನಪುಗಳ ಹಾಗೆ ಬಿಟ್ಟು ಬಿಡುವೆನು ನಿನ್ನ ಹೀಗೆ ಬಂದು ಹೋದ ಬಯಕೆಯಂತೆ ಬೇಗ ಬಂದುಬಿಡು ಬಾ ಬೇಗಾ ಬಂದೆನ್ನ ತೀರಿಸು ಸಾಲ ನಿನ್ನ ಬೇಗ ಬಾರದೆ ಹೇಳು ಏತಕೆ ಈಗ ಹೀಗೆ ಬಂದಿಹೆ ತೋಚದೆ ಆದ ತಪ್ಪಿನಂತೆ ]

ಇಡಿಯಾಗಿ ಓದಿಕೊಂಡರೆ ಈ ಮೇಲಿನ ಸಾಲುಗಳಲ್ಲಿ ಅರ್ಥವೇ ಇಲ್ಲ. ವ್ಯಾಕರಣ ,ಕಾಗುಣಿತ ಇಲ್ಲಿ ಲೆಕ್ಕಕ್ಕೇ ಇಲ್ಲ. ಹುಡುಕಿ ಹೆಕ್ಕಿಕೊಂಡರೆ ನಾಲ್ಕಾರು ಹೊಳೆಯುವ ಪದಗಳ ಗುಚ್ಛ ಸಿಕ್ಕುತ್ತವೆ.ಅವುಗಳನ್ನು ಎತ್ತಿಕೊಂಡು ಪೋಣಿಸಿದರೆ ನಿಮ್ಮ ಗ್ರಹಿಕೆಗೂ ನಿಲುಕದ ಅಚ್ಚರಿಯ ಕವನವೋ ,ಇಲ್ಲವೇ ಬರಹದ ಒಂದು ಪ್ಯಾರಾವೋ ಸೃಷ್ಟಿಯಾಗುತ್ತೆ.

ಇದರ ಹಿಂದಿನ ಕಥೆಯಿಷ್ಟೇ.ಒಂದು ದಿನ ಖಾಲಿ ಕುಳಿತ ಸಮಯದಲ್ಲಿ ಸುಮ್ಮನೆ ಕೀ ಬೋರ್ಡ್ ಮೇಲೆ ಬೆರಳಾಡಿಸುತ್ತ ಏನೇನೋ ಟೈಪ್ ಮಾಡುತ್ತಾ ಹೋದೆ. ಹೀಗೆ ಟೈಪ್ ಮಾಡಿದ್ದನ್ನು ಒಮ್ಮೆ ಓದಿದಾಗ ಕೆಲವು ಖುಷಿ ಕೊಡುವ ಸಾಲುಗಳು ನನಗೆ ಸಿಕ್ಕವು. ನೀವೂ ಇದನ್ನು ಪ್ರಯತ್ನಿಸಿ.ನಿಮಗೆ ಯಾವುದೋ ಒಂದು ವಿಷಯ ಕಾಡುತ್ತಿರಬಹುದು ಅಥವಾ ಕಾಡದೆಯೂ ಇರಬಹುದು.ಇಲ್ಲಿ ವಿಷಯ ಇದ್ದರೂ ಆದೀತು. ಇಲ್ಲದಿದ್ದರೂ ಆದೀತು. ಆದರೆ ಟೈಪ್ ಮಾಡಲು ಶುರು ಮಾಡಿದ ಮೇಲೆ ಯೋಚಿಸಬೇಡಿ.ನಡುವೆ ಎಲ್ಲೂ ನಿಲ್ಲಿಸಬೇಡಿ.ಸುಮ್ಮನೆ ಸ್ವಲ್ಪ ಹೊತ್ತು ಬೆರಳು ಓಡಿದಂತೆ ಟೈಪ್ ಮಾಡುತ್ತಾ ಹೋಗಿ. ಕೊನೆಗೊಮ್ಮೆ ನೀವು ಟೈಪ್ ಮಾಡಿದ್ದನ್ನು ಓದುತ್ತಾ ಬನ್ನಿ. ನಿಮಗೆ ಕೆಲವು ಅಪರೂಪದ ಸಾಲುಗಳು ಸಿಕ್ಕುತ್ತವೆ.

ಉದಾಹರಣೆಗೆ ನಾನು ಈ ಅರ್ಥವಿರದೇ ಟೈಪ್ ಮಾಡಿದ ಪ್ಯಾರದಲ್ಲಿ ಹೆಕ್ಕಿಕೊಂಡ ಕೆಲವು ಸಾಲುಗಳನ್ನು ನಿಮ್ಮೆದುರು ಇಡುತ್ತೇನೆ .ನೋಡಿ.

ಆ ಕಡೆ ತೀರದ ತೀರದ ದಾಹ

ಅಲ್ಲೊಂದು ಖಾಲಿ ಮುಗಿಲು

ಸುತ್ತ ಸುರಿಯುತಿದೆ ಬಿಸಿಲಿನ ಬೆವರು

ಯಾಕಾಗಿ ಬಂದೆ ನೀನು ಸುರಿವ ಮಳೆಯಾಗಿ

ಬೆವರೇ ಹಿತವಾಗಿತ್ತು

ಆ ಕಡೆ ಬೇರೊಂದು ಬಗೆಯ ಸೊಬಗು

ಸೆಳೆಯುತಿದೆ ಎನ್ನ ಬಿಡದೆ ಕಾಡಿ ನೂರೊಂದು ನೆನಪುಗಳ ಹಾಗೆ

ಬಿಟ್ಟು ಬಿಡುವೆನು ನಿನ್ನ

ಹೀಗೆ ಬಂದು ಹೋದ ಬಯಕೆಯಂತೆ

ಇವಿಷ್ಟು ಬಿಡಿಬಿಡಿಯಾಗಿ ಹೆಕ್ಕಿಕೊಂಡ ಪದಗಳಾದರೂ ಓದುವಾಗ ಎಲ್ಲವೂ ಸೇರಿ ಒಂದು ಪುಟ್ಟ ಕವನದಂತೆ ಕಾಣುತ್ತೆ .ಹೀಗೆ ಸಿಕ್ಕ ಸಾಲುಗಳನ್ನು ಇದ್ದ ಹಾಗೆಯೇ ಇಟ್ಟುಕೊಳ್ಳಬಹುದು .ಅಥವಾ ಸ್ವಲ್ಪ ಪಾಲಿಶ್ ಮಾಡಿ ಇನ್ನೆಲ್ಲೋ ಬಳಸಿಕೊಳ್ಳಬಹುದು.ಸಿಕ್ಕ ಎಲ್ಲವನ್ನೂ ಒಟ್ಟಾಗಿ ಬಳಸಿಕೊಳ್ಳಬಹುದು .ಅಥವಾ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ವಿಭಿನ್ನ ಸಂದರ್ಭಗಳಲ್ಲಿ ಬಳಸಬಹುದು .


ಕಸವೋ ರಸವೋ ಎಂಬ ಗೊಂದಲದಲ್ಲಿ ಒಂದಿಷ್ಟು ...

ಇನ್ನೂ ಕೆಲವಷ್ಟು ಸಾಲುಗಳನ್ನು ಹೆಕ್ಕಿ ಕೊಂಡಿದ್ದೇನೆ. ಇವುಗಳಿಗೆ ಅರ್ಥವೇನೆಂದು ನನಗೂ ಗೊತ್ತಿಲ್ಲ.ಅರ್ಥ ಸಿಕ್ಕರೆ ನಿಮ್ಮ ಪುಣ್ಯ.ಅವು ಹೀಗಿವೆ.

‘ನಿನ್ನೊಳು ಇಲ್ಲದ ನನ್ನೊಳು ಯಾಕೆ ಬಂದು ಹೀಗೆ ಕಾಡುವೆ ಸುಮ್ಮನೆ ‘

‘ನಿನ್ನಯ ನಾನು ನಿನ್ನೊಳಗೆ ಯಾಕಾಗಿ ಏನಾಗಿ ಹೋದೆ ಹೇಳು’

‘ಈಗ ಹೀಗೆ ಬಂದಿಹೆ ತೋಚದೆ ಆದ ತಪ್ಪಿನಂತೆ’

ಈಗೀಗ ನನ್ನ ಏಕಾಂತಕ್ಕೆ ,ಖಾಲಿ ಕುಳಿತ ಕ್ಷಣಗಳಿಗೆ ಹೀಗೆ ಹುಚ್ಚುಚ್ಚಾಗಿ ಟೈಪ್ ಮಾಡುವುದು , ನಂತರ ಈ ಕಸದಲ್ಲಿ ರಸ ಹುಡುಕುವುದು ಹವ್ಯಾಸವಾಗಿಹೋಗಿದೆ. ನೀವೂ ಪ್ರಯತ್ನಿಸಿ ಒಮ್ಮೆ :) :) .

Sunday, November 7, 2010

ಹೊಸಾ ಬ್ಲಾಗು.ಅದಕ್ಕೊಂದು ಮುನ್ನುಡಿ.

ಹಳೇ ನಿಲ್ಧಾಣದಿಂದ ಹೊಸಾ ಪ್ರಯಾಣ ..

ಹೊಸಬನಾದ ನಾನು ಹಳೆಯದನ್ನೆಲ್ಲ ಗುಡಿಸಿ ಸಾರಿಸಿ ಬ್ಲಾಗ್ ಅಂಗಳವನ್ನೀಗ ಒಪ್ಪ ಮಾಡಿದ್ದೇನೆ. ಬ್ಲಾಗ್ ಮಾತ್ರವಲ್ಲ ನನ್ನನ್ನೂ ಕೂಡ. ಕನಸುಗಳನ್ನೇ ಚುಕ್ಕಿ ಮಾಡಿ ಒಂದೊಂದಾಗಿ ಇಡುತ್ತ ಬರುತ್ತೇನೆ. ಚುಕ್ಕಿಗಳನ್ನು ಸೇರಿಸಲು ಪ್ರೀತಿಯೆಂಬ ಸಾಲಿನ ನಂಟು. ಅಚ್ಚರಿ –ಬೆರಗುಗಳೇ ಬಣ್ಣ . ಮುಂದೆ ಅದು ರಂಗವಲ್ಲಿಯಾದರೆ ಖುಷಿ.ಇಲ್ಲದಿದ್ದರೆ ಹೇಗೂ ಮತ್ತೆ ಗುಡಿಸಿ ಒಪ್ಪ ಮಾಡಲು ಪೊರಕೆ ಇದ್ದೇ ಇದೆ.

ಅತ್ತಿಗೆಯ ನೆರಳಿನಲ್ಲಿ ಸೂರು ಕಟ್ಟಿಕೊಂಡವನು ನಾನು.ಒಂದೂವರೆ ವರುಷದ ಕೆಳಗೆ ಅನಾಮಿಕ ನಾನು.ಅಲೆಮಾರಿ ನಾನು.ಈಗ ಮತ್ತೆ ಅದೇ ಭಾವದಲ್ಲಿ ನಿಮ್ಮೆದುರು ಬರುತ್ತಿದ್ದೇನೆ. ಎಲ್ಲವನ್ನೂ ಹೊಸದಾಗಿ ಕಾಣಲು ಪ್ರಯತ್ನಿಸುತ್ತೇನೆ. ನನ್ನ ಕಣ್ಣ ಮುಂದಿರುವುದು ನಾನು ಮತ್ತು ನನ್ನ ನಾಳೆ ಗಳು ಮಾತ್ರ.

ಆಗ ನಮ್ಮ ‘ಗುಡ್ ನೈಟ್ ‘ಕವನದ ಹೀರೋ ಪ್ರಣಯರಾಜ ಪುಟ್ಟನಿದ್ದ.ಪುಟ್ಟನ ಜೊತೆಗೆ ಪುಟ್ಟಿ. ಅವರ ಪ್ರೀತಿ ನನ್ನ ಕವನವಾಗುತ್ತಿತ್ತು. ಉಳಿದ ಇತರೆ ಬರಹಗಳಿಗೆ ಮತ್ತದೇ ಪುಟ್ಟ ಪುಟ್ಟಿಯರ ಪ್ರೀತಿ ಸ್ಫೂರ್ತಿಯಾಗುತ್ತಿತ್ತು. ಆಗ ಎಲ್ಲವೂ ಸೊಗಸಿತ್ತು. ಈಗ ಮತ್ತೆ ಆ ದಿನಗಳೇ ಬರುವ ನಾಳೆಗಳಾಗಲಿ.

‘ಗುಡ್ ನೈಟ್ ಕವನ’. ‘ಆ ಒಂದು ದಿನದ ಡೈರಿ ‘, ‘ಜಗತ್ತಿಗೊಂದು ಪತ್ರ ‘ ,’ ಬಾಲವನ’ , ‘ಹಾಸ್ಟೆಲ್ ಚಿತ್ರಗಳು ‘ , ನಡುವೆ ಅಲ್ಲೊಂದು ಇಲ್ಲೊಂದು ಇತರೆ ಕವನಗಳು ; ಇವಿಷ್ಟು ನನ್ನ ಬ್ಲಾಗಿನ ಮೆನು ಪಟ್ಟಿ. ಪ್ರೀತಿ ಮತ್ತು ಖುಷಿ ಬ್ಲಾಗಿನ ಬೀಜಮಂತ್ರ.ಪ್ರೀತಿ ಮತ್ತು ಖುಷಿಯ ಆಚೆ ಉಳಿದ ಸಂಗತಿಗಳು ಏನೇ ಇದ್ದರೂ ಅವು ವರ್ಜ್ಯ . ಬರೆಯುವ ಕೈಗಳು ನನ್ನವು.ಆದರೆ ಬರಹ ನನ್ನೊಳಗಿನ ಅಲೆಮಾರಿಯದ್ದು. ಈ ಸೂತ್ರದಲ್ಲಿ ಹೊಸ ಬ್ಲಾಗು ಸಾಗುತ್ತೆ. ನನ್ನದೆಲ್ಲವನ್ನೂ ಬ್ಲಾಗ್ ಅಂಗಳದಲ್ಲಿ ಹರವಿಟ್ಟು ಕೂರುವುದಿಲ್ಲ. ನಾನಲ್ಲದ ನನ್ನನ್ನು ಮಾತ್ರ ಮೆರೆಸುತ್ತೇನೆ.

ಹೊಸತಾಗಿ ಶುರುವಾದ ಬ್ಲಾಗು ‘ಗುಡ್ ನೈಟ್ ‘ ಕವನದಿಂದಲೇ ಶುರುವಾಗಲಿ .

ಗುಡ್ ನೈಟ್ ಕವನ : ೧


ಜಗವೇ ಒಂದು ಮಗುವಾಗಿದೆ

ತಣ್ಣನೆ ಇರುಳ ಮಡಿಲ ತೊಟ್ಟಿಲಲಿ

ಬೀಸೋ ಗಾಳಿಯಲಿ ಅತ್ತಿತ್ತ ತೂಗಿ.

ರಾತ್ರಿಯ ಸೊಗಸೇ ಹಾಗೆ ಪುಟ್ಟಿ

ನಿನ್ನಂತೆ .ನಿನ್ನ ಒಲವಂತೆ.

ರಾತ್ರಿಯಲಿ ಬರುವ ಶಾಂತಿಯ ದಿವ್ಯ ಚುಂಬನಕೆ

ಅದೆಂಥ ಮಾಯೆಯ ಮುಸುಕು !

ಜಗವೆಲ್ಲ ಚಿತ್ರವಾಗಿ

ಜನರೆಲ್ಲ ಉಸಿರಿದ್ದೂ ಶವವಾಗಿ

ಯೋಗನಿದ್ರೆಯಲಿ

ತನುಮನ ಹಗುರಾಗೋ ಯೋಗ .

ಇರುಳಲ್ಲ ಇದು

ಮಹಾ ಮೌನರಾಗ ....