Saturday, March 12, 2011

ಒಂದು ಸ್ಯಾಂಪಲ್ .............................

“ ಯಾರೋ ಹತ್ತಿರ ಬರುತ್ತಿದ್ದಾರೆ .ಹತ್ತಿರವಾದಷ್ಟೂ ಬೃಹದಾಕಾರವಾಗಿ ಬೆಳೆಯುತ್ತಿದ್ದಾರೆ. ಮುಖ ಸರಿಯಾಗಿ ಕಾಣಿಸುತ್ತಿಲ್ಲ. ಭಯ ವಿಪರೀತವಾಗಿ ಎಂಥದೋ ಒಂದು ಬಗೆಯ ಸಂಕಟ. ಓಡಿಹೋಗೋಣವೆಂದುಕೊಂಡರೆ ಸಾಧ್ಯವಾಗುತ್ತಿಲ್ಲ .ಯಾವುದೋ ಶಕ್ತಿಯ ಅಧೀನದಲ್ಲಿ ನಿಶ್ಚಲನಾದ ಅನುಭವ. ಸಹಾಯಕ್ಕೆ ಯಾರನ್ನೋ ಕೂಗುತ್ತಿದ್ದೇನೆ. ಕೂಗುತ್ತಿದ್ದರೂ ಧ್ವನಿಯೇ ಹೊರಡುತ್ತಿಲ್ಲ. ಈಗ ಆ ಆಕೃತಿ ಎದೆಯ ಮೇಲೇರಿ ಕುಳಿತು ಕತ್ತು ಹಿಚುಕುತ್ತಿದೆ. ಇನ್ನೇನು ಉಸಿರು ನಿಂತೇ ಹೋಯಿತು ಎನ್ನುವಾಗ ಎಚ್ಚರವಾಯಿತು. ಈಗ ಮೈಯೆಲ್ಲಾ ಹೂ ಹಗುರ. ಸಾವಿನ ನಂತರ ಇರಬಹುದಾದ ಶಾಂತಿಯನ್ನ ತಾಕಿ ಬಂದ ಅನುಭವ. ಬೆಳಗ್ಗಿನ ಐದರ ಜಾವದಲ್ಲಿ ವಿಧ್ಯಾಧರ ಎದ್ದು ಕುಳಿತ. ವರುಷ ಇಪ್ಪತ್ತಾದರೂ ಒಮ್ಮೆಯೂ ಹೀಗಾಗಿರಲಿಲ್ಲ. ಹೀಗಾಗಲು ಕಾರಣವೇನೆಂದು ಯೋಚನೆಗೆ ಬಿದ್ದ. ನಿದ್ರೆ ಮತ್ತೆ ಕಣ್ಣಿಗೆ ಹತ್ತಲಿಲ್ಲ. ಸುಮ್ಮನೆ ಬೋರಲಾಗಿ ಕಣ್ಣು ಬಿಟ್ಟುಕೊಂಡು ನಿಚ್ಚಳ ಬೆಳಗಿಗೆ ಎದುರು ನೋಡುತ್ತಾ ಮಲಗಿಯೇ ಇದ್ದ.

‘ ಏಯ್ ವಿದ್ಯಾಧರ ,ಘಂಟೆ ಯೋಳಾತು. ತಿಂಡಿಗೆ ಬಾರಾ. ಲೇಟ್ ಆಗಿ ಬಂದ್ರೆ ಬಿಸಿ ದೋಸೆ ಸಿಗಲ್ಲೇ ‘ ಎಂದು ಅಮ್ಮ ಅಡುಗೆ ಮನೆಯಿಂದಲೇ ಕೂಗುತ್ತಿದ್ದರು. ವಿದ್ಯಾಧರ ಕಣ್ಣು ಬಿಟ್ಟುಕೊಂಡು ಮಲಗಿದ್ದ. ಹಾಗಾಗಿ ಅಮ್ಮನ ಕೂಗು ಕಿವಿಗೆ ತಲುಪುವಲ್ಲಿ ತಡವಾಗಲಿಲ್ಲ. ಜಗುಲಿಯಲ್ಲಿ ಮಲಗಿದ್ದ ವಿದ್ಯಾಧರ ಎದ್ದು ಮುಖ ತೊಳೆವ ಶಾಸ್ತ್ರ ಮುಗಿಸಿ ಅಡುಗೆಮನೆಗೆ ಬರುವಷ್ಟರಲ್ಲಿ ಅವನಿಗಾಗಿ ಅಮ್ಮ ಮಾಡಿದ ಬಿಸಿ ದೋಸೆ ಹೊಗೆ ಹೊಗೆಯಾಗಿ ,ಕಾಯಿ ಚಟ್ನಿಯೊಂದಿಗೆ ಪ್ಲೇಟಿನಲ್ಲಿ ಕಾಯುತ್ತಿತ್ತು. ಮೆತ್ತನೆಯ ದೊಸೆಯನ್ನು ಮೃದುವಾಗಿ ಹರಿದು ಚಟ್ನಿಯೊಂದಿಗೆ ಮೆಲ್ಲಗೆ ವಿದ್ಯಾಧರ ಅನ್ಯಮನಸ್ಕನಾಗಿ ಬೆಳಿಗ್ಗೆ ಐದರ ಜಾವದಲ್ಲಿ ಕಂಡ ಕನಸಿನ ಬಗ್ಗೆಯೇ ಯೋಚಿಸುತ್ತಾ ಬಾಯಿಗಿಡುತ್ತಾ ಕುಳಿತ. ಅದೇ ಯೋಚನೆಯಲ್ಲಿಯೇ ಬಿಸಿಬಿಸಿಯಾಗಿದ್ದ ಚಹಾ ಎತ್ತಿಕೊಂಡು ತುಟಿಗಿಟ್ಟು ಹೀರಿದ.. ಹಾಗೆ ತುಟಿಗಿಟ್ಟ ಚಹಾ ತುಟಿಯಿಂದ ಹಿಡಿದು ನಾಲಿಗೆಯನ್ನೂ ಒಳಗೊಂಡು ಗಂಟಲಿನ ಶುರುವಿನ ತನಕ ಬಿಸಿ ಮುಟ್ಟಿಸಿತ್ತು. ಚಹಾ ಲೋಟ ಕೈಜಾರಿ ಗೋವಾ ಚಡ್ಡಿಯ ಅಂಚನ್ನು ಚಹಾ ಒದ್ದೆಮಾಡಿ, ಅದರಾಚೆಯ ಬೆತ್ತಲೆ ತೊಡೆಯನ್ನು ತಾಕಿ ಬಿಸಿ ಮುಟ್ಟಿಸಿ ಅಂಟಾಗಿಹೋಯಿತು. ' ಎಂಥಾ ಹುಡುಗ್ರೆನ. ಇಷ್ಟೆಲ್ಲಾ ಪರಧ್ಯಾನತೆ ಒಳ್ಳೇದಲ್ಲ. ಸ್ವಲ್ಪ ನೋಡ್ಕಂಡು ಕುಡಿಯದಲ್ದ ‘ ಎಂದು ಅಮ್ಮ ಕಿಡಿಕಿಡಿಯಾದರು ಕೊಂಚ ಸಿಟ್ಟು ಕೊಂಚ ಕಾಳಜಿಯಲ್ಲಿ. ' ಅಮ್ಮ, ಈವತ್ತು ಬೆಳಿಗ್ಗೆ ಎಂತ ಆತು ಗೊತ್ತಿದ್ದ ? ‘ ಎಂದು ವಿದ್ಯಾಧರ ಅಮ್ಮನೆಡೆ ನೋಡಿದ.’ ಎಂತ ಆತಾ ಮಾರಾಯ ಬೆಳ ಬೆಳಿಗ್ಗೆ ನಿಂಗೆ? ಅಂಥಾ ಕೆಲಸ ಎಂತ ಮಾಡಕ್ಕೆ ಹೋಗಿದ್ದೆ ? ಎದ್ದಿದ್ದೇ ಬೆಳಿಗ್ಗೆ ಯೋಳು ಘಂಟಿಗೆ .ಹ್ಮಂ ಸರಿ ಹೇಳು ' ಎಂದು ಹೇಳುತ್ತ ಅಮ್ಮ ಕಾವಲಿ ಮೇಲೆ ಮುಂದಿನ ದೋಸೆಗೆ ಹಿಟ್ಟು ಸುರಿದಳು. ' ಅಮ್ಮ .ಎಂತ ಆತು ಅಂದ್ರೆ ‘ ಎಂದು ಶುರುಮಾಡಿ ' ಹಿಂಗಿಂಗೆ ಆತು.ಇದಕ್ಕೆ ಎಂಥ ಮಾಡವು ‘ ಎಂದು ಹೇಳಿ ವಿದ್ಯಾಧರ ಐದರ ಜಾವದ ವಿದ್ಯಮಾನದ ವರದಿ ಒಪ್ಪಿಸಿ ಮುಗಿಸಿ ಮತ್ತೆ ಅಮ್ಮನ ಮುಖ ನೋಡುತ್ತಾ ಕುಳಿತ. ಅಮ್ಮನಿಂದ ಕೊಂಚ ಗಾಬರಿ ಹಾಗು ಕೊಂಚ ಅನುಕಂಪ ವಿದ್ಯಾಧರನ ನಿರೀಕ್ಷೆಯಾಗಿತ್ತು.

‘ ಹಂಗೆಲ್ಲ ಆಗ್ತಪ ಮನುಷ್ಯ ಜನ್ಮ ಅಂದ್ಮೇಲೆ. ಎಂತೋ ಕೆಟ್ಟ ಕನಸು ಆಗಿಕ್ಕು. ಅದ್ಕೆಲ್ಲ ನಿಂಗ ಹುಡುಗ್ರು ತಲೆಬಿಸಿ ಮಾಡ್ಕಂಡು ಕೂರದಲ್ಲ. ಹುಡುಗ್ರು ತಿನ್ಕಂಡು ಉಂಡ್ಕಂಡು ಅರಾಮ್ ಇರವು . ನಿಂಗೆ ಇನ್ನೊಂದು ದೋಸೆ ಬೇಕಾ? ಬೇಕಾದ್ರೆ ಮಾಡ್ಕೊಡ್ತಿ .ಇಲ್ಲೇ ಅಂದ್ರೆ ಕಾವಲಿ ತೆಗಿತಿ “ ಎಂದು ಹೇಳಿದ ಅಮ್ಮ ವಿದ್ಯಾಧರನ ನಿರೀಕ್ಷೆಗೆ ನೀರು ಹಾಕಿದ್ದರು.' ಬ್ಯಾಡ ಸಾಕು.ಇನ್ಮೇಲೆ ನಿನ್ನತ್ರೆ ಎಂತನ್ನೂ ಹೇಳಲ್ಲೇ ' ಎಂದು ಸಿಟ್ಟುಮಾಡಿಕೊಂಡು ವಿದ್ಯಾಧರ ಎದ್ದ. ' ಸ್ವಲ್ಪ ಚಟ್ನಿ ಹಂಗೇ ಇದ್ದಲ ಬಟ್ಟಲಲ್ಲಿ .ವೇಸ್ಟ್ ಮಾಡಲಾಗ.ಒಂದು ದೋಸೆ ಹಾಕ್ತಿ.ಚಟ್ನಿ ಖಾಲಿ ಮಾಡು ' ಎಂದು ಬಡಬಡಿಸಿದಳು .ವಿದ್ಯಾಧರ ತನ್ನ ಪಾಡಿಗೆ ತಾನು ಅಮ್ಮನ ಮಾತುಗಳನ್ನ ಕಿವಿಗೆ ಹಾಕಿಕೊಳ್ಳದೆ ಹೋಗಿಯೇಬಿಟ್ಟ. ಅಮ್ಮ ಅವಳ ಪಾಡಿಗೆ ಅವಳು ಒಲೆಯ ಮೇಲಿಂದ ಕಾವಲಿ ತೆಗೆದು ನೀರು ಸುರಿದಳು. ಕಾವಲಿ ಚುರು ಚುರುಗುಟ್ಟಿ ಕೊನೆಗೆ ಬುಸ್ಸೆಂದು ಹೊಗೆಯಾಯಿತು.
..........................................................


“ಒಯ್ ಸುಬ್ಬಣ್ಣ .ಬಾರಾ ಇಲ್ಲಿ . ಸ್ವಲ್ಪ ಬಂದು ಹೋಗ ಇಲ್ಲಿ. ನೋಡಿದ್ರು ನೋಡದೆ ಇದ್ದಂಗೆ ಹೋಗ್ತ್ಯಲೋ ಮಾರಾಯ. ದೊಡ್ ಮನಶ ಆಗೊಜ್ಯಪ ಈಗಿತ್ಲಾಗಿ.ಕಾಣದೆ ಅಪರೂಪ ‘ ಎಂದು ಮನೆಯ ಅಂಗಳದಲ್ಲಿದ್ದ ವಿದ್ಯಾಧರನ ಅಪ್ಪ ಸತ್ಯಣ್ಣ ರಸ್ತೆಯಲ್ಲಿ ಹೋಗುತ್ತಿದ್ದ ಸುಬ್ಬಣ್ಣನನ್ನ ಧ್ವನಿ ಎತ್ತರಿಸಿ ಕರೆದ. ಧ್ವನಿ ಬಂದಕಡೆ ತಿರುಗಿ ನೋಡಿದ ಸುಬ್ಬಣ್ಣ ಒಮ್ಮೆ ದೇಶಾವರಿಯ ನಗೆ ನಕ್ಕು , ಬಾಯಲ್ಲಿದ್ದ ಎಲೆ ಅಡಿಕೆಯನ್ನು ಸತ್ಯಣ್ಣನ ಮನೆಯ ಎದುರಿನ ಗಟಾರಕ್ಕೆ ಉಗಿದು, ಕೈಯಲ್ಲಿದ್ದ ಕೊಡೆಯನ್ನ ಮಡಚಿ ಎಡ ಕಂಕುಳಲ್ಲಿ ಇಟ್ಟುಕೊಂಡು, ಬಲಗೈಯಿಂದ ಬಾಯಿ ಒರೆಸಿಕೊಂಡು ,ಕೊನೆಗೆ ಅದೇ ಕೈಯನ್ನು ತನ್ನ ಬಿಳಿ ಪಂಚೆಗೆ ಒರೆಸಿಕೊಳ್ಳುತ್ತಾ ಸತ್ಯಣ್ಣನ ಬಳಿ ಬಂದ ....

4 comments:

ಸುಧೇಶ್ ಶೆಟ್ಟಿ said...

Gautham avarE...

idu kathe antha andukondiddEne.... munduvarisutteeri thane :)

chennagidhe praaramba :)

ಸಾಗರದಾಚೆಯ ಇಂಚರ said...

tumbaa olleya aarambha
bega mundina bhaaga barali
bareyuva shaili tumba hidisitu

ಗೌತಮ್ ಹೆಗಡೆ said...

@ ಸುಧೇಶ್

ಇದು ಬ್ಲಾಗ್ ನಲ್ಲಿ ಮುಂದುವರೆಯುವುದಿಲ್ಲ. ಇದು ಸುಮ್ಮನೆ ನನ್ನ ಖುಷಿಗೆ ಬರೆದುಕೊಂಡದ್ದು.ಇದು ಕಥೆಯಲ್ಲ. ಸ್ವಲ್ಪ ದೊಡ್ಡದು :)

ಥ್ಯಾಂಕ್ಸ್ :)

ಗೌತಮ್ ಹೆಗಡೆ said...

@ಗುರುಮೂರ್ತಿ ಹೆಗ್ಡೆ

ಥ್ಯಾಂಕ್ಸ್ ಪ್ರತಿಕ್ರಿಯೆ ನೀಡಿದ್ದಕ್ಕೆ :)