ಈಗೊಂದು ಮೂರು-ನಾಲ್ಕು ತಿಂಗಳ ಹಿಂದೆ ಸುಶ್ರುತಣ್ಣ 'ಫಾರ್ಮ್ ವಿಲ್ಲೆ'ಆಟದ ಬಗ್ಗೆ ಒಂದು ಲೇಖನ ಹಾಕಿದ್ದ ಅವನ 'ಮೌನಗಾಳ' ಬ್ಲಾಗಿನಲ್ಲಿ.ಲೇಖನ ಎಂದಿನಂತೆ ಚೆನ್ನಾಗಿತ್ತು.ಆದರೆ ಆ ದಿನ ನನ್ನನ್ನು ತುಂಬಾ ಕಾಡಿ , ಆತ ಬರೆದ ವಿಷಯದ ಬಗ್ಗೆ ಒಂದು ಕವನ ಹುಟ್ಟಲು ಕಾರಣವಾಗಿದ್ದು ಅವನ ಲೇಖನಕ್ಕೆ ಸುನಾಥ್ ಸರ್ ಕೊಟ್ಟ ಸುಂದರ ಅಭಿಪ್ರಾಯ ಹಾಗು ಆ ಅಭಿಪ್ರಾಯಕ್ಕೆ ಉತ್ತರವಾಗಿ ಸುಶ್ರುತಣ್ಣ ಕೊಟ್ಟ ಅಷ್ಟೇ ಸುಂದರವಾದ ಪ್ರತಿಕ್ರಿಯೆ.ಅವರಿಬ್ಬರ ಸಾಲುಗಳಿಗೆ ನನ್ನದೂ ಒಂದಿಷ್ಟು ಸಾಲುಗಳನ್ನ ಸೇರಿಸಿ ಆಗ ಒಂದು ಕವನ ಬರೆದೆ.ಒಂದರ್ಥದಲ್ಲಿ ಇದು ಬರಿಯ ಕವನವಲ್ಲ.ಸುಶ್ರುತಣ್ಣ ಬರೆದ ಗದ್ಯದ ಭಾವಾನುವಾದ ,ಕವನದ ರೂಪದಲ್ಲಿ.ಆ ಲೇಖನದ ಲಿಂಕ್ ನನಗೆ ಇಲ್ಲಿ ಕೊಡಲಾಗುತ್ತಿಲ್ಲ .ಕ್ಷಮಿಸಿ.ಏಕೆಂದರೆ ಲಿಂಕ್ ಕೊಡುವುದು ಹೇಗೆಂದು ನನಗೆ ತಿಳಿದಿಲ್ಲ.ನಾನು ಕೊಂಚ ದಡ್ಡ ಇಂಥ ವಿಷಯಗಳಲ್ಲಿ:):) ನೀವೇ ಸಾಧ್ಯವಾದರೆ ಹುಡುಕಿಕೊಂಡು ಹೋಗಿ ಓದಿ :):)
ಫಾರ್ಮ್ ವಿಲ್ಲೆ ಕವನ..........
ಉಳುಮೆ ಮಾಡಿದ್ದು
ಫಸಲು ಪಡೆದದ್ದು
ಕುರಿ ಕೋಳಿ ದನ ಸಾಕಿದ್ದು
ಎಲ್ಲ ಎಲ್ಲ ನಿಜ.
ನಿಜಕೂ ನಿಜವಲ್ಲದು
ಸತ್ಯದಂಥ ಸುಳ್ಳು
ವಾಸ್ತವದ ವರ್ಣಮಯ ನಕಲು ....
ವಿಧ ವಿಧದ ತರಕಾರಿ
ಭತ್ತ ರಾಗಿ ಜೋಳ
ತರಹೇವಾರಿ ಧಾನ್ಯಗಳು
ನೂರೆಂಟು ಬಗೆ ಹಣ್ಣುಗಳು .
ಅಸಲಿಗೆ
ಪರದೆ ಮುಂದಿನ ಮಂದಿಗೆ
ಕಾಯಾಗಿ ಹಣ್ಣೋ
ಹಣ್ಣಾಗಿ ಕಾಯೋ ?
ಹೂವರಳಿ ಮೊಗ್ಗೋ
ಮೊಗ್ಗರಳಿ ಹೂವೋ ?
ಎಂಬುದೇ ತಿಳಿದಿಲ್ಲ.
ನೆಲದಾಳದ ಬೇರು ಕಾಣದಿಲ್ಲಿ
ಕಂಡಷ್ಟೇ ನಿಜ
ಮಿಥ್ಯೆಯಲಿ ನಡೆವ ಆಟವಿದು
ಭ್ರಮೆಗೆ ಕೊನೆಯಿಲ್ಲ.
ಮನೆಯೆದುರೇ ತೋಟ .
ಒಂದಿನವೂ ಹೋದ ನೆನಪಿಲ್ಲ.
ಅಪ್ಪ ಮಾಡಿಟ್ಟ ಗದ್ದೆ
ಅದು ಎಲ್ಲಿದೆಯೋ ಗೊತ್ತಿಲ್ಲ.
ಅಮ್ಮ ಕೊಟ್ಟ ಕೆನೆಹಾಲು
ಕುಡಿದು ಗೊತ್ತು
ಕೊಟ್ಟಿಗೆಗು ನಮಗೂ ಸಂಬಂಧವೇ ಇಲ್ಲ.
ಬದುಕು ತಣ್ಣಗೆ ಅಪ್ಪ ಕಟ್ಟಿಕೊಟ್ಟ ಸೂರಡಿ .
ಬೆಳೆ, ಬೆಲೆ ಕೈಕೊಟ್ಟು
ಅಪ್ಪ ಆಕಾಶ ನೋಡಿದ್ದು
ಅಮ್ಮನ ಒಡವೆ ಅಡವಿಟ್ಟದ್ದು
ಪರದೆಯಾಚೆಯ ಸಂಗತಿಗಳು.
ನಮಗದು ತಿಳಿದೇ ಇಲ್ಲ.
ಮಳೆಯಿರದ
ಬರದ ಸುಳಿವೂ ಇರದ
ಮಾಯಾ ತಾಣದಿ ನಡೆದಿದೆ
ಕೃಷಿಯೆಂಬ ಮೋಜು .
ದೇವರು ನಿಜಕ್ಕೂ ಗ್ರೇಟ್ !
ಸದ್ಯ ಇಲ್ಲಿಯಾದರೂ
ಆತ್ಮಹತ್ಯೆಯ ಆಯ್ಕೆಯಿಲ್ಲ ....