ಮೊನ್ನೆ ಮೊನ್ನೆ ಬ್ಲಾಗ್ ಸಹವಾಸ ಸಾಕೆಂದು ಹೋಗಿದ್ದೆ . ಈಗ ಅದೇ ನಾನು ಮತ್ತೆ ಶೀಘ್ರ ಬರುತ್ತೇನೆ ಎನ್ನುತ್ತಿದ್ದೇನೆ. ಸಾಕು ಹೇಳಿದ್ದಕ್ಕೂ ಸಕಾರಣವಿತ್ತು. ಬರುತ್ತೇನೆ ಎನ್ನುವುದಕ್ಕೂ ಸಕಾರಣ ಇದ್ದೇ ಇದೆ .
ಬ್ಲಾಗ್ ಸಹವಾಸ ಸಾಕೆಂದು ಹೇಳಿ ಹೋಗುವುದೇನೋ ಹೋಗಿಬಿಟ್ಟೆ .ಹಾಗೆ ಹೋದ ಘಳಿಗೆಯಲ್ಲಿ ಹೊಸ ಹವ್ಯಾಸ ಕೈಹಿಡಿಯಿತು.ಬ್ಲಾಗ್ ಲೋಕದ ಹಳೆಯ ತಲೆಗಳ ಮೊದಮೊದಲ ಪ್ರಾರಂಭದ ಪೋಸ್ಟ್ ಗಳನ್ನ ಓದುವ ಹವ್ಯಾಸ . ಹಾಗೆ ನನಗೆ ಪರಿಚಯದ ಹಿರೀಕರ ಬ್ಲಾಗ್ ಗಳನ್ನ ಸಾಲಾಗಿ ಓದಿ ಮುಗಿಸುತ್ತ ಬಂದೆ . ಓದಿನ ಹಾದಿಯಲ್ಲಿ ಸಣ್ಣ ಝರಿ ಹೊಳೆಯಾಗಿ ನಂತರ ಅಗಾಧ ನದಿಯಾಗಿ ಹರಡಿಕೊಳ್ಳುವ ಬೆಳವಣಿಗೆಯನ್ನ ಕೆಲವರ ಬ್ಲಾಗ್ ಬೆಳೆದು ಬಂದ ಪರಿಯಲ್ಲಿ ಕಂಡಿದ್ದೇನೆ. ಕೆಲವು ಧೀರ್ಘ ಅಜ್ಞಾತವಾಸವನ್ನ , ಚುಟುಕು ವಿದಾಯವನ್ನ , ಬರಗಾಲದ ದಿನಗಳನ್ನ , ಸಮೃದ್ಧಿಯ ಉಪಮೆಯನ್ನ ಅಲ್ಲಲ್ಲಿ ಕಂಡಿದ್ದೇನೆ.ಓದುತ್ತ ಓದುತ್ತ ಹೊಸ ವಿಚಾರಗಳಿಗೆ ತೆರೆದುಕೊಂಡಿದ್ದೇನೆ . ಈ ವಿದಾಯ ಎಂಬೋ ಪದವನ್ನು ನಾನು ಯಾಕೆ ಆ ದಿನ ಬಳಸಿದೆ ಎಂದು ಯೋಚಿಸಿದ್ದೇನೆ. ನನ್ನ ಈ ಅರೆ ಬೆಂದ ವಯಸ್ಸಿಗೆ , ಕ್ಷಣಕ್ಕೊಮ್ಮೆ ಬದಲಾಗೋ ಈ ಹರೆಯದ ರೀತಿಗೆ ನನ್ನೊಳಗೆ ನಕ್ಕಿದ್ದೇನೆ . ಈ ವಿದಾಯಗಳು , ಸಾಕೆ ಸಾಕು ಎಂಬುದೆಲ್ಲ ಎಷ್ಟು ಅರ್ಥಹೀನ ಎಂಬ ಅರಿವನ್ನ ತಂದುಕೊಂಡಿದ್ದೇನೆ .:):)
ಇವತ್ತು ಜ್ಯೋತಿ ಅಕ್ಕನ ಬ್ಲಾಗ್ ಮೂಲಕ್ಕೆ ಹೋಗಿದ್ದೆ. ಅಕ್ಕನ ಮೊದಮೊದಲ ಬರಹಗಳು ಈ ದಿನ ಎನ್ನ ಪಾಲಿಗೆ 'ಗೀತೋಪದೇಶ 'ವಾಯಿತು . ಅದಕ್ಕೆ ಮತ್ತೆ ನನ್ನೆಲ್ಲ ನಿರಾಸಕ್ತಿಯನ್ನ, ವೈರಾಗ್ಯವನ್ನ ಬದಿಗಿಟ್ಟು ರಣರಂಗಕ್ಕೆ ( ಬ್ಲಾಗ್ ರಂಗಕ್ಕೆ) ಮರುಳುವ ಮನಸ್ಸು ಮಾಡಿದ್ದೇನೆ . ಇನ್ನು ಮೇಲೆ ಪೆಕರು ಪೆಕರಾಗಿ ವಿದಾಯದ ಮಾತು ಹೇಳುವ ಮಳ್ಳುತನ ಮಾಡಲಾರೆ. :):)
ಅಂದ ಹಾಗೆ ಹೊಸ ವಿಚಾರಗಳು ಹುಟ್ಟುತಿವೆ . ಎಲ್ಲವನ್ನೂ ನೋಟ್ ಮಾಡಿಕೊಳ್ಳುತ್ತಿದ್ದೇನೆ . ಪರೀಕ್ಷೆ ಮುಗಿದ ಮೇಲೆ ಅವಕ್ಕೆಲ್ಲ ಒಂದು ಗತಿ ಕಾಣಿಸುತ್ತೇನೆ :)
ಮತ್ತೆ ನಿಮ್ಮೆದುರು ಮತ್ತೊಂದು ವಿಚಾರವನ್ನ ಅಗತ್ಯವಾಗಿ ಹೇಳಬೇಕಿದೆ . ಬ್ಲಾಗ್ ಲೋಕದಲ್ಲಿ ಕೆಲವೊಮ್ಮೆ ಬರಹಕ್ಕಿಂತ ಬರಹದ ಕುರಿತಾದ ಕಾಮೆಂಟ್ಸ್ ಭಲೇ ಮಜವಾಗಿರುತ್ತೆ . ಕೆಲವರ ಕಾಮೆಂಟ್ ತುಂಬಾ ಆಳವಾಗಿ ಯೋಚನೆಗೆ ಹಚ್ಚುತ್ತವೆ . ಈಗ ಇಂಥ ಅಪರೂಪದ ಕಾಮೆಂಟ್ಸ್ ಗಳನ್ನ ಒಟ್ಟು ಮಾಡಿ ಅದಕ್ಕೆಂದೇ ಒಂದು ಬ್ಲಾಗ್ ಯಾಕೆ ಮಾಡಬಾರದು ಎಂಬ ಯೋಚನೆ ನನ್ನದು . ನಿಮ್ಮ ಅಭಿಪ್ರಾಯ ತಿಳಿಸಿ :):) ಮತ್ತೆ ಸಿಗೋಣ .....
Thursday, November 26, 2009
Saturday, November 21, 2009
ಧನ್ಯವಾದ. ಹೋಗಿ ಬರುತ್ತೇನೆ.
ಕ್ಷಮಿಸಿ . ಬ್ಲಾಗ್ ಲೋಕಕ್ಕೆ ವಿದಾಯ ಹೇಳುತ್ತಿದ್ದೇನೆ.
ಬರೆಯುವ ಉಮ್ಮೇದಿ ಯಾಕೋ ಕಾಣೆಯಾಗಿದೆ ಬ್ಲಾಗಿನಲ್ಲಿ .ಹಾಡು , ಕವನ ಎಂದುಕೊಂಡು ನನ್ನದೇ ಪ್ರಪಂಚದಲ್ಲಿ ಇದ್ದೆ. ಬ್ಲಾಗ್ ಲೋಕಕ್ಕೆ ಬಂದೆ. ಹಳೆಯ ಕವನಗಳನ್ನೇ ಬ್ಲಾಗ್ ಗೆ ತುಂಬಿಸಿದೆ . ಹೊಸ ಹಾಡು ಹೊಸ ಕವನಗಳು ಹುಟ್ಟುವುದು ನಿಂತು ಹೋದವು. ಯಾಕೋ ಈ ಬ್ಲಾಗ್ ಸಂತೆಯಲ್ಲಿ ನಾನು ಕಳೆದು ಹೋಗುತ್ತಿದ್ದೇನೆಂದು ಅನ್ನಿಸುತ್ತ ಇದೆ. ಮೊದಮೊದಲು ನಾನು ಬರೆಯುತ್ತಿದ್ದೆ. ಯಾರೂ ಓದುವವರು ಇರಲಿಲ್ಲ. ಬ್ಲಾಗ್ ಗೆ ಹೆಜ್ಜೆಯಿಟ್ಟೆ .ಓದಲು ನೀವು ಸಿಕ್ಕಿರಿ. ಓದುವವರು ಸಿಕ್ಕರೆಂದು ನನ್ನ ಹಳೆಯ ಸರಕನ್ನೆಲ್ಲಾ ನಿಮ್ಮೆದುರು ಬಿಕರಿ ಮಾಡುತ್ತಾ ಬಂದೆ ನೀವು ಕೊಟ್ಟ ಪ್ರೋತ್ಸಾಹದ , ಬೆಂಬಲದ ಬೆಲೆಗೆ. ಅಲ್ಲಿಗೆ ನನ್ನ ಬೆಳವಣಿಗೆ ನಿಂತು ಹೋಯಿತು. ನನ್ನ ಖುಷಿಗೆ ನನ್ನ ಪಾಡಿಗೆ ನಾನು ಬರೆದು ಕೊಂಡಿದ್ದೆ . ಈಗೀಗ ನಾನು ಬರೆಯಬೇಕು ಎನುವುದಕ್ಕಿಂತ ಬೇರೆಯವರು ಓದಲಿ ಎನ್ನುವುದೇ ನನಗೆ ಮುಖ್ಯವಾಗಿಬಿಟ್ಟಿದೆ. ಹೊಸತು ಏನೂ ಹುಟ್ಟುತ್ತಿಲ್ಲ. ಇಲ್ಲಿತನಕ ಬ್ಲಾಗಿನಲ್ಲಿ ನೀವು ಬಹುತೇಕ ಕಂಡಿದ್ದು ಯಾವುದೊ ಹಳೆಯ ನನ್ನನ್ನು. ಹೊಸತು ನಾನು ತೆರೆದು ಕೊಳ್ಳಲೇ ಇಲ್ಲ . ಹೀಗೆ ಈ ಹಳೆಯ ಜಡ್ದಿನಲಿ ಹಾಯಾಗಿದ್ದು ಬಿಟ್ಟರೆ ನಾನು ಖಾಲಿಯಾಗುವ ದಿನ ದೂರಿಲ್ಲ.
ಬರೆಯುವ ಉಮ್ಮೇದಿ ಯಾಕೋ ಕಾಣೆಯಾಗಿದೆ ಬ್ಲಾಗಿನಲ್ಲಿ .ಹಾಡು , ಕವನ ಎಂದುಕೊಂಡು ನನ್ನದೇ ಪ್ರಪಂಚದಲ್ಲಿ ಇದ್ದೆ. ಬ್ಲಾಗ್ ಲೋಕಕ್ಕೆ ಬಂದೆ. ಹಳೆಯ ಕವನಗಳನ್ನೇ ಬ್ಲಾಗ್ ಗೆ ತುಂಬಿಸಿದೆ . ಹೊಸ ಹಾಡು ಹೊಸ ಕವನಗಳು ಹುಟ್ಟುವುದು ನಿಂತು ಹೋದವು. ಯಾಕೋ ಈ ಬ್ಲಾಗ್ ಸಂತೆಯಲ್ಲಿ ನಾನು ಕಳೆದು ಹೋಗುತ್ತಿದ್ದೇನೆಂದು ಅನ್ನಿಸುತ್ತ ಇದೆ. ಮೊದಮೊದಲು ನಾನು ಬರೆಯುತ್ತಿದ್ದೆ. ಯಾರೂ ಓದುವವರು ಇರಲಿಲ್ಲ. ಬ್ಲಾಗ್ ಗೆ ಹೆಜ್ಜೆಯಿಟ್ಟೆ .ಓದಲು ನೀವು ಸಿಕ್ಕಿರಿ. ಓದುವವರು ಸಿಕ್ಕರೆಂದು ನನ್ನ ಹಳೆಯ ಸರಕನ್ನೆಲ್ಲಾ ನಿಮ್ಮೆದುರು ಬಿಕರಿ ಮಾಡುತ್ತಾ ಬಂದೆ ನೀವು ಕೊಟ್ಟ ಪ್ರೋತ್ಸಾಹದ , ಬೆಂಬಲದ ಬೆಲೆಗೆ. ಅಲ್ಲಿಗೆ ನನ್ನ ಬೆಳವಣಿಗೆ ನಿಂತು ಹೋಯಿತು. ನನ್ನ ಖುಷಿಗೆ ನನ್ನ ಪಾಡಿಗೆ ನಾನು ಬರೆದು ಕೊಂಡಿದ್ದೆ . ಈಗೀಗ ನಾನು ಬರೆಯಬೇಕು ಎನುವುದಕ್ಕಿಂತ ಬೇರೆಯವರು ಓದಲಿ ಎನ್ನುವುದೇ ನನಗೆ ಮುಖ್ಯವಾಗಿಬಿಟ್ಟಿದೆ. ಹೊಸತು ಏನೂ ಹುಟ್ಟುತ್ತಿಲ್ಲ. ಇಲ್ಲಿತನಕ ಬ್ಲಾಗಿನಲ್ಲಿ ನೀವು ಬಹುತೇಕ ಕಂಡಿದ್ದು ಯಾವುದೊ ಹಳೆಯ ನನ್ನನ್ನು. ಹೊಸತು ನಾನು ತೆರೆದು ಕೊಳ್ಳಲೇ ಇಲ್ಲ . ಹೀಗೆ ಈ ಹಳೆಯ ಜಡ್ದಿನಲಿ ಹಾಯಾಗಿದ್ದು ಬಿಟ್ಟರೆ ನಾನು ಖಾಲಿಯಾಗುವ ದಿನ ದೂರಿಲ್ಲ.
ಹೋಗೋ ಮುನ್ನ ನಿಮ್ಮನ್ನೆಲ್ಲ ನೆನೆಯದೆ ಹೇಗೆ ಹೋಗಲಿ? ಬ್ಲಾಗ್ ಗೆ ಬಂದು ನನ್ನನ್ನ ನಾನು ಕಳೆದುಕೊಂಡೆ. ಆದರೆ ನಿಮ್ಮನ್ನ , ನಿಮ್ಮಗಳ ಪ್ರೀತಿಯನ್ನ ದಂಡಿಯಾಗಿ ಎನ್ನದಾಗಿಸಿಕೊಂಡೆ. ಆ ಮಟ್ಟಿಗೆ ನಾನು ತೃಪ್ತ. ಈ ಅನಾಮಿಕ ಬ್ಲಾಗ್ ಲೋಕದಲ್ಲಿ ಕೆಲವು ಅಪರೂಪದ ನಂಟು ಎನ್ನ ಜೊತೆಯಾಗಿವೆ. ಎಲ್ಲೋ ದೂರ ಇದ್ದವರು ನೀವೆಲ್ಲ . ಈಗ ಮರೆಯಲಾರದಷ್ಟು ಹತ್ತಿರವಾಗಿದ್ದೀರಿ.
ನಾನು ಬ್ಲಾಗ್ ಗೆ ಬಂದಾಗಿನಿಂದ ನನ್ನ ಮೊದಲ ಕವನದಿಂದ ನನ್ನನ್ನು ಬೆನ್ನು ತಟ್ಟಿ ಪರದೇಸಿಯಾಗದಂತೆ ನೋಡಿಕೊಂಡಿದ್ದೀರಿ. ನಿಮ್ಮೆಲ್ಲರಿಗೂ ನಾನು ಚಿರ ಋಣಿ . ತುಂಬಾ ಖುಷಿಯಾಗುತ್ತೆ ನೀವು ಪ್ರತಿಬಾರಿ ಬೆನ್ನು ತಟ್ಟಿದ ಕ್ಷಣಗಳನ್ನ ನೆನೆಸಿಕೊಂಡರೆ. ನಿಮ್ಮ ಹಾರೈಕೆಗಳಿಗೆ ನಿಮ್ಮ ಪ್ರೋತ್ಸಾಹಕ್ಕೆ ಪ್ರತಿಯಾಗಿ ನನ್ನಲ್ಲಿ ಮಾತುಗಳೇ ಇಲ್ಲ . ಎಂಥೆಂಥವರು ಸಿಕ್ಕಿದ್ದೀರಿ ನೀವುಗಳು. ನನ್ನ ಮೊದಲ ಕವನದಿಂದ ನನ್ನ ಜೊತೆಗಿದ್ದು ಬೆಮ್ಬಲಿಸೋ ನನ್ನ ಜ್ಯೋತಕ್ಕ. ನಡುವೆ ಎಲ್ಲೋ ಪರಿಚಯವಾಗಿ ನಂತರದ ನನ್ನ ಬ್ಲಾಗ್ ಪ್ರಯಾಣದಲ್ಲಿ ನೆರಳಂತೆ ಇರುವ ಹಿರಿಯಜ್ಜನಂಥ ಸುನಾಥ್ ಸರ್ . ಸುಶ್ರುತಣ್ಣ , ವಿಕಾಸಣ್ಣ, ಗುರಣ್ಣ , ಲಕ್ಷ್ಮಿ ಅಕ್ಕ ,ಇಸ್ಮೈಲ್ ಸರ್ ,ವಿನಾಯಕ್ ಹೆಬ್ಬಾರ್ ,ರಂಜಿತಕ್ಕ, ಸುಪ್ತವರ್ಣ ಸರ್, ಸುಧೇಶ್ ಜಿ, ದಿಲೀಪಣ್ಣ, ಧರಿತ್ರಿ , ಗೀತಾ ಗಣಪತಿ , ವಾಣಿ ಅವರು ,ಜ್ಯೋತಿ ಶೀಗೆ ಪಾಲ್ , ದಿನೇಶ್ ಸರ್ , ಸುಬ್ಬು ಸರ್, ಶಿವ ಪ್ರಕಾಶ್ , ಹಿತ್ತಲ ಮನೆ ಓಡೆರು ನಿಮಗೆಲ್ಲ ನನ್ನ ಥ್ಯಾಂಕ್ಸ್. ನನ್ನ ಬ್ಲಾಗ್ ನ ಹಿಂಬಾಲಿಸುತ್ತಾ ಮರೆಯಲ್ಲೇ ನಿಂತು ನನಗೆ ಬೆಮ್ಬಲವಾದ ಉಳಿದ ನನ್ನವರಿಗೂ ಒಂದು ಥ್ಯಾಂಕ್ಸ್.
ಕೊನೆಯದಾಗಿ ಮುಖ್ಯವಾಗಿ ನನ್ನ ಶಾಂತಲತ್ತಿಗೆ. ನನ್ನನ್ನು ಬ್ಲಾಗ್ ಗೆ ಕರೆತಂದವಳು . ನನ್ನ ಬರಹ ಹಾಗು ನಾನು ನಾಲ್ಕು ಜನಕ್ಕೆ ತಿಳಿವನ್ತಾಗಿದ್ದರೆ ಅದಕ್ಕೆ ಕಾರಣ ಅವಳೇ. ಅವಳ ನೆರಳಲ್ಲೇ ನಾ ಬೆಳೆದದ್ದು. ಅವಳು ಒಮ್ಮೆ ಬರೆದ ಬ್ಲಾಗ್ ಇದು . ಬ್ಲಾಗ್ ಗೆ ಬರುವಾಗ ಅಂಜಿಕೆಯಿತ್ತು ನನಗೆ. ಅವಳು ಬರೆದ ಬ್ಲಾಗಿನಲ್ಲಿ ನಾ ಏನು ಬರೆಯಲಿ? ನಾ ಯಾವ ಗಿಡದ ತೊಪ್ಪಲು ಅವಳೆದುರು.? ಆದರೂ ಬರೆದೆ ಅವಳ ಹಿರಿತನದಲ್ಲಿ .ಹೇಗೂ ತಿದ್ದಲು ಅವಳಿದ್ದೇ ಇದ್ದಾಳೆ ಎಂಬ ನೆಮ್ಮದಿಯಲ್ಲಿ. ನನ್ನ ಧನ್ಯವಾದದ ದೊಡ್ಡ ಪಾಲು ಅವಳಿಗೇ..
ಪರೀಕ್ಷೆ ಹತ್ತಿರ ಬಂತು .ಆ ಕಾರಣಕ್ಕೆ ತಿಂಗಳ ಮಟ್ಟಿಗೆ ಬ್ಲಾಗ್ ನಿಲ್ಲಿಸಿ ಮುಂದಿನ ವರುಷ ನಿಮ್ಮೆದುರು ಬರಬೇಕೆಂದು ಕೊಂಡಿದ್ದೆ.ಯಾಕೋ ಇದ್ದಕ್ಕಿದ್ದಂತೆ ಬ್ಲಾಗ್ ಬರಹ ಬೇಡ ಅನ್ನಿಸ್ತ ಇದೆ. ಅದಕ್ಕೆ ಸದ್ಯ ಈ ನಿರ್ಧಾರ. ತಲೆಯಲ್ಲಿ ಹೊಸ ವಿಚಾರಗಳು , ಅಪರೂಪದ ಸಾಲುಗಳು ಹುಟ್ಟಿದರಷ್ಟೇ ನಿಮ್ಮೆದುರು ಬರುತ್ತೇನೆ. ಹಳೆಯ ಸರಕಿನ ಸಹವಾಸ ಉಹುಂ ಖಂಡಿತ ಸಾಧ್ಯವಿಲ್ಲ . ಹೋಗಿ ಬರುತ್ತೇನೆ ಎನ್ನುವುದು ಸದ್ಯದ ಆಶಯ . ವಾಪಸ್ ಬರುತ್ತೆನ ? ಬರುವುದಾದರೆ ಅದು ಯಾವಾಗ? ಸದ್ಯ ನನಗೂ ಅದು ಗೊತ್ತಿಲ್ಲ. ನೋಡೋಣ ಏನಾಗುತ್ತೋ ಅಂತ... ಟಾಟಾ .
Monday, November 16, 2009
ಎರಡು ಸೀರಿಯಸ್ ಜೋಕ್ಸ್ ಗಳು . ಒಂದು ಗುಡ್ ನೈಟ್ ಕವನ.
ಜೋಕ್ ನಂ ೧ ......
ಅವಳಿಗೆ ಮದುವೆ ಆಗಿ ಇನ್ನೂ ವರ್ಷವಾಗಿರಲಿಲ್ಲ. ಆಗಲೇ ಗಂಡನ ಮೇಲೆ ಸಣ್ಣಗೆ ಅಸಮಾಧಾನ . ಆಗಾಗ ದೊಡ್ಡ ದೊಡ್ಡ ರಂಪ ರಾಮಾಯಣಕ್ಕೆ ಈ ಸಣ್ಣ ಅಸಮಾಧಾನ ಕಾರಣವಾಗುತ್ತಿತ್ತು. ಅತ್ತ ಗಂಡ ಇಡೀ ದಿನ ತಡ ರಾತ್ರಿಯ ತನಕ ಕತ್ತೆಯಂತೆ ದುಡಿಯುತ್ತಿದ್ದ. ಇತ್ತ ಹೆಂಡತಿ ಸುಪ್ತ ಜ್ವಾಲಾಮುಖಿಯಾಗಿ ಕುದಿಯುತ್ತ ಗಂಡನ ದಾರಿಯನ್ನೇ ಕಾಯುತ್ತಿದ್ದಳು ; ಗಂಡ ಮನೆಗೆ ಬರುತ್ತಿದ್ದಂತೆಯೇ ಅವನ ಮೇಲೆ ಲಾವಾರಸ ಕಾರಿ , ಇನ್ನು ತನ್ನ ಕೆಲಸ ಮುಗಿಯಿತೆಂಬಂತೆ ಹೋಗಿ ಹಾಸಿಗೆಯ ಮೇಲೆ ಮಗ್ಗುಲಾಗುತ್ತಿದ್ದಳು. ಗಂಡ ಏನೋ ಒಂದು ಸ್ವಲ್ಪ ಊಟ ಮಾಡುವ ಶಾಸ್ತ್ರ ಮುಗಿಸಿ ಹಾಸಿಗೆಯ ಮೇಲೆ ಇವಳ ವಿರುದ್ಧ ದಿಕ್ಕಾಗುತ್ತಿದ್ದ.
ಅವಳಿಗೆ ಮದುವೆ ಆಗಿ ಇನ್ನೂ ವರ್ಷವಾಗಿರಲಿಲ್ಲ. ಆಗಲೇ ಗಂಡನ ಮೇಲೆ ಸಣ್ಣಗೆ ಅಸಮಾಧಾನ . ಆಗಾಗ ದೊಡ್ಡ ದೊಡ್ಡ ರಂಪ ರಾಮಾಯಣಕ್ಕೆ ಈ ಸಣ್ಣ ಅಸಮಾಧಾನ ಕಾರಣವಾಗುತ್ತಿತ್ತು. ಅತ್ತ ಗಂಡ ಇಡೀ ದಿನ ತಡ ರಾತ್ರಿಯ ತನಕ ಕತ್ತೆಯಂತೆ ದುಡಿಯುತ್ತಿದ್ದ. ಇತ್ತ ಹೆಂಡತಿ ಸುಪ್ತ ಜ್ವಾಲಾಮುಖಿಯಾಗಿ ಕುದಿಯುತ್ತ ಗಂಡನ ದಾರಿಯನ್ನೇ ಕಾಯುತ್ತಿದ್ದಳು ; ಗಂಡ ಮನೆಗೆ ಬರುತ್ತಿದ್ದಂತೆಯೇ ಅವನ ಮೇಲೆ ಲಾವಾರಸ ಕಾರಿ , ಇನ್ನು ತನ್ನ ಕೆಲಸ ಮುಗಿಯಿತೆಂಬಂತೆ ಹೋಗಿ ಹಾಸಿಗೆಯ ಮೇಲೆ ಮಗ್ಗುಲಾಗುತ್ತಿದ್ದಳು. ಗಂಡ ಏನೋ ಒಂದು ಸ್ವಲ್ಪ ಊಟ ಮಾಡುವ ಶಾಸ್ತ್ರ ಮುಗಿಸಿ ಹಾಸಿಗೆಯ ಮೇಲೆ ಇವಳ ವಿರುದ್ಧ ದಿಕ್ಕಾಗುತ್ತಿದ್ದ.
ಅಸಮಾಧಾನಕ್ಕೆ ಕಾರಣವಿಷ್ಟೇ. ಹೆಂಡತಿಗೆ ಗಂಡನ ಸಾಮೀಪ್ಯ ಅವಳು ಬಯಸಿದಷ್ಟು ಸಿಗುತ್ತಿರಲಿಲ್ಲ. ಬೆಳಿಗ್ಗೆ ಹೋದ ಯಜಮಾನ ತಡರಾತ್ರಿಯಲ್ಲಿ ವಾಪಸಾಗುತ್ತಿದ್ದ. ವಾರದಲ್ಲಿ ಸಿಗುವ ಒಂದೇ ಒಂದು ಭಾನುವಾರದಲ್ಲಿ ಗಂಡನಿಗೆ ಮೈಚೆಲ್ಲಿ ನಿರಾಳವಾಗಿ ಮಲಗುವುದೇ ಒಂದು ಪರಮ ಸುಖ. ಹೆಂಡತಿಗೆ ಎಲ್ಲಾದರೂ ತಿರುಗಿ ತಿಂದು ಹಾಯಾಗಿ ಭಾನುವಾರ ಕಳೆವ ಬಯಕೆ.ಹೀಗೆ ಅವರ ಬಾಳಿನ ತಾಳ ತಪ್ಪಿ ಹೋಗಿತ್ತು. ದಾಂಪತ್ಯವೆಂಬೋ ಹಾಡಿನ ಮಾಧುರ್ಯ ದಿನೇ ದಿನೇ ಕಳೆದು ಹೋಗುತ್ತಿತ್ತು .
ಅಂದ ಹಾಗೆ ಇವಳು ಅವನನ್ನು ಒತ್ತಾಯಕ್ಕೆ ಮದುವೆ ಆಗಿದ್ದಲ್ಲ. ತುಂಬಾ ಸಂಭ್ರಮದಿಂದ ದೊಡ್ಡ ಹುದ್ದೆಯ ದೊಡ್ಡ ಸಂಬಳದ ಹುಡುಗನೆಂದು ಒಪ್ಪಿ ಮದುವೆಯಾಗಿದ್ದು. ಅದಕ್ಕಾಗಿ ಇವಳು ಮನಸಾರೆ ಪ್ರೀತಿಸಿದ ಅದೇ ಊರಿನ ಹುಡುಗನನ್ನು ತೊರೆದು ಬಂದಿದ್ದಳು .ಸಿಟಿಯಲ್ಲಿ ಇರುವ ವರ ಬೇಕೆಂಬ ಕಾರಣಕ್ಕೆ ಆ ಪ್ರೀತಿಸಿದ ( ಯಾವ ಸೀಮೆ ಪ್ರೀತಿ ಕೇಳಬೇಡಿ) ಹುಡುಗ ಬೇಡವಾಗಿದ್ದ. ಆ ಹುಡುಗನ ಮನೆಯಲ್ಲಿ ನಾಲ್ಕೈದು ಎಕರೆ ಅಡಿಕೆ ತೋಟವಿತ್ತು . ಒಬ್ಬನೇ ಮಗ . ಇವಳನ್ನು ಸುಖವಾಗಿಡಲು ಬೇಕಾದಷ್ಟು ದುಡ್ಡು ಹಾಗು ಸಮಯ ಅವನಲ್ಲಿ ಇತ್ತು. ಎಂತ ಮಜಾ ನೋಡಿ. ಆಗ ಆತ ಬೇಡವಾದ .ಈಗ ಗಂಡನೂ ಒಂಥರಾ ಬೇಡವಾದಂಗೆ. ಗಂಡನ ದೊಡ್ಡ ಹುದ್ದೆ ದೊಡ್ಡ ಸಂಬಳ ಇವಳಿಗೆ ಬೇಕು. ಆದರೆ ಗಂಡನ ಈ ಪರಿಯ ದುಡಿಮೆ ಬೇಡ. ದೊಡ್ಡ ಸಂಬಳದ ಕಡಿಮೆ ಕೆಲಸದ ಉದ್ಯೋಗವನ್ನ ಹುಡುಕಿ ಎಂಬುದು ಅವಳ ಲೇಟೆಸ್ಟ್ ಬೇಡಿಕೆಗಳಲ್ಲೊಂದು. ಈ ಸಿಟಿ ಎಂಬೋ ಸಿಟಿಯಲ್ಲಿ ಇವಳ ಗಂಡನಿಗೆ ಜಾಸ್ತಿ ಸಂಬಳ ಕೊಟ್ಟು ಕಡಿಮೆ ಕೆಲಸ ಮಾಡೋ ಉದ್ಯೋಗ ಎಲ್ಲಿ ಕೊಡ್ತಾರೆ? ಯಾವ ಮೂರ್ಖ ಕೊಡ್ತಾನೆ?ಇನ್ನು ಎಲ್ಲಾದರೂ ತಲೆ ಒಡೆಯೋ ಕೆಲಸ ಮಾಡಬೇಕಷ್ಟೆ ಇವಳ ಗಂಡ ಮಹಾಶಯ...:)
ಜೋಕ್ ನಂ ೨....
ಹುಡುಗಿ ಮದುವೆ ವಯಸ್ಸಿಗೆ ಬಂದಿದ್ದಳು . ಮನೆಯಲ್ಲಿ ಗಂಡು ಹುಡುಕೋ ಗಡಿಬಿಡಿ. ತುಂಬಾ ದಿನ ಆದರೂ ಆ ಹುಡುಗಿಗೆ ಬೇಕಾದ ವರ ನರೋತ್ತಮ ಸಿಗಲೇ ಇಲ್ಲ. ಕೆಲವು ಬಾರಿ ಹುಡುಗ ಓ.ಕೆ ಆಗಿ ಜಾತಕದ ಹೊಂದಾಣಿಕೆ ನಾಟ್ ಓ.ಕೆ ಆಗುತ್ತಿತ್ತು. ಮತ್ತೆ ಕೆಲವು ಸಲ ಜಾತಕ ಓ.ಕೆ ಆಗಿ ಹುಡುಗ ನಾಟ್ ಓ.ಕೆ. ಹೀಗೆ ಬಹುತೇಕ ಪ್ರಸಂಗದಲ್ಲಿ ಹುಡುಗ ನಾಟ್ ಓ.ಕೆ ಆಗಲಿಕ್ಕೆ ಕಾರಣ ಹುಡುಗನಿಗೆ ಅಪ್ಪ ಅಮ್ಮ ಇರುವುದು. ಅಪ್ಪ ಅಮ್ಮ ಇರುವುದು ಎನ್ನುವುದಕ್ಕಿಂತಲೂ ಅವರು ಬದುಕಿರುವುದು ಎನ್ನುವುದು ಸೂಕ್ತ ಇಲ್ಲಿ.
ಮೊನ್ನೆ ಮೊನ್ನೆ ಪಕ್ಕದ ಮನೆಯಾಕೆ ಹುಡುಗಿಯ ಅಮ್ಮನಲ್ಲಿ ವಿಚಾರಿಸಿದ್ದಳು" ಏನ್ರಿ ನಿಮ್ಮ ಮಗಳಿಗೆ ವರ ಇನ್ನೂ ನಿಕ್ಕಿ ಆಗಿಲ್ವೆ?" . " ಇಲ್ಲ ಕಣ್ರೀ ಇನ್ನೂ " ಎಂದು ನಿಟ್ಟುಸಿರಾಗಿ ಕ್ಷಣಕಾಲ ಮೌನವಾದಳು. ಮತ್ತೆ ಮುಂದುವರೆದು " ನಂ ಹುಡುಗಿಗೆ ಅತ್ತೆ ಮಾವ ಇಲ್ದೆ ಇರೋ ಕಡೆ ಸಂಬಂಧ ಹುಡ್ಕ್ತ ಇದ್ದೀವಿ . ಎಷ್ಟಂದ್ರೂ ತುಂಬ ಮುದ್ದು ಮಾಡಿ ಸಾಕಿದೀವಿ ನೋಡಿ ಗಿಣಿ ಥರ. ಅತ್ತೆ ಮಾವ ಎಲ್ಲ ನಂ ಹುಡ್ಗಿಗೆ ಸರಿ ಬರೋಲ್ಲ .ಅದಕ್ಕೆ ಆ ಕಿರ್ಕಿರಿ ನೆ ಬೇಡ ಅಂತ ಅತ್ತೆ ಮಾವ ಇಲ್ದೆ ಇರೋ ಕಡೆ ಸಂಬಂಧ ನೋಡ್ತಾ ಇದ್ದೀವಿ . ತುಂಬಾ ಕಡೆ ಜಾತಕ , ಹುಡುಗ ಎಲ್ಲ ಹೊಂದಾಣಿಕೆ ಆಗ್ತಾ ಇದೆ .ಆದರೆ ಈ ಅತ್ತೆ ಮಾವಂದೆ ಪ್ರಾಬ್ಲಮ್ ಕಣ್ರೀ. ನಮಗೆ ಬೇಕಾದ ರೀತಿ ವರ ನಿಮಗೇನಾದರೂ ಗೊತಿದ್ರೆ ಹೇಳ್ರಿ. " ಎಂದು ಮತ್ತೆ ಮೌನವಾದರು.
ಅಂದ ಹಾಗೆ ಈ ಅಮ್ಮನಿಗೆ ಒಂದು ಗಂಡು ಸಂತಾನವೂ ಇದೆ. ಇನ್ನೊಂದು ನಾಲ್ಕೈದು ವರ್ಷಕ್ಕೆ ಅವನ ಮದುವೆ :);)
ಗುಡ್ ನೈಟ್ ಕವನ .....
ರಾತ್ರಿಗ ಆ ಶಶಿ ಹ್ಯಾಂಗೋ
ನೀ ಹಾಂಗ ಎನಗ ಗೆಳತಿ .
ನಿನ್ನ ನಗು ತಂಗಾಳಿ ಹಾಂಗ
ನಿನ್ನ ಮಾರಿ ಸೊಬಗು ಬೆಳ್ಳಿ ತಿಂಗಳ್ಹಾಂಗ
ನೀ ಇರದ ನಾ ಇರಲಿ ಹ್ಯಾಂಗ?
ನೀನಿರದೆ ನಾ
ಅಮವಾಸಿ ಹಾಂಗ ...
Tuesday, November 10, 2009
ಒಂದಿಷ್ಟು ಮಾತು .ಜೊತೆಗೊಂದು ಕವನ ...
ನನ್ನ ಹಾಸ್ಟೆಲ್ ಕ್ಯಾಂಪಸ್ಸಿನಲ್ಲಿ ಹಾಸ್ಟೆಲ್ನಿಂದ ಕ್ಯಾಂಪಸ್ ಗೇಟ್ ತನಕ ಕಾಲುಹಾದಿಯ ಪಕ್ಕ ಒಂದಿಷ್ಟು ಪರಿಚಿತ ಮರಗಳಿವೆ.ಆ ಪರಿಚಿತ ಮರಗಳ ತುಂಬ ಈಗ ಎಂಥದೋ ಹೂಗಳು ಅರಳಿ ನಿಂತು ಮರಗಳೇ ಇಡಿಯಾಗಿ ಅರಳಿ ಹೂವಾದಂತಿದೆ. ಪರಿಚಿತ ಮರಗಳಲ್ಲಿ ಅರಳಿ ನಿಂತ ಆ ಹೂಗಳೆಲ್ಲ ನನ್ನ ಪಾಲಿಗೆ ಅನಾಮಿಕರು. ಹೆಸರೇ ಇಲ್ಲದ ಹೂಗಳವು.ಯಾರನ್ನಾದರೂ ಕೇಳಿದ್ದಾರೆ ಆಗುತ್ತಿತ್ತು.ಹೆಸರು ತಿಳಿಯುತ್ತಿತ್ತು. ಆದರೆ ನಾನೇ ಬೇಕೆಂದೇ ಯಾರ ಬಳಿಯೂ ಕೇಳುವ ಮನಸ್ಸು ಮಾಡಿಲ್ಲ.ಏಕೆಂದರೆ ಆ ಹೂಗಳ ಅನಾಮಿಕತೆಯಲ್ಲೇ ಎನ್ನ ಪಾಲಿನ ಸಂಭ್ರಮವಿದೆ.ಯಾರನ್ನೋ ಕೇಳಿ ಅವರು ಅದು ಇಂಥ ಜಾತಿಯ ಇಂಥ ಹೆಸರಿನ ಹೂವೆಂದು ಹೇಳಿಬಿಟ್ಟರೆ ಅಲ್ಲಿಗೆ ಎನ್ನ ಸಂಭ್ರಮ ಕಳೆದು ಹೋದಂತೆ.ಅದಕ್ಕೆ ಯಾರನ್ನೂ ಹೇಳಿ ಕೇಳಿ ಮಾಡದೆ ಆ ಹೂಗಳ ಸೊಬಗನ್ನು ಅಗಾಗ ಎನ್ನೆದೆಗೆ ಸಂಭ್ರಮವಾಗಿ ಬರಮಾಡಿ ಕೊಳ್ಳುತ್ತೇನೆ .ಅವು ಎನಗೆಂದೇ ಅರಳಿನಿಂತ , ನಾನೇ ಈ ಜಗತ್ತಿನಲ್ಲಿ ಮೊದಮೊದಲು ಕಂಡ
ಅಪರೂಪದ ಅಚ್ಚರಿಗಳು ಎನ್ನ ಪಾಲಿಗೆ.
ಕಳೆದ ಒಂದು ರಾತ್ರಿಯಲ್ಲಿ ಜೋರು ಮಳೆ .ಮರುದಿವಸ ಬೆಳಿಗ್ಗೆ ಕ್ಯಾಂಪಸ್ಸಿನ ಕಾಲುಹಾದಿ ಎಂಬುದು ಹೂವ ಹಾಸಿಗೆ.ಹಾಸ್ಟೆಲ್ನಿಂದ ಹೊರಟು ಗೇಟ್ ಕಡೆ ನಡೆಯುತ್ತಿದ್ದರೆ ಎಂಥದೋ ಒಂದು ದಿವ್ಯಾನುಭವ. ಯಾರೋ ಒಬ್ಬ ಪ್ರೇಮಿ ತನ್ನವಳು ಬರುತ್ತಾಳೆಂದು ಹೀಗೆ ಈ ಪರಿ ಹೂಗಳನ್ನು ಹಾಸಿ ಹೋದಂತೆ ಭಾಸವಾಗುತ್ತೆ.ಬಹುತೇಕ ಪ್ರೇಮ ಕವಿಗಳ ಕವಿತೆಯ ಆಶಯಗಳು ನಿಜವಾಗಿ ಬಂದಂತೆ ತೋರುತ್ತೆ. ಜೊತೆ ಜೊತೆಗೆ ಒಂದು ಸಣ್ಣ ಬೇಜಾರು ಎನ್ನೊಳಗೆ ಎನ್ನ ಬಗ್ಗೆ. ಎನಗೂ ಒಬ್ಬಳು ಗೆಳತಿ ಇದ್ದಿದ್ದರೆ ಅವಳ ಸೊಂಟವ ಮೆಲುವಾಗಿ ಬಳಸಿ ಹಿಡಿದು ಈ ಹೂವ ಹಾದಿಯ ಮೇಲೆ ನಡೆಸಿಕೊಂಡು ಬರಬಹುದಿತ್ತು . ಕಾಲು ಹಾದಿಯಲಿ ನಡೆಯುತ್ತಾ ಥಂಡಿ ಹವೆಯಲೂ ಬೆಚ್ಚಗಾಗುತ್ತ ಅಡಿಗಡಿಗೆ ಮುದಗೊಳ್ಳುತ್ತ ನಡುನಡುವೆ ಕಳ್ಳರಾಗುತ್ತ ಉದುರಿ ಹೋದ ಹೂಗಳಿಗೆ , ಮಳೆ ಬಿಟ್ಟು ಹೋದ ಥಂಡಿಗೆ ಮತ್ತೆ ನನ್ನ ಹರೆಯಕ್ಕೆ ಒಂದು ಮಧುರ ಸಾರ್ಥಕತೆಯನ್ನು ದಯಪಾಲಿಸಬಹುದಿತ್ತು.
ಇಂಥ ವಿಷಯಗಳಲ್ಲಿ ಗುಡ್ ನೈಟ್ ಕವನದ ನಾಯಕ ಪ್ರಣಯರಾಜ ಪುಟ್ಟ ನೆ ಎಷ್ಟೋ ಭಾಗ್ಯಶಾಲಿ. ನಾನು ಇಲ್ಲಿ ಕವನ ಬರೆಯುತ್ತಾ ಕನಸಿನಲ್ಲೇ ನೆಮ್ಮದಿಯನ್ನ ಕಾಣುತ್ತಿದ್ದರೆ ಅವನು ಅಲ್ಲೆಲ್ಲೋ ನನಸಾದ ನನ್ನ ಕನಸುಗಳೊಂದಿಗೆ ಹಾಯಾಗಿದ್ದಾನೆ. ಪುಟ್ಟಿಯನ್ನು ಹುಡುಕಿ ಜೊತೆ ಮಾಡಿಕೊಂಡು ಕೈಗೆ ಸಿಗದಷ್ಟು ದೂರ ಸಾಗಿ ಬಿಟ್ಟಿದ್ದಾನೆ.ಮೊನ್ನೆ ಮೊನ್ನೆ ತಾನೆ ಅಲ್ಲೆಲ್ಲೋ 'ಗೋಡೆ ' ಹಾರಿ ಏನೋ ಮಧುರ ಅನಾಹುತ ಮಾಡಿಕೊಳ್ಳುವ ವಿಫಲ ಯತ್ನ ನಡೆಸಿದ ಸುದ್ದಿ ಬಂದಿದೆ.ಇನ್ನೂ ಏನೇನು ಮಾಡಿ ನನ್ನ ಬುಡಕ್ಕೆ ತಂದಿಡುತ್ತಾನೋ ಎಂಬ ಭಯ. ಕರೆದು ತಿಳಿ ಹೇಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ಗುಡ್ ನೈಟ್ ಕವನಗಳನ್ನ ನಿಲ್ಲಿಸಿದೆನೆಂದು ನನ್ನೊಡನೆ ಶರಂಪರ ಜಗಳವಾಡಿ ಮುನಿಸಿಕೊಂಡು ಹೋಗಿದ್ದಾನೆ. ನೀವಾದರೂ ಅವನಿಗೆ ಕರೆದು ಬುದ್ಧಿ ಹೇಳಿ ನನ್ನ ಪರವಾಗಿ. ಅವನ ಮೇಲೆ ನೀವೂ ಒಂದು ಕಣ್ಣು ಇಟ್ಟಿರಿ .ಮತ್ತೆಲ್ಲಿಯಾದರೂ ಪುಟ್ಟ ಪುಂಡತನ ಮಾಡಿದ ಸಂಗತಿ ತಿಳಿದು ಬಂದರೆ ನನ್ನ ಕಿವಿಗೂ
ಕೊಂಚ ತಲುಪಿಸಿಬಿಡಿ. ಈಗ ಸದ್ಯಕ್ಕೆ ಈ ಕವನ ಓದಿ :):)
.....ಕ್ಷಮಿಸು ...
ಕ್ಷಮಿಸಿ ಬಿಡು ಗೆಳತಿ
ಕ್ಷಮಿಸಿಬಿಡು
ಹಾರೋ ಹಕ್ಕಿಯನ್ತಿದ್ದ ನಿನ್ನ
ಎನ್ನೆದೆಯ ಸೆರೆಯಲಿ
ರಾಣಿ ಮಾಡಿದ್ದಕ್ಕೆ.
ಕ್ಷಮಿಸಿಬಿಡು
ಅಲೆಯಲೆಯ ಕಡಲಂತೆ
ಬಿಡು ಬೀಸಾಗಿದ್ದ ನಿನ್ನ
ಎನ್ನ ಬೊಗಸೆಯಲಿ ಹಿಡಿದಿಟ್ಟು
ಅಲ್ಲಿ ಕೇವಲ ಎನ್ನ ಬಿಂಬವ
ಹುಡುಕಿದ್ದಕ್ಕೆ.
ಕ್ಷಮಿಸು ಗೆಳತಿ
ನೀನೆ ಎನ್ನ ಜಗವೆಂದು ನಿನ್ನ ನಂಬಿಸಿ
ನಿನ್ನೊಲವ ಗಳಿಸಿ
ಈಗೀಗ ಜಗದ
ನೂರು ಸಂಗತಿಗಳ ಸಂತೆಯಲಿ
ನಿನ್ನ ಮರೆತ್ತಿದ್ದಕ್ಕೆ.
ತೀರಾ ತೀರಾ ತಿರುಕನಂತೆ
ನಿನ್ನೆದುರು ನಿಂತು
ನಿನ್ನ ಒಲವೆಂಬ ಭಿಕ್ಷೆ ಪಡೆದು
ಈಗ ನೀನೆ ಎನ್ನೊಳು
ಒಂದು ಹಿಡಿ ಪ್ರೀತಿಗೆ
ಬೇಡುವಂತೆ ಮಾಡಿದ್ದಕ್ಕೆ
ಕ್ಷಮಿಸಿಬಿಡು ಕ್ಷಮಿಸಿಬಿಡು.
ಕ್ಷಮಿಸು
ನಿನ್ನ ಕಣ್ಣಂಚ ಸೇರಿ ಕುಳಿತಿದ್ದ
ನೂರು ನಿರೀಕ್ಷೆ ನೂರು ನೋವುಗಳ
ಮಂಜು ಮಂಜು ಹನಿಗಳ
ನೋಡಿಯೂ ನೋಡದನ್ತಿದ್ದು
ಹನಿಗಳ ಕಣ್ಣಾಚೆ ಜಾರಲು ಬಿಟ್ಟು
ನಿರ್ಲಿಪ್ತನಾಗಿದ್ದಕ್ಕೆ.
ಕ್ಷಮಿಸಿ ಬಿಡು ಕೊನೆಯದಾಗಿ
ಧರಣಿಯಂಥ ನಿನ್ನೊಳು
"ಕ್ಷಮಿಸು" ಎಂದಿದ್ದಕ್ಕೆ....
Tuesday, November 3, 2009
ನಾನೇಕೆ ಬರೆಯಬೇಕು? .....
ನಾನೇಕೆ ಬರೆಯಬೇಕು? ಈ ಕವಿತೆ ಕಟ್ಟುವುದು, ಹಾಡು ಬರೆಯುವುದು , ಕನಸು ಕಾಣುವುದು ಇವೆಲ್ಲ ಯಾಕೆ ಬೇಕು? ಎಲ್ಲರಂತೆ ವಾಸ್ತವಕ್ಕೆ ಅಂಟಿಕೊಂಡು ಸುಮ್ಮನೆ ಯಾಕಿರಬಾರದು? ತೀರಾ ಭ್ರಮೆಗೆ ಬಿದ್ದು ಬದುಕುತ್ತಿದ್ದೇನೆಯೇ ? ಹೀಗೆ ಇಂಥ ನೂರು ಪ್ರಶ್ನೆಗಳು ನನ್ನನ್ನು ಸಾವಿರ ಸಾವಿರ ಸಲ ಕಾಡಿವೆ. ನನ್ನ ಈ ಕವಿತೆ, ಹಾಡು ಎಲ್ಲ ಬಿಟ್ಟು ಇದ್ದು ಬಿಡಲು ತುಂಬ ಸಲ ಪ್ರಯತ್ನಿಸಿದ್ದೇನೆ. ಆದರೆ ಹಾಗೆ ಪ್ರಯತ್ನಿಸಿ ಪ್ರತಿಬಾರಿ ಸೋತಿದ್ದೇನೆ.ಮೂಗಿನಲ್ಲಿ ಉಸಿರಾಡೋ ಬದಲು ಇನ್ನೆಲ್ಲೋ ಉಸಿರಾಡಿದಂತೆ ಭಾಸವಾಗಿ ನಾನು ನನ್ನತನಕ್ಕೆ ಮರಳಿದ್ದೇನೆ. ಅವನ್ನೆಲ್ಲ ಬಿಟ್ಟು ಬದುಕುವುದು ನನಗೆ ಒಗ್ಗುವ ಸಂಗತಿಯಲ್ಲ ಎಂದು ತಿಳಿದು ಅವನ್ನೆಲ್ಲ ಬಿಡುವ ವ್ಯರ್ಥಪ್ರಯತ್ನವನ್ನು ಮಾಡುವ ಅವಿವೇಕವನ್ನು ನಿಲ್ಲಿಸಿದ್ದೇನೆ. ಅವುಗಳನ್ನು ನನ್ನೊಡನೆ ಕಟ್ಟಿಕೊಂಡು ವಾಸ್ತವದೊಡನೆ ಬದುಕುವುದನ್ನು ಕಲಿತಿದ್ದೇನೆ. ನಾನು ಹೀಗೆ ಬದುಕುವುದಕ್ಕೆ ನನ್ನದೇ ಕೆಲವು ಕಾರಣಗಳನ್ನು ಹುಡುಕಿಕೊಂಡಿದ್ದೆನೆ. ಕಾರಣಗಳು ನನ್ನ ಬದುಕಿನ ರೀತಿಯನ್ನು
ಪ್ರಶ್ನಿಸುವವರಿಗೆ ಉತ್ತರ ಕೊಡಲಿಕ್ಕೆ ಅಲ್ಲ. ಅದು ನಾನು ಬದುಕುತ್ತಿರುವ ರೀತಿಗೆ ಒಂದು ಸಮಜಾಯಿಷಿ ನನ್ನಿಂದ ನನ್ನ ಸಲುವಾಗಿ.ಅಗಾಗ ಧುತ್ತೆಂದು ಎದುರಾಗೋ ನನ್ನೊಳಗಿನ ಗೊಂದಲಗಳಿಗೆ , ಬಿಡದೆ ಕಾಡುವ ಪ್ರಶ್ನೆಗಳಿಗೆ ಉತ್ತರವಾಗಿ ಈ ಕಾರಣಗಳು.ಅಷ್ಟಕ್ಕೂ ನಮ್ಮ ಬದುಕ ಪ್ರಶ್ನಿಸುವವರಿಗೆ , ಅವರ ಬಗೆಹರಿಯದ ಪ್ರಶ್ನೆಗಳಿಗೆ ನಾವೇಕೆ ಉತ್ತರಿಸಬೇಕು?
ಈ ಕಾರಣಗಳನ್ನು ನಾನು ಹುಡುಕಿಕೊಂಡ ಮೇಲೆ ನಾನು ತುಂಬ ನನ್ನಂತೆ ನಿರಾಳವಾಗಿ ಬದುಕುತ್ತಿದ್ದೇನೆ.ಜಗತ್ತು ನನ್ನೆದುರು ಬಂದಾಗ ಥೇಟ್ ಜಗತ್ತಿನಂತೆ ಜಗತ್ತಿನೊಂದಿಗೆ ವ್ಯವಹರಿಸಿ,ಜಗತ್ತು ಕೈ ಬೀಸಿ ಬೆನ್ನು ತಿರುಗಿಸಿ ಹೋದ ಮರುಕ್ಷಣ ನಾನು ನನ್ನೊಳಗೆ ಮಗುವಾಗಿಯೋ, ಯಾವುದೋ ಕನಸಾಗಿಯೋ , ಇಷ್ಟದ ಹಾಡಿನ ಎಳೆಯಾಗಿಯೋ, ಕಾಡುವ ಮೌನವಾಗಿಯೋ ಹೀಗೆ ಏನೋ ಒಂದು ಆಗಿಬಿಡುತ್ತೇನೆ ; ನನ್ನನ್ನು ನಾನು ಸುಮ್ಮನೆ ಹಾಗೆ ಸಹಜತೆಯ ತೆಕ್ಕೆಗೆ ಒಪ್ಪಿಸಿ . ಈ ದಿನ ನಿಮಗೆ ಏನೋ ಹೇಳಬೇಕೆಂದುಕೊಂಡು ನಿಮ್ಮೆದುರು ಬಂದೆ. ಆದರೆ ಹೇಳುವುದನ್ನು ಮರೆತು ಇನ್ನೆಲ್ಲೋ ಹೋಗಿಬಿಟ್ಟೆ. ನಾನು ತೀರಾ ನನ್ನಂತಾಗಿಬಿಟ್ಟರೆ ಆಗುವ ಅನಾಹುತಗಳೆಲ್ಲ ಇಂಥವೇ. ಯಾವುದೋ ಜಾಡ ಹಿಡಿದು ಹೊರಟವನು ಕೊನೆಗೆ ನನ್ನದೇ ದಾರಿಗೆ ಬಂದು ಬಿಟ್ಟಿರುತ್ತೇನೆ. ನಾನು ನನ್ನ ಬದುಕಿನ ರೀತಿಗೆ ಹುಡುಕಿಕೊಂಡ ಕಾರಣಗಳನ್ನು ಹೇಳ ಬಂದವನು ನಾನು. ಹೇಳುತ್ತೇನೆ ಕೇಳಿ.
ಕಾರಣ ೧.......
ಹೇಳಲಿಕ್ಕೆ ನೂರು ಸಂಗತಿಗಳಿರುತ್ತವೆ ನಮ್ಮೊಡನೆ. ನಮ್ಮ ಪುಟ್ಟ ಪುಟ್ಟ ಸಂತೋಷಗಳು, ನವಿರು ಕನಸುಗಳು , ಎಲ್ಲೋ ಎದೆಯ ಮೂಲೆಯಲಿ ಸಣ್ಣಗೆ ಇರಿಯುವ ನೋವುಗಳು ,ಹೀಗೆ ಇನ್ನು ಏನೇನೋ ಇರುತ್ತವೆ ನಮ್ಮ ಭಾವದ ಬುಟ್ಟಿಯಲಿ. ಆದರೆ ಕೇಳಲು ಕಿವಿಗಳೇ ಇರುವುದಿಲ್ಲ ಸುತ್ತ ಜಗದಲ್ಲಿ.ಅಷ್ಟಕ್ಕೂ ಜಗತ್ತಿಗೆ ಅದರದೇ ಆದ ತಲೆಬಿಸಿ , ಅದರದೇ ಆದ ಹಲವು ಬಗೆಹರಿಯದ ಸಮಸ್ಯೆಗಳಿರುವಾಗ ನಮ್ಮ ಕೆಲಸಕೆ ಬಾರದ ಚಿಕ್ಕ ಪುಟ್ಟ ಸಂತೋಷಗಳು , ಸೆಂಟಿಮೆಂಟ್ಗಳು , ಕನಸುಗಳು ಇವಕ್ಕೆಲ್ಲ ಈ ಜಗತ್ತು ಯಾಕೆ ಕಿವಿಗೊಡಬೇಕು? .ಆದರೆ ನಮ್ಮನ್ನು ಕೇಳುವ ಕಿವಿಗಳು ಜಗತ್ತಿನಲ್ಲಿ ಇಲ್ಲ ಎಂದ ಮಾತ್ರಕೆ ನಾವು ಹೇಳಬೇಕಾದ್ದನ್ನು ಹೇಳದೆ ಇರಲಾಗುವುದಿಲ್ಲ . ಕಿವಿಗೊಡದ ಜಗತ್ತಿನಲ್ಲಿ ಆಗ ನಮಗೆ ನಾವೇ ಕಿವಿಯಾಗಬೇಕು. ಹಾಗೆ ನಮಗೆ ನಾವೇ ಕಿವಿಯಾಗುವ ಪ್ರಕ್ರಿಯೆ ಈ ಕವಿತೆ , ಹಾಡು ಮತ್ತು ಬರಹದ ಹುಚ್ಚು .
ನಾವು ಜಗತ್ತೆಲ್ಲ ನಮ್ಮಂತೆ ಹುಚ್ಚಾದರೆ ಎಷ್ಟು ಚೆಂದ ಎಂದುಕೊಳ್ಳುತ್ತೇವೆ. ಎಲ್ಲರೂ ನಮ್ಮನ್ತಾಗಿಬಿಟ್ಟರೆ ಈ ಜಗತ್ತಿನಲ್ಲಿ ಬದುಕು ನಿಜಕ್ಕೂ ನೀರಸ . ನಮ್ಮ ಹುಚ್ಚಿಗೆ ಆಗ ಬೆಲೆಯೇ ಇಲ್ಲ . ಎಲ್ಲರೂ ನಮ್ಮನ್ತಾಗಲಿ ಎನುವುದು ಸರಿಯಲ್ಲ. ನಮ್ಮಂತಲ್ಲದ ನಮ್ಮವರೊಡನೆ
ಅವರನ್ನು ಅವರಂತೆ ಇರಲು ಬಿಟ್ಟು ನಾವು ನಮ್ಮಂತೆ ಬದುಕಲಿಕ್ಕೆ ಈ ಕವಿತೆ , ಹಾಡು ಹಾಗು ಬರಹದ ಹುಚ್ಚು ಬೇಕು.
ಕಾರಣ ೨........
ಜಗತ್ತು ವಿಪರೀತ ಸ್ಪರ್ಧೆಗೆ ಬಿದ್ದು ಬಿಟ್ಟಿದೆ.ಅಪ್ಪ ಹಾಗು ಅಜ್ಜನ ಕಾಲಕ್ಕೆ ಬದುಕು ತಣ್ಣಗಿತ್ತು .ಮಹತ್ವಾಕಾಂಕ್ಷೆಯ ಭೂತದ ನೆರಳು ಅಲ್ಲಿರಲಿಲ್ಲ . ಎಲ್ಲರೂ ಅವರವರ ಪಾಡಿಗೆ ಅವರಿಗೆ ತೋಚಿದ್ದನ್ನು ಮಾಡಿಕೊಂಡು ಇದ್ದುದರಲ್ಲೇ ತೃಪ್ತರಾಗಿ ಬದುಕು ನಿಜಕ್ಕೂ ಬದುಕಿನಂತಿತ್ತು . ಈಗ ಹಾಗಿಲ್ಲ . ಬದುಕು ದೊಮ್ಬರಾಟದಂತೆ. ನಮಗೆ ತೋಚಿದ್ದನ್ನು ನಾವು ಮಾಡುವಂತಿಲ್ಲ.ಓಡುತ್ತಿರುವ ಜಗತ್ತಿನೊಡನೆ ನಾವು ಏದುಸಿರಾಗಿ ಓಡುತ್ತ ಜಗತ್ತನ್ನು ಹಿಂದೆ ಹಾಕಲೇ ಬೇಕಾದ ಅನಿವಾರ್ಯತೆ.ನಮಗೆ ಒಗ್ಗದ್ದನ್ನು ಬಲವಂತವಾಗಿ
ಮಾಡಲೇಬೇಕು.ಸಂಗೀತಗಾರನಾಗಬೇಕಾದವನು ಇಂಜಿನಿಯರ್ ಆಗುತ್ತಾನೆ. ಆಟಗಾರನಾಗಿ ಹಲವು ಪುರಸ್ಕಾರಕ್ಕೆ ಪಾತ್ರನಾಗಿ ಪದಕಕ್ಕೆ ಹೆಮ್ಮೆಯಿಂದ ಕೊರಳೊಡ್ಡಿ ಬೀಗಬೇಕಾದವನು ಎಲ್ಲೋ ಯಾವುದೋ ನೌಕರಿ ಹಿಡಿದು ಹತ್ತರೊಳಗೆ ಹನ್ನೊಂದಾಗುತ್ತಾನೆ.ಆಸೆಪಟ್ಟು ಇಂಜಿನಿಯರ್ ಓದಿದವನು ಆರ್ಥಿಕ ಹಿಂಜರಿತದ ಬಿಸಿತಟ್ಟಿ ಕೆಲಸ ಸಿಗದೆ ಎಂ.ಬಿ. ಎ ಅಥವಾ ಇನ್ನೇನೋ ಓದಿ ಸೇಫ್ ಆಗುವ ದಾರಿ ಹುಡುಕುತ್ತಾನೆ .ಇವೆಲ್ಲ ವಿಷಾದವಲ್ಲದೆ , ಹೇಸಿಗೆಯಲ್ಲದೆ , ದುರಂತವಲ್ಲದೆ ಇನ್ನೇನು? ಕೇವಲ ದುಡ್ಡು ಎಲ್ಲದರ ಮಾನದಂಡ.
ಹೀಗೆ ನಮಗೆ ಒಗ್ಗದ ಏನೇನೋ ಮಾಡಿಕೊಂಡು ದುಡಿದು ಗುಡ್ಡೆ ಹಾಕಿ ನಮ್ಮನ್ನೂ ಹಾಗು ನಮ್ಮವರನ್ನೂ ತೃಪ್ತ ರಾಗಿ ಇಟ್ಟುಕೊಳ್ಳುವುದು ಸಾಧ್ಯವಾ ಎಂದು ನೋಡಿದರೆ ಅದು ಆಗದ ಮಾತು. ಅಸಲಿಗೆ ಸತ್ಯ ಬೇರೆಯದೇ ಇರುತ್ತದೆ . ಎಲ್ಲರನ್ನೂ ತೃಪ್ತರಾಗಿ
ಇಡುವ ಭ್ರಮೆಯಲ್ಲಿ ನಮ್ಮನ್ನು ನಾವು ಕಳೆದು ಕೊಂಡಿರುತ್ತೇವೆ ಅಷ್ಟೆ. ಹೀಗೆ ನಮ್ಮನ್ನು ನಮ್ಮನ್ನು ನಾವು ಬಲಿಕೊಟ್ಟು ಬದುಕುವುದು , ನಮ್ಮ ಒಳದನಿಗೆ ವಿರುದ್ಧವಾಗಿ ನಡೆಯೋದು ನಿಜಕ್ಕೂ ಆತ್ಮಹತ್ಯೆಯಂತೆ.
ಹೀಗೆಲ್ಲ ಹೇಳಿ ನಾನು ವಾಸ್ತವನ್ನು ಹಾಗು ನಮ್ಮವರಿಗಾಗಿ ಬದುಕುವುದನ್ನೂ ದೂರ ತಳ್ಳಿ ತಪ್ಪು ಎನ್ನುತ್ತಿಲ್ಲ. ವಾಸ್ತವನ್ನು ಬದಿಗಿಟ್ಟು ಬದುಕುವುದು ಅನಾಹುತಕಾರಿ. ಆದರೆ ತೀರಾ ವಾಸ್ತವಕ್ಕೆ ಅಂಟಿಕೊಂಡು ಕೂರುವುದು ಇನ್ನೂ ಅನಾಹುತಕಾರಿ . ಈಗ ನೋಡಿ ನಾನು ವಾಸ್ತವಕ್ಕೆ ಮಣಿದು ಎಂ.ಬಿ.ಎ ಮಾಡುತ್ತಿದ್ದೇನೆ. ನನ್ನ ಸಲುವಾಗಿ ಕವಿತೆ , ಹಾಡು , ಬರಹವನ್ನು ಮೀಸಲಿಟ್ಟಿದ್ದೇನೆ. ವಾಸ್ತವ ಬೆಂಬಿಡದ ಬೇತಾಳ . ಅದು ಭಯಾನಕ . ಕೆಲವೊಮ್ಮೆ ವಾಸ್ತವನ್ನು ಸಾಧ್ಯವಾದಷ್ಟರ ಮಟ್ಟಿಗೆ ಅಲಕ್ಷಿಸಿ ಬದಿಗಿಟ್ಟು ಬಿಡಬೇಕು. ಆಗಲೇ ವಾಸ್ತವದಲ್ಲಿ ಜೀವನ ಕೊಂಚ ನಿರಾಳವಾಗುವುದು. ವಾಸ್ತವದೊಡನೆ ನಡೆಯುತ್ತಾ ನನ್ನನ್ನೂ ನಾನು ಕಳೆದು ಕೊಳ್ಳದೆ ಬದುಕು ನಡೆಯುವುದಕ್ಕೆ ನನಗೆ
ಈ ಬರಹದ ಹುಚ್ಚು ಬೇಕು.
ಕಾರಣ ೩.........
ನಮ್ಮ ಸುತ್ತ ಗೆಳೆಯರು , ನೆಂಟರು , ಮನೆಯವರು ಹೀಗೆ ನೂರು ನಂಟಿನ ನಡುವೆ ಬದುಕು ಬೆಸೆದುಕೊಂಡಿದೆ.ಅವರೆಲ್ಲ ಜೊತೆಗಿರುವಷ್ಟು ದಿನ ಬದುಕು ತಣ್ಣಗಿರುತ್ತೆ. ಕೆಲವರು ಅವರ ಬದುಕು ಮುಖ್ಯವಾದಾಗ ನಮ್ಮ ಬದುಕಿನಿಂದ ಎದ್ದು ನಡೆದು ಬಿಡುತ್ತಾರೆ.ಮತ್ತೆ ಕೆಲವರು ಕಾಲದ ಸೆಳವಿಗೆ ಸಿಕ್ಕು ಕಳೆದು ಹೋಗುತ್ತಾರೆ.ಅವರು ಹಾಗೆ ಬದುಕಿಂದ ಮರೆಯಾದಾಗ ನಾವು ಕುಸಿದು ಕೂರುತ್ತೇವೆ.ಬದುಕು ಅಸಹನೀಯವಾಗಿ ನಾವು ಅಸಹಾಯಕರಾಗುತ್ತೇವೆ.ಹೀಗೆ ಸುತ್ತಲ ಜಗತ್ತು ಕೈ ಕೊಟ್ಟಾಗ ನಮ್ಮ ನೆರವಿಗೆ ಬರುವುದು ನಮ್ಮೊಳಗಿನ ಜಗತ್ತು. ಹಾಗೆ ಎನ್ನದೆ ಖಾಸಗಿ ಜಗತ್ತನ್ನು ಕಟ್ಟಿ ಅಲ್ಲಿ ನಾ ಗಟ್ಟಿಯಾಗಿ ಮರಳಿ ಹೊರ ಜಗತ್ತಿಗೆ ಮರಳಲಿಕ್ಕೆ ಎನಗೆ ಎನ್ನ ಬರಹದ ಸಹವಾಸ ಬೇಕು. ಇರುವಷ್ಟು ದಿನ ನಮ್ಮ ಸುತ್ತಲಿನ ಜಗತ್ತನ್ನು ನಿರ್ವಂಚನೆಯಿಂದ ಪ್ರೀತಿಸಬೇಕು. ಸುತ್ತಲ ಜಗತ್ತು ನಮ್ಮ ಪಾಲಿಗೆ ಇಲ್ಲವಾದಾಗ ನಮ್ಮನ್ನು ನಾವು ಪ್ರೀತಿಸಿಕೊಂಡು ಏನೂ ಆಗಿಯೇ ಇಲ್ಲವೆಂಬಂತೆ ಮೊದಲಿನಂತೆ ಇದ್ದು ಬಿಡಬೇಕು. ಇಂಥ ಜೀವನ ಪ್ರೀತಿಯನ್ನು ಕಾಪಾಡಿ ಕೊಳ್ಳಲಿಕ್ಕೆ ಎನಗೆ ಎನ್ನ ಬರಹಗಳು ಬೇಕು.
ಕಾರಣ ೪.........
ಕೆಲವೊಮ್ಮೆ ನಾವು ಬರಹಗಾರರು ಏನೋ ಒಂದು ಬರೆಯುತ್ತಾ ಕುಳಿತ ಸಮಯದಲ್ಲಿ ಭುವನದಾಚೆಯ ಚೈತನ್ಯದಂತೆ ನಮಗೆ ನಾವೇ ಭಾಸವಾಗುತ್ತೇವೆ. ಆದರೆ ಪೆನ್ನು ಕೆಳಗಿಟ್ಟ ಮರುಕ್ಷಣ ತೀರಾ ತೀರಾ ನಮ್ಮಂತಾಗಿ ಬಿಡುತ್ತೇವೆ. ಬರೆದ ಚಿಂತನೆಗಳು, ಆದರ್ಶಗಳು,ನವಿರು ಭಾವಗಳು ಹಾಳೆಯ ಮೇಲೆ ಶೋಭಾಯಮಾನವಾಗಿ ಕೂತಿರುತ್ತೆ. ಇತ್ತ ಬರಹದಾಚೆಯ ನಮ್ಮ ಬದುಕು ನಮ್ಮ ನಮ್ಮ ಸಣ್ಣತನಗಳ ನಡುವೆ ಸಾಗಿ ಹೋಗುತ್ತಿರುತ್ತೆ. ಇದಕ್ಕೆ ಒಳ್ಳೆಯ ಉದಾಹರಣೆ ನಾನೇ . ಆದರೆ ನನಗೆ ನಾನು ನನ್ನ ಬರಹದಂತೆ ಆಗಬೇಕೆಂಬ ಆಶಯವಿದೆ .ನನ್ನ ಬರಹ ನಾನೇ ಓದುವಾಗ ಒಂದು ಬಗೆಯ ಪಾಪ ಪ್ರಜ್ಞೆ ಕಾಡಿ ನಾನು ನಾನು ಬರೆದಂತೆ ಬದಲಾಗುತ್ತೇನೆ ಎಂಬ ದೂರಾಲೋಚನೆ ನನ್ನದು.ಹೀಗೆ ನನ್ನನ್ನು ನಾನು ಕಂಡುಕೊಂಡು ಇನ್ನೂ ಉತ್ತಮನಾದ ನಾನಾಗಲಿಕ್ಕೆ ನನಗೆ ಬರಹ ಬೇಕು.
ಕಾರಣ ೫...........
ಬರಹ ಎಂದರೆ ಎನ್ನ ಪಾಲಿಗೆ ಅದು ಕೇವಲ ಬರಹವಲ್ಲ. ಬರಹವೆಂದರೆ ಅಕ್ಷರ ರೂಪದ ನಾನು. ಈ ಕವಿತೆ , ಹಾಡು ಇವುಗಳನ್ನೆಲ್ಲ ಬಿಟ್ಟು ಬದುಕಲಿಕ್ಕೆ ಎನಗೆ ಸಾಧ್ಯವಿಲ್ಲ . ಬೆಳಕೆ ಇಲ್ಲದ ದಾರಿಯಲ್ಲಿ ನಡೆಯಬಹುದು .ಆದರೆ ಕನಸೇ ಇಲ್ಲದ ದಾರಿಯಲ್ಲಿ ಪಯಣ ಸಾಧ್ಯವಾ? ಬರಹದ ಸಾಂಗತ್ಯ ತೊರೆದು ಇರಲಾರೆ , ಕನಸು ಕಾಣದೆ ಇರಲಾರೆ ಎನುವ ವಾಸ್ತವದ ಸಲುವಾಗಿ ಎನಗೆ ಎನ್ನ ಈ ಕವಿತೆಗಳೆಂಬ, ಎನ್ನ ಹಾಡುಗಳೆಂಬ ದಿವ್ಯ ಕನಸುಗಳು ಬೇಕು.ಈ ಬರಹದ ಹುಚ್ಚು ಬೇಕು ನಾನು ಸಾಮಾನ್ಯನಂತೆ ಬದುಕಲು. ನಾನು ನನ್ನಂತೆ ಇರಲು.
ಕೊನೆಯ ಕಾರಣ .......
ಈ ಮೇಲಿನ ಎಲ್ಲ ಕಾರಣಗಳನ್ನು ಗಮನವಿಟ್ಟು ನೋಡಿದರೆ ಎದ್ದು ಕಾಣುವುದು ದ್ವಂದ್ವ ಹಾಗು ಗೊಂದಲಗಳ ನಡುವಿನ ಬದುಕು ಹಾಗು ಅದನ್ನು ಸಾಧ್ಯವಾದಷ್ಟರ ಮಟ್ಟಿಗೆ ಮೀರುವ ಪ್ರಯತ್ನ. ಏನೂ ಮಾಡಲಿಕ್ಕೆ ಆಗುವುದಿಲ್ಲ .ಇಂದಿನ ದಿನಮಾನದಲ್ಲಿ ಇಂಥ
ದ್ವಂದ್ವ ಹಾಗು ಗೊಂದಲಗಳ ನಡುವೆ ಜೀವನ ಸಾಗಲೇಬೇಕು. ಈ ಎಲ್ಲ ದ್ವಂದ್ವ ಹಾಗು ಗೊಂದಲಗಳ ನಡುವೆ ನಾವೆಂಬ ನಮ್ಮನ್ನು ನಾವು ಎಷ್ಟರ ಮಟ್ಟಿಗೆ ನಮ್ಮಂತೆ ಕಾಪಾಡಿಕೊಂಡು ಬಂದಿದ್ದೇವೆ ಎಂಬುದಷ್ಟೇ ಮುಖ್ಯ. ಇತ್ತ ಬಿಗಿ ಹಿಡಿದು ಹಿಂಡುವ ವಾಸ್ತವ . ಅತ್ತ ಆಚೆ ತೀರದಲ್ಲಿ ಕೈ ಬೀಸಿ ಕರೆಯೋ ನಮ್ಮ ಕನಸುಗಳ ಒಳ ಜಗತ್ತು. ವಾಸ್ತವದ ಬಿಗಿ ಹಿಡಿತ ಅತಿಯಾಗಿ ಉಸಿರು ಕಟ್ಟಿದಾಗ ಆಚೆ ದಡದ ಕನಸುಗಳ ಮಡಿಲಿಗೆ ತಲುಪಿಕೊಂಡು ಬಿಡಬೇಕು. ಕನಸುಗಳು ಭ್ರಮೆಯಾಗುವ ಸೂಚನೆ ಕಂಡಾಗ ವಾಸ್ತವದ ತೀರಕೆ ಮರಳಬೇಕು. ಹೀಗೆ ನಾವು ಆಚೆ ಈಚೆ ಹೋಗಿ ಬಂದು ಬದುಕನ್ನು ಬ್ಯಾಲೆನ್ಸ್ ಮಾಡಲಿಕ್ಕೆ ಎನಗೆ ಎನ್ನ ಬರಹಗಳು ಬೇಕು. ಬರಹವನ್ನು ಆಚೆ ಈಚೆ ತೀರವ ತಲುಪಿಸುವ ದೋಣಿಯೋ , ಇಲ್ಲ ಸೇತುವೆಯೋ , ಅಥವಾ ಈಜುವ ಹುಮ್ಬತನಕೆ ಸ್ಫೂರ್ತಿಯೋ ಹೀಗೆ ಏನು ಬೇಕಾದರೂ ನೀವು ನಿಮಗೆ ತೋಚಿದಂತೆ ಅಂದುಕೊಳ್ಳಿ. ಒಟ್ಟಿನಲ್ಲಿ ಬದುಕು ಬ್ಯಾಲೆನ್ಸ್ ಆಗುವುದು ಮುಖ್ಯ .
ಮೇಲೆ ಹೇಳಿದ ಎಲ್ಲ ಕಾರಣಗಳೂ ನಿಮ್ಮವೂ ಹೌದೆಂದು ಕೊಳ್ಳುತ್ತೇನೆ. ಎಷ್ಟಂದರೂ ನಾವೆಲ್ಲ ಹೆಚ್ಚು ಕಡಿಮೆ ಒಂದೇ ಮಟ್ಟದ ಹುಚ್ಚರಲ್ಲವೇ? ನನ್ನ ಪಾಡೂ ನಿಮ್ಮ ಪಾಡೂ ಬೇರೆ ಬೇರೆಯಲ್ಲ. ಮೊದಲ ಬಾರಿಗೆ ಸ್ವಲ್ಪ ಧೀರ್ಘವಾಗಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಎಲ್ಲಾದರೂ ತಪ್ಪಿದ್ದರೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ:):)
Thursday, October 29, 2009
ಮೂಗು .......ಕವನ
ಗುಡ್ ನೈಟ್ ಕವನಗಳ ನಿಲ್ಲಿಸಿದ ನಂತರ ಒಂದು ಪುಟ್ಟ ಲೇಖನದೊಂದಿಗೆ ನಿಮ್ಮೆದುರು ಬರಬೇಕೆಂದುಕೊಂಡಿದ್ದೆ. ಅದಕ್ಕಾಗಿ ತಯಾರಿಯನ್ನೂ ನಡೆಸಿದ್ದೆ. ಆದರೆ ನಡುವೆ ಕ್ಲಾಸ್ ಇಂಟರ್ನಲ್ ಪರೀಕ್ಷೆಗಳು ಬಂದವು. ಬರಹದ ಯೋಜನೆ ಹಾಗೆ ಹಳ್ಳ ಹಿಡಿಯಿತು. ಕವನ ಬರೆದು ಬ್ಲಾಗ್ ಗೆ ಹಾಕುವುದು ಸುಲಭ. ಕೆಲವು ನಿಮಿಷಗಳ ಸರಳ ಕೆಲಸ ಅದು. ಆದರೆ ಗದ್ಯದ ಕೆಲಸ ಹಾಗಲ್ಲ. ನನ್ನ ಪಾಲಿಗೆ ಅದು ನಿಜಕ್ಕೂ ಮಹಾ ಬೋರಿನ ತ್ರಾಸದಾಯಕ ಕೆಲಸ. ನಾನು ಟೈಪ್ ಮಾಡುವ ಚೆಂದ ಹಾಗು ಅದರ ಆಮೆ ವೇಗ ನನಗೆ ಮತ್ತು ದೇವರಿಗಷ್ಟೇ ಪ್ರೀತಿ. ಅದಕ್ಕೆ ಸ್ವಲ್ಪ ಬಿಡುವು ಮಾಡಿಕೊಂಡು ಅತಿ ಬೇಗನೆ ಲೇಖನದೊಂದಿಗೆ ಹಾಜರಾಗುತ್ತೇನೆ. ನಡುವೆ ಬ್ಲಾಗ್ ಖಾಲಿ ಬಿದ್ದು ಹಾಳು ಸುರಿಯದಿರಲಿ ಎಂಬುದಕ್ಕೆ ಈ ಮಧ್ಯಂತರ ಕವನ.
ಈ ಕವನ ನಾನು ಬಿ. ಕಾಂ . ಮೊದಲನೆ ವರ್ಷದಲ್ಲಿದ್ದಾಗ ಕಾಲೇಜ್ನಲ್ಲಿ ನಡೆದ ಆಶು ಕವಿತೆ ಸ್ಪರ್ಧೆಗೆ ಬರೆದದ್ದು. ಯಾವ ವಿಷಯ ಕೊಟ್ಟರೂ ತಕ್ಕಮಟ್ಟಿಗೆ ಏನೋ ಒಂದು ಗೀಚಬಲ್ಲೆ ಎಂಬ ಧೈರ್ಯ ಕೊಟ್ಟ ಕವನ ಇದು. ಕೆಲವು ಉತ್ತಮಗಳು ಹೇಗೆ ಅನಾಯಾಸವಾಗಿ ಹುಟ್ಟುತ್ತವೆ ಎಂಬುದು ಈ ಕವನ ಬರೆದ ಮೇಲೆ ನನಗೆ ಅನ್ನಿಸಿತ್ತು. ಅಂದ ಹಾಗೆ ಈ ಕವನ ಮೊದಲ ಬಹುಮಾನ ಪಡೆದಿತ್ತು :):) [ ಕವನ ಹಾಗು ನನ್ನ ಬಗ್ಗೆ ಹೊಗಳಿಕೆ ಸ್ವಲ್ಪ ಓವರ್ ಆಯ್ತು ಅಲ್ವಾ? :):) ]
ಈ ಕವನ ನಾನು ಬಿ. ಕಾಂ . ಮೊದಲನೆ ವರ್ಷದಲ್ಲಿದ್ದಾಗ ಕಾಲೇಜ್ನಲ್ಲಿ ನಡೆದ ಆಶು ಕವಿತೆ ಸ್ಪರ್ಧೆಗೆ ಬರೆದದ್ದು. ಯಾವ ವಿಷಯ ಕೊಟ್ಟರೂ ತಕ್ಕಮಟ್ಟಿಗೆ ಏನೋ ಒಂದು ಗೀಚಬಲ್ಲೆ ಎಂಬ ಧೈರ್ಯ ಕೊಟ್ಟ ಕವನ ಇದು. ಕೆಲವು ಉತ್ತಮಗಳು ಹೇಗೆ ಅನಾಯಾಸವಾಗಿ ಹುಟ್ಟುತ್ತವೆ ಎಂಬುದು ಈ ಕವನ ಬರೆದ ಮೇಲೆ ನನಗೆ ಅನ್ನಿಸಿತ್ತು. ಅಂದ ಹಾಗೆ ಈ ಕವನ ಮೊದಲ ಬಹುಮಾನ ಪಡೆದಿತ್ತು :):) [ ಕವನ ಹಾಗು ನನ್ನ ಬಗ್ಗೆ ಹೊಗಳಿಕೆ ಸ್ವಲ್ಪ ಓವರ್ ಆಯ್ತು ಅಲ್ವಾ? :):) ]
ಮೂಗು.....
ನಿನ್ನ ಕಾಣೋ ಕ್ಷಣದವರೆಗೂ
ಪ್ರೀತಿ ಪ್ರೇಮದಲಿ ನಾ ಎನ್ನ
'ಮೂಗ' ತೂರಿರಲಿಲ್ಲ .
ಅದೇನು ಮೋಡಿಯೋ ಕಾಣೆನು
ಕಪ್ಪು ಕಿರು ಮಚ್ಚೆಯ
ಗಿಣಿ ಮೂಗಿನವಳೇ
ಚೆಲುವೆ ನೀ ನಿಜಕು
ನಾ ಅದಕೆ ಕರಗಿಬಿಟ್ಟೆ.
ಗಿಣಿಮೂಗವಳು ಇವಳೆಂದು ಮೆಚ್ಚಿ
ಜೊತೆಯಾದೆ ನಿನಗೆ.
ಬಾಳ ತುಂಬ ಸಿಟ್ಟು ಸಿಡುಕ
ಅಡಿಗಡಿಗೆ ಸೀನದೆ
ಗೋಳೆಂಬ ಗೊಣ್ಣೆ ನಿತ್ಯ
ಸುರಿಸದೆ
ತಲೆ ನೋವ ತರಿಸದೇ
ಸಂಸಾರದ ಉಸಿರ ಸರಾಗವಾಗಿಸು .
ನಿನ್ನ ಮೂಗಂತೆ ಮನಸೂ ಗಿಣಿಯದಾಗಿರಲಿ.
ಎರಡು ಹೊಳ್ಳೆಗಳು ನಾವು
ಬಾಳೆಂಬ ಮೂಗ ಸೂರಡಿ.
ಪ್ರೀತಿ ಸರಸ ಸಂತಸ ದಂಡಿಯಾಗಿ
ಬಾಳ ತುಂಬಲಿ.
ಬೇಡದ ರಗಳೆ ರಾದ್ಧಾಂತ
ಹೊರಗಾಗಲಿ.
ನಾವು ಜೊತೆ ಜೊತೆಗೆ ಉಸಿರಾಡಿ
ಒಬ್ಬರಿಗೊಬ್ಬರು ಉಸಿರಾಗುವವರು
ನೆನಪಿರಲಿ ಗೆಳತಿ
ನೆನಪಿರಲಿ ..
Monday, October 19, 2009
ಗುಡ್ ನೈಟ್ ಕವನಕೊಂದು ಗುಡ್ ಬೈ ......
ಗುಡ್ ನೈಟ್ ಕವನಗಳಿಗೆ ತಾತ್ಕಾಲಿಕವಾಗಿ ಗುಡ್ ಬೈ ಹೇಳುತ್ತಿದ್ದೇನೆ. ನನ್ನ ನಾನು ಹುಡುಕೋ ಪ್ರಯತ್ನದಲ್ಲಿ ಹುಟ್ಟಿದ, ನನಗೆ ಅತ್ಯಂತ ಆಪ್ತವಾದ ಗುಡ್ ನೈಟ್ ಕವನಗಳಿಗೆ ವಿರಾಮ ಕೊಡುತ್ತಿದ್ದೇನೆ. ಅಲೆಮಾರಿ ಅಂತ ಹೇಳಿಕೊಂಡು ಬ್ಲಾಗ್ ಲೋಕಕ್ಕೆ ಕಾಲಿಟ್ಟವನು ನಾನು. ಎಷ್ಟು ದಿವಸ ಅಂತ ಒಂದೇ ಕಡೆ ಡೇರೆ ಹಾಕಿ ಕೂರಲಿ? .ಹೇಗೂ ಭೂಮಿ ದುಂಡಗಿದೆ. ಅಲೆಮಾರಿ ಮತ್ತೆ ಮರಳಿ ಹಿಂದೆ ಬಿಟ್ಟು ಹೋದ ಹೆಜ್ಜೆಗಳಿಗೆ ಎದುರಾಗಲೇ ಬೇಕು. ಮರಳಿ ತನ್ನ ಮೂಲಕೆ ಮರಳಲೇಬೇಕು.ಡೇರೆಯನ್ನು ಕಿತ್ತು ಗಂಟು ಮೂಟೆ ಕಟ್ಟಿ ಮತ್ತೆ ನನ್ನನ್ನು ಹುಡುಕೋ ಬಿಡದ ವ್ಯಸನಕ್ಕೆ ಮರಳುತ್ತಿದ್ದೇನೆ.
ಅಸಲಿಗೆ ಗುಡ್ ನೈಟ್ ಕವನಗಳನ್ನು ಬರೆಯುವುದನ್ನು ನಿಲ್ಲಿಸಿ ಎರಡು ವರ್ಷವಾಯಿತು. ಒಟ್ಟು ಮುನ್ನೂರು ಚಿಲ್ಲರೆ ಕವನಗಳು ಇವೆ ಈ 'ಗುಡ್ ನೈಟ್ ' ಕವನಗಳ ಸೂರಿನಡಿ. ಇಷ್ಟು ದೊಡ್ಡ ಸಂಖ್ಯೆಯ ಕಾರಣಕ್ಕೇ ನಾನು ಈ ಕವನಗಳನ್ನು ಬರೆಯುವುದನ್ನು ನಿಲ್ಲಿಸಿದ್ದು. ಹೇಗೆ ಇವುಗಳನ್ನೆಲ್ಲ ಜೋಪಾನ ಮಾಡಲಿ? ಮೊದಲೇ ಸ್ವಲ್ಪ ಜಾಸ್ತಿ ಸೋಮಾರಿ ನಾನು . ಅದಕ್ಕೆ 'ಗುಡ್ ನೈಟ್ ' ಕವನಗಳನ್ನು ನಿಲ್ಲಿಸಿಬಿಟ್ಟೆ. ಈಗ ಬ್ಲಾಗ್ ಗೆ ಈ ಕವನಗಳನ್ನು ಹಾಕುವುದಕ್ಕೆ ಶುರು ಮಾಡಿದ ಮೇಲೆ ಮತ್ತೆ ಹೊಸ ಹೊಸ 'ಗುಡ್ ನೈಟ್' ಕವನಗಳು ಹುಟ್ಟುತ್ತಿವೆ. ನಿಜಕ್ಕೂ ನಾನು ಆಗ ದಿಗಿಲಿಗೆ ಬಿದ್ದೆ. ಈ ' ಗುಡ್ ನೈಟ್ ' ಕವನದ ಮೋಹವೇ ಹಾಗೆ. ಗುಡ್ ನೈಟ್ ಕವನದ ಒಂದು ಸಾಲಿನಮೇಲೆ ಕಣ್ಣು ಹಾಗೆ ಸುಮ್ಮನೆ ಹಾದು ಹೋದರೆ ಸಾಕು, ಹತ್ತು ಕವನಕಾಗುವಷ್ಟು ಭಾವದ ಸರಕು ಮನದ ಖಾತೆಗೆ ಜಮೆಯಾಗಿರುತ್ತೆ. ತಲೆ ಎಂಬೋ ತಲೆ ಅಂಕೆಗೆ ಸಿಗದಷ್ಟು ಕ್ರಿಯಾಶೀಲವಾಗಿ ಹುಚ್ಚಿನ ಹೆಬ್ಬಾಗಿಲ ಹೊಸ್ತಿಲ ಮೆಟ್ಟಿ ವಾಪಾಸಾಗುತ್ತಿರುತ್ತೆ.
ಗುಡ್ ಬೈ ಅಂತ ಹೇಳಿದ ಮಾತ್ರಕ್ಕೆ 'ಗುಡ್ ನೈಟ್' ಕವನಗಳು ನಿಲ್ಲುವುದಿಲ್ಲ. ಅದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ.ನನಗೆ ಬರೆಯೋ ಧೈರ್ಯ ನೀಡಿದ , ನನ್ನ ಎಲ್ಲ ಭಾವನೆಗಳಿಗೆ ಕನ್ನಡಿಯಾದ , ನನ್ನ ಒಳ ಮಾತಿಗೆ ಕಿವಿಯಾದ ,ಎಲ್ಲಕಿಂತ ಮೇಲಾಗಿ ನನ್ನಲ್ಲಿ ಒಂದು ನವಿರು ಮನಸ್ಸನ್ನು ಹುಟ್ಟು ಹಾಕಿ ಅದು ಇನ್ನಷ್ಟು ನವಿರಾಗುವಂತೆ ಮಾಡಿದ "ಗುಡ್ ನೈಟ್ ' ಕವನವನ್ನ ಹೇಗೆ ತಾನೆ ದೂರ ಇಡಲಿ? ಹಾಗೆನಾದರೂ ನಾ ದೂರ ಇಟ್ಟರೆ ನಾನು ಸತ್ಯದಂಥ ಸುಳ್ಳಿನಂತೆ ಆಗಿಬಿಡುತ್ತೇನೆ. ಇನ್ನು ಮುಂದೆ 'ಗುಡ್ ನೈಟ್ ' ಕವನ ಅಗಾಗ ನಡುವೆ ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕಿ ಹೋಗುತ್ತಿರುತ್ತೆ. ಇಷ್ಟು ದಿವಸ ಊಟದಂತಿದ್ದ ಈ ಕವನ ಇನ್ನು ಮುಂದೆ ಊಟದ ನಡುವೆ ಉಪ್ಪಿನಕಾಯಿಯಂತೆ. ಈಗಿನಂತೆ ಮೂರು ನಾಲ್ಕು ದಿನಗಳಿಗೊಮ್ಮೆ ನಾನು ನಿಮ್ಮೆದುರು ಹಾಜರಿ ಹಾಕುವುದಿಲ್ಲ. ಗುಡ್ ನೈಟ್ ಕವನದ ಸಂಖ್ಯೆ ಹಾಗಿತ್ತು. ಅದಕ್ಕೆ ಹರಕೆ ಒಪ್ಪಿಸುವನಂತೆ ಆ ಪರಿ ಒಂದೇ ಉಸಿರಿಗೆ ಬಿಡುವು ಕೊಡದೆ ಬ್ಲಾಗ್ ಗೆ ಕವನಗಳನ್ನು ಹಾಕುತ್ತ ಬಂದೆ.ಈಗ ನಿಮಗೂ ಹಾಗು ನನಗು ಸ್ವಲ್ಪ ಬಿಡುವು ಕೊಡುತ್ತಿದ್ದೇನೆ.
ಇವಿಷ್ಟು 'ಗುಡ್ ನೈಟ್ ' ಕವನದ ಬಗ್ಗೆ ಹೇಳಬೇಕಿದ್ದು. ಆದರೆ ಇವತ್ತು ನಿಮ್ಮೊಡನೆ ಹಂಚಿಕೊಳ್ಳಲು ಇನ್ನೊಂದು ಚೆಂದದ ವಿಷಯವಿದೆ.ನಿನ್ನೆ ದೀಪಾವಳಿ ಗೆ ಶುಭಾಶಯ ಕೋರಿ ಸುಶ್ರುತಣ್ಣ ಒಂದು ಎಸ್ಸೆಮ್ಮೆಸ್ ಕಳುಹಿಸಿದ್ದ . ಅವ ಕಳುಹಿಸಿದ ಶುಭಾಶಯ ಹೀಗಿತ್ತು ನೋಡಿ:
ಅಸಲಿಗೆ ಗುಡ್ ನೈಟ್ ಕವನಗಳನ್ನು ಬರೆಯುವುದನ್ನು ನಿಲ್ಲಿಸಿ ಎರಡು ವರ್ಷವಾಯಿತು. ಒಟ್ಟು ಮುನ್ನೂರು ಚಿಲ್ಲರೆ ಕವನಗಳು ಇವೆ ಈ 'ಗುಡ್ ನೈಟ್ ' ಕವನಗಳ ಸೂರಿನಡಿ. ಇಷ್ಟು ದೊಡ್ಡ ಸಂಖ್ಯೆಯ ಕಾರಣಕ್ಕೇ ನಾನು ಈ ಕವನಗಳನ್ನು ಬರೆಯುವುದನ್ನು ನಿಲ್ಲಿಸಿದ್ದು. ಹೇಗೆ ಇವುಗಳನ್ನೆಲ್ಲ ಜೋಪಾನ ಮಾಡಲಿ? ಮೊದಲೇ ಸ್ವಲ್ಪ ಜಾಸ್ತಿ ಸೋಮಾರಿ ನಾನು . ಅದಕ್ಕೆ 'ಗುಡ್ ನೈಟ್ ' ಕವನಗಳನ್ನು ನಿಲ್ಲಿಸಿಬಿಟ್ಟೆ. ಈಗ ಬ್ಲಾಗ್ ಗೆ ಈ ಕವನಗಳನ್ನು ಹಾಕುವುದಕ್ಕೆ ಶುರು ಮಾಡಿದ ಮೇಲೆ ಮತ್ತೆ ಹೊಸ ಹೊಸ 'ಗುಡ್ ನೈಟ್' ಕವನಗಳು ಹುಟ್ಟುತ್ತಿವೆ. ನಿಜಕ್ಕೂ ನಾನು ಆಗ ದಿಗಿಲಿಗೆ ಬಿದ್ದೆ. ಈ ' ಗುಡ್ ನೈಟ್ ' ಕವನದ ಮೋಹವೇ ಹಾಗೆ. ಗುಡ್ ನೈಟ್ ಕವನದ ಒಂದು ಸಾಲಿನಮೇಲೆ ಕಣ್ಣು ಹಾಗೆ ಸುಮ್ಮನೆ ಹಾದು ಹೋದರೆ ಸಾಕು, ಹತ್ತು ಕವನಕಾಗುವಷ್ಟು ಭಾವದ ಸರಕು ಮನದ ಖಾತೆಗೆ ಜಮೆಯಾಗಿರುತ್ತೆ. ತಲೆ ಎಂಬೋ ತಲೆ ಅಂಕೆಗೆ ಸಿಗದಷ್ಟು ಕ್ರಿಯಾಶೀಲವಾಗಿ ಹುಚ್ಚಿನ ಹೆಬ್ಬಾಗಿಲ ಹೊಸ್ತಿಲ ಮೆಟ್ಟಿ ವಾಪಾಸಾಗುತ್ತಿರುತ್ತೆ.
ಗುಡ್ ಬೈ ಅಂತ ಹೇಳಿದ ಮಾತ್ರಕ್ಕೆ 'ಗುಡ್ ನೈಟ್' ಕವನಗಳು ನಿಲ್ಲುವುದಿಲ್ಲ. ಅದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ.ನನಗೆ ಬರೆಯೋ ಧೈರ್ಯ ನೀಡಿದ , ನನ್ನ ಎಲ್ಲ ಭಾವನೆಗಳಿಗೆ ಕನ್ನಡಿಯಾದ , ನನ್ನ ಒಳ ಮಾತಿಗೆ ಕಿವಿಯಾದ ,ಎಲ್ಲಕಿಂತ ಮೇಲಾಗಿ ನನ್ನಲ್ಲಿ ಒಂದು ನವಿರು ಮನಸ್ಸನ್ನು ಹುಟ್ಟು ಹಾಕಿ ಅದು ಇನ್ನಷ್ಟು ನವಿರಾಗುವಂತೆ ಮಾಡಿದ "ಗುಡ್ ನೈಟ್ ' ಕವನವನ್ನ ಹೇಗೆ ತಾನೆ ದೂರ ಇಡಲಿ? ಹಾಗೆನಾದರೂ ನಾ ದೂರ ಇಟ್ಟರೆ ನಾನು ಸತ್ಯದಂಥ ಸುಳ್ಳಿನಂತೆ ಆಗಿಬಿಡುತ್ತೇನೆ. ಇನ್ನು ಮುಂದೆ 'ಗುಡ್ ನೈಟ್ ' ಕವನ ಅಗಾಗ ನಡುವೆ ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕಿ ಹೋಗುತ್ತಿರುತ್ತೆ. ಇಷ್ಟು ದಿವಸ ಊಟದಂತಿದ್ದ ಈ ಕವನ ಇನ್ನು ಮುಂದೆ ಊಟದ ನಡುವೆ ಉಪ್ಪಿನಕಾಯಿಯಂತೆ. ಈಗಿನಂತೆ ಮೂರು ನಾಲ್ಕು ದಿನಗಳಿಗೊಮ್ಮೆ ನಾನು ನಿಮ್ಮೆದುರು ಹಾಜರಿ ಹಾಕುವುದಿಲ್ಲ. ಗುಡ್ ನೈಟ್ ಕವನದ ಸಂಖ್ಯೆ ಹಾಗಿತ್ತು. ಅದಕ್ಕೆ ಹರಕೆ ಒಪ್ಪಿಸುವನಂತೆ ಆ ಪರಿ ಒಂದೇ ಉಸಿರಿಗೆ ಬಿಡುವು ಕೊಡದೆ ಬ್ಲಾಗ್ ಗೆ ಕವನಗಳನ್ನು ಹಾಕುತ್ತ ಬಂದೆ.ಈಗ ನಿಮಗೂ ಹಾಗು ನನಗು ಸ್ವಲ್ಪ ಬಿಡುವು ಕೊಡುತ್ತಿದ್ದೇನೆ.
ಇವಿಷ್ಟು 'ಗುಡ್ ನೈಟ್ ' ಕವನದ ಬಗ್ಗೆ ಹೇಳಬೇಕಿದ್ದು. ಆದರೆ ಇವತ್ತು ನಿಮ್ಮೊಡನೆ ಹಂಚಿಕೊಳ್ಳಲು ಇನ್ನೊಂದು ಚೆಂದದ ವಿಷಯವಿದೆ.ನಿನ್ನೆ ದೀಪಾವಳಿ ಗೆ ಶುಭಾಶಯ ಕೋರಿ ಸುಶ್ರುತಣ್ಣ ಒಂದು ಎಸ್ಸೆಮ್ಮೆಸ್ ಕಳುಹಿಸಿದ್ದ . ಅವ ಕಳುಹಿಸಿದ ಶುಭಾಶಯ ಹೀಗಿತ್ತು ನೋಡಿ:
ನಿಮ್ಮ ಕನಸಿನ ಹಾದಿಯಲ್ಲಿನ
ದೀಪದ ಸ್ವಿಚ್ ಗಳು ನಿಮ್ಮ ಕೈಗೆ ಸದಾ
ಎಟಕುವನ್ತಿರಲಿ
ದೀಪಾವಳಿಯ ಶುಭಾಶಯಗಳು .
ಈ ಶುಭಾಶಯಕ್ಕೆ ಪ್ರತಿಯಾಗಿ ನಾನು "ಹ್ಯಾಪಿ ದೀವಾಲಿ" ಅಂತ ಮೆಸೇಜ್ ಟೈಪ್ ಮಾಡಿ ಕಳಿಸೋಕೆ ಅಣಿಯಾಗಿದ್ದೆ.ಆದರೆ ಕೊನೆ ಕ್ಷಣದಲ್ಲಿ ಇಷ್ಟು ಚೆಂದದ ಸಾಲುಗಳಿಗೆ ಸುಮ್ಮನೆ "ಹ್ಯಾಪಿ ದೀವಾಲಿ " ಅಂತ ಹಲ್ಕಿರಿಯೋದು ಸರಿ ಕಾಣಲಿಲ್ಲ . ಅದಕ್ಕೆ ಸುಶ್ರುತಣ್ಣ ನ
ಸಾಲುಗಳಿಗೆ ಉತ್ತರವಾಗಿ ನಾನು ಕೆಲವು ಸಾಲು ಬರೆದೆ.ಅವು ಇಲ್ಲಿವೆ ನೋಡಿ ನಮ್ಮ ಕನಸಿನ ಹಾದಿಯಲ್ಲಿನ
ದೀಪದ ಸ್ವಿಚ್ ಗಳು ನಮ್ಮ ಕೈಲೇ ಇವೆ.
ಕಾಲದ ಕರೆಂಟು ಕೈಕೊಡದೆ ಇರಲಿ.
ಬಾಳು ಟ್ಯೂಬ್ ಲೈಟ್ ಆಗದಿರಲಿ.
ಬಾಳು ನಂದಾದೀಪವಾಗಲಿ.....
ಎಲ್ಲರಿಗೂ ತಡವಾಗಿ ದೀಪಾವಳಿಯ ಶುಭಾಶಯಗಳು :):) ಮತ್ತೆ ಕವನದೊಂದಿಗೆ ಭೇಟಿಯಾಗೋಣ . ಅಲ್ಲಿತನಕ "ಗುಡ್ ನೈಟ್ , ಸ್ವೀಟ್ ಡ್ರೀಮ್ಸ್ ":):)
Subscribe to:
Posts (Atom)