Friday, February 5, 2010

ಫಾರ್ಮ್ ವಿಲ್ಲೆ ಕವನ.......

ಈಗೊಂದು ಮೂರು-ನಾಲ್ಕು ತಿಂಗಳ ಹಿಂದೆ ಸುಶ್ರುತಣ್ಣ 'ಫಾರ್ಮ್ ವಿಲ್ಲೆ'ಆಟದ ಬಗ್ಗೆ ಒಂದು ಲೇಖನ ಹಾಕಿದ್ದ ಅವನ 'ಮೌನಗಾಳ' ಬ್ಲಾಗಿನಲ್ಲಿ.ಲೇಖನ ಎಂದಿನಂತೆ ಚೆನ್ನಾಗಿತ್ತು.ಆದರೆ ಆ ದಿನ ನನ್ನನ್ನು ತುಂಬಾ ಕಾಡಿ , ಆತ ಬರೆದ ವಿಷಯದ ಬಗ್ಗೆ ಒಂದು ಕವನ ಹುಟ್ಟಲು ಕಾರಣವಾಗಿದ್ದು ಅವನ ಲೇಖನಕ್ಕೆ ಸುನಾಥ್ ಸರ್ ಕೊಟ್ಟ ಸುಂದರ ಅಭಿಪ್ರಾಯ ಹಾಗು ಆ ಅಭಿಪ್ರಾಯಕ್ಕೆ ಉತ್ತರವಾಗಿ ಸುಶ್ರುತಣ್ಣ ಕೊಟ್ಟ ಅಷ್ಟೇ ಸುಂದರವಾದ ಪ್ರತಿಕ್ರಿಯೆ.ಅವರಿಬ್ಬರ ಸಾಲುಗಳಿಗೆ ನನ್ನದೂ ಒಂದಿಷ್ಟು ಸಾಲುಗಳನ್ನ ಸೇರಿಸಿ ಆಗ ಒಂದು ಕವನ ಬರೆದೆ.ಒಂದರ್ಥದಲ್ಲಿ ಇದು ಬರಿಯ ಕವನವಲ್ಲ.ಸುಶ್ರುತಣ್ಣ ಬರೆದ ಗದ್ಯದ ಭಾವಾನುವಾದ ,ಕವನದ ರೂಪದಲ್ಲಿ.ಆ ಲೇಖನದ ಲಿಂಕ್ ನನಗೆ ಇಲ್ಲಿ ಕೊಡಲಾಗುತ್ತಿಲ್ಲ .ಕ್ಷಮಿಸಿ.ಏಕೆಂದರೆ ಲಿಂಕ್ ಕೊಡುವುದು ಹೇಗೆಂದು ನನಗೆ ತಿಳಿದಿಲ್ಲ.ನಾನು ಕೊಂಚ ದಡ್ಡ ಇಂಥ ವಿಷಯಗಳಲ್ಲಿ:):) ನೀವೇ ಸಾಧ್ಯವಾದರೆ ಹುಡುಕಿಕೊಂಡು ಹೋಗಿ ಓದಿ :):)
ಫಾರ್ಮ್ ವಿಲ್ಲೆ ಕವನ..........
ಉಳುಮೆ ಮಾಡಿದ್ದು
ಫಸಲು ಪಡೆದದ್ದು
ಕುರಿ ಕೋಳಿ ದನ ಸಾಕಿದ್ದು
ಎಲ್ಲ ಎಲ್ಲ ನಿಜ.
ನಿಜಕೂ ನಿಜವಲ್ಲದು
ಸತ್ಯದಂಥ ಸುಳ್ಳು
ವಾಸ್ತವದ ವರ್ಣಮಯ ನಕಲು ....
ವಿಧ ವಿಧದ ತರಕಾರಿ
ಭತ್ತ ರಾಗಿ ಜೋಳ
ತರಹೇವಾರಿ ಧಾನ್ಯಗಳು
ನೂರೆಂಟು ಬಗೆ ಹಣ್ಣುಗಳು .
ಅಸಲಿಗೆ
ಪರದೆ ಮುಂದಿನ ಮಂದಿಗೆ
ಕಾಯಾಗಿ ಹಣ್ಣೋ
ಹಣ್ಣಾಗಿ ಕಾಯೋ ?
ಹೂವರಳಿ ಮೊಗ್ಗೋ
ಮೊಗ್ಗರಳಿ ಹೂವೋ ?
ಎಂಬುದೇ ತಿಳಿದಿಲ್ಲ.
ನೆಲದಾಳದ ಬೇರು ಕಾಣದಿಲ್ಲಿ
ಕಂಡಷ್ಟೇ ನಿಜ
ಮಿಥ್ಯೆಯಲಿ ನಡೆವ ಆಟವಿದು
ಭ್ರಮೆಗೆ ಕೊನೆಯಿಲ್ಲ.
ಮನೆಯೆದುರೇ ತೋಟ .
ಒಂದಿನವೂ ಹೋದ ನೆನಪಿಲ್ಲ.
ಅಪ್ಪ ಮಾಡಿಟ್ಟ ಗದ್ದೆ
ಅದು ಎಲ್ಲಿದೆಯೋ ಗೊತ್ತಿಲ್ಲ.
ಅಮ್ಮ ಕೊಟ್ಟ ಕೆನೆಹಾಲು
ಕುಡಿದು ಗೊತ್ತು
ಕೊಟ್ಟಿಗೆಗು ನಮಗೂ ಸಂಬಂಧವೇ ಇಲ್ಲ.
ಬದುಕು ತಣ್ಣಗೆ ಅಪ್ಪ ಕಟ್ಟಿಕೊಟ್ಟ ಸೂರಡಿ .
ಬೆಳೆ, ಬೆಲೆ ಕೈಕೊಟ್ಟು
ಅಪ್ಪ ಆಕಾಶ ನೋಡಿದ್ದು
ಅಮ್ಮನ ಒಡವೆ ಅಡವಿಟ್ಟದ್ದು
ಪರದೆಯಾಚೆಯ ಸಂಗತಿಗಳು.
ನಮಗದು ತಿಳಿದೇ ಇಲ್ಲ.
ಮಳೆಯಿರದ
ಬರದ ಸುಳಿವೂ ಇರದ
ಮಾಯಾ ತಾಣದಿ ನಡೆದಿದೆ
ಕೃಷಿಯೆಂಬ ಮೋಜು .
ದೇವರು ನಿಜಕ್ಕೂ ಗ್ರೇಟ್ !
ಸದ್ಯ ಇಲ್ಲಿಯಾದರೂ
ಆತ್ಮಹತ್ಯೆಯ ಆಯ್ಕೆಯಿಲ್ಲ ....

Sunday, January 31, 2010

ವಿಪರ್ಯಾಸ ....

ದಿನ ಬೆಳಿಗ್ಗೆ ಎಂದಿನ ರೂಢಿಯಂತೆ ಪೇಪರ್ ಓದಲು ಕುಳಿತೆ.ಆಗ ನನ್ನೆದುರು ಇದ್ದದ್ದು 'ಸಮಸ್ತ ಕನ್ನಡಿಗರ ಹೆಮ್ಮೆ' ಎಂದು ಹಣೆಪಟ್ಟಿ ಹಚ್ಚಿಕೊಂಡಿದ್ದ ಕನ್ನಡದ ನಂಬರ್ ಒನ್ ದಿನಪತ್ರಿಕೆ .ಎಷ್ಟಂದರೂ ಜನಪ್ರಿಯ ದಿನಪತ್ರಿಕೆ , ಮೊದಲನೇ ಪುಟದಲ್ಲಿ ಅರ್ಧಕ್ಕಿಂತ ಜಾಸ್ತಿ ಪುಟ ಜಾಹೀರಾತು ಇತ್ತು.ಇನ್ನು ಉಳಿದ ಅರ್ಧಕ್ಕಿಂತ ಕಡಿಮೆಯಿದ್ದ ಪುಟದಲ್ಲಿ ಟಿ.ಎಸ್.ಸತ್ಯನ್ ತೀರಿಕೊಂಡ ಸುದ್ದಿ ,ತುಳು ಸಮ್ಮೇಳನದ ಸಮಾರೋಪ ಸಮಾರಂಭದ ವರದಿ,ಹವಾಮಾನ ವರದಿ ಹಾಗು ಒಂದಿಷ್ಟು ರಾಜಕೀಯ ಇತ್ತು.ಇದೆಲ್ಲದರ ಜೊತೆಗೆ ಪೇಪರ್ ಬಲ ಮೂಲೆಯಲ್ಲಿ ಒಂದಿಷ್ಟು ಪುಟ್ಟ ಪುಟ್ಟ ಬರಹದ ತುಣುಕುಗಳು ಇದ್ದುವು .ಮತ್ತೆ ಇವತ್ತಿನ ಬ್ಲಾಗ್ ಬರಹಕ್ಕೆ 'ಸ್ಫೂರ್ತಿಸೆಲೆ'ಯಾದ ಒಂದು ಬರಹವೂ ಇತ್ತು ಅದೇ ಬಲ ಮೂಲೆಯಲ್ಲಿ. ಮೊದಲು ಬರಹವನ್ನ ಓದಿಕೊಳ್ಳಿ .ಆಮೇಲೆ ಉಳಿದ ಕಥೆ .ಅದು ಹೀಗಿದೆ ನೋಡಿ..


''ಭವಿಷ್ಯದ ಬಗ್ಗೆ ಊಹಿಸಲು ಯಾರಿಂದಲೂ ಸಾಧ್ಯವಿಲ್ಲ.ಆದರೆ ಭವಿಷ್ಯವನ್ನು ಸೃಷ್ಟಿಸಲು ಸಾಧ್ಯವಿದೆ.ಅದರಲ್ಲೂ ನಮ್ಮ ಭವಿಷ್ಯ ರೂಪಿಸಬೇಕಾದವರು ನಾವೇ"


ಆಹಾ ಎಷ್ಟು ಒಳ್ಳೆಯ ಮಾತು!ಓದಿ ನನ್ನ ದಿನದ ಬೆಳಗು ಧನ್ಯವಾಯ್ತು ಎಂದುಕೊಂಡೆ.ಹಾಗೆ ಧನ್ಯತೆಯನ್ನ ಅನುಭವಿಸುತ್ತ ಅನುಭವಿಸುತ್ತಾ ಎರಡನೇ ಪುಟಕ್ಕೆ ಬಂದೆ .ಹಾಗೇ ಮುಂದೆ ಮೂರಕ್ಕೆ ತಲುಪಿಕೊಂಡೆ.ಅಲ್ಲಿ 'ದಿನ ಭವಿಷ್ಯ 'ಇತ್ತು .ಹಿರಿಯ ಪುಣ್ಯಾತ್ಮರೊಬ್ಬರು ಅಲ್ಲಿ ಜಗದ ಜನರೆಲ್ಲರ ಹೆಣೆಬರಹವನ್ನ ದಿನದ ಲೆಕ್ಕದಲ್ಲಿ ಲೆಕ್ಕಹಾಕಿ 'ರಾಶಿ'ಮಾಡಿ ನಮ್ಮ ನಮ್ಮ ಹಣೆಬರಹ ನೋಡಿಕೊಳ್ಳುವ ಕರ್ಮವನ್ನ ನಮ್ಮ ಪಾಲಿಗೆ ಹಗುರಾಗಿಸಿ ಇಟ್ಟಿದ್ದರು.ನನ್ನ ಹೆಣೆಬರಹ ದಿನ ಹೀಗಿತ್ತು ನೋಡಿ...


"ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.ಸಗಟು ವ್ಯಾಪಾರಿಗಳಿಗೆ ಒಳ್ಳೆಯ ವ್ಯಾಪಾರದಿಂದ ಹೆಚ್ಚಿನ ಲಾಭ ದೊರೆಯುತ್ತದೆ"


ಅವರು ಹೇಳಿದ ಭವಿಷ್ಯಕ್ಕೂ ನಾನಿದ್ದ ವಾಸ್ತವಕ್ಕೂ ತಾಳಮೇಳ ಸಿಕ್ಕಲಿಲ್ಲ.ವಿಷಯ ಅದಲ್ಲ ಬಿಡಿ..ಮೊದಲ ಪುಟದಲ್ಲಿ ನಮ್ಮ ಭವಿಷ್ಯಕ್ಕೆ ನಾವೇ ಜವಾಬ್ದಾರರು ಎಂಬರ್ಥದಲ್ಲಿ ಬರೆದು ಮೂರನೇ ಪುಟದಲ್ಲಿ ನಮ್ಮ ಭವಿಷ್ಯವನ್ನ ತುಂಬಾ ನೀಟಾಗಿ ಇನ್ಯಾರೋ ಮಹಾನುಭಾವರ ಕೈಯಲ್ಲಿ ಬರೆಸಿ ಹಣೆಬರಹವನ್ನ ಪ್ರಿಂಟ್ ಮಾಡಿ ಬಿಟ್ಟಿದ್ದರಲ್ಲ! ನನಗೆ ತಲೆ ಹನ್ನೆರಡಾಣೆ ಆಗಿದ್ದು ಆವಾಗಲೇ.ಮೊದಲ ಪುಟದ ಧನ್ಯತೆ ಮಣ್ಣು ಮಸಿ ಎಲ್ಲ ಕರಗಿ ಅಳಬೇಕೋ ನಗಬೇಕೋ ಗೊತ್ತಾಗದೆ ಕೊನೆಗೆ ಮನಸಾರೆ ನಕ್ಕಿದ್ದೆ.


ಪಾಪ ಪೇಪರ್ ಮಂದಿ.ತಮ್ಮೆಲ್ಲ ನಿಲುವು,ಅಭಿಪ್ರಾಯ, ತತ್ವ ಸಿದ್ಧಾಂತಗಳ ಜೊತೆ ಎಲ್ಲ ವರ್ಗದ ಜನರನ್ನೂ ಗಮನದಲ್ಲಿಟ್ಟುಕೊಂಡು ಹೆಣಗಬೇಕು.ಮಾರ್ಕೆಟಿಂಗ್ ಮೈಂಡ್ ಇಲ್ಲಿ ಜಾಸ್ತಿಯಾಗಿ ಮುಖ್ಯವಾಗಿ ಬಿಡುತ್ತೆ. ಪತ್ರಿಕೆಯ ಉಳಿವಿಗೆ ಅದು ಅಗತ್ಯ ಕೂಡ.ಅದು ಸರಿ ಎಂದು ಹೇಳಲಾಗದು.ಅದು ಅಗತ್ಯ ಅಷ್ಟೇ.ತಮ್ಮೆಲ್ಲ ವಿಚಾರಗಳ ಜೊತೆ ಓದುಗರನ್ನೂ ಸಂಭಾಳಿಸಿಕೊಂಡು ಹೋಗುವ ಅನಿವಾರ್ಯತೆಯಲ್ಲಿ ಕೆಲವೊಮ್ಮೆ ಥರದ ವಿಪರ್ಯಾಸಗಳು ಹುಟ್ಟಿ ಬಿಡುತ್ತವೆ.ಇಲ್ಲಿ ಯಾರನ್ನೂ ದೂರುವಂತಿಲ್ಲ.ನಮಗೆ ಎಷ್ಟು ಬೇಕೋ ಅಷ್ಟನ್ನು ಪಡೆದುಕೊಂಡು ತಣ್ಣಗೆ ಇದ್ದುಬಿಡಬೇಕು.ನಾವು ಜಾಣರಾಗಬೇಕು. ಪೇಪರ್ ವಿಷಯದಲ್ಲಿ ಮಾತ್ರವಲ್ಲ.ನಿತ್ಯ ಬದುಕಿನಲ್ಲೂ ಕೂಡ.

Friday, January 22, 2010

ಗುಡ್ ನೈಟ್ ಕವನ ೨೨ ....

ಮೊದ ಮೊದಲು ನಿನ್ನೆದುರು
ತೊದಲು ಮಾತಾಡಿದ ದಿನಗಳು
ಮೊದಮೊದಲು ನಿನ್ನೊಂದು ನೋಟದಿ
ಪುಳಕಗೊಳ್ಳುತ್ತಿದ್ದ
ನಿನ್ನ ಕಿರುಬೆರಳ ಸ್ಪರ್ಶಕೆ ಕಿರು ಕಂಪನದಿ
ಝುಂ ಎಂದ ದಿನಗಳು
ಆ ಮೊದಮೊದಲ ಪ್ರೇಮದ ಮೊಳಕೆಯ
ದಿವ್ಯ ದಿನಗಳು
ಎನ್ನೆದೆಯ ಕಪಾಟಿನಲ್ಲಿ ಹಾಗೇ ಇವೆ
ನೆನಪೆಂಬ ರೇಶಿಮೆಯ ಹೊದಿಕೆಯಲ್ಲಿ .

ದೂರವಿರೋ ಎನಗೆ ಅಷ್ಟೇ ಸಾಕು
ಏಕಾಂತದಿ ಎನ್ನಷ್ಟಕ್ಕೆ ನಾನೆನ್ನ ಮರೆಯಲು
ನವಿರು ಕಂಪನದಿ ಸಣ್ಣಕೆ ಬೆವರಲು
ನಿನ್ನ ಕನಸ ಕಣ್ಣಿನಲಿ ತುಂಬಿಕೊಳಲು
ಬ್ರಹ್ಮಚಾರಿಯಾದರೂ ಗೃಹಸ್ಥನಾಗಲು ...

Monday, January 18, 2010

ಗೆಳತಿ ...

ನಿರ್ಮಲೆ ನೀ ಗೆಳತಿ
ಸ್ಫಟಿಕ ಶುಭ್ರ ಮಳೆ ಹನಿಯಂತೆ.
ಸುರಿಯುತಿ ಭೋರ್ಗರೆದು
ಮಹದಾವೇಶಿಯಾಗಿ
ಪ್ರಳಯವಾಗಿ .
ಕೆಲವೊಮ್ಮೆ ತುಂತುರು ತುಂತುರು
ಎಳೆ ಮಗುವ ನಗುವಾಗಿ
ಅಮ್ಮನ ಮೃದು ಸ್ಪರ್ಶವಾಗಿ ...

ಮಳೆನೀರಿಗೆಲ್ಲಿದೆ ಹೇಳು
ದಿಕ್ಕು ದೆಸೆ ?
ತಗ್ಗಲಿ ತುಂಬಿ ಕೆರೆಕೊಳ್ಳವಾಗಿ
ಗಿರಿಯ ಮುಡಿಯಿಂದ ಭರದಿ
ಜಾರಿಳಿದು ಬಿರುಸು ಝರಿಯಾಗಿ
ಕಿರು ತೊರೆಯಾಗಿ
ತುಂಬು ನದಿಯಾಗಿ
ಹರಿವಂತೆ ನೀ
ನಿತ್ಯ ಚಂಚಲೆ ...

ಬಾಗಿ ಬಳುಕಿ
ಜಾರಿ ತೆವಳಿ
ನುಗ್ಗಿ ನುಸುಳಿ
ನಿಡುಸುಯ್ದು ಅಲ್ಲಲ್ಲಿ
ಆಗಾಗ ಸತ್ತವನ ಉಸಿರ ಶಾಂತಿಯಲಿ ಹರಿದು
ಅದು ಇದೆನ್ನದೆ
ಜಗದೆಲ್ಲ ಸಾರವ ಹೀರಿ
ಕೊಚ್ಚೆರಚ್ಚೆಯಾಗುತಿ .
ಮತ್ತೆ ಕಾಲನೆದುರು ಮೈಯೊಡ್ಡಿ
ಶುಭ್ರ ತಿಳಿಯಾಗುತಿ
ಒಂಟಿ ಎನಗೆ
ಜೀವಸೆಲೆಯಾಗುತಿ ...
ನೀ ಎನಗೆ ಗುರುವಾಗುತಿ ...

Wednesday, December 30, 2009

ಈ ಸಾವು ನ್ಯಾಯವೇ?

ಈ ವರ್ಷ ಹೀಗೆ ಕೊನೆಯಾಗಬಾರದಿತ್ತು.ಎರಡೆರಡು ಜೀರ್ಣಿಸಿಕೊಳ್ಳಲಾಗದ ಅಗಲಿಕೆಯಿಂದಾಗಿ ಹೊಸ ವರ್ಷವನ್ನ ಬರಮಾಡಿಕೊಳ್ಳುವಲ್ಲಿ ಯಾವ ಸೊಗಸೂ ಕಾಣುತ್ತಿಲ್ಲ.ಯಾರೇ ತೀರಿಕೊಳ್ಳಲಿ , ಈ ಪೇಪರ್ ಹಾಗು ಮಾಧ್ಯಮದ ಬಾಯಲ್ಲಿ ಬರುತ್ತಿದ್ದ 'ತುಂಬಿ ಕೊಳ್ಳಲಾಗದ ನಷ್ಟ 'ಎಂಬ ಅರ್ಥ ಕಳೆದುಕೊಂಡ ಪದ ಈ ಎರಡು ಅಗಲಿಕೆಗಳಲ್ಲಿ ನಿಜವಾದ ಅರ್ಥವನ್ನ ಪಡೆದುಕೊಂಡು ಇನ್ನಷ್ಟು ಅರ್ಥಪೂರ್ಣವಾದಂತೆ ತೋರುತ್ತಿದೆ.ಒಬ್ಬ ಹಿರಿಯ ಗಾಯಕ .ಇನ್ನೊಬ್ಬ ಮೇರು ನಾಯಕ.ಬುದ್ಧಿಗೆ ತಿಳಿದ ಸಾವನ್ನ ಮನಸ್ಸು ಯಾಕೋ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಸಿದ್ಧವಿಲ್ಲ.ನಿನ್ನೆ ಅಶ್ವಥ್ ಇನ್ನಿಲ್ಲವಾದರು.ಇಂದು ವಿಷ್ಣು ಇನ್ನಿಲ್ಲ.ಬೆಳಗ್ಗಿನಿಂದ ಯಾಕೋ ಒಂದು ಬಗೆಯ ಸಂಕಟ.ಇವರಿಬ್ಬರೂ ನಮ್ಮ ಪಾಲಿಗೆ ಇನ್ನೂ ತುಂಬಾ ತುಂಬಾ ಬೇಕಿತ್ತು.ವಯಸ್ಸಾದಂತೆ ಅಶ್ವಥ್ ಯುವಕರಾಗತೊಡಗಿದ್ದರು.ಮಾಗಿದ ವಿಷ್ಣು ಹೊಸ ಹಾದಿಗೆ, ಹೊಸ ಬಗೆಯ ಸಿನಿಮಾಕ್ಕೆ ತಿರುಗಿಕೊಳ್ಳುವ ಸೂಚನೆ ನೀಡಿದ್ದರು.ಅದೆಂಥ ಅವಸರಿತ್ತೋ ಅವರಿಗೆ? ತೀರ ಬೇಗ ಹೋಗಿಬಿಟ್ಟರು.
' ಎದೆ ತುಂಬಿ ಹಾಡುವೆನು'ಕಾರ್ಯಕ್ರಮದ ಸಂದರ್ಭದಲ್ಲಿ ಎಸ್.ಪಿ.ಬಿ ಒಂದು ಮಾತು ಹೇಳಿದ್ದರು ;ರಾಜ್ಕುಮಾರ್ ಹಾಗು ಅಶ್ವಥ್ ಹಾಡಿದ ಹಾಡುಗಳನ್ನು ಎಂಥವನಿಗೂ ಹಾಡುವುದು ಕಷ್ಟ,ನಾನು ಕೂಡ ಆ ಧೈರ್ಯ ಮಾಡಲಾರೆ ಎಂದು. ಎಸ್.ಪಿ.ಬಿ ಆಡಿದ ಅದೊಂದೇ ಮಾತು ಸಾಕು ಅಶ್ವಥ್ ಗಾಯನದ ಶಕ್ತಿ ಹಾಗು ಆಳವನ್ನ ಅರಿವಿಗೆ ತಂದುಕೊಳ್ಳಲು.ಅಶ್ವಥ್ ಹಾಡಿದ ಹಾಡುಗಳನ್ನ ಇನ್ಯಾರೇ ಎಷ್ಟೇ ಪರಿಶ್ರಮ ಪಟ್ಟು ಹಾಡಿದರೂ ,ಹಾಡಿಗೆ ಅಶ್ವಥ್ ತುಂಬುತ್ತಿದ್ದ ಅಪರೂಪದ ಜೀವವನ್ನ ಅವರು ತುಂಬಲಾರರು.ಅಶ್ವಥ್ ಬರಿದೆ ಹಾಡುತ್ತಿರಲಿಲ್ಲ.ಅವರೇ ಹಾಡಾಗುತ್ತಿದ್ದರು.ಅಗಲಿ ಹೋಗುವ ಅನಿವಾರ್ಯ ಬಾರದೆ ಇರುತ್ತಿದ್ದರೆ ಆ ಹಿರಿಯ ಗಾಯಕನ ಹುಟ್ಟುಹಬ್ಬದ ದಿನ ಇನ್ನೊಂದು ಅದ್ಭುತ ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿತ್ತು.ಅಂದುಕೊಂಡಂತೆ ಎಲ್ಲವೂ ನಡೆಯಲಿಲ್ಲ.ಎಲ್ಲೋ ತಾಳದ ಲೆಕ್ಕ ತಪ್ಪಿ ಅಪಸ್ವರದ ಶೋಕರಾಗ ಹುಟ್ಟಿಹೋಯಿತು.ಅಶ್ವಥ್ ನಮಗೆ ಬೇಕು ಬೇಕು ಎನ್ನುತ್ತಿರುವಾಗಲೇ , ಅವರಿಗೆ ಬದುಕು ಯಾಕೆ ಸಾಕಾಗಿ ಹೋಯಿತೋ?..
ಅಶ್ವಥ್ ಹಿಂದೆ ವಿಷ್ಣು ಹೋದರು.ಬರೆಯ ಮೇಲೆ ಬರೆ.ನಾನು ವಿಷ್ಣು ಕಟ್ಟಾ ಅಭಿಮಾನಿಯಲ್ಲ.ಆದರೆ ಅವರ ಪ್ರತಿಭೆ ಹಾಗು ವ್ಯಕ್ತಿತ್ವವನ್ನ ಮೆಚ್ಚಿಕೊಳ್ಳದೆ ಇರಲಾರದವನೂ ಅಲ್ಲ.ಅವರ 'ನಾಗರ ಹಾವು' ಹಾಗು 'ಮುತ್ತಿನಹಾರ 'ಚಿತ್ರಗಳನ್ನ ಅದೆಷ್ಟು ಬಾರಿ ನೋಡಿದ್ದೇನೋ ಲೆಕ್ಕವಿಲ್ಲ.ವಿಷ್ಣು ಕೇವಲ ನಟರಾಗಿ ಮಾತ್ರವಲ್ಲ ,ಮನುಷ್ಯನಾಗಿ ಕೂಡ ಆದರ್ಶಪಾಯ.ಇಷ್ಟು ವರ್ಷದ ಸಿನಿ ಬದುಕಿನಲ್ಲಿ ಅವರ ಬಗ್ಗೆ ಒಂದೇ ಒಂದು ಸಣ್ಣ ಕಪ್ಪುಚುಕ್ಕೆಯಿಲ್ಲ.ಖಾಸಗಿ ಬದುಕಿನಲ್ಲೂ ಹುಳುಕು ಸಿಕ್ಕುವುದಿಲ್ಲ.ಜನಪ್ರಿಯನಾದವನು ಹೇಗಿರಬೇಕೆಂಬುದಕ್ಕೆ ವಿಷ್ಣು ಒಳ್ಳೆಯ ಉದಾಹರಣೆ. ವಿವಾದಗಳು ,ಅವಾಂತರಗಳು ಇಲ್ಲದೆ ಇರಲು ಸಾಧ್ಯವೇ ಇಲ್ಲ ಎಂಬಂತಿರುವ ಹೊಸ ಪೀಳಿಗೆಯ ನಟರಿಗೆ , ಸಿನಿಮಾ ಮಂದಿಗೆ ವಿಷ್ಣು ಅವರನ್ನ ನೋಡಿ ಕಲಿಯಬೇಕಾದ್ದು ತುಂಬಾ ಇದೆ.ಮೊನ್ನೆ ಮೊನ್ನೆ ಅವರ 'ಬಳ್ಳಾರಿ ನಾಗ 'ಚಿತ್ರವನ್ನ ನೋಡಿದ್ದೆ.ಈ ವಯಸ್ಸಿನಲ್ಲಿ ಅವರ ಎನರ್ಜಿ ಕಂಡು ಬೆರಗಾಗಿದ್ದೆ.ಮತ್ತೆ ವಿಷ್ಣು ಕಮಾಲ್ ಶುರುವಾಯಿತೆಂದು ಖುಷಿಪಟ್ಟಿದ್ದೆ ಆಗ.ಈಗ ನೋಡಿದರೆ ವಿಷ್ಣು ನಿಸ್ತೇಜರಾಗಿ ಮಲಗಿ ಬಿಟ್ಟಿದ್ದಾರೆ .ಇವತ್ತು ಬೆಳಿಗ್ಗೆ 'ಜಿಮ್ಮಿಗಲ್ಲು 'ಚಿತ್ರದ 'ತುತ್ತು ಅನ್ನತಿನ್ನೋಕೆ ,ಬೊಗಸೆ ನೀರು ಕುಡಿಯೋಕೆ 'ಹಾಡು ಟಿ.ವಿ .ಲಿ ಬರುತ್ತಿತ್ತು. ಪಲ್ಲವಿ ಮುಗಿದು ಹಾಡು ಮೊದಲ ಚರಣಕ್ಕೆತಲುಪಿಕೊಂಡಿತ್ತು . ಮುಂದೆ ಕೇಳಲಾಗದೆ ಎದ್ದುಬಂದುಬಿಟ್ಟೆ.ಎಷ್ಟು ತಡೆದೆನೆಂದರೂ ಉಕ್ಕಿ ಬರುವ ಸಂಕಟವನ್ನ ತಡೆಹಿಡಿದುಕೊಳ್ಳಲಾಗಲಿಲ್ಲ.ರೂಂ ಗೆ ಬಂದು ನೋಡಿದರೆ ರೂಂ ಮೇಟ್ ಹೆಚ್ಚು ಕಡಿಮೆ ನನ್ನದೇ ಪರಿಸ್ಥಿತಿಯಲ್ಲಿದ್ದ."ಛೆ ಹೀಗಾಗ್ ಬಾರ್ದಿತ್ತಲೇ" ಎಂದ.ನಾನು ಟವೆಲ್ ತೆಗೆದುಕೊಂಡು ಮೂಗೊರೆಸಿಕೊಳ್ಳುತ್ತಿದ್ದೆ...
ಈ ಎರಡು ಮಹಾನ್ ಚೇತನಗಳಿಗೆ ಶ್ರದ್ಧಾಂಜಲಿ ಹೇಳಲು ನನಗೆ ಇಷ್ಟವಿಲ್ಲ. ಈ ಸಾವು , ಶ್ರದ್ಧಾಂಜಲಿ ಎಂಬುದೆಲ್ಲ ಸಾಮಾನ್ಯರಿಗೆ.ಇವರಿಗಲ್ಲ.ಸಾವಿನಾಚೆ ಬದುಕುವವರು ಇವರು.....

Saturday, December 26, 2009

ಹಾಸ್ಟೆಲ್ ಚಿತ್ರಗಳು ....

ಚಿತ್ರ ೧....

ಈ ವರ್ಷ ಹಾಸ್ಟೆಲ್ ನಲ್ಲಿ ನಾನಿರುವ ಫ್ಲೋರ್ ಗೆ ಭಾರತದ ಉತ್ತರದ ಸೀಮೆಯಿಂದ ಇಬ್ಬರು ಅವಳಿ ಜವಳಿ ಸಹೋದರರು ಬಂದಿದ್ದಾರೆ. ಅವರು ಹಾಸ್ಟೆಲ್ ಗೆ ಸೇರುವಾಗ ಅವರಮ್ಮನ ಜೊತೆಗೂಡಿ ಬಂದಿದ್ದರು. ಅವರ ಜೊತೆಗೂಡಿ ಬಂದ ಅವರಮ್ಮ ಹತ್ತಿರ ಹತ್ತಿರ ಎರಡು ವಾರದ ಕಾಲ ಹಾಸ್ಟೆಲ್ ನಲ್ಲೇ ಉಳಿದುಕೊಂಡಿದ್ದರು . ಮಕ್ಕಳು ಹೊಸ ವಾತಾವರಣಕ್ಕೆ ಹೊಂದಿಕೊಂಡು ಹೊಸ ವಾತಾವರಣ ಅವರಿಗೆ ಒಗ್ಗಿದ್ದನ್ನು ಖಾತ್ರಿಪಡಿಸಿಕೊಂಡ ಮೇಲೆಯೇ ಆ ತಾಯಿ ಮತ್ತೆ ಉತ್ತರಕ್ಕೆ ಮುಖ ಮಾಡಿ ಹೊರಟದ್ದು .
ಅವರು ಬಂದು ಇನ್ನೂ ಎರಡು ದಿನವಾಗಿತ್ತಷ್ಟೇ . ಅವಳಿ ಜವಳಿ ಸಹೋದರರ ಪೈಕಿ ಒಬ್ಬನಿಗೆ ವಿಪರೀತ ಜ್ವರ . ಹಂದಿ ಜ್ವರದ ಭೀತಿ ಎಲ್ಲೆಡೆ ಹಬ್ಬಿದ್ದ ಸಮಯ ಅದು. ಆ ತಾಯಿ ಆತಂಕದ ಗೂಡಾಗಿ ಹೋಗಿದ್ದಳು . ಮಗನ ಹಣೆಮುಟ್ಟಿ ನೋಡಿದವಳಿಗೆ ಜ್ವರ ವಿಪರೀತ ಇದೆ ಎನ್ನುವುದು ತಿಳಿಯುತ್ತಿತ್ತು . ಆದರೆ ಅವಳಿಗೆ ಜ್ವರ ಎಷ್ಟು ಡಿಗ್ರಿ ಮಟ್ಟಕ್ಕೆ ಏರಿದೆ ಎಂಬುದು ತುರ್ತಾಗಿ ತಿಳಿಯಬೇಕಿತ್ತು . ಡಿಗ್ರಿ ಅಳೆಯಲಿಕ್ಕೆ ಥರ್ಮೋಮೀಟರ್
ಬೇಕೇ ಬೇಕಿತ್ತು . ಆದರೆ ಎಲ್ಲಿಂದ ಮತ್ತು ಯಾರ ಬಳಿ ತರುವುದು? ಸಾಲಾಗಿ ಎಲ್ಲ ರೂಮಿನ ಬಾಗಿಲು ತಟ್ಟುತ್ತ ಬಂದಿದ್ದಳು . ಎಲ್ಲೂ ಸಿಕ್ಕಿರಲಿಲ್ಲ ಥರ್ಮೋ ಮೀಟರ್ರು .ಹಾಗೆ ಬಾಗಿಲು ತಟ್ಟುತ್ತ ಬಂದ ಆ ತಾಯಿ ನನ್ನ ರೂಮಿನ ಬಾಗಿಲೆದುರು ನಿಂತಿದ್ದಳು . ನಾನು " ಏನು " ಎಂದೆ. ನನ್ನ ಮಗನಿಗೆ ವಿಪರೀತ ಜ್ವರ. ಥರ್ಮೋ ಮೀಟರ್ ಇದ್ದರೆ ಬೇಕಿತ್ತು ಎಂದಳು . ಅಯ್ಯೋ ದೇವರೇ ! ಥರ್ಮೋ ಮೀಟರ್ರು ನನ್ನ ಹತ್ತಿರ ಎಲ್ಲಿಂದ ಬರಬೇಕು? . ಬಹುಶ ಆಕೆಗೂ ಅದು ಗೊತ್ತಿತ್ತು .ಆದರೂ ಕೇಳಿದ್ದಳು ಸಿಕ್ಕರೂ ಸಿಕ್ಕೀತೆಂಬ ಚೂರೇ ಚೂರು ಭರವಸೆಯಿಂದ . ನಾನು " ಇಲ್ಲ " ಎಂದೆ . ಇಲ್ಲೇ ವಾರ್ಡನ್ ರೂಂ ಪಕ್ಕ ಮೆಡಿಕಲ್ ರೂಂ ಇದೆ,ಅಲ್ಲಿ ನಿಮಗೆ ಥರ್ಮೋ ಮೀಟರ್ ಹಾಗು ಮೆಡಿಸಿನ್ ಎರಡೂ ಸಿಗುತ್ತೆ , ಹೋಗಿ ವಿಚಾರಿಸಿ ಎಂದೆ . ಆಗ ನೋಡಬೇಕಿತ್ತು ಆ ತಾಯಿಯ ಮುಖ ಅರಳಿಕೊಂಡಿದ್ದನ್ನ.ಅಷ್ಟು ಕಾಲ ಅವಳ ಕಣ್ಣಿನಲಿ ಹರವಿಕೊಂಡಿದ್ದ ಆತಂಕದ ಮಂಜು ಮಂಜು ಪರದೆ ಸರಿದು ಸಮಾಧಾನ ಅಲ್ಲಿ ಮನೆ ಮಾಡಿತ್ತು . ನನಗೊಂದು ಧನ್ಯವಾದ ಹೇಳಿ ಆ ತಾಯಿ ಹೋದಳು . ಮಗನಿಗೆ ಬಂದ ಜ್ವರ ಹಂದಿ ಜ್ವರವಾಗಿರದೆ ಮಾಮೂಲಿ ಜ್ವರವಾಗಿತ್ತು . ಇನ್ನೆರಡು ದಿನಗಳಲ್ಲಿ ಆಕೆಯ ಮಗ ಚೇತರಿಸಿಕೊಂಡ.
ಇದ್ದಷ್ಟೂ ದಿನ ಆ ತಾಯಿ ನನ್ನ ಕಂಡಾಗಲೆಲ್ಲ ಒಂದು ನಗೆಯಾಗಿ ಒಂದೆರಡು ಕುಶಲೋಪರಿಯ ಮಾತಾಗುತ್ತಿದ್ದಳು. ಮತ್ತೆ ಮರಳಿ ಹೊರಟು ನಿಂತಾಗ ಇನ್ನೊಮ್ಮೆ ಧನ್ಯವಾದ ಹೇಳಿ ಹೋಗಿ ಬರುತ್ತೇನೆ ಎಂದಳು . ಆಗಾಗ ಆ ತಾಯಿ ಬರುತ್ತಿರುತ್ತಾಳೆ ನನ್ನ ಮನದ ಕಣ್ಣೆದುರು ನೆನಪಾಗಿ ,ಪ್ರತಿಬಾರಿ ಬಂದಾಗಲೂ ಬೇರೆ ಬೇರೆಯದೇ ಯೋಚನೆಯಾಗಿ . ಅವತ್ತು ಆಕೆ ಅವಳ ಇನ್ನೊಬ್ಬ ಮಗನನ್ನು ಕಳಿಸಬಹುದಿತ್ತು ಥೆರ್ಮೋ ಮೀಟರ್ ಕೇಳಿಕೊಂಡು ಬರಲಿಕ್ಕೆ . ಗೊತ್ತಿಲ್ಲದ ಊರು , ಅಪರಿಚಿತ ಮುಖಗಳು .ಆದರೂ ಅವಳೇ ಬಂದಳು . ಎಷ್ಟಂದರೂ ತಾಯಿ , ತನ್ನ ಪಾತ್ರವನ್ನ ಬೇರೆ ಯಾರೂ ನಿಭಾಯಿಸಲಾರರು ಎಂದು ಆಕೆಗೆ ಗೊತ್ತು. ಮತ್ತು ಆಕೆಗಷ್ಟೇ ಗೊತ್ತು ....

Thursday, November 26, 2009

ಬರುತ್ತೇನೆ ಶೀಘ್ರ ...:)

ಮೊನ್ನೆ ಮೊನ್ನೆ ಬ್ಲಾಗ್ ಸಹವಾಸ ಸಾಕೆಂದು ಹೋಗಿದ್ದೆ . ಈಗ ಅದೇ ನಾನು ಮತ್ತೆ ಶೀಘ್ರ ಬರುತ್ತೇನೆ ಎನ್ನುತ್ತಿದ್ದೇನೆ. ಸಾಕು ಹೇಳಿದ್ದಕ್ಕೂ ಸಕಾರಣವಿತ್ತು. ಬರುತ್ತೇನೆ ಎನ್ನುವುದಕ್ಕೂ ಸಕಾರಣ ಇದ್ದೇ ಇದೆ .
ಬ್ಲಾಗ್ ಸಹವಾಸ ಸಾಕೆಂದು ಹೇಳಿ ಹೋಗುವುದೇನೋ ಹೋಗಿಬಿಟ್ಟೆ .ಹಾಗೆ ಹೋದ ಘಳಿಗೆಯಲ್ಲಿ ಹೊಸ ಹವ್ಯಾಸ ಕೈಹಿಡಿಯಿತು.ಬ್ಲಾಗ್ ಲೋಕದ ಹಳೆಯ ತಲೆಗಳ ಮೊದಮೊದಲ ಪ್ರಾರಂಭದ ಪೋಸ್ಟ್ ಗಳನ್ನ ಓದುವ ಹವ್ಯಾಸ . ಹಾಗೆ ನನಗೆ ಪರಿಚಯದ ಹಿರೀಕರ ಬ್ಲಾಗ್ ಗಳನ್ನ ಸಾಲಾಗಿ ಓದಿ ಮುಗಿಸುತ್ತ ಬಂದೆ . ಓದಿನ ಹಾದಿಯಲ್ಲಿ ಸಣ್ಣ ಝರಿ ಹೊಳೆಯಾಗಿ ನಂತರ ಅಗಾಧ ನದಿಯಾಗಿ ಹರಡಿಕೊಳ್ಳುವ ಬೆಳವಣಿಗೆಯನ್ನ ಕೆಲವರ ಬ್ಲಾಗ್ ಬೆಳೆದು ಬಂದ ಪರಿಯಲ್ಲಿ ಕಂಡಿದ್ದೇನೆ. ಕೆಲವು ಧೀರ್ಘ ಅಜ್ಞಾತವಾಸವನ್ನ , ಚುಟುಕು ವಿದಾಯವನ್ನ , ಬರಗಾಲದ ದಿನಗಳನ್ನ , ಸಮೃದ್ಧಿಯ ಉಪಮೆಯನ್ನ ಅಲ್ಲಲ್ಲಿ ಕಂಡಿದ್ದೇನೆ.ಓದುತ್ತ ಓದುತ್ತ ಹೊಸ ವಿಚಾರಗಳಿಗೆ ತೆರೆದುಕೊಂಡಿದ್ದೇನೆ . ಈ ವಿದಾಯ ಎಂಬೋ ಪದವನ್ನು ನಾನು ಯಾಕೆ ಆ ದಿನ ಬಳಸಿದೆ ಎಂದು ಯೋಚಿಸಿದ್ದೇನೆ. ನನ್ನ ಈ ಅರೆ ಬೆಂದ ವಯಸ್ಸಿಗೆ , ಕ್ಷಣಕ್ಕೊಮ್ಮೆ ಬದಲಾಗೋ ಈ ಹರೆಯದ ರೀತಿಗೆ ನನ್ನೊಳಗೆ ನಕ್ಕಿದ್ದೇನೆ . ಈ ವಿದಾಯಗಳು , ಸಾಕೆ ಸಾಕು ಎಂಬುದೆಲ್ಲ ಎಷ್ಟು ಅರ್ಥಹೀನ ಎಂಬ ಅರಿವನ್ನ ತಂದುಕೊಂಡಿದ್ದೇನೆ .:):)

ಇವತ್ತು ಜ್ಯೋತಿ ಅಕ್ಕನ ಬ್ಲಾಗ್ ಮೂಲಕ್ಕೆ ಹೋಗಿದ್ದೆ. ಅಕ್ಕನ ಮೊದಮೊದಲ ಬರಹಗಳು ಈ ದಿನ ಎನ್ನ ಪಾಲಿಗೆ 'ಗೀತೋಪದೇಶ 'ವಾಯಿತು . ಅದಕ್ಕೆ ಮತ್ತೆ ನನ್ನೆಲ್ಲ ನಿರಾಸಕ್ತಿಯನ್ನ, ವೈರಾಗ್ಯವನ್ನ ಬದಿಗಿಟ್ಟು ರಣರಂಗಕ್ಕೆ ( ಬ್ಲಾಗ್ ರಂಗಕ್ಕೆ) ಮರುಳುವ ಮನಸ್ಸು ಮಾಡಿದ್ದೇನೆ . ಇನ್ನು ಮೇಲೆ ಪೆಕರು ಪೆಕರಾಗಿ ವಿದಾಯದ ಮಾತು ಹೇಳುವ ಮಳ್ಳುತನ ಮಾಡಲಾರೆ. :):)

ಅಂದ ಹಾಗೆ ಹೊಸ ವಿಚಾರಗಳು ಹುಟ್ಟುತಿವೆ . ಎಲ್ಲವನ್ನೂ ನೋಟ್ ಮಾಡಿಕೊಳ್ಳುತ್ತಿದ್ದೇನೆ . ಪರೀಕ್ಷೆ ಮುಗಿದ ಮೇಲೆ ಅವಕ್ಕೆಲ್ಲ ಒಂದು ಗತಿ ಕಾಣಿಸುತ್ತೇನೆ :)
ಮತ್ತೆ ನಿಮ್ಮೆದುರು ಮತ್ತೊಂದು ವಿಚಾರವನ್ನ ಅಗತ್ಯವಾಗಿ ಹೇಳಬೇಕಿದೆ . ಬ್ಲಾಗ್ ಲೋಕದಲ್ಲಿ ಕೆಲವೊಮ್ಮೆ ಬರಹಕ್ಕಿಂತ ಬರಹದ ಕುರಿತಾದ ಕಾಮೆಂಟ್ಸ್ ಭಲೇ ಮಜವಾಗಿರುತ್ತೆ . ಕೆಲವರ ಕಾಮೆಂಟ್ ತುಂಬಾ ಆಳವಾಗಿ ಯೋಚನೆಗೆ ಹಚ್ಚುತ್ತವೆ . ಈಗ ಇಂಥ ಅಪರೂಪದ ಕಾಮೆಂಟ್ಸ್ ಗಳನ್ನ ಒಟ್ಟು ಮಾಡಿ ಅದಕ್ಕೆಂದೇ ಒಂದು ಬ್ಲಾಗ್ ಯಾಕೆ ಮಾಡಬಾರದು ಎಂಬ ಯೋಚನೆ ನನ್ನದು . ನಿಮ್ಮ ಅಭಿಪ್ರಾಯ ತಿಳಿಸಿ :):) ಮತ್ತೆ ಸಿಗೋಣ .....