Tuesday, November 3, 2009

ನಾನೇಕೆ ಬರೆಯಬೇಕು? .....

ನಾನೇಕೆ ಬರೆಯಬೇಕು? ಈ ಕವಿತೆ ಕಟ್ಟುವುದು, ಹಾಡು ಬರೆಯುವುದು , ಕನಸು ಕಾಣುವುದು ಇವೆಲ್ಲ ಯಾಕೆ ಬೇಕು? ಎಲ್ಲರಂತೆ ವಾಸ್ತವಕ್ಕೆ ಅಂಟಿಕೊಂಡು ಸುಮ್ಮನೆ ಯಾಕಿರಬಾರದು? ತೀರಾ ಭ್ರಮೆಗೆ ಬಿದ್ದು ಬದುಕುತ್ತಿದ್ದೇನೆಯೇ ? ಹೀಗೆ ಇಂಥ ನೂರು ಪ್ರಶ್ನೆಗಳು ನನ್ನನ್ನು ಸಾವಿರ ಸಾವಿರ ಸಲ ಕಾಡಿವೆ. ನನ್ನ ಈ ಕವಿತೆ, ಹಾಡು ಎಲ್ಲ ಬಿಟ್ಟು ಇದ್ದು ಬಿಡಲು ತುಂಬ ಸಲ ಪ್ರಯತ್ನಿಸಿದ್ದೇನೆ. ಆದರೆ ಹಾಗೆ ಪ್ರಯತ್ನಿಸಿ ಪ್ರತಿಬಾರಿ ಸೋತಿದ್ದೇನೆ.ಮೂಗಿನಲ್ಲಿ ಉಸಿರಾಡೋ ಬದಲು ಇನ್ನೆಲ್ಲೋ ಉಸಿರಾಡಿದಂತೆ ಭಾಸವಾಗಿ ನಾನು ನನ್ನತನಕ್ಕೆ ಮರಳಿದ್ದೇನೆ. ಅವನ್ನೆಲ್ಲ ಬಿಟ್ಟು ಬದುಕುವುದು ನನಗೆ ಒಗ್ಗುವ ಸಂಗತಿಯಲ್ಲ ಎಂದು ತಿಳಿದು ಅವನ್ನೆಲ್ಲ ಬಿಡುವ ವ್ಯರ್ಥಪ್ರಯತ್ನವನ್ನು ಮಾಡುವ ಅವಿವೇಕವನ್ನು ನಿಲ್ಲಿಸಿದ್ದೇನೆ. ಅವುಗಳನ್ನು ನನ್ನೊಡನೆ ಕಟ್ಟಿಕೊಂಡು ವಾಸ್ತವದೊಡನೆ ಬದುಕುವುದನ್ನು ಕಲಿತಿದ್ದೇನೆ. ನಾನು ಹೀಗೆ ಬದುಕುವುದಕ್ಕೆ ನನ್ನದೇ ಕೆಲವು ಕಾರಣಗಳನ್ನು ಹುಡುಕಿಕೊಂಡಿದ್ದೆನೆ. ಕಾರಣಗಳು ನನ್ನ ಬದುಕಿನ ರೀತಿಯನ್ನು
ಪ್ರಶ್ನಿಸುವವರಿಗೆ ಉತ್ತರ ಕೊಡಲಿಕ್ಕೆ ಅಲ್ಲ. ಅದು ನಾನು ಬದುಕುತ್ತಿರುವ ರೀತಿಗೆ ಒಂದು ಸಮಜಾಯಿಷಿ ನನ್ನಿಂದ ನನ್ನ ಸಲುವಾಗಿ.ಅಗಾಗ ಧುತ್ತೆಂದು ಎದುರಾಗೋ ನನ್ನೊಳಗಿನ ಗೊಂದಲಗಳಿಗೆ , ಬಿಡದೆ ಕಾಡುವ ಪ್ರಶ್ನೆಗಳಿಗೆ ಉತ್ತರವಾಗಿ ಈ ಕಾರಣಗಳು.ಅಷ್ಟಕ್ಕೂ ನಮ್ಮ ಬದುಕ ಪ್ರಶ್ನಿಸುವವರಿಗೆ , ಅವರ ಬಗೆಹರಿಯದ ಪ್ರಶ್ನೆಗಳಿಗೆ ನಾವೇಕೆ ಉತ್ತರಿಸಬೇಕು?
ಈ ಕಾರಣಗಳನ್ನು ನಾನು ಹುಡುಕಿಕೊಂಡ ಮೇಲೆ ನಾನು ತುಂಬ ನನ್ನಂತೆ ನಿರಾಳವಾಗಿ ಬದುಕುತ್ತಿದ್ದೇನೆ.ಜಗತ್ತು ನನ್ನೆದುರು ಬಂದಾಗ ಥೇಟ್ ಜಗತ್ತಿನಂತೆ ಜಗತ್ತಿನೊಂದಿಗೆ ವ್ಯವಹರಿಸಿ,ಜಗತ್ತು ಕೈ ಬೀಸಿ ಬೆನ್ನು ತಿರುಗಿಸಿ ಹೋದ ಮರುಕ್ಷಣ ನಾನು ನನ್ನೊಳಗೆ ಮಗುವಾಗಿಯೋ, ಯಾವುದೋ ಕನಸಾಗಿಯೋ , ಇಷ್ಟದ ಹಾಡಿನ ಎಳೆಯಾಗಿಯೋ, ಕಾಡುವ ಮೌನವಾಗಿಯೋ ಹೀಗೆ ಏನೋ ಒಂದು ಆಗಿಬಿಡುತ್ತೇನೆ ; ನನ್ನನ್ನು ನಾನು ಸುಮ್ಮನೆ ಹಾಗೆ ಸಹಜತೆಯ ತೆಕ್ಕೆಗೆ ಒಪ್ಪಿಸಿ . ಈ ದಿನ ನಿಮಗೆ ಏನೋ ಹೇಳಬೇಕೆಂದುಕೊಂಡು ನಿಮ್ಮೆದುರು ಬಂದೆ. ಆದರೆ ಹೇಳುವುದನ್ನು ಮರೆತು ಇನ್ನೆಲ್ಲೋ ಹೋಗಿಬಿಟ್ಟೆ. ನಾನು ತೀರಾ ನನ್ನಂತಾಗಿಬಿಟ್ಟರೆ ಆಗುವ ಅನಾಹುತಗಳೆಲ್ಲ ಇಂಥವೇ. ಯಾವುದೋ ಜಾಡ ಹಿಡಿದು ಹೊರಟವನು ಕೊನೆಗೆ ನನ್ನದೇ ದಾರಿಗೆ ಬಂದು ಬಿಟ್ಟಿರುತ್ತೇನೆ. ನಾನು ನನ್ನ ಬದುಕಿನ ರೀತಿಗೆ ಹುಡುಕಿಕೊಂಡ ಕಾರಣಗಳನ್ನು ಹೇಳ ಬಂದವನು ನಾನು. ಹೇಳುತ್ತೇನೆ ಕೇಳಿ.
ಕಾರಣ ೧.......
ಹೇಳಲಿಕ್ಕೆ ನೂರು ಸಂಗತಿಗಳಿರುತ್ತವೆ ನಮ್ಮೊಡನೆ. ನಮ್ಮ ಪುಟ್ಟ ಪುಟ್ಟ ಸಂತೋಷಗಳು, ನವಿರು ಕನಸುಗಳು , ಎಲ್ಲೋ ಎದೆಯ ಮೂಲೆಯಲಿ ಸಣ್ಣಗೆ ಇರಿಯುವ ನೋವುಗಳು ,ಹೀಗೆ ಇನ್ನು ಏನೇನೋ ಇರುತ್ತವೆ ನಮ್ಮ ಭಾವದ ಬುಟ್ಟಿಯಲಿ. ಆದರೆ ಕೇಳಲು ಕಿವಿಗಳೇ ಇರುವುದಿಲ್ಲ ಸುತ್ತ ಜಗದಲ್ಲಿ.ಅಷ್ಟಕ್ಕೂ ಜಗತ್ತಿಗೆ ಅದರದೇ ಆದ ತಲೆಬಿಸಿ , ಅದರದೇ ಆದ ಹಲವು ಬಗೆಹರಿಯದ ಸಮಸ್ಯೆಗಳಿರುವಾಗ ನಮ್ಮ ಕೆಲಸಕೆ ಬಾರದ ಚಿಕ್ಕ ಪುಟ್ಟ ಸಂತೋಷಗಳು , ಸೆಂಟಿಮೆಂಟ್ಗಳು , ಕನಸುಗಳು ಇವಕ್ಕೆಲ್ಲ ಈ ಜಗತ್ತು ಯಾಕೆ ಕಿವಿಗೊಡಬೇಕು? .ಆದರೆ ನಮ್ಮನ್ನು ಕೇಳುವ ಕಿವಿಗಳು ಜಗತ್ತಿನಲ್ಲಿ ಇಲ್ಲ ಎಂದ ಮಾತ್ರಕೆ ನಾವು ಹೇಳಬೇಕಾದ್ದನ್ನು ಹೇಳದೆ ಇರಲಾಗುವುದಿಲ್ಲ . ಕಿವಿಗೊಡದ ಜಗತ್ತಿನಲ್ಲಿ ಆಗ ನಮಗೆ ನಾವೇ ಕಿವಿಯಾಗಬೇಕು. ಹಾಗೆ ನಮಗೆ ನಾವೇ ಕಿವಿಯಾಗುವ ಪ್ರಕ್ರಿಯೆ ಈ ಕವಿತೆ , ಹಾಡು ಮತ್ತು ಬರಹದ ಹುಚ್ಚು .
ನಾವು ಜಗತ್ತೆಲ್ಲ ನಮ್ಮಂತೆ ಹುಚ್ಚಾದರೆ ಎಷ್ಟು ಚೆಂದ ಎಂದುಕೊಳ್ಳುತ್ತೇವೆ. ಎಲ್ಲರೂ ನಮ್ಮನ್ತಾಗಿಬಿಟ್ಟರೆ ಈ ಜಗತ್ತಿನಲ್ಲಿ ಬದುಕು ನಿಜಕ್ಕೂ ನೀರಸ . ನಮ್ಮ ಹುಚ್ಚಿಗೆ ಆಗ ಬೆಲೆಯೇ ಇಲ್ಲ . ಎಲ್ಲರೂ ನಮ್ಮನ್ತಾಗಲಿ ಎನುವುದು ಸರಿಯಲ್ಲ. ನಮ್ಮಂತಲ್ಲದ ನಮ್ಮವರೊಡನೆ
ಅವರನ್ನು ಅವರಂತೆ ಇರಲು ಬಿಟ್ಟು ನಾವು ನಮ್ಮಂತೆ ಬದುಕಲಿಕ್ಕೆ ಈ ಕವಿತೆ , ಹಾಡು ಹಾಗು ಬರಹದ ಹುಚ್ಚು ಬೇಕು.
ಕಾರಣ ೨........
ಜಗತ್ತು ವಿಪರೀತ ಸ್ಪರ್ಧೆಗೆ ಬಿದ್ದು ಬಿಟ್ಟಿದೆ.ಅಪ್ಪ ಹಾಗು ಅಜ್ಜನ ಕಾಲಕ್ಕೆ ಬದುಕು ತಣ್ಣಗಿತ್ತು .ಮಹತ್ವಾಕಾಂಕ್ಷೆಯ ಭೂತದ ನೆರಳು ಅಲ್ಲಿರಲಿಲ್ಲ . ಎಲ್ಲರೂ ಅವರವರ ಪಾಡಿಗೆ ಅವರಿಗೆ ತೋಚಿದ್ದನ್ನು ಮಾಡಿಕೊಂಡು ಇದ್ದುದರಲ್ಲೇ ತೃಪ್ತರಾಗಿ ಬದುಕು ನಿಜಕ್ಕೂ ಬದುಕಿನಂತಿತ್ತು . ಈಗ ಹಾಗಿಲ್ಲ . ಬದುಕು ದೊಮ್ಬರಾಟದಂತೆ. ನಮಗೆ ತೋಚಿದ್ದನ್ನು ನಾವು ಮಾಡುವಂತಿಲ್ಲ.ಓಡುತ್ತಿರುವ ಜಗತ್ತಿನೊಡನೆ ನಾವು ಏದುಸಿರಾಗಿ ಓಡುತ್ತ ಜಗತ್ತನ್ನು ಹಿಂದೆ ಹಾಕಲೇ ಬೇಕಾದ ಅನಿವಾರ್ಯತೆ.ನಮಗೆ ಒಗ್ಗದ್ದನ್ನು ಬಲವಂತವಾಗಿ
ಮಾಡಲೇಬೇಕು.ಸಂಗೀತಗಾರನಾಗಬೇಕಾದವನು ಇಂಜಿನಿಯರ್ ಆಗುತ್ತಾನೆ. ಆಟಗಾರನಾಗಿ ಹಲವು ಪುರಸ್ಕಾರಕ್ಕೆ ಪಾತ್ರನಾಗಿ ಪದಕಕ್ಕೆ ಹೆಮ್ಮೆಯಿಂದ ಕೊರಳೊಡ್ಡಿ ಬೀಗಬೇಕಾದವನು ಎಲ್ಲೋ ಯಾವುದೋ ನೌಕರಿ ಹಿಡಿದು ಹತ್ತರೊಳಗೆ ಹನ್ನೊಂದಾಗುತ್ತಾನೆ.ಆಸೆಪಟ್ಟು ಇಂಜಿನಿಯರ್ ಓದಿದವನು ಆರ್ಥಿಕ ಹಿಂಜರಿತದ ಬಿಸಿತಟ್ಟಿ ಕೆಲಸ ಸಿಗದೆ ಎಂ.ಬಿ. ಎ ಅಥವಾ ಇನ್ನೇನೋ ಓದಿ ಸೇಫ್ ಆಗುವ ದಾರಿ ಹುಡುಕುತ್ತಾನೆ .ಇವೆಲ್ಲ ವಿಷಾದವಲ್ಲದೆ , ಹೇಸಿಗೆಯಲ್ಲದೆ , ದುರಂತವಲ್ಲದೆ ಇನ್ನೇನು? ಕೇವಲ ದುಡ್ಡು ಎಲ್ಲದರ ಮಾನದಂಡ.
ಹೀಗೆ ನಮಗೆ ಒಗ್ಗದ ಏನೇನೋ ಮಾಡಿಕೊಂಡು ದುಡಿದು ಗುಡ್ಡೆ ಹಾಕಿ ನಮ್ಮನ್ನೂ ಹಾಗು ನಮ್ಮವರನ್ನೂ ತೃಪ್ತ ರಾಗಿ ಇಟ್ಟುಕೊಳ್ಳುವುದು ಸಾಧ್ಯವಾ ಎಂದು ನೋಡಿದರೆ ಅದು ಆಗದ ಮಾತು. ಅಸಲಿಗೆ ಸತ್ಯ ಬೇರೆಯದೇ ಇರುತ್ತದೆ . ಎಲ್ಲರನ್ನೂ ತೃಪ್ತರಾಗಿ
ಇಡುವ ಭ್ರಮೆಯಲ್ಲಿ ನಮ್ಮನ್ನು ನಾವು ಕಳೆದು ಕೊಂಡಿರುತ್ತೇವೆ ಅಷ್ಟೆ. ಹೀಗೆ ನಮ್ಮನ್ನು ನಮ್ಮನ್ನು ನಾವು ಬಲಿಕೊಟ್ಟು ಬದುಕುವುದು , ನಮ್ಮ ಒಳದನಿಗೆ ವಿರುದ್ಧವಾಗಿ ನಡೆಯೋದು ನಿಜಕ್ಕೂ ಆತ್ಮಹತ್ಯೆಯಂತೆ.
ಹೀಗೆಲ್ಲ ಹೇಳಿ ನಾನು ವಾಸ್ತವನ್ನು ಹಾಗು ನಮ್ಮವರಿಗಾಗಿ ಬದುಕುವುದನ್ನೂ ದೂರ ತಳ್ಳಿ ತಪ್ಪು ಎನ್ನುತ್ತಿಲ್ಲ. ವಾಸ್ತವನ್ನು ಬದಿಗಿಟ್ಟು ಬದುಕುವುದು ಅನಾಹುತಕಾರಿ. ಆದರೆ ತೀರಾ ವಾಸ್ತವಕ್ಕೆ ಅಂಟಿಕೊಂಡು ಕೂರುವುದು ಇನ್ನೂ ಅನಾಹುತಕಾರಿ . ಈಗ ನೋಡಿ ನಾನು ವಾಸ್ತವಕ್ಕೆ ಮಣಿದು ಎಂ.ಬಿ.ಎ ಮಾಡುತ್ತಿದ್ದೇನೆ. ನನ್ನ ಸಲುವಾಗಿ ಕವಿತೆ , ಹಾಡು , ಬರಹವನ್ನು ಮೀಸಲಿಟ್ಟಿದ್ದೇನೆ. ವಾಸ್ತವ ಬೆಂಬಿಡದ ಬೇತಾಳ . ಅದು ಭಯಾನಕ . ಕೆಲವೊಮ್ಮೆ ವಾಸ್ತವನ್ನು ಸಾಧ್ಯವಾದಷ್ಟರ ಮಟ್ಟಿಗೆ ಅಲಕ್ಷಿಸಿ ಬದಿಗಿಟ್ಟು ಬಿಡಬೇಕು. ಆಗಲೇ ವಾಸ್ತವದಲ್ಲಿ ಜೀವನ ಕೊಂಚ ನಿರಾಳವಾಗುವುದು. ವಾಸ್ತವದೊಡನೆ ನಡೆಯುತ್ತಾ ನನ್ನನ್ನೂ ನಾನು ಕಳೆದು ಕೊಳ್ಳದೆ ಬದುಕು ನಡೆಯುವುದಕ್ಕೆ ನನಗೆ
ಈ ಬರಹದ ಹುಚ್ಚು ಬೇಕು.
ಕಾರಣ ೩.........
ನಮ್ಮ ಸುತ್ತ ಗೆಳೆಯರು , ನೆಂಟರು , ಮನೆಯವರು ಹೀಗೆ ನೂರು ನಂಟಿನ ನಡುವೆ ಬದುಕು ಬೆಸೆದುಕೊಂಡಿದೆ.ಅವರೆಲ್ಲ ಜೊತೆಗಿರುವಷ್ಟು ದಿನ ಬದುಕು ತಣ್ಣಗಿರುತ್ತೆ. ಕೆಲವರು ಅವರ ಬದುಕು ಮುಖ್ಯವಾದಾಗ ನಮ್ಮ ಬದುಕಿನಿಂದ ಎದ್ದು ನಡೆದು ಬಿಡುತ್ತಾರೆ.ಮತ್ತೆ ಕೆಲವರು ಕಾಲದ ಸೆಳವಿಗೆ ಸಿಕ್ಕು ಕಳೆದು ಹೋಗುತ್ತಾರೆ.ಅವರು ಹಾಗೆ ಬದುಕಿಂದ ಮರೆಯಾದಾಗ ನಾವು ಕುಸಿದು ಕೂರುತ್ತೇವೆ.ಬದುಕು ಅಸಹನೀಯವಾಗಿ ನಾವು ಅಸಹಾಯಕರಾಗುತ್ತೇವೆ.ಹೀಗೆ ಸುತ್ತಲ ಜಗತ್ತು ಕೈ ಕೊಟ್ಟಾಗ ನಮ್ಮ ನೆರವಿಗೆ ಬರುವುದು ನಮ್ಮೊಳಗಿನ ಜಗತ್ತು. ಹಾಗೆ ಎನ್ನದೆ ಖಾಸಗಿ ಜಗತ್ತನ್ನು ಕಟ್ಟಿ ಅಲ್ಲಿ ನಾ ಗಟ್ಟಿಯಾಗಿ ಮರಳಿ ಹೊರ ಜಗತ್ತಿಗೆ ಮರಳಲಿಕ್ಕೆ ಎನಗೆ ಎನ್ನ ಬರಹದ ಸಹವಾಸ ಬೇಕು. ಇರುವಷ್ಟು ದಿನ ನಮ್ಮ ಸುತ್ತಲಿನ ಜಗತ್ತನ್ನು ನಿರ್ವಂಚನೆಯಿಂದ ಪ್ರೀತಿಸಬೇಕು. ಸುತ್ತಲ ಜಗತ್ತು ನಮ್ಮ ಪಾಲಿಗೆ ಇಲ್ಲವಾದಾಗ ನಮ್ಮನ್ನು ನಾವು ಪ್ರೀತಿಸಿಕೊಂಡು ಏನೂ ಆಗಿಯೇ ಇಲ್ಲವೆಂಬಂತೆ ಮೊದಲಿನಂತೆ ಇದ್ದು ಬಿಡಬೇಕು. ಇಂಥ ಜೀವನ ಪ್ರೀತಿಯನ್ನು ಕಾಪಾಡಿ ಕೊಳ್ಳಲಿಕ್ಕೆ ಎನಗೆ ಎನ್ನ ಬರಹಗಳು ಬೇಕು.
ಕಾರಣ ೪.........
ಕೆಲವೊಮ್ಮೆ ನಾವು ಬರಹಗಾರರು ಏನೋ ಒಂದು ಬರೆಯುತ್ತಾ ಕುಳಿತ ಸಮಯದಲ್ಲಿ ಭುವನದಾಚೆಯ ಚೈತನ್ಯದಂತೆ ನಮಗೆ ನಾವೇ ಭಾಸವಾಗುತ್ತೇವೆ. ಆದರೆ ಪೆನ್ನು ಕೆಳಗಿಟ್ಟ ಮರುಕ್ಷಣ ತೀರಾ ತೀರಾ ನಮ್ಮಂತಾಗಿ ಬಿಡುತ್ತೇವೆ. ಬರೆದ ಚಿಂತನೆಗಳು, ಆದರ್ಶಗಳು,ನವಿರು ಭಾವಗಳು ಹಾಳೆಯ ಮೇಲೆ ಶೋಭಾಯಮಾನವಾಗಿ ಕೂತಿರುತ್ತೆ. ಇತ್ತ ಬರಹದಾಚೆಯ ನಮ್ಮ ಬದುಕು ನಮ್ಮ ನಮ್ಮ ಸಣ್ಣತನಗಳ ನಡುವೆ ಸಾಗಿ ಹೋಗುತ್ತಿರುತ್ತೆ. ಇದಕ್ಕೆ ಒಳ್ಳೆಯ ಉದಾಹರಣೆ ನಾನೇ . ಆದರೆ ನನಗೆ ನಾನು ನನ್ನ ಬರಹದಂತೆ ಆಗಬೇಕೆಂಬ ಆಶಯವಿದೆ .ನನ್ನ ಬರಹ ನಾನೇ ಓದುವಾಗ ಒಂದು ಬಗೆಯ ಪಾಪ ಪ್ರಜ್ಞೆ ಕಾಡಿ ನಾನು ನಾನು ಬರೆದಂತೆ ಬದಲಾಗುತ್ತೇನೆ ಎಂಬ ದೂರಾಲೋಚನೆ ನನ್ನದು.ಹೀಗೆ ನನ್ನನ್ನು ನಾನು ಕಂಡುಕೊಂಡು ಇನ್ನೂ ಉತ್ತಮನಾದ ನಾನಾಗಲಿಕ್ಕೆ ನನಗೆ ಬರಹ ಬೇಕು.
ಕಾರಣ ೫...........
ಬರಹ ಎಂದರೆ ಎನ್ನ ಪಾಲಿಗೆ ಅದು ಕೇವಲ ಬರಹವಲ್ಲ. ಬರಹವೆಂದರೆ ಅಕ್ಷರ ರೂಪದ ನಾನು. ಈ ಕವಿತೆ , ಹಾಡು ಇವುಗಳನ್ನೆಲ್ಲ ಬಿಟ್ಟು ಬದುಕಲಿಕ್ಕೆ ಎನಗೆ ಸಾಧ್ಯವಿಲ್ಲ . ಬೆಳಕೆ ಇಲ್ಲದ ದಾರಿಯಲ್ಲಿ ನಡೆಯಬಹುದು .ಆದರೆ ಕನಸೇ ಇಲ್ಲದ ದಾರಿಯಲ್ಲಿ ಪಯಣ ಸಾಧ್ಯವಾ? ಬರಹದ ಸಾಂಗತ್ಯ ತೊರೆದು ಇರಲಾರೆ , ಕನಸು ಕಾಣದೆ ಇರಲಾರೆ ಎನುವ ವಾಸ್ತವದ ಸಲುವಾಗಿ ಎನಗೆ ಎನ್ನ ಈ ಕವಿತೆಗಳೆಂಬ, ಎನ್ನ ಹಾಡುಗಳೆಂಬ ದಿವ್ಯ ಕನಸುಗಳು ಬೇಕು.ಈ ಬರಹದ ಹುಚ್ಚು ಬೇಕು ನಾನು ಸಾಮಾನ್ಯನಂತೆ ಬದುಕಲು. ನಾನು ನನ್ನಂತೆ ಇರಲು.
ಕೊನೆಯ ಕಾರಣ .......
ಮೇಲಿನ ಎಲ್ಲ ಕಾರಣಗಳನ್ನು ಗಮನವಿಟ್ಟು ನೋಡಿದರೆ ಎದ್ದು ಕಾಣುವುದು ದ್ವಂದ್ವ ಹಾಗು ಗೊಂದಲಗಳ ನಡುವಿನ ಬದುಕು ಹಾಗು ಅದನ್ನು ಸಾಧ್ಯವಾದಷ್ಟರ ಮಟ್ಟಿಗೆ ಮೀರುವ ಪ್ರಯತ್ನ. ಏನೂ ಮಾಡಲಿಕ್ಕೆ ಆಗುವುದಿಲ್ಲ .ಇಂದಿನ ದಿನಮಾನದಲ್ಲಿ ಇಂಥ
ದ್ವಂದ್ವ ಹಾಗು ಗೊಂದಲಗಳ ನಡುವೆ ಜೀವನ ಸಾಗಲೇಬೇಕು. ಈ ಎಲ್ಲ ದ್ವಂದ್ವ ಹಾಗು ಗೊಂದಲಗಳ ನಡುವೆ ನಾವೆಂಬ ನಮ್ಮನ್ನು ನಾವು ಎಷ್ಟರ ಮಟ್ಟಿಗೆ ನಮ್ಮಂತೆ ಕಾಪಾಡಿಕೊಂಡು ಬಂದಿದ್ದೇವೆ ಎಂಬುದಷ್ಟೇ ಮುಖ್ಯ. ಇತ್ತ ಬಿಗಿ ಹಿಡಿದು ಹಿಂಡುವ ವಾಸ್ತವ . ಅತ್ತ ಆಚೆ ತೀರದಲ್ಲಿ ಕೈ ಬೀಸಿ ಕರೆಯೋ ನಮ್ಮ ಕನಸುಗಳ ಒಳ ಜಗತ್ತು. ವಾಸ್ತವದ ಬಿಗಿ ಹಿಡಿತ ಅತಿಯಾಗಿ ಉಸಿರು ಕಟ್ಟಿದಾಗ ಆಚೆ ದಡದ ಕನಸುಗಳ ಮಡಿಲಿಗೆ ತಲುಪಿಕೊಂಡು ಬಿಡಬೇಕು. ಕನಸುಗಳು ಭ್ರಮೆಯಾಗುವ ಸೂಚನೆ ಕಂಡಾಗ ವಾಸ್ತವದ ತೀರಕೆ ಮರಳಬೇಕು. ಹೀಗೆ ನಾವು ಆಚೆ ಈಚೆ ಹೋಗಿ ಬಂದು ಬದುಕನ್ನು ಬ್ಯಾಲೆನ್ಸ್ ಮಾಡಲಿಕ್ಕೆ ಎನಗೆ ಎನ್ನ ಬರಹಗಳು ಬೇಕು. ಬರಹವನ್ನು ಆಚೆ ಈಚೆ ತೀರವ ತಲುಪಿಸುವ ದೋಣಿಯೋ , ಇಲ್ಲ ಸೇತುವೆಯೋ , ಅಥವಾ ಈಜುವ ಹುಮ್ಬತನಕೆ ಸ್ಫೂರ್ತಿಯೋ ಹೀಗೆ ಏನು ಬೇಕಾದರೂ ನೀವು ನಿಮಗೆ ತೋಚಿದಂತೆ ಅಂದುಕೊಳ್ಳಿ. ಒಟ್ಟಿನಲ್ಲಿ ಬದುಕು ಬ್ಯಾಲೆನ್ಸ್ ಆಗುವುದು ಮುಖ್ಯ .
ಮೇಲೆ ಹೇಳಿದ ಎಲ್ಲ ಕಾರಣಗಳೂ ನಿಮ್ಮವೂ ಹೌದೆಂದು ಕೊಳ್ಳುತ್ತೇನೆ. ಎಷ್ಟಂದರೂ ನಾವೆಲ್ಲ ಹೆಚ್ಚು ಕಡಿಮೆ ಒಂದೇ ಮಟ್ಟದ ಹುಚ್ಚರಲ್ಲವೇ? ನನ್ನ ಪಾಡೂ ನಿಮ್ಮ ಪಾಡೂ ಬೇರೆ ಬೇರೆಯಲ್ಲ. ಮೊದಲ ಬಾರಿಗೆ ಸ್ವಲ್ಪ ಧೀರ್ಘವಾಗಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಎಲ್ಲಾದರೂ ತಪ್ಪಿದ್ದರೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ:):)

Thursday, October 29, 2009

ಮೂಗು .......ಕವನ

ಗುಡ್ ನೈಟ್ ಕವನಗಳ ನಿಲ್ಲಿಸಿದ ನಂತರ ಒಂದು ಪುಟ್ಟ ಲೇಖನದೊಂದಿಗೆ ನಿಮ್ಮೆದುರು ಬರಬೇಕೆಂದುಕೊಂಡಿದ್ದೆ. ಅದಕ್ಕಾಗಿ ತಯಾರಿಯನ್ನೂ ನಡೆಸಿದ್ದೆ. ಆದರೆ ನಡುವೆ ಕ್ಲಾಸ್ ಇಂಟರ್ನಲ್ ಪರೀಕ್ಷೆಗಳು ಬಂದವು. ಬರಹದ ಯೋಜನೆ ಹಾಗೆ ಹಳ್ಳ ಹಿಡಿಯಿತು. ಕವನ ಬರೆದು ಬ್ಲಾಗ್ ಗೆ ಹಾಕುವುದು ಸುಲಭ. ಕೆಲವು ನಿಮಿಷಗಳ ಸರಳ ಕೆಲಸ ಅದು. ಆದರೆ ಗದ್ಯದ ಕೆಲಸ ಹಾಗಲ್ಲ. ನನ್ನ ಪಾಲಿಗೆ ಅದು ನಿಜಕ್ಕೂ ಮಹಾ ಬೋರಿನ ತ್ರಾಸದಾಯಕ ಕೆಲಸ. ನಾನು ಟೈಪ್ ಮಾಡುವ ಚೆಂದ ಹಾಗು ಅದರ ಆಮೆ ವೇಗ ನನಗೆ ಮತ್ತು ದೇವರಿಗಷ್ಟೇ ಪ್ರೀತಿ. ಅದಕ್ಕೆ ಸ್ವಲ್ಪ ಬಿಡುವು ಮಾಡಿಕೊಂಡು ಅತಿ ಬೇಗನೆ ಲೇಖನದೊಂದಿಗೆ ಹಾಜರಾಗುತ್ತೇನೆ. ನಡುವೆ ಬ್ಲಾಗ್ ಖಾಲಿ ಬಿದ್ದು ಹಾಳು ಸುರಿಯದಿರಲಿ ಎಂಬುದಕ್ಕೆ ಈ ಮಧ್ಯಂತರ ಕವನ.

ಈ ಕವನ ನಾನು ಬಿ. ಕಾಂ . ಮೊದಲನೆ ವರ್ಷದಲ್ಲಿದ್ದಾಗ ಕಾಲೇಜ್ನಲ್ಲಿ ನಡೆದ ಆಶು ಕವಿತೆ ಸ್ಪರ್ಧೆಗೆ ಬರೆದದ್ದು. ಯಾವ ವಿಷಯ ಕೊಟ್ಟರೂ ತಕ್ಕಮಟ್ಟಿಗೆ ಏನೋ ಒಂದು ಗೀಚಬಲ್ಲೆ ಎಂಬ ಧೈರ್ಯ ಕೊಟ್ಟ ಕವನ ಇದು. ಕೆಲವು ಉತ್ತಮಗಳು ಹೇಗೆ ಅನಾಯಾಸವಾಗಿ ಹುಟ್ಟುತ್ತವೆ ಎಂಬುದು ಈ ಕವನ ಬರೆದ ಮೇಲೆ ನನಗೆ ಅನ್ನಿಸಿತ್ತು. ಅಂದ ಹಾಗೆ ಈ ಕವನ ಮೊದಲ ಬಹುಮಾನ ಪಡೆದಿತ್ತು :):) [ ಕವನ ಹಾಗು ನನ್ನ ಬಗ್ಗೆ ಹೊಗಳಿಕೆ ಸ್ವಲ್ಪ ಓವರ್ ಆಯ್ತು ಅಲ್ವಾ? :):) ]

ಮೂಗು.....
ನಿನ್ನ ಕಾಣೋ ಕ್ಷಣದವರೆಗೂ
ಪ್ರೀತಿ ಪ್ರೇಮದಲಿ ನಾ ಎನ್ನ
'ಮೂಗ' ತೂರಿರಲಿಲ್ಲ .
ಅದೇನು ಮೋಡಿಯೋ ಕಾಣೆನು
ಕಪ್ಪು ಕಿರು ಮಚ್ಚೆಯ
ಗಿಣಿ ಮೂಗಿನವಳೇ
ಚೆಲುವೆ ನೀ ನಿಜಕು
ನಾ ಅದಕೆ ಕರಗಿಬಿಟ್ಟೆ.
ಗಿಣಿಮೂಗವಳು ಇವಳೆಂದು ಮೆಚ್ಚಿ
ಜೊತೆಯಾದೆ ನಿನಗೆ.
ಬಾಳ ತುಂಬ ಸಿಟ್ಟು ಸಿಡುಕ
ಅಡಿಗಡಿಗೆ ಸೀನದೆ
ಗೋಳೆಂಬ ಗೊಣ್ಣೆ ನಿತ್ಯ
ಸುರಿಸದೆ
ತಲೆ ನೋವ ತರಿಸದೇ
ಸಂಸಾರದ ಉಸಿರ ಸರಾಗವಾಗಿಸು .
ನಿನ್ನ ಮೂಗಂತೆ ಮನಸೂ ಗಿಣಿಯದಾಗಿರಲಿ.
ಎರಡು ಹೊಳ್ಳೆಗಳು ನಾವು
ಬಾಳೆಂಬ ಮೂಗ ಸೂರಡಿ.
ಪ್ರೀತಿ ಸರಸ ಸಂತಸ ದಂಡಿಯಾಗಿ
ಬಾಳ ತುಂಬಲಿ.
ಬೇಡದ ರಗಳೆ ರಾದ್ಧಾಂತ
ಹೊರಗಾಗಲಿ.
ನಾವು ಜೊತೆ ಜೊತೆಗೆ ಉಸಿರಾಡಿ
ಒಬ್ಬರಿಗೊಬ್ಬರು ಉಸಿರಾಗುವವರು
ನೆನಪಿರಲಿ ಗೆಳತಿ
ನೆನಪಿರಲಿ ..

Monday, October 19, 2009

ಗುಡ್ ನೈಟ್ ಕವನಕೊಂದು ಗುಡ್ ಬೈ ......

ಗುಡ್ ನೈಟ್ ಕವನಗಳಿಗೆ ತಾತ್ಕಾಲಿಕವಾಗಿ ಗುಡ್ ಬೈ ಹೇಳುತ್ತಿದ್ದೇನೆ. ನನ್ನ ನಾನು ಹುಡುಕೋ ಪ್ರಯತ್ನದಲ್ಲಿ ಹುಟ್ಟಿದ, ನನಗೆ ಅತ್ಯಂತ ಆಪ್ತವಾದ ಗುಡ್ ನೈಟ್ ಕವನಗಳಿಗೆ ವಿರಾಮ ಕೊಡುತ್ತಿದ್ದೇನೆ. ಅಲೆಮಾರಿ ಅಂತ ಹೇಳಿಕೊಂಡು ಬ್ಲಾಗ್ ಲೋಕಕ್ಕೆ ಕಾಲಿಟ್ಟವನು ನಾನು. ಎಷ್ಟು ದಿವಸ ಅಂತ ಒಂದೇ ಕಡೆ ಡೇರೆ ಹಾಕಿ ಕೂರಲಿ? .ಹೇಗೂ ಭೂಮಿ ದುಂಡಗಿದೆ. ಅಲೆಮಾರಿ ಮತ್ತೆ ಮರಳಿ ಹಿಂದೆ ಬಿಟ್ಟು ಹೋದ ಹೆಜ್ಜೆಗಳಿಗೆ ಎದುರಾಗಲೇ ಬೇಕು. ಮರಳಿ ತನ್ನ ಮೂಲಕೆ ಮರಳಲೇಬೇಕು.ಡೇರೆಯನ್ನು ಕಿತ್ತು ಗಂಟು ಮೂಟೆ ಕಟ್ಟಿ ಮತ್ತೆ ನನ್ನನ್ನು ಹುಡುಕೋ ಬಿಡದ ವ್ಯಸನಕ್ಕೆ ಮರಳುತ್ತಿದ್ದೇನೆ.

ಅಸಲಿಗೆ ಗುಡ್ ನೈಟ್ ಕವನಗಳನ್ನು ಬರೆಯುವುದನ್ನು ನಿಲ್ಲಿಸಿ ಎರಡು ವರ್ಷವಾಯಿತು. ಒಟ್ಟು ಮುನ್ನೂರು ಚಿಲ್ಲರೆ ಕವನಗಳು ಇವೆ ಈ 'ಗುಡ್ ನೈಟ್ ' ಕವನಗಳ ಸೂರಿನಡಿ. ಇಷ್ಟು ದೊಡ್ಡ ಸಂಖ್ಯೆಯ ಕಾರಣಕ್ಕೇ ನಾನು ಈ ಕವನಗಳನ್ನು ಬರೆಯುವುದನ್ನು ನಿಲ್ಲಿಸಿದ್ದು. ಹೇಗೆ ಇವುಗಳನ್ನೆಲ್ಲ ಜೋಪಾನ ಮಾಡಲಿ? ಮೊದಲೇ ಸ್ವಲ್ಪ ಜಾಸ್ತಿ ಸೋಮಾರಿ ನಾನು . ಅದಕ್ಕೆ 'ಗುಡ್ ನೈಟ್ ' ಕವನಗಳನ್ನು ನಿಲ್ಲಿಸಿಬಿಟ್ಟೆ. ಈಗ ಬ್ಲಾಗ್ ಗೆ ಈ ಕವನಗಳನ್ನು ಹಾಕುವುದಕ್ಕೆ ಶುರು ಮಾಡಿದ ಮೇಲೆ ಮತ್ತೆ ಹೊಸ ಹೊಸ 'ಗುಡ್ ನೈಟ್' ಕವನಗಳು ಹುಟ್ಟುತ್ತಿವೆ. ನಿಜಕ್ಕೂ ನಾನು ಆಗ ದಿಗಿಲಿಗೆ ಬಿದ್ದೆ. ಈ ' ಗುಡ್ ನೈಟ್ ' ಕವನದ ಮೋಹವೇ ಹಾಗೆ. ಗುಡ್ ನೈಟ್ ಕವನದ ಒಂದು ಸಾಲಿನಮೇಲೆ ಕಣ್ಣು ಹಾಗೆ ಸುಮ್ಮನೆ ಹಾದು ಹೋದರೆ ಸಾಕು, ಹತ್ತು ಕವನಕಾಗುವಷ್ಟು ಭಾವದ ಸರಕು ಮನದ ಖಾತೆಗೆ ಜಮೆಯಾಗಿರುತ್ತೆ. ತಲೆ ಎಂಬೋ ತಲೆ ಅಂಕೆಗೆ ಸಿಗದಷ್ಟು ಕ್ರಿಯಾಶೀಲವಾಗಿ ಹುಚ್ಚಿನ ಹೆಬ್ಬಾಗಿಲ ಹೊಸ್ತಿಲ ಮೆಟ್ಟಿ ವಾಪಾಸಾಗುತ್ತಿರುತ್ತೆ.
ಗುಡ್ ಬೈ ಅಂತ ಹೇಳಿದ ಮಾತ್ರಕ್ಕೆ 'ಗುಡ್ ನೈಟ್' ಕವನಗಳು ನಿಲ್ಲುವುದಿಲ್ಲ. ಅದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ.ನನಗೆ ಬರೆಯೋ ಧೈರ್ಯ ನೀಡಿದ , ನನ್ನ ಎಲ್ಲ ಭಾವನೆಗಳಿಗೆ ಕನ್ನಡಿಯಾದ , ನನ್ನ ಒಳ ಮಾತಿಗೆ ಕಿವಿಯಾದ ,ಎಲ್ಲಕಿಂತ ಮೇಲಾಗಿ ನನ್ನಲ್ಲಿ ಒಂದು ನವಿರು ಮನಸ್ಸನ್ನು ಹುಟ್ಟು ಹಾಕಿ ಅದು ಇನ್ನಷ್ಟು ನವಿರಾಗುವಂತೆ ಮಾಡಿದ "ಗುಡ್ ನೈಟ್ ' ಕವನವನ್ನ ಹೇಗೆ ತಾನೆ ದೂರ ಇಡಲಿ? ಹಾಗೆನಾದರೂ ನಾ ದೂರ ಇಟ್ಟರೆ ನಾನು ಸತ್ಯದಂಥ ಸುಳ್ಳಿನಂತೆ ಆಗಿಬಿಡುತ್ತೇನೆ. ಇನ್ನು ಮುಂದೆ 'ಗುಡ್ ನೈಟ್ ' ಕವನ ಅಗಾಗ ನಡುವೆ ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕಿ ಹೋಗುತ್ತಿರುತ್ತೆ. ಇಷ್ಟು ದಿವಸ ಊಟದಂತಿದ್ದ ಈ ಕವನ ಇನ್ನು ಮುಂದೆ ಊಟದ ನಡುವೆ ಉಪ್ಪಿನಕಾಯಿಯಂತೆ. ಈಗಿನಂತೆ ಮೂರು ನಾಲ್ಕು ದಿನಗಳಿಗೊಮ್ಮೆ ನಾನು ನಿಮ್ಮೆದುರು ಹಾಜರಿ ಹಾಕುವುದಿಲ್ಲ. ಗುಡ್ ನೈಟ್ ಕವನದ ಸಂಖ್ಯೆ ಹಾಗಿತ್ತು. ಅದಕ್ಕೆ ಹರಕೆ ಒಪ್ಪಿಸುವನಂತೆ ಆ ಪರಿ ಒಂದೇ ಉಸಿರಿಗೆ ಬಿಡುವು ಕೊಡದೆ ಬ್ಲಾಗ್ ಗೆ ಕವನಗಳನ್ನು ಹಾಕುತ್ತ ಬಂದೆ.ಈಗ ನಿಮಗೂ ಹಾಗು ನನಗು ಸ್ವಲ್ಪ ಬಿಡುವು ಕೊಡುತ್ತಿದ್ದೇನೆ.
ಇವಿಷ್ಟು 'ಗುಡ್ ನೈಟ್ ' ಕವನದ ಬಗ್ಗೆ ಹೇಳಬೇಕಿದ್ದು. ಆದರೆ ಇವತ್ತು ನಿಮ್ಮೊಡನೆ ಹಂಚಿಕೊಳ್ಳಲು ಇನ್ನೊಂದು ಚೆಂದದ ವಿಷಯವಿದೆ.ನಿನ್ನೆ ದೀಪಾವಳಿ ಗೆ ಶುಭಾಶಯ ಕೋರಿ ಸುಶ್ರುತಣ್ಣ ಒಂದು ಎಸ್ಸೆಮ್ಮೆಸ್ ಕಳುಹಿಸಿದ್ದ . ಅವ ಕಳುಹಿಸಿದ ಶುಭಾಶಯ ಹೀಗಿತ್ತು ನೋಡಿ:

ನಿಮ್ಮ ಕನಸಿನ ಹಾದಿಯಲ್ಲಿನ
ದೀಪದ ಸ್ವಿಚ್ ಗಳು ನಿಮ್ಮ ಕೈಗೆ ಸದಾ
ಎಟಕುವನ್ತಿರಲಿ
ದೀಪಾವಳಿಯ ಶುಭಾಶಯಗಳು .
ಈ ಶುಭಾಶಯಕ್ಕೆ ಪ್ರತಿಯಾಗಿ ನಾನು "ಹ್ಯಾಪಿ ದೀವಾಲಿ" ಅಂತ ಮೆಸೇಜ್ ಟೈಪ್ ಮಾಡಿ ಕಳಿಸೋಕೆ ಅಣಿಯಾಗಿದ್ದೆ.ಆದರೆ ಕೊನೆ ಕ್ಷಣದಲ್ಲಿ ಇಷ್ಟು ಚೆಂದದ ಸಾಲುಗಳಿಗೆ ಸುಮ್ಮನೆ "ಹ್ಯಾಪಿ ದೀವಾಲಿ " ಅಂತ ಹಲ್ಕಿರಿಯೋದು ಸರಿ ಕಾಣಲಿಲ್ಲ . ಅದಕ್ಕೆ ಸುಶ್ರುತಣ್ಣ ನ
ಸಾಲುಗಳಿಗೆ ಉತ್ತರವಾಗಿ ನಾನು ಕೆಲವು ಸಾಲು ಬರೆದೆ.ಅವು ಇಲ್ಲಿವೆ ನೋಡಿ
ನಮ್ಮ ಕನಸಿನ ಹಾದಿಯಲ್ಲಿನ
ದೀಪದ ಸ್ವಿಚ್ ಗಳು ನಮ್ಮ ಕೈಲೇ ಇವೆ.
ಕಾಲದ ಕರೆಂಟು ಕೈಕೊಡದೆ ಇರಲಿ.
ಬಾಳು ಟ್ಯೂಬ್ ಲೈಟ್ ಆಗದಿರಲಿ.
ಬಾಳು ನಂದಾದೀಪವಾಗಲಿ.....
ಎಲ್ಲರಿಗೂ ತಡವಾಗಿ ದೀಪಾವಳಿಯ ಶುಭಾಶಯಗಳು :):) ಮತ್ತೆ ಕವನದೊಂದಿಗೆ ಭೇಟಿಯಾಗೋಣ . ಅಲ್ಲಿತನಕ "ಗುಡ್ ನೈಟ್ , ಸ್ವೀಟ್ ಡ್ರೀಮ್ಸ್ ":):)

Thursday, October 15, 2009

ಗುಡ್ ನೈಟ್ ಕವನ ೨೦ .....

ರಾತ್ರಿ ಮಲಗೋ ಮುನ್ನ
ಗಟ್ಟಿ ಕೆನೆ ಹಾಲಿಗೆ
ಸಕ್ಕರೆಯ ಸುರಿದು
ಮೇಲೊಂದು ಚಿಟಿಕೆ ಬಾದಾಮಿ ಬೆರೆಸಿ
ಕುಡಿದಂತೆ
ನೀನಿತ್ತ ನೆನಪುಗಳ ಮೆಲುಕು
ಹಾಗೆ ಮೆಲುಕಿ ಮೆಲುಕಿ ಮಲಗುವೆ
ಪ್ರತಿ ರಾತ್ರಿ
ಒಂದು ಕಿರು ಮಂದಹಾಸದೊಡನೆ
ಎದೆ ತುಂಬ ನೆಮ್ಮದಿಯ ಉಸಿರೊಡನೆ
ಈ ದಿನವ ತುಂಬಿ ಬೆಳಗಿದ ನೀನು
ಬರುವ ನಾಳೆಗಳನೂ ತುಂಬಿ ಬೆಳುಗುವೆ
ಎನುವ ದಿವ್ಯ ನಂಬಿಕೆಯೊಡನೆ
ಹಾಲಿಗೆ ಹುಳಿ ಬೀಳದಿರಲಿ ಎನುವ
ಹಾರೈಕೆಯೊಡನೆ...

Tuesday, October 13, 2009

ಗುಡ್ ನೈಟ್ ಕವನ ೧೮ ...

ನಾನು ಪ್ರೀತಿಯಿಂದ ಕರೆದೆ. ಜ್ಯೋತಿ ಅಕ್ಕ ಹಾಗು ಸುನಾಥ್ ಸರ್ ಅಷ್ಟೇ ಪ್ರೀತಿಯಿಂದ ಬಂದು ‘ಹೆದರಬೇಡ ಗೌತಮ, ನಾವಿಲ್ಲೇ ಇದ್ದೇವೆ ನಿನ್ನೊಡನೆ, ಎಲ್ಲೂ ಕಳೆದು ಹೋಗಿಲ್ಲ’ಎಂದು ನನಗೆ ಕೊಂಚ ನೆಮ್ಮದಿಯಂಥ ಖುಷಿ ಕೊಟ್ರು. ನನಗೇನೋ ಖುಷಿ ಆಯ್ತು. ಆದರೆ ಮರುಕ್ಷಣವೇ ಜ್ಯೋತಿಅಕ್ಕ ಹಾಗು ಸುನಾಥ್ ಸರ್ ಬಗ್ಗೆ ತುಂಬಾ ಕನಿಕರ ಉಂಟಾಯಿತು. ‘ನಿನ್ನೊಡನೆ ಇದ್ದೇವೆ’ ಅಂತ ಪಾಪ ಅವರಿಬ್ಬರೂ ಪ್ರೀತಿಯಿಂದ ಸ್ವಲ್ಪವೂ ಹಿಂದೆ ಮುಂದೆ ಯೋಚಿಸದೆ ಹೇಳಿಕೊಂಡು ಬಿಟ್ಟಿದ್ದಾರೆ. ನಾನು ಈಗ ಎಷ್ಟೇ ಕೆಟ್ಟ ಕವನ ಬರೆದರೂ ಹೊಗಳಿ ಬೆಂಬಲಿಸುವ ಅನಿವಾರ್ಯತೆ ಅವರಿಗೆ; ಈ ಅಲೆಮಾರಿಯ ಜಾಡು ಹಿಡಿದು ಬಂದ ತಪ್ಪಿಗೆ. ಅದಕ್ಕೆ ನಾನು ತೀರ್ಮಾನಿಸಿದ್ದೇನೆ ಸಾಧ್ಯವಾದಷ್ಟು ಸಹ್ಯವಾದ ಕವನ ಬರೀಬೇಕು ಅಂತ. ಆ ಮೂಲಕ ಪ್ರೀತಿಯ ಮುಲಾಜಿಗೆ ಸಿಕ್ಕು ಕೆಟ್ಟ ಕವನಗಳನ್ನ ಬೆಂಬಲಿಸಬೇಕಾದ ಅನಿವಾರ್ಯ ಧರ್ಮಸಂಕಟದಿಂದ ಜ್ಯೋತಿಅಕ್ಕ ಹಾಗು ಸುನಾಥ್ ಸರ್ ಅವರನ್ನ ಪಾರು ಮಾಡ್ಬೇಕು ಅಂತ:):) ಆದಷ್ಟು ಒಳ್ಳೆಯ ಕವನ ಬರೆಸಿ ಅವರಿಬ್ಬರನ್ನೂ ಕಾಪಾಡು ಅಂತ ದೇವರಲ್ಲಿ ನನ್ನದೊಂದು ಸಣ್ಣ ಪ್ರಾರ್ಥನೆ. ನೋಡೋಣ ಏನಾಗುತ್ತೆ ಅಂತ :)

ಕಳೆದ ಗುಡ್ ನೈಟ್ ಕವನ ಸಂಖ್ಯೆ ೧೮ ರ ಬದಲು ೧೯ ಎಂದಾಗಿತ್ತು. ಮಧ್ಯೆ ಕಳೆದು ಹೋದ ೧೮ರ ಪಾಡು ಅಂಡಲೆವ ಅತೃಪ್ತ ಆತ್ಮದಂತಾಗಿತ್ತು. ಆದ್ದರಿಂದ ಈ ಕವನದ ಮೂಲಕ ೧೮ ಕ್ಕೆ ಮುಕ್ತಿಯ ದಾರಿ ತೋರುವ ಕೃಪೆ ಮಾಡುತ್ತಿದ್ದೇನೆ. ಮುಂದೆ ಬರೋದು ೧೯ ಅಲ್ಲ ೨೦. ನಿಮ್ಮ ಗಮನದಲ್ಲಿರಲಿ :)

ಈ ರಾತ್ರಿ ಎಂದಿಗಿಂತ ಕಡುಗಪ್ಪು
ಮೋಡದ ಸೆರಗ ಹೊದ್ದು.
ಹೊಕ್ಕಳಿನಾಳದಿ ಕಿರು ನಡುಕ
ಚಳಿ ಕೊರೆ ಕೊರೆದು .
ನಾ ಒಂಟಿಯೆಂದು ರಾತ್ರಿ
ಅಣಕಿಸಿ ಕೆಣಕುತಿದೆ.
ಸುತ್ತ ಜಗವೆಲ್ಲ
ತಮ್ಮವರ ತೆಕ್ಕೆಯಲಿ ಬೆಚ್ಚಗಿದೆ.
ಹಾಳಾಗಿ ಹೋಗಲಿ ಈ ರಾತ್ರಿ
ಹಾಳಾಗಿ ಹೋಗಲಿ .
ಹಿಡಿಶಾಪ ಹಾಕುವುದ ಬಿಟ್ಟು
ನಾನೇನು ತಾನೆ ಮಾಡಲಿ ?
ಒಂಟಿ ನಾ
ನಾ ಏನ ಮಾಡಲಿ ?..

Friday, October 9, 2009

ಗುಡ್ ನೈಟ್ ಕವನ ೧೯ ..

ಮಿನುಗೋ ತಾರೆ ಕಣ್ಣಿನವಳ
ಬೆಳ್ಳಿ ತಿಂಗಳ ಚೆಲುವಿನವಳ
ಮೆಲು ಗಾಳಿ ತಂಪಿನ ಒಲವ ಸುರಿವವಳ
ರಾತ್ರಿ ಶಾಂತಿಯ ಹಿರಿಯ ಮನದವಳ
ಮತ್ತೆ ಮೇಲಾಗಿ ಎನ್ನವಳ
ಈ ರಾತ್ರಿ ಆವರಿಸಿ ಮುದ್ದಿಸುವಾಸೆ .
ಮನಸಾರ ಮನಸ ತೆರೆದಿಟ್ಟು
ಎನ್ನದೆಲ್ಲ ಅವಳೆದುರು ಹರವಿಬಿಟ್ಟು
ನಾ ಖಾಲಿ ಖಾಲಿ ಫಕೀರನಾಗುವಾಸೆ .
ಆಸೆಯೇನೋ ಬೆಟ್ಟದಷ್ಟಿದೆ .
ಆದರೆ ಸನಿಹ ಅವಳಿಲ್ಲ ಎಂಬ
ಅನಾದಿ ಕೊರಗು
ಎಂದಿನಂತೆ ಇದ್ದೆ ಇದೆ.
ಪ್ರಕಟಣೆ ; ಜ್ಯೋತಿ ಅಕ್ಕ ಹಾಗು ಸುನಾಥ್ ಸರ್ ಅವರು ಕಳೆದ ಕೆಲವು ಕವನಗಳಿಂದ ಕಾಣೆಯಾಗಿದ್ದು , ದಯವಿಟ್ಟು ಈ ಪ್ರಕಟಣೆಯನ್ನು ಓದಿದ ಕೂಡಲೇ ಆದಷ್ಟು ಶೀಘ್ರವಾಗಿ ಅಲೆಮಾರಿಯ ಡೇರೆ ಗೆ ಬಂದು ತಮ್ಮ ಮುಖ ತೋರಿಸಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇನೆ.:):)
ಇಂತಿ ನಿಮ್ಮನ್ನು ಕಾಣದೆ ಕಂಗಾಲಾಗಿರುವ
ಅಲೆಮಾರಿ :)

Tuesday, October 6, 2009

ಗುಡ್ ನೈಟ್ ಕವನ ೧೭ ....

ರಾತ್ರಿ ಬಾನ ಕಡಲಲಿ
ಪುಟ್ಟ ದೋಣಿಯೇರಿ
ಮನದಿ ಮಗುವಾಗಿ
ಅಚ್ಚರಿಯ ಮುಗ್ಧ ಬೆರಗ ಕಣ್ತುಂಬಿಕೊಂಡು
ಹುಟ್ಟು ಹಾಕಿ ಜೀಕಿ ಜೀಕಿ ತೇಲುವಾಸೆ
ಗುರಿಯೇ ಇರದೆ.
ಈ ಭುವಿಯ ಸಣ್ಣತನಗಳ
ಬೇಡದ ಗೊಂದಲ ಜಂಜಡದ ಗೋಜಿರದೆ
ದಿವ್ಯ ನಿಶ್ಚಿನ್ತೆಯಲಿ
ಮುಂದೆ ಮುಂದೆ
ಹೋಗುತಲೇ ಇರುವಾಸೆ ..
ಈ ನೆಲದ ಮೇಲಾಗದಿದ್ದರೂ
ಕೊನೆಗೆ ಅಲ್ಲಿ
ಆ ಬಾನ ವೈಶಾಲ್ಯದ ಭವ್ಯತೆಯಲಿ
ನಾ ನಾನಾಗುವಾಸೆ ....