Saturday, July 11, 2009

ಸಾವು, ನಾನು ಮತ್ತು ಅವರು

ಕನಸು ಖಾಲಿಯಾಗಿ
ಮನಸು ಬಾಳ್ಗೆ ಬೆನ್ನುಹಾಕಿ
ಖಿನ್ನರಾಗಿ ಕುಳಿತಾಗ
ಕೆಲವರಿಗೆ
ಸಾವೊಂದು ಅಮೃತ
ದಿವ್ಯಶಾಂತಿಯನು ತರುವ ಶಾಂತಿದೂತ.
ಅಷ್ಟಕ್ಕೂ,
ಸತ್ತವರ ಶಾಂತಿಯ ತಾಕಿ
ಮರಳಿ ಹೇಳಬಂದವರಾರು?
ತುಂಬಿಕೊಳಲು ಉಸಿರೇ ಇಲ್ಲದಾಗ
ಸಾವೊಂದು ಶಾಂತಿ ಎಂದವರು
ಹುಂಬರಲ್ಲದೆ ಇನ್ಯಾರು?
ಶೀತಲ ಕೊರಡಿನೊಳಗೆ
ಮನೆಯವರ,
ತನ್ನವರೆಂದುಕೊಂಡವರ
ಬಿಟ್ಟು ಬಂದುದಕ್ಕೆ
ಅದೇನು ವಿಷಾದ,
ಅದೆಷ್ಟು ಚಡಪಡಿಕೆ, ಯಾತನೆ
ಹಿಮಗಟ್ಟಿದೆಯೋ?
ಸಾಧಿಸಲಾಗದ ಹಠ, ಹಗೆ, ಕನಸು
ಎಲ್ಲಿ ಗಂಟಾಗಿ ಕುಳಿತಿದೆಯೋ!
ಸಾವು ನನ್ನಂತೆಯೂ ಅಲ್ಲದೆ,
ಅವರಂತೆಯೂ ಇಲ್ಲದೆ,
ಸಾವು ಸತ್ತವರಂತೆ ಇದೆಯೇ?
ಸತ್ತಲ್ಲಿ ನಿರ್ಲಿಪ್ತವೇ?
ಅಥವಾ...

Tuesday, June 16, 2009

ಮುಂಗಾರ ಸೂರಡಿ

ಮತ್ತೆ ಬಂದಿದೆ ಮುಂಗಾರುಮಳೆ
ಈ ಸುರಿವ ಸೊಬಗ ಸೂರಡಿ
ಮನಸಾರೆ ನೀರಾಟ ಆಡಬೇಕಿದೆ
ಹಾಳೆ ದೋಣಿಮಾಡಿ
ಹರಿವ ನೀರಲಿ ತೇಲಿಬಿಡಬೇಕಿದೆ
ಸಾಗೋ ದೋಣಿ ಹಿಂದೆ ಓಡಿ ಓಡಿ
ಆಡೋ ಕಾಲವ ಹಿಂದೆ ಹಾಕಿ
ಕಳೆದ ನಿನ್ನೆಯ ಕಾಣಬೇಕಿದೆ

ನೀವೂ ಬರುವಿರೇನು ಎನ್ನೊಡನೆ?

ದೊಡ್ಡವರು ನಾವು ಜಗ ನಕ್ಕೀತು ಎಂಬ ಹಿಂಜರಿಕೆ ಯಾಕೆ?
ಈ ಹಾಳು ಹಿರಿತನ,
ಹಮ್ಮು ಬಿಮ್ಮು ಗತ್ತಿನ ನಡುವೆ
ನಮ್ಮ ನಡುವೆ ಸಹಜ ಸುಂದರ ಖುಷಿ
ಹಾಳಾಗಬೇಕೆ?
ಹಿರತನ ಬಂದರೆ ಬರಲಿ ಸಹಜವಾಗಿ
ಈ ಸುರಿವ ಮಳೆಯಂತೆ.
ಸುಮ್ಮನೆ ಮುಖವಾಡ ಯಾಕೆ?

ಇನ್ನೂ ತಡವೇಕೆ ಬಂದುಬಿಡಿ,
ಮಳೆ ನಿಲ್ಲುತಿದೆ...

Friday, June 5, 2009

ಚಂದ್ರಿ

ಇವಳು ಚಂದ್ರಿ
ಚಂದ್ರಿ ಬಾಳು ಎಲ್ಲರಂತಲ್ಲ.
ಯಾರದೋ ತೊಗಲ ತೆವಲಿಗೆ
ಅನಿವಾರ್ಯ ಸಂಗಮಕ್ಕೆ
ಹಾರೈಕೆಯಿರದ ಅವ್ವನ ನಿರ್ಭಾವುಕ
ಒಡಲಲ್ಲಿ
ಹತಭಾಗ್ಯ ಪಿಂಡವಾಗಿ
ಈ ಜಗಕೆ ವಿಸರ್ಜನೆಯಾದವಳು ಚಂದ್ರಿ.
ಹುಟ್ಟೇ ಸೋಲಾದವಳು ಚಂದ್ರಿ .
ಅಪ್ಪ ಯಾರೆಂದು ತಿಳಿದಿಲ್ಲ.
ಅವ್ವನಿಗೇ ಅದು ಬೇಕಿರಲಿಲ್ಲ.
ಮಸಕು ಮಸಕು ಅರೆಜೀರ್ಣ
ಗುಡಿಸಲ ನಿರ್ವಿಕಾರ ಕತ್ತಲಲ್ಲಿ
ಯಾರದೋ ಅಪರಿಚಿತ ಛಾಯೆ,
ದಿನಕೆ ಹಲವಾರು ಹೊಸ್ತಿಲ ದಾಟೋ
ಅಪ್ಪನಂಥಹ ಆಕೃತಿಗಳು,
ಬಂದು ಹೋಗುವವರೇ ಬಂಧು ಬಳಗ.
ಎಲ್ಲವ ಅಚ್ಚರಿ ಕಂಗಳಲಿ
ನೋಡಿ ಬೆಳೆದವಳು,
ಅದುವೆ ಬಾಳೆಂದುಕೊಂಡಳು ಚಂದ್ರಿ.

ವರುಷ ಹದಿನಾರಕ್ಕೆ ಚಂದ್ರಿ ತಬ್ಬಲಿ.
ಅರಿಯದ ವ್ಯಾಧಿಗೆ ಅವ್ವ ತುತ್ತಾದಳು.
ಅವ್ವನ ಬಾಳೀಗ ಚಂದ್ರಿಯದು!
ಅವ್ವನ ಪಾಡೇ ಈಗ ಇವಳದು.
ಚಂದ್ರಿಗೀಗ ಇಳಿಸಂಜೆ.
ಸುಕ್ಕುಮುಕ್ಕು ದೇಹ,ಇಂಗಿದೆದೆ.
ಭಾವವೇ ಇರದ ನಿರ್ಜೀವ ಶೂನ್ಯ ನೋಟ;
ಆಕೆಗೀಗ ಅವ್ವನಂಥದೇ
ಎಂಥದೋ ಕಾಯಿಲೆ.
ಸಾವೊಂದೇ ಅವಳಿಗೀಗ ಸಂಜೀವಿನಿ.
ಹುಟ್ಟೇ ಸೋಲಾದ ಚಂದ್ರಿಗೆ
ಸಾವು ಗೆಲುವಾದೀತೆ?...........

Tuesday, May 19, 2009

ಕಿವಿಮಾತು

ಹೋಮ ಹವನ, ಪೂಜೆ ಪುನಸ್ಕಾರ,
ಜಪತಪ, ಮಂತ್ರತಂತ್ರ
ನೂರಿವೆ ಜಗದಿ
ಒಳಹುಳುಕ ಮುಚ್ಚಿ ಮುಕ್ತಿಗೇರಲು

ಇಲ್ಲಿ ಚೆಂದಾಗಿ ಬಾಳದೆ
ಮತ್ತೆಲ್ಲೋ ಮೇಲೆ
ಸೊಗದ ಬಾಳರಸೋ
ಯಾಕಿಂತ ಕಸರತ್ತು?

ಚೆಂದನೆ ಮನ ಹರವಿಕೊಂಡು
ಅಲ್ಲಿ ಸುತ್ತಲ ಜಗವ
ಬರಮಾಡಿಕೊಂಡು
ಎಲ್ಲರಲ್ಲೂ ನಮ್ಮ ಕಂಡು
ನಾವು ನಾವಾಗಿ ಸಾಗೋಣ ನಿರ್ಲಿಪ್ತರಾಗಿ
ಕಾಲದೊಡನೆ

ಇಲ್ಲೇ ಎಲ್ಲವಿದೆ
ನಾಕ, ಮುಕ್ತಿ,
ಮತ್ತೆ
ಅವನೆಲ್ಲ ಮೀರಿದ್ದು...

Wednesday, May 13, 2009

ನಾವು

ರತ್ನ ಗರ್ಭವ ಹೊತ್ತು
ಅಂಡಲೆವ ತಿರುಕರು ನಾವು!
ನಮ್ಮೊಳವರಿಯದೆ ಸುಮ್ಮನೆ ಅಲೆವವರು
ಏನೋ ಗೌಣವ ಹುಡುಕಿ!
ಇಲ್ಲವೇ ಎಲ್ಲವೂ ನಮ್ಮೊಳಗೆ?
ಸುಪ್ತ ಅಂತರಗಂಗೆಯಾಗಿ!
ನೂರಾರು ಕನಸುಗಳ ಆಸೆಗಳ ಕುಬೇರರು!

ಮನಕೆ ಬೇಲಿಯ ಬಿಗಿದು
ಕಿರುಪರಿಧಿಯಲಿ ಶೂನ್ಯಾದಿ ದೃಷ್ಟಿ ನೆಟ್ಟು
ಎಟುಕದ ಆಸೆಗಳ ಕನಸುಗಳ,
ಕೊನೆಗೆ ನಿರ್ಲಿಪ್ತ ಕಾಲವನ್ನೇ ಜರಿದು
ಬೊಮ್ಮ ಗೀಚಿದ್ದಿಷ್ಟೇ
ಎಂದು ಬಾಳುಕಳೆವ
ಭಾವವಾಮನರು.

ಎಲ್ಲ ಸುಳ್ಳುಪೊಳ್ಳು-ಸಣ್ಣತನ
ಡಂಭಾಚಾರದಲೇ
ಸಾವೇ ಇಲ್ಲವೆಂಬಂತೆ ಬದುಕಿ
ಸತ್ತಮೇಲೆ ಬದುಕಿಯೇ ಇಲ್ಲವೆಂಬಂತಾಗುವ
ಜೀವಂತ ದಿವಂಗತರು ನಾವು!

Tuesday, April 28, 2009

ತಿರುಕ

ಹಾದಿಬದಿಯಲಿ
ಮರದ ನೆರಳಡಿಯಲಿ
ನೆಮ್ಮದಿಯಲಿ ಮಲಗಿದ್ದ
ತಿರುಕ ಭೈರಾಗಿ

ಬಟ್ಟೆಗಳಂತಿದ್ದ ಬಟ್ಟೆಗಳ ಒಂದು ಗಂಟು
ನಪ್ಪುನಪ್ಪಿನದೊಂದು ತಾಟು
ಅವನ ಬಳಿ ಸೊಂಪಾಗಿದ್ದುದು
ಅವನ ಅಲೆಯಲೆಯ ಬಿಳಿಕರಿಯ
ಗಡ್ಡವೊಂದೇ

ದಂಡಿಯಾಗಿ ಯಾರ ಹಂಗಿಲ್ಲದೆ
ಹೀರಲು ಇದ್ದದ್ದು ಗಾಳಿಯೊಂದೇ

ಬಾಳೊಂದೇ ಬಿಡದ ನಂಟಾಗಿ
ಬದುಕೋ ಹಂಬಲವೇ ಒಲವಾಗಿ
ಅವಗಿಲ್ಲ bಅವನದೆಂಬ ದೈವ,
ಕುಲ, ಗೋತ್ರ, ಧರ್ಮ,
ಅದಾವುದೂ ಹೊಟ್ಟೆಹೊರೆಯದೆಂದು
ಅವಗೆ ಗೊತ್ತು

ಹೀಗೆ ಅಲೆಮಾರಿ ಅನಿಕೇತನನಾಗಿ
ಜಗವೆಂಬ ವಾಸ್ತವದ ಬೋಧಿವೃಕ್ಷದಡಿ
ಬುದ್ಧನಾದವನು ಆತ

ಅವಗೆ ಹುಟ್ಟಿನ ಹೆಮ್ಮೆಯಿಲ್ಲ
ಸಾಯ್ವ ಭಯವಿಲ್ಲ
ಯಾವುದಕ್ಕೂ ನಿಲುಕದ
ಯಾವುದಕ್ಕೂ ಅಂಟದ
ನಿಜ ವಿಶ್ವಮಾನವನೀತ

Sunday, April 26, 2009

ಅಮ್ಮ

ಚೆಂದನೆಯ ಮನದವರೆಲ್ಲ ಮೇಲೆಹೋದಮೇಲೆ
ಮೇಲಾಗಸದಿ ತಾರೆಯಾಗಿ ಮಿನುಗುವರು ಎಂದು

ಮೇ...ಲೆ
ಕೈ ಮಾಡಿ ತೋರಿಸಿ
ಮಮತೆಯಲಿ ತುತ್ತಿಡುತ್ತ
ರಮಿಸಿ ಲಾಲಿ ಹಾಡುತ್ತಿದ್ದ
ಎನ್ನಮ್ಮಾ...

ಎನ್ನ ಕಂಬನಿ ತುಂಬಿದ
ಅರಸುವ ಕಂಗಳೆದುರು
ಅನಾಮಿಕ ತಾರೆಯಾಗಿ
ವರುಷಗಳಾದವು ಹಲವು

ಹೇಗೆ ಮನಸಾಯಿತೋ
ಅದೆಂತು ಅವಸರವಿತ್ತೋ
ಕಾಲನೆಣಿಕೆಯೇ ಹಾಗಿತ್ತೋ

ಅಮ್ಮ ಹೋದಳು

ಧಾವಂತಕ್ಕೆ ಬಿದ್ದವಳಂತೆ
ಮರಳಿಬಾರದೂರಿಗೆ
ತಾ ಮಾತ್ರ ನೆಮ್ಮದಿಯನರಸಿ;
ಇರಿವ ನೆನಪಾಗಿ
ಗಂಟಲಾಳದಿ ಬಿಗಿದ ನೋವ ಗಂಟಾಗಿ
ಜೀರ್ಣವೇ ಆಗದ ವಾಸ್ತವವಾಗಿ
ಅಲೆಯಲೆಯಾಗಿ ಉಮ್ಮಳಿಸುವ
ಕಹಿನೆನಪಾಗಿ
ಮತ್ತು
ಅನಾಥಭಾವದ ಬಿಕ್ಕಾಗಿ................