Saturday, April 11, 2020

ನೆನಪು, ಕನಸು ಮತ್ತು ನಾನು

ಇನ್ನೇನು ನಗಬೇಕು , ಅಷ್ಟರಲ್ಲಿ ಯಾರೋ  ಬಾಗಿಲು ತಟ್ಟಿದ ಸದ್ದು . ಹೊತ್ತಲ್ಲದ ಹೊತ್ತಿನಲ್ಲಿ ಯಾರು ಬಂದಿರಬಹುದು ಎಂಬ ಯೋಚನೆ ಸುಳಿದು ಹೋಯಿತು. ಬಹುಶಃ ನೆನಪು ಬಂದಿರಬೇಕು . ಹಾಗೆಂದುಕೊಂಡು ನಿಟ್ಟುಸಿರು ಬಿಟ್ಟೆ.  ಈ ನೆನಪು ಮೊದಲಿನಿಂದಲೂ  ಹೀಗೆಯೇ , ಕಾಲಿಂಗ್ ಬೆಲ್ ಒತ್ತುವ ಸೌಜನ್ಯ , ಸಂಸ್ಕಾರ  ಚೂರೂ ಇಲ್ಲ. ಹೊತ್ತಲ್ಲದ ಹೊತ್ತಿನಲ್ಲಿ ಬಂದು ಬಾಗಿಲು ಬಡಿಯುತ್ತ ನಿಂತಿರುತ್ತೆ .

ಬಾಗಿಲು ತೆರೆದೆ. ನನ್ನ ಎಣಿಕೆ ಸುಳ್ಳಾಗಲಿಲ್ಲ. ಬಂದದ್ದು ನೆನಪೇ . ಹೀಗೆ ನೆನಪು ಹೇಳದೆ ಕೇಳದೆ ಪ್ರತಿಬಾರಿ ಬಂದಾಗಲೆಲ್ಲ , ನಾನು ಕೊಂಚವೂ ಬೇಸರಿಸದೆ ಬಾಗಿಲು ತೆರೆಯುತ್ತೇನೆ. ಯಾಕೆಂದರೆ ನೆನಪು ತುಂಬಾ ಭಾವುಕ. ನನ್ನಿಂದ ಒಂದಿಷ್ಟು ಅನುಕಂಪ, ಸಾಂತ್ವನವನ್ನ ನಿರೀಕ್ಷಿಸಿ ದೈನೇಸಿಯಂತೆ ಬಾಗಿಲಲ್ಲಿ ನಿಂತಿರುತ್ತೆ.

ಹಾಗೆ ಬಂದ ನೆನಪಿನ ಕಷ್ಟ ಸುಖವನ್ನ ವಿಚಾರಿಸಿ, ಸಂತೈಸಿ, ಕಣ್ಣೊರೆಸಿ ಕಳುಹಿಸುವುದು ವಾಡಿಕೆ . ನೆನಪು ಅಷ್ಟು ಸುಲಭಕ್ಕೆ ಹೋಗುವುದಿಲ್ಲ.  ನೆನಪಿಗೆ ಕೈ ಬೇಸಿ ವಿದಾಯ ಹೇಳಬೇಕು ಎನ್ನುವಷ್ಟರಲ್ಲಿ , ನೆನಪು ಕೈ ಹಿಡಿದು ಜೊತೆಗೆ ಬಾ ಎನ್ನುತ್ತೆ . ಕೊನೆಗೆ ನೆನಪನ್ನ ಪರಿ ಪರಿಯಾಗಿ ಬೇಡಿಕೊಂಡು , ನೀನೀಗ ಹೋಗು ಎಂದು ನೆನಪಿಗೆ ಸಮಾಧಾನ ಹೇಳಿ , ಬೀಳ್ಕೊಡುವಷ್ಟರಲ್ಲಿ  ನಾನು ಪ್ರತಿ ಬಾರಿ ಹೈರಾಣಾಗಿ ಹೋಗಿರುತ್ತೇನೆ.

ಈ ಬಾರಿ ಕೂಡ, ಎಂದಿನಂತೆ ನೆನಪನ್ನ ಕಳುಹಿಸಿ , ಬಾಗಿಲನ್ನ ಭದ್ರವಾಗಿ ಹಾಕಿದ್ದೇನೆ ಎನ್ನುವುದನ್ನ ಖಾತ್ರಿ ಮಾಡಿಕೊಂಡು ಒಳಗೆ ಬಂದೆ. ಆಗಲೇ ಪೂರ್ತಿ ಬಸವಳಿದು ಹೋಗಿದ್ದ ನಾನು , ನಗುವುದು ಹಾಗಿರಲಿ, ನೆಮ್ಮದಿಯಾಗಿ ಮಲಗಿದರೆ ಸಾಕೆಂದು ಹಾಸಿಗೆಯನ್ನ ತಲುಪಿಕೊಂಡೆ. ಕಣ್ಣು ಮುಚ್ಚಿದ್ದೆ ತಡ, ಯಾವುದೋ ಮಾಯದಲ್ಲಿ ಬಂದ ಕನಸು , 'ನಾನು ಬಂದೆ ' ಎಂದು ಹೇಳಿದ್ದು ಅಸ್ಪಷ್ಟವಾಗಿ ನಿದ್ದೆಗಣ್ಣಿನ ಕಿವಿಗೆ ಕೇಳಿಸಿದಂತಾಯಿತು.

ಕನಸು ನೆನಪಿನಂತೆ ಭಾವುಕನಲ್ಲ . ಕೊಂಚ ಹುಂಬ. ಅಂಗೈಯಲ್ಲೇ ಆಕಾಶ ತೋರಿಸ್ತೀನಿ ಬಾ ಎನ್ನುತ್ತೆ. ನಕ್ಷತ್ರ ಲೆಕ್ಕ ಹಾಕು ಎನ್ನುತ್ತೆ. ನೆನಪಿನಿಂದ ಪಾರಾಗಿ ಸುಖವಾಗಿ ಮಲಗಬೇಕಿದ್ದ ನನ್ನ ತಲೆಯಲ್ಲಿ ಏನೇನೋ ಆಸೆ, ಆಮಿಷಗಳನ್ನೆಲ್ಲ ತುಂಬಿ , ನೆನಪಿನ ಸಹವಾಸ ಸಾಕು , ನನ್ನ ಜೊತೆ ಬಾ , ನಿನ್ನ ಪಾಲಿನ ನೆರಳು ನಾನೆ ಎನ್ನುತ್ತೆ .

ಎತ್ತ ಹೋಗುವುದು ? ಈ ಕನಸು ಮತ್ತೆ ನೆನಪು ಇಬ್ಬರೂ ನನ್ನ ನಿದ್ರೆಯನ್ನ , ನೆಮ್ಮದಿಯನ್ನ ಕಿತ್ತುಕೊಳ್ಳುತ್ತಾರೆ.  ಸುಖ ಸಂತೋಷ ಅರಸಿ ಹೊರಟ ನನಗೆ, ಇವರಿಬ್ಬರೂ ಅನೇಕ ಬಾರಿ  ದಾರಿ ತಪ್ಪಿಸಿದ್ದಾರೆ. ಇವರಿಬ್ಬರನ್ನೂ ತೀರಾ ಹತ್ತಿರಕ್ಕೆ ಬಿಟ್ಟುಕೊಂಡರೆ ಅಪಾಯ. ದೂರ ಮಾಡುವಂತೆಯೂ ಇಲ್ಲ. ಉಭಯಸಂಕಟ.

ಕೊನೆಗೆ ನಾಳೆಯೇ ಹೋಗಿ , ಎರಡು ಮೂಗುದಾರ ತರುವುದೆಂದು ನಿರ್ಧಾರ ಮಾಡಿಕೊಂಡೆ.  ನೆನಪು ಮತ್ತು ಕನಸು, ಇಬ್ಬರನ್ನೂ ಕರೆಸಿ , ಮೂಗುದಾರ ಹಾಕಬೇಕು , ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕಾಡಬೇಡಿ ಎಂಬ ಎಚ್ಚರಿಕೆ ಕೊಟ್ಟು, ಸಮಯ ಪ್ರಜ್ಞೆಯ ಪಾಠ ಹೇಳಬೇಕು , ನನ್ನಿಂದ ನೀವು , ನಿಮ್ಮಿಂದ ನಾನಲ್ಲ ಅನ್ನುವುದನ್ನ ಮನವರಿಕೆ ಮಾಡಿಕೊಡಬೇಕು ಎಂದೆಲ್ಲ ನಿರ್ಧರಿಸಿಕೊಂಡೆ.
**
ದುರಂತವೇನೆಂದರೆ ,ಅವತ್ತಿನಿಂದ ಇವತ್ತಿನ ವರೆಗು ತಂದಿಟ್ಟುಕೊಂಡ ಮೂಗು ದಾರ ನನ್ನ ಕೈಯಲ್ಲೆ ಉಳಿದು ಹೋಗಿದೆ . ಕನಸು ಮತ್ತೆ ನೆನಪುಗಳ ಮೊಂಡುತನದ ಮುಂದೆ  ನಾನು ಪ್ರತಿ ದಿನ , ಪ್ರತಿ ಕ್ಷಣ ಸೋಲುತ್ತಲೇ ಇದ್ದೇನೆ . ಅಸಹಾಯಕನಾಗಿದ್ದೇನೆ . 

Tuesday, January 19, 2016

ಮುಂಗಾರ ಸೂರಡಿ

ಮತ್ತೆ ಬಂದಿದೆ ಮುಂಗಾರುಮಳೆ
ಈ ಸುರಿವ ಸೊಬಗ ಸೂರಡಿ
ಮನಸಾರೆ ನೀರಾಟ ಆಡಬೇಕಿದೆ
ಹಾಳೆ ದೋಣಿಮಾಡಿ
ಹರಿವ ನೀರಲಿ ತೇಲಿಬಿಡಬೇಕಿದೆ
ಸಾಗೋ ದೋಣಿ ಹಿಂದೆ ಓಡಿ ಓಡಿ
ಆಡೋ ಕಾಲವ ಹಿಂದೆ ಹಾಕಿ
ಕಳೆದ ನಿನ್ನೆಯ ಕಾಣಬೇಕಿದೆ

ನೀವೂ ಬರುವಿರೇನು ಎನ್ನೊಡನೆ?

ದೊಡ್ಡವರು ನಾವು ಜಗ ನಕ್ಕೀತು ಎಂಬ ಹಿಂಜರಿಕೆ ಯಾಕೆ?
ಈ ಹಾಳು ಹಿರಿತನ,
ಹಮ್ಮು ಬಿಮ್ಮು ಗತ್ತಿನ ನಡುವೆ
ನಮ್ಮ ನಡುವೆ ಸಹಜ ಸುಂದರ ಖುಷಿ
ಹಾಳಾಗಬೇಕೆ?
ಹಿರತನ ಬಂದರೆ ಬರಲಿ ಸಹಜವಾಗಿ
ಈ ಸುರಿವ ಮಳೆಯಂತೆ.
ಸುಮ್ಮನೆ ಮುಖವಾಡ ಯಾಕೆ?

ಇನ್ನೂ ತಡವೇಕೆ ಬಂದುಬಿಡಿ,
ಮಳೆ ನಿಲ್ಲುತಿದೆ...