Sunday, January 30, 2011

ಅರೆಕ್ಷಣದ ಅದೃಷ್ಟ ..

ಒಂದು ಒಳ್ಳೆಯ ಪುಸ್ತಕ ಓದಿ ಮುಗಿಸಿದ ಖುಷಿಯಲ್ಲಿ ನಿಮ್ಮೆದುರು ಬಂದಿದ್ದೇನೆ.ನನ್ನ ಖುಷಿಗೆ ಕಾರಣವಾದ ಆ ಪುಸ್ತಕ ಡಿ.ಜಿ.ಮಲ್ಲಿಕಾರ್ಜುನರದ್ದು. ಪುಸ್ತಕದ ಹೆಸರು ‘ಅರೆ ಕ್ಷಣದ ಅದೃಷ್ಟ ‘.

ಮಲ್ಲಿಕಾರ್ಜುನರು ತೇಜಸ್ವಿಯವರಿಂದ ಪ್ರಭಾವಿತನಾಗಿದ್ದೇನೆ ಎಂದು ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಮುಖಪುಟವೆಂಬ ಶುರುವಿನಿಂದಲೇ ತೇಜಸ್ವಿ ಪ್ರಭಾವ ಎದ್ದು ಕಾಣುತ್ತೆ.ಮಲ್ಲಿಕಾರ್ಜುನರ ಪುಸ್ತಕದ ಮುಖಪುಟ ನೋಡುವಾಗ ತೇಜಸ್ವಿ ನೆನಪಾದರು.ಅವರ ಪುಸ್ತಕ ಪ್ರಕಾಶನದ ಪುಸ್ತಕಗಳ ಮುಖಪುಟಗಳು ಕಣ್ಮುಂದೆ ಬಂದವು. ಹಾಗೆ ಈ ಪುಸ್ತಕ ಶುರುವಿನಿಂದಲೇ ಒಂದು ಬಗೆಯ ಉಲ್ಲಾಸಕ್ಕೆ ,ಖುಷಿಗೆ ಕಾರಣವಾಗುತ್ತೆ. ಇನ್ನು ಪುಸ್ತಕದ ಪುಟಗಳ ಗುಣಮಟ್ಟ ಅತ್ಯುತ್ತಮವಾದದ್ದು. ಪುಸ್ತಕದಲ್ಲಿನ ಫೋಟೋಗಳು ಉಸಿರಾಡುತ್ತವೆ.

ಈವತ್ತು ನಾನು ಬಂದದ್ದು ಪುಸ್ತಕದ ಪರಿಚಯ ಹೇಳುವುದಕ್ಕಾಗಲಿ ಅಥವಾ ಪುಸ್ತಕ ಹಾಗಿದೆ ಹೀಗಿದೆ ಎಂದು ವಿಮರ್ಶೆಯ ಧಾಟಿಯಲ್ಲಿ ಮಾತನಾಡುವುದಕ್ಕಾಗಲಿ ಅಲ್ಲವೇ ಅಲ್ಲ. ನಾನು ಬಂದದ್ದು ಪುಸ್ತಕದ ಬಗೆಗಿನ ನನ್ನ ಖುಷಿಯನ್ನ ಹಂಚಿಕೊಳ್ಳುವುದಕ್ಕಷ್ಟೇ. ಅದನ್ನಷ್ಟೇ ಮಾಡುತ್ತೇನೆ.ನನ್ನ ಖುಷಿಗಳು ಈ ಕೆಳಗಿನಂತಿವೆ ನೋಡಿ.

Ø ಇಡೀ ಪುಸ್ತಕದ ಪುಟಗಳ ಗುಣಮಟ್ಟ ತುಂಬಾ ಎತ್ತರದಲ್ಲಿದೆ. ಫೋಟೋಗಳನ್ನ ಜೀವಂತವಾಗಿಸುವಲ್ಲಿ ಇದು ಅವಶ್ಯಕವಾದ್ದರಿಂದ ,ಗುಣಮಟ್ಟದ ವಿಚಾರದಲ್ಲಿ ರಾಜಿಯಾಗಿಲ್ಲ ಎಂಬುದು ಸ್ಪಷ್ಟ. ಅದೆಲ್ಲ ಇರಲಿ ಬಿಡಿ. ನಾನು ಹೇಳಹೊರಟಿರುವುದು ಅದನ್ನಲ್ಲ. ಈ ಪುಸ್ತಕವನ್ನ ಎಲ್ಲೆಂದರಲ್ಲಿ ಇಡಲು ಮನಸ್ಸೇ ಆಗುವುದಿಲ್ಲ. ಪ್ರತಿ ಪುಟವನ್ನ ಆಗಾಗ ಒರೆಸಿ ಜೋಪಾನಮಾಡಿ ಇಡಬೇಕೆಂದು ಅನ್ನಿಸಿಬಿಡುತ್ತೆ.

Ø ಪುಸ್ತಕದಲ್ಲಿರುವ ಫೋಟೋಗಳನ್ನು ಹಾಗೆಯೇ ಕತ್ತರಿಸಿ ಎತ್ತಿಕೊಂಡು ಫ್ರೇಮು ಹಾಕಿಸಿ ಗೋಡೆಗೆ ತೂಗಿ ಹಾಕಿಕೊಳ್ಳಬಹುದು .ಫೋಟೋಗಳ ಅಷ್ಟು ಚೆನ್ನಾಗಿವೆ . ಸಣ್ಣವನಿದ್ದಾಗ ಈ ಪುಸ್ತಕವೇನಾದರೂ ಕೈಗೆ ಸಿಕ್ಕಿದ್ದರೆ ,ಕೈಗೆ ಸಿಗುತ್ತಿದ್ದಂತೆ ಫೋಟೋಗಳನ್ನೆಲ್ಲ ಕತ್ತರಿಸಿ ,ಕೊನೆಗೆ ವಿದ್ಯಾ ನೋಟ್ ಬುಕ್ಕಿನಲ್ಲಿ ಅವನ್ನೆಲ್ಲ ಅಂಟಿಸಿ ನನ್ನದೇ ಒಂದು ಸ್ವಂತ ಪರ್ಸನಲ್ ಪ್ರೈವೇಟ್ ಆಲ್ಬಮ್ ಮಾಡಿಕೊಂಡಿರುತ್ತಿದ್ದೆ.

Ø ಪ್ರತಿಯೊಂದು ಚಿತ್ರ ಲೇಖನದ ಕೊನೆಗೆ ಸಿಗುವ ಉಪಸಂಹಾರದ ಸಾಲುಗಳು ಯೋಚನೆಗೆ ಹಚ್ಚುತ್ತವೆ .ಹಿತಾನುಭವ ನೀಡುತ್ತವೆ.

Ø ನನಗೆ ಪತಂಗಕ್ಕೂ ,ಚಿಟ್ಟೆಗೂ ಇರುವ ವ್ಯತ್ಯಾಸ ಗೊತ್ತಿರಲಿಲ್ಲ.ಇಲ್ಲಿತನಕ ಅವರೆಡೂ ಒಂದೇ ಎಂದುಕೊಂಡಿದ್ದೆ. ಈ ಪುಸ್ತಕದಲ್ಲಿ ಅವೆರಡರ ನಡುವಿನ ವ್ಯತ್ಯಾಸ ತಿಳಿದಾಗ ತುಂಬಾ ಖುಷಿಯಾಯಿತು.ಅದು ಹೊಸತನ್ನು ತಿಳಿದುಕೊಂಡ ಖುಷಿ. ಹೀಗೆ ಖುಷಿಪಡುವ ಸಂಗತಿಗಳು ಪುಸ್ತಕದ ಉದ್ದಕ್ಕೂ ನನಗೆ ಸಿಕ್ಕಿವೆ.

Ø ಇಲ್ಲಿ ಫೋಟೋಗಳು ಸಹಜಸುಂದರ.ಫೋಟೋ ಜೊತೆಗಿನ ಬರಹಗಳು ಸರಳ ಸುಂದರ.

Ø ನನ್ನ ರೂಮ್ ಪಕ್ಕ ಒಂದು ಅಂಟುವಾಳದ ಮರವಿದೆ. ಅಲ್ಲಿ ಒಂದು ಬಗೆಯ ಕೀಟಗಳು ಹೇರಳವಾಗಿದೆ.ಕೆಲವೊಮ್ಮೆ ಅವು ಕದ್ದುಮುಚ್ಚಿ ರೂಮಿಗೆ ಬಂದು ಪ್ಯಾಂಟ್ ನ ಜೇಬಿನಲ್ಲೋ , ಅಂಗಿಯ ಜೇಬಿನಲ್ಲೂ ,ಗೋವಾ ಚಡ್ಡಿಯ ಜೇಬಿನ ಮೂಲೆಯಲ್ಲೂ ಮೊಟ್ಟೆ ಇಟ್ಟು ಹೋಗಿಬಿಡುತ್ತವೆ. ಪ್ಯಾಂಟ್ ಅಥವಾ ಗೋವಾ ಚಡ್ಡಿ ಏರಿಸಿಕೊಂಡು ಕಿಸೆಗೆ ಕೈಹಾಕಿದರೆ ಈ ಕೀಟದ ಮೊಟ್ಟೆ ಕೆಲವೊಮ್ಮೆ ಕೈಗೆ ಸಿಗುತ್ತವೆ. ಈಗೊಂದು ತಿಂಗಳ ಕೆಳಗೆ ಟೆರೆಸ್ ಮೆಟ್ಟಿಲ ಬಳಿ ಈ ಕೀಟ ಮೊಟ್ಟೆಯಿಡುತ್ತ ಕುಳಿತಿತ್ತು. ಅಪರೂಪದ ಘಳಿಗೆಯದು.ತುಂಬಾ ಆಸಕ್ತಿಯಿಂದ ಸುಮಾರು ಹೊತ್ತಿನ ತನಕ ಅದನ್ನೇ ನೋಡುತ್ತಾ ಕುಳಿತಿದ್ದೆ. ಮೊನ್ನೆ ಮಲ್ಲಿಕಾರ್ಜುನರ ಪುಸ್ತಕದಲ್ಲಿ ಆ ಕೀಟವನ್ನ ಕಂಡೆ. ನನ್ನ ರೂಮ್ಗೆ ಕದ್ದು ಮುಚ್ಚಿ ಬಂದು ಮೊಟ್ಟೆಯಿಟ್ಟು ಹೋಗುವ ಆ ಕೀಟ ಜೀರುಂಡೆ ಕುಲಕ್ಕೆ ಸೇರಿದ್ದು ಎಂದು ತಿಳಿಯಿತು. ಈಗ ಆ ಕೀಟಗಳನ್ನ ಮೊದಲಿಗಿಂತ ಆಸಕ್ತಿಯಿಂದ ನೋಡುತ್ತಿದ್ದೇನೆ. ಮೊನ್ನೆಯಷ್ಟೇ ಅವುಗಳ ಮಿಲನ ಮಹೋತ್ಸವದ ದೃಶ್ಯವನ್ನ ಕಂಡಿದ್ದೇನೆ. ಸದ್ಯದಲ್ಲಿಯೇ ಮತ್ತೆ ಮೊಟ್ಟೆಯಿಡುವ ದೃಶ್ಯವನ್ನ ಕಾಣುವ ನಿರೀಕ್ಷೆಯಲ್ಲಿ ನಾನಿದ್ದೇನೆ.

Ø ಈ ಜೀರುಂಡೆಗಳನ್ನು ಮಾತ್ರವಲ್ಲ .ಎಲ್ಲವನ್ನೂ ಈಗ ಹೊಸದಾಗಿ ನೋಡುತ್ತಿದ್ದೇನೆ.ನನ್ನ ಸುತ್ತಲಿನ ಯಾವುದೂ ಈಗ ನೀರಸವಾಗಿ ಕಾಣುತ್ತಿಲ್ಲ.

ಖುಷಿಯ ಆಚೆ ಕೊನೆಗೊಂದು ಟೈಮ್ ಪಾಸ್ ತಲೆಹರಟೆ

ಈ ಪುಸ್ತಕದ ಮುನ್ನುಡಿಯಲ್ಲಿ ನೇಮಿಚಂದ್ರ ಅವರು ಒಂದು ಮಾತು ಹೇಳಿದ್ದಾರೆ.ಅದೇ ಮಾತನ್ನೇ ನಾಗೇಶ್ ಹೆಗಡೆಯವರು ಪುಸ್ತಕ ಬಿಡುಗಡೆಯ ದಿನ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ‘ ಈ ಪುಸ್ತಕವನ್ನ ಎಲ್ಲ ಅಧ್ಯಾಪಕರು ,ಪೋಷಕರು .ಎಳೆಯ ಮಕ್ಕಳು ಓದಬೇಕೆಂದು ಅವರಿಬ್ಬರೂ ಹೇಳಿದ್ದಾರೆ. ಅದು ನಿಜಕ್ಕೂ ಒಳ್ಳೆಯ ವಿಚಾರ. ಆದರೆ ಇಲ್ಲೊಂದು ಮಜವಾದ ಸಮಸ್ಯೆಯಿದೆ. ಈ ಅಧ್ಯಾಪಕರು ಹಾಗು ಪೋಷಕರು ದೊಡ್ಡವರು.ಈ ದೊಡ್ಡವರು ಈ ಪುಸ್ತಕವನ್ನ ಓದುತ್ತಾ ಚಿಕ್ಕವರಾಗುವ ಭಾಗ್ಯ ಇಲ್ಲುಂಟು. ಹಾಗೆಯೇ ಎಳೆಯ ಮಕ್ಕಳು ತೀರಾ ದೊಡ್ಡವರಾಗಿ ಬಿಡುವ ಕಷ್ಟವೂ ಇಲ್ಲಿ ಉಂಟು. ಕಾರಣ ಇಷ್ಟೇ.ಇಲ್ಲಿ ಕೆಲವು ಪ್ರಣಯ ಪ್ರಸಂಗಗಳ ಫೋಟೋಗಳಿವೆ. ಈ ನಮ್ಮ ಎಳೆಯ ಮಕ್ಕಳು ಅವನ್ನೆಲ್ಲ ನೋಡಿ ,ತಲೆಬುಡ ಅರ್ಥವಾಗದೆ ‘ ಅಪ್ಪ ಅಪ್ಪ ಆ ಕರಿ ಮೊಲದ ಮೇಲೆ ಬಿಳಿ ಮೊಲ ಏನ್ ಮಾಡ್ತಿದೆ ? ಅಮ್ಮ ಅಮ್ಮ ಆ ಚಿಟ್ಟೆಗಳು ಯಾಕೆ ಅಂಟಿಕೊಂಡು ಕೂತಿವೆ ? ಈ ಗುಬ್ಬಚ್ಚಿ ಮೇಲೆ ಆ ಗುಬ್ಬಚ್ಚಿ ಕೂತು ಏನ್ ಮಾಡ್ತಿದೆ ಸಾರ್ ? ಎಂದೆಲ್ಲ ಕೇಳಿಬಿಟ್ಟರೆ ! ಅಂಥ ಪ್ರಸಂಗದಲ್ಲಿ ಈ ದೊಡ್ಡವರ ಪಡಿಪಾಟಲು ನೆನಸಿಕೊಂಡು ನಾನು ನನ್ನಷ್ಟಕ್ಕೆ ನಕ್ಕಿದ್ದೇನೆ :) :) ;).

8 comments:

ಮನಸಿನಮನೆಯವನು said...

ಚಿಟ್ಟೆಗೂ,ಪತಂಗಕ್ಕೂ ವ್ಯತ್ಯಾಸವಿದೆಯೇ..
ನನಗೆ ತಿಳಿದಿಲ್ಲವಲ್ಲ..

ಅನಿಲ್ ಬೇಡಗೆ said...

ಗೌತಮ್,
ತಲೆ ಹರಟೆಯ 'ಬಾಟಮ್ ಸಿಪ್' ಚೆನ್ನಾಗಿದೆ. ಹ ಹ..
ಹೌದು, ಈ ಪುಸ್ತಕ ತುಂಬಾ ಖುಷಿ ಕೊಟ್ಟಿದೆ.
ಅದು ವಿನ್ಯಾಸ, ಗುಣಮಟ್ಟದಿಂದ, ಅದ್ಭುತ ಮಾಹಿತಿಗಳ ತನಕ..
ಎಲ್ಲ ಸೇರಿ ನಮಗೆ 'ಭರಪೂರ ಭೋಜನ.' :)
-ಅನಿಲ್

ಶಿವಪ್ರಕಾಶ್ said...

hmmm... Good Review ;)

Ittigecement said...

ಗೌತಮ್...

ಸೊಗಸಾದ ಲೇಖನ..
ನಿಮ್ಮ ಶೈಲಿ ಚೆನ್ನಾಗಿದೆ.. ಜೈ ಹೋ !

ದಿನಕರ ಮೊಗೇರ said...

eegashTe pustaka nanage talupide... odi mugisi nimma lekhana odide...
nimma ellaa maatugaLu satya...

pustaka tumbaa tumbaa chennaagide....

Digwas Bellemane said...

ಚ೦ದದ ಬರಹ

ಗೌತಮ್ ಹೆಗಡೆ said...

@ ಎಲ್ಲರೂ

ಪ್ರತಿಕ್ರಿಯೆ ನೀಡಿದ ನಿಮಗೆಲ್ಲರಿಗೂ ಥ್ಯಾಂಕ್ಸ್ ಉ :) ಪ್ರತ್ಯೇಕವಾಗಿ ಥ್ಯಾಂಕ್ಸ್ ಹೇಳಲಿಕ್ಕೆ ಆಗಲಿಲ್ಲ.ಕ್ಷಮೆಯಿರಲಿ :)

ಸೀತಾರಾಮ. ಕೆ. / SITARAM.K said...

i am waiting to get the book