Saturday, July 11, 2009

ಸಾವು, ನಾನು ಮತ್ತು ಅವರು

ಕನಸು ಖಾಲಿಯಾಗಿ
ಮನಸು ಬಾಳ್ಗೆ ಬೆನ್ನುಹಾಕಿ
ಖಿನ್ನರಾಗಿ ಕುಳಿತಾಗ
ಕೆಲವರಿಗೆ
ಸಾವೊಂದು ಅಮೃತ
ದಿವ್ಯಶಾಂತಿಯನು ತರುವ ಶಾಂತಿದೂತ.
ಅಷ್ಟಕ್ಕೂ,
ಸತ್ತವರ ಶಾಂತಿಯ ತಾಕಿ
ಮರಳಿ ಹೇಳಬಂದವರಾರು?
ತುಂಬಿಕೊಳಲು ಉಸಿರೇ ಇಲ್ಲದಾಗ
ಸಾವೊಂದು ಶಾಂತಿ ಎಂದವರು
ಹುಂಬರಲ್ಲದೆ ಇನ್ಯಾರು?
ಶೀತಲ ಕೊರಡಿನೊಳಗೆ
ಮನೆಯವರ,
ತನ್ನವರೆಂದುಕೊಂಡವರ
ಬಿಟ್ಟು ಬಂದುದಕ್ಕೆ
ಅದೇನು ವಿಷಾದ,
ಅದೆಷ್ಟು ಚಡಪಡಿಕೆ, ಯಾತನೆ
ಹಿಮಗಟ್ಟಿದೆಯೋ?
ಸಾಧಿಸಲಾಗದ ಹಠ, ಹಗೆ, ಕನಸು
ಎಲ್ಲಿ ಗಂಟಾಗಿ ಕುಳಿತಿದೆಯೋ!
ಸಾವು ನನ್ನಂತೆಯೂ ಅಲ್ಲದೆ,
ಅವರಂತೆಯೂ ಇಲ್ಲದೆ,
ಸಾವು ಸತ್ತವರಂತೆ ಇದೆಯೇ?
ಸತ್ತಲ್ಲಿ ನಿರ್ಲಿಪ್ತವೇ?
ಅಥವಾ...