Wednesday, May 13, 2009

ನಾವು

ರತ್ನ ಗರ್ಭವ ಹೊತ್ತು
ಅಂಡಲೆವ ತಿರುಕರು ನಾವು!
ನಮ್ಮೊಳವರಿಯದೆ ಸುಮ್ಮನೆ ಅಲೆವವರು
ಏನೋ ಗೌಣವ ಹುಡುಕಿ!
ಇಲ್ಲವೇ ಎಲ್ಲವೂ ನಮ್ಮೊಳಗೆ?
ಸುಪ್ತ ಅಂತರಗಂಗೆಯಾಗಿ!
ನೂರಾರು ಕನಸುಗಳ ಆಸೆಗಳ ಕುಬೇರರು!

ಮನಕೆ ಬೇಲಿಯ ಬಿಗಿದು
ಕಿರುಪರಿಧಿಯಲಿ ಶೂನ್ಯಾದಿ ದೃಷ್ಟಿ ನೆಟ್ಟು
ಎಟುಕದ ಆಸೆಗಳ ಕನಸುಗಳ,
ಕೊನೆಗೆ ನಿರ್ಲಿಪ್ತ ಕಾಲವನ್ನೇ ಜರಿದು
ಬೊಮ್ಮ ಗೀಚಿದ್ದಿಷ್ಟೇ
ಎಂದು ಬಾಳುಕಳೆವ
ಭಾವವಾಮನರು.

ಎಲ್ಲ ಸುಳ್ಳುಪೊಳ್ಳು-ಸಣ್ಣತನ
ಡಂಭಾಚಾರದಲೇ
ಸಾವೇ ಇಲ್ಲವೆಂಬಂತೆ ಬದುಕಿ
ಸತ್ತಮೇಲೆ ಬದುಕಿಯೇ ಇಲ್ಲವೆಂಬಂತಾಗುವ
ಜೀವಂತ ದಿವಂಗತರು ನಾವು!

1 comments:

ಶಾಂತಲಾ ಭಂಡಿ said...

ತುಂಬ ಇಷ್ಟವಾದವು ಪ್ರತಿ ಸಾಲುಗಳೂ. ಪ್ರಬುದ್ಧ ಕವನ. ಬರೆಯುತ್ತಿರು.